ಬೆಳ್ಳಿ ಪರದೆ ಮಹಾರಾಣಿ ಈಗಿನ ಕನ್ನಡ ಚಿತ್ರಗಳ ಬಗ್ಗೆ ಏನು ಹೇಳ್ತಾರೆ?

Suvarna News   | Asianet News
Published : Mar 20, 2020, 04:20 PM IST
ಬೆಳ್ಳಿ ಪರದೆ ಮಹಾರಾಣಿ ಈಗಿನ ಕನ್ನಡ ಚಿತ್ರಗಳ ಬಗ್ಗೆ ಏನು ಹೇಳ್ತಾರೆ?

ಸಾರಾಂಶ

ಕಲ್ಯಾಣಿ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಸಿಲ್ಪಟ್ಟಿರುವ ನಟಿ. ಅವರಿದ್ದಲ್ಲಿ ಮಾತಿನ ಕಲರವಕ್ಕೆ ಕೊರತೆಯೇ ಇರುವುದಿಲ್ಲ. ಕಲ್ಯಾಣಿ ಎಷ್ಟೊಂದು ಲವಲವಿಕೆಯ ನಟಿ ಎಂದರೆ ಕೊರೋನಾದಿಂದ ರಜೆ ಸಿಕ್ಕರೂ ಒಂದೆಡೆ ಕೂರೋಣ ಅನಿಸುತ್ತಿಲ್ಲವಂತೆ. ಕನ್ನಡದಲ್ಲಿ `ದಿಯಾ' ಮತ್ತು `ಲವ್ ಮಾಕ್ಟೇಲ್' ಸಿನಿಮಾ ಸಾಕಷ್ಟು ಸುದ್ದಿ ಮಾಡಿರುವುದು ಗೊತ್ತಾಗಿದೆ. ಹಾಗಾಗಿ ಅವುಗಳನ್ನು ಸದ್ಯದಲ್ಲೇ ನೋಡಲಿದ್ದೀನಿ ಎನ್ನುವ ಕಲ್ಯಾಣಿ ಅದಕ್ಕೆ ವಿಶೇಷ ಕಾರಣಗಳನ್ನು ನೀಡಿದ್ದಾರೆ.

ಕಲ್ಯಾಣಿ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಸಿಲ್ಪಟ್ಟಿರುವ ನಟಿ. ಅವರಿದ್ದಲ್ಲಿ ಮಾತಿನ ಕಲರವಕ್ಕೆ ಕೊರತೆಯೇ ಇರುವುದಿಲ್ಲ. ಕಲ್ಯಾಣಿ ಎಷ್ಟೊಂದು ಲವಲವಿಕೆಯ ನಟಿ ಎಂದರೆ ಕೊರೋನದಿಂದ ರಜೆ ಸಿಕ್ಕರೂ ಒಂದೆಡೆ ಕೂರೋಣ ಅನಿಸುತ್ತಿಲ್ಲವಂತೆ. ಬೆಂಗಳೂರಲ್ಲೇ ಹುಟ್ಟಿ ಬೆಳೆದ ಇವರು ನಟಿಯಾಗಿದ್ದು ಅನಿರೀಕ್ಷಿತ. ಆದರೆ ಇಂದು ಆಕೆಯ ನಟನೆಯನ್ನು ಕಂಡವರು ಕಲಾವಿದೆಯಾಗಲೆಂದೇ ಕಡೆಯಲ್ಪಟ್ಟ ಕನ್ನಡತಿ ಎಂದುಕೊಂಡರೆ ಅಚ್ಚರಿ ಇಲ್ಲ. ಆಕರ್ಷಕ ಸೌಂದರ್ಯ, ನೈಜ ನಟನೆಯ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದ ಕಲ್ಯಾಣಿ, ಈಗ ಬೆಳ್ಳಿ ಪರದೆಯಲ್ಲಿಯೂ ಮಹಾರಾಣಿ! ಪೋಷಕ ಪಾತ್ರದಲ್ಲಿ ನಟಿಸಿಯೇ ನಾಯಕಿಯರಿಗೆ ಚೆಕ್ ನೀಡಬಲ್ಲಂಥ ಈ ಚೆಲುವೆ ಇತ್ತೀಚೆಗೆ ತೆರೆಕಂಡ `ಬಿಚ್ಚುಗತ್ತಿ'ಯಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದರು.  ಕನ್ನಡದ ಜತೆಗೆ ತಮಿಳು, ತೆಲುಗಲ್ಲಿಯೂ ತಾರೆಯಾಗಿ ಗುರುತಿಸಿಕೊಂಡಿರುವ ಇವರಲ್ಲಿ, ಅಂಥ ಯಾವ ಹಮ್ಮುಬಿಮ್ಮುಗಳು ಹುಡುಕಿದರೂ ಕಾಣದು! ಕನ್ನಡದಲ್ಲಿ ಲವ್ ಮಾಕ್ಟೇಲ್ ಮತ್ತು ದಿಯಾ ಸಿನಿಮಾ ಚೆನ್ನಾಗಿದೆಯೆಂಬ ಸುದ್ದಿ ಸಿಕ್ಕ ಮೇಲೆ ಇದೀಗ ಅವುಗಳನ್ನು ನೋಡುವ ಯೋಜನೆ ಹಾಕಿದ್ದಾರಂತೆ. ಎಲ್ಲರೊಂದಿಗೂ ಬೆರೆಯುವ, ಮಾತಿನಲ್ಲೇ ಮನಸು ತೆರೆಯುವ ಕಲ್ಯಾಣಿ ಸುವರ್ಣ ನ್ಯೂಸ್.ಕಾಮ್ ಜತೆಗೆ ತಮ್ಮ ಹೊಸ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ.

ದರ್ಶನ್ ಒಬ್ಬ ಪರ್ಫೆಕ್ಟ್ ಕೋ ಸ್ಟಾರ್: ಆಶಾ ಭಟ್

- ಶಶಿಕರ ಪಾತೂರ್

ಪ್ರಸ್ತುತ ನೀವು ತೊಡಗಿಸಿಕೊಂಡಿರುವ ಚಿತ್ರಗಳು ಯಾವುವು?
ಕನ್ನಡದಲ್ಲಿ ಒಂದು ಹೊಸಬರ ಚಿತ್ರದಲ್ಲಿ ಮಾಡುತ್ತಿದ್ದೇನೆ. ಚಿತ್ರದ ಹೆಸರು `ಶ್ರೀಮಂತ'. ಅದು ರೈತರ ಕುರಿತಾದ ಒಂದು ಸಿನಿಮಾ. ಜತೆಗೆ ಇಡೀ ಚಿತ್ರದಲ್ಲಿ ಅಮ್ಮ ಮಗನ ಕತೆಯೇ ಪ್ರಧಾನವಾಗಿರುತ್ತದೆ. ರಾಜಾಹುಲಿ ಚಿತ್ರದ ಸಹ ನಿರ್ದೇಶಕ ರಮೇಶ್ ಹಾಸನ್ ಅವರು ಸ್ವತಂತ್ರವಾಗಿ ನಿರ್ದೇಶಿಸುತ್ತಿರುವ ಪ್ರಥಮ ಚಿತ್ರ ಇದು. ಆಮೇಲೆ ಚಿತ್ರತಂಡವೆಲ್ಲ ಹೊಸಬರದ್ದು. ಅದರ ಇನ್ನೊಂದು ಶೆಡ್ಯೂಲ್ ಅಷ್ಟೇ ಬಾಕಿ ಇದೆ. ಇಲ್ಲಿಯವರಗೆ ಚಿತ್ರ ತುಂಬ ಚೆನ್ನಾಗಿ ಮೂಡಿ ಬಂದಿದೆ. ತೆಲುಗಲ್ಲಿ ನಾಲ್ಕು ಸಿನಿಮಾಗಳಿವೆ. ಸದ್ಯಕ್ಕೆ ನಾನಿ ನಾಯಕನಾಗಿರುವ `ಟಕ್ ಜಗದೀಶ್‌' ಎನ್ನುವ ಚಿತ್ರದಲ್ಲಿ ಖಳನಟನ ತಾಯಿಯಾಗಿ ನಟಿಸುತ್ತಿದ್ದೇನೆ. ಉಳಿದ ಮೂರು ಚಿತ್ರಗಳು ಮಾತುಕತೆ ಹಂತದಲ್ಲಿವೆ. ಅವುಗಳ ಬಗ್ಗೆ ಚಿತ್ರೀಕರಣ ಶುರುವಾದ ಮೇಲೆ ಮಾತ್ರ ಹೇಳಲು ಸಾಧ್ಯ. ಅಲ್ಲದೇ ಈಗ ಕೊರೋನ ವೈರಸ್‌ ಎಫೆಕ್ಟ್‌ನಿಂದಾಗಿ ಚಿತ್ರೀಕರಣವೆಲ್ಲ ಮುಂದೆ ಹೋಗುತ್ತಿದೆ.

ಕೊರೋನ ನಿಮಗೂ ಬಿಡುವು ಸಿಗುವಂತಾಗಿದೆ ಅಲ್ಲವೇ?
ಮದುವೆಯಾಗಿ ಮಕ್ಕಳಿರುವ ಯಾವುದೇ ಮಹಿಳೆಯನ್ನು ಕೇಳಿ ನೋಡಿ; ಅವರಿಗೆ ಕೊರೊನಾ ಅಲ್ಲ ರಾವಣನೇ ಬಂದರೂ ಬಿಡುವಿರದಷ್ಟು ಕೆಲಸಗಳಿರುತ್ತವೆ! ನನ್ನ ಪತಿ ಅನಿಲ್ ಸ್ಟಾಕ್ ಎಕ್ಸ್‌ಚೇಂಜ್ ನಲ್ಲಿ ಡೆಪ್ಯುಟಿ ಮ್ಯಾನೇಜರ್. ಈಗ ಕೊರೊನಾದಿಂದಾಗಿ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾರೆ. ನನಗೆ ಅವಳಿ ಗಂಡು ಮಕ್ಕಳು; ಅವರ ಹೆಸರು ಕುಲದೀಪ್ ಮತ್ತು ಕುಶಲ್.  ಅವರಿಗಿನ್ನೂ ಮೂರು ವರ್ಷ ಅಷ್ಟೇ ಆಗಿದೆ. ನರ್ಸರಿಗೆ ಕಳಿಸುತ್ತೀನಿ. ಮನೆಯಲ್ಲಿ ನಮ್ಮತ್ತೆ, ಮಾವ ಇದ್ದಾರೆ. ಆದರೆ ನಾನು ಮನೇಲಿದ್ದರೆ ಅಡುಗೆ ಕೋಣೆಯನ್ನು   ಯಾರಿಗೂ ಬಿಟ್ಟು ಕೊಡುವುದಿಲ್ಲ. ನಾನು ಮೀನ್ಸಾರು ಚೆನ್ನಾಗಿ ಮಾಡುತ್ತೇನೆ. ಅದು ನನ್ನ ಹಸ್ಬೆಂಡ್‌ಗೂ ಇಷ್ಟ. ಆದರೆ ನನಗೆ ಚಿಕನ್ ಫೇವರಿಟ್. ಹಕ್ಕಿ ಜ್ವರ ಬಂದಿದ್ದಕ್ಕೆ ರೇಟ್ ಬೇರೆ ಕಡಿಮೆ ಆಗಿದೆ. ಇವತ್ತೂ ಕೋಳೀನೇ ಮಾಡಿದ್ದೀನಿ! ಅಡುಗೆ ರೆಡಿಯಾಗುವುದರೊಳಗೆ ಮಕ್ಕಳು ನರ್ಸರಿಯಿಂದ ಬಂದಿರುತ್ತಾರೆ. ಇನ್ನು ಟೈಮ್ ಸಿಕ್ಕರೆ ಏನಾದರೂ ಬ್ಯೂಟಿ ಕಾಯುವ ಐಟಮ್ಸ್ ಗಳನ್ನು ಮಾಡ್ಕೊಂಡು ಮುಖಕ್ಕೆ ಹಚ್ಕೋತೀನಿ.

ಶೂಟಿಂಗ್ ಇದ್ದಾಗ ಮಕ್ಕಳಿಂದ ದೂರವಿರಲು ಕಷ್ಟವಾಗದೇ?
ನಾನು ಸಾಮಾನ್ಯವಾಗಿ ಶೂಟಿಂಗ್ ಶೆಡ್ಯೂಲ್ ಹಾಕಿಕೊಳ್ಳುವಾಗಲೇ ಒಂದು ವಾರಕ್ಕಿಂತ ಹೆಚ್ಚು ದಿನಗಳಿಗೆ ಕಮಿಟ್ ಆಗುವುದಿಲ್ಲ. ಯಾಕೆಂದರೆ ವಾರಕ್ಕೊಮ್ಮೆಯಾದರೂ ಮನೆಗೆ ಬಂದು ಮಕ್ಕಳ ಜತೆಗೆ ಬೆರೆಯಲೇ ಬೇಕಾಗಿದೆ. ಸಾಮಾನ್ಯವಾಗಿ ಯಾವ ಸಿನಿಮಾಗಳು ಕೂಡ ಹತ್ತು ಹನ್ನೆರಡು ದಿನಗಳ ಕಾಲ ನನ್ನ ಕಾಲ್ಷೀಟ್ ಬ್ಲಾಕ್ ಮಾಡುವುದಿಲ್ಲ. ಅಲ್ಲದೆ, ಮನೇಲಿ ಅತ್ತೆ ಮಾವ ಕೂಡ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. ಹಾಗಾಗಿ ಮಕ್ಕಳಿಗೆ ಎಂಟು ತಿಂಗಳಿರಬೇಕಾದರೇನೇ ನಾನು ಶೂಟಿಂಗ್‌ಗೆ ತೆರಳಲು ಶುರು ಮಾಡಿದ್ದೆ. ಮಕ್ಕಳಿಗೂ ತಿಂಗಳಲ್ಲೊಂದಷ್ಟು ದಿನ ನನ್ನಿಂದ  ದೂರವಿದ್ದು  ಅಭ್ಯಾಸವಾಗಿದೆ. ನಮ್ಮತ್ತೆಗೂ ನನ್ನ ಆಕ್ಟಿಂಗ್ ತುಂಬ ಇಷ್ಟ. ಭಾಷೆ ಗೊತ್ತಿಲ್ಲವಾದರೂ `ಜಯಮ್ಮನ ಮಗ', `ವಿಕ್ಟ್ರಿ 2'  ಚಿತ್ರಗಳನ್ನು ನೋಡಿ ತುಂಬ ಎಂಜಾಯ್ ಮಾಡುತ್ತಾರೆ. ಹಾಗಾಗಿ ಕಷ್ಟ, ಪ್ರಾಬ್ಲಮ್ ಏನೂ ಇಲ್ಲ.

ರಿಷಭ್ ಶೆಟ್ಟಿ is working from home

ಹೈದರಾಬಾದ್ ನಲ್ಲಿ ಕನ್ನಡ ಸಿನಿಮಾಗಳನ್ನು ನೋಡಲು ಸಾಧ್ಯವಾಗುತ್ತದೆಯೇ?
ಸದ್ಯಕ್ಕೆ ಇಲ್ಲಿಯೂ ಥಿಯೇಟರ್ ಗಳು ಮುಚ್ಚಲಾಗಿವೆ. ಇಲ್ಲವಾದರೆ ಆಗಲೇ ಹೇಳಿದಂತೆ ನಾವು ಕೂಡ ತುಂಬ ಬ್ಯುಸಿ ಆಗಿರುತ್ತೇವೆ. ಸದ್ಯಕ್ಕೆ ಎಲ್ಲರ ಬಾಯಲ್ಲಿ ಕೇಳಿಬರುತ್ತಿರುವ ಚಿತ್ರಗಳಾದ  `ಲವ್ ಮಾಕ್ಟೇಲ್' ಮತ್ತು `ದಿಯಾ' ಚಿತ್ರಗಳನ್ನು ಅಮೆಜಾನಲ್ಲಿ ನಾನೂ ನೋಡಬೇಕು ಅಂತ ಅಂದ್ಕೊಂಡಿದ್ದೀನಿ. `ಲವ್ ಮಾಕ್ಟೇಲ್' ಚಿತ್ರದ ಹೀರೋ ಕೃಷ್ಣನ ಜತೆಗೆ ಈ ಹಿಂದೆ ಒಂದು ಸಿನಿಮಾ ಮಾಡಿದ್ದೆ. ತುಂಬ ಒಳ್ಳೆಯ ಹುಡುಗ.  `ಜಾಲಿಬಾರು' ಎನ್ನುವ ಚಿತ್ರದಲ್ಲಿ ಆತನ ತಾಯಿಯಾಗಿ ನಟಿಸಿದ್ದೆ. `ಬಿಚ್ಚುಗತ್ತಿ' ಸಿನಿಮಾದ ಪ್ರೀಮಿಯರ್ ಶೋ ಇದ್ದಾಗ, ಪಕ್ಕದಲ್ಲೇ `ಲವ್ ಮಾಕ್ಟೇಲ್' ಕೂಡ ಹಾಕಿದ್ದರು. ಅಲ್ಲಿ ಸಿಕ್ಕ ಕೃಷ್ಣ ತುಂಬ ಚೆನ್ನಾಗಿ ಮಾತನಾಡಿಸಿದರು.  ಆ ಹುಡುಗನಿಗಾಗಿಯೇ ಸಿನಿಮಾ ನೋಡಬೇಕು ಅಂತ ಇದ್ದೀನಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು