
ದುಬೈ/ರಿಯಾದ್ (ಮಾ.3): ಕಳೆದ ಶನಿವಾರ (ಫೆಬ್ರವರಿ 28) ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ 'ಆಪರೇಷನ್ ಎಪಿಕ್ ಫ್ಯೂರಿ' (Operation Epic Fury) ದಾಳಿಯ ನಂತರ ಮಧ್ಯಪ್ರಾಚ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಇರಾನ್ನ ಪ್ರತೀಕಾರದ ದಾಳಿಯಿಂದಾಗಿ ದುಬೈ, ಅಬುಧಾಬಿ ಮತ್ತು ಬಹ್ರೇನ್ನಂತಹ ಐಷಾರಾಮಿ ನಗರ, ಶ್ರೀಮಂತರ ಸ್ವರ್ಗಗಳು ಈಗ ಯುದ್ಧಭೂಮಿಯಾಗಿ ಮಾರ್ಪಟ್ಟಿವೆ. 'ಡೈಲಿ ಮೇಲ್' ವರದಿಯ ಪ್ರಕಾರ, ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಅಂತರಾಷ್ಟ್ರೀಯ ಕಂಪನಿಗಳ ಉನ್ನತ ಅಧಿಕಾರಿಗಳು ಮತ್ತು ಅತಿ ಶ್ರೀಮಂತ ವ್ಯಕ್ತಿಗಳು (High-net-worth individuals) ಅಲ್ಲಿಂದ ತಪ್ಪಿಸಿಕೊಳ್ಳಲು ಖಾಸಗಿ ಜೆಟ್ಗಳಿಗಾಗಿ ಬರೋಬ್ಬರಿ 2,60,000 ಪೌಂಡ್ (ಅಂದರೆ ಸುಮಾರು 3.19 ಕೋಟಿ ರೂಪಾಯಿ) ಹಣವನ್ನು ಪಾವತಿಸುತ್ತಿದ್ದಾರೆ. ಪ್ರವಾಸ ಅಥವಾ ವ್ಯವಹಾರದ ನಿಮಿತ್ತ ಈ ದೇಶಗಳಿಗೆ ಬಂದಿದ್ದ ಶ್ರೀಮಂತರಿಗೆ ಈಗ ಇದು ದುಸ್ವಪ್ನವಾಗಿ ಪರಿಣಮಿಸಿದೆ.
ಇರಾನ್ನ ಕ್ಷಿಪಣಿ ದಾಳಿಯಿಂದಾಗಿ ದುಬೈ ಮತ್ತು ದೋಹಾ ಸೇರಿದಂತೆ ಬಹುತೇಕ ರಾಷ್ಟ್ರಗಳು ತಮ್ಮ ವಾಯುಪ್ರದೇಶವನ್ನು (Airspace) ಮುಚ್ಚಿವೆ. ಸಾವಿರಾರು ವಿಮಾನಗಳು ರದ್ದಾಗಿವೆ. ಆದರೆ, ಸೌದಿ ಅರೇಬಿಯಾದ ರಿಯಾದ್ನಲ್ಲಿರುವ ಕಿಂಗ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (RUH) ಮಾತ್ರ ಇನ್ನೂ ಕಾರ್ಯಾಚರಣೆಯಲ್ಲಿದೆ. ಹೀಗಾಗಿ, ಜನರೆಲ್ಲರೂ ರಿಯಾದ್ ತಲುಪಲು ಮುಗಿಬೀಳುತ್ತಿದ್ದಾರೆ.
ದುಬೈ ಅಥವಾ ಇತರ ನಗರಗಳಿಂದ ರಿಯಾದ್ಗೆ ರಸ್ತೆ ಮಾರ್ಗದ ಮೂಲಕ ತಲುಪಲು ಜನರು ಖಾಸಗಿ ಭದ್ರತಾ ಸಂಸ್ಥೆಗಳ ನೆರವು ಪಡೆಯುತ್ತಿದ್ದಾರೆ. ಇದಕ್ಕಾಗಿ ವಿಶೇಷ ಎಸ್ಯುವಿ ಕಾರುಗಳನ್ನು ಬಳಸಲಾಗುತ್ತಿದ್ದು, ಬೇಡಿಕೆ ಹೆಚ್ಚಾದ ಕಾರಣ ಈ ಕಾರುಗಳ ಬಾಡಿಗೆ ಕೂಡ ಗಗನಕ್ಕೇರಿದೆ. ರಿಯಾದ್ ತಲುಪಿದ ನಂತರ ಅಲ್ಲಿಂದ ಯುರೋಪ್ಗೆ ಹೋಗಲು ಚಾರ್ಟರ್ಡ್ ವಿಮಾನಗಳನ್ನು ಅವಲಂಬಿಸಿದ್ದಾರೆ.
ರಂಜಾನ್ ಮಾಸದ ಹಿನ್ನೆಲೆಯಲ್ಲಿ ಉಮ್ರಾ ಯಾತ್ರೆಗೆ ತೆರಳಿದ್ದವರು, ಕುಟುಂಬದವರನ್ನು ಭೇಟಿ ಮಾಡಲು ಹೋಗಿದ್ದವರು ಮತ್ತು ವ್ಯವಹಾರ ನಿಮಿತ್ತ ತೆರಳಿದ್ದ ಸಾವಿರಾರು ಭಾರತೀಯರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೋಳಿ ಹಬ್ಬ ಮತ್ತು ಸ್ಪ್ರಿಂಗ್ ಬ್ರೇಕ್ ರಜೆಗಾಗಿ ದುಬೈಗೆ ತೆರಳಿದ್ದ ಪ್ರವಾಸಿಗರು ವಿಮಾನಗಳ ರದ್ದತಿಯಿಂದಾಗಿ ಕಂಗಾಲಾಗಿದ್ದಾರೆ.
ವಾಯುಪ್ರದೇಶ ಮುಚ್ಚಿರುವುದರಿಂದ ಪ್ರಯಾಣಿಕರು ಯುರೋಪ್ ಅಥವಾ ಆಫ್ರಿಕಾದ ವಿಮಾನಯಾನ ಸಂಸ್ಥೆಗಳ ಮೂಲಕ (ಪ್ಯಾರಿಸ್, ಫ್ರಾಂಕ್ಫರ್ಟ್ ಅಥವಾ ಅಡಿಸ್ ಅಬಾಬಾ ಮೂಲಕ) ಪರ್ಯಾಯ ಮಾರ್ಗಗಳನ್ನು ಹುಡುಕುವಂತೆ ಸೂಚಿಸಲಾಗಿದೆ. ಆದರೆ, ಅತಿ ಹೆಚ್ಚು ಬೇಡಿಕೆ ಇರುವುದರಿಂದ ಸೀಟುಗಳು ಲಭ್ಯವಾಗುತ್ತಿಲ್ಲ.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ನಡೆಸಿದ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮಗಳು ಖಚಿತಪಡಿಸಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಈಗ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ಸತತ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದ್ದು, ಪರಿಸ್ಥಿತಿ ಕೈಮೀರಿ ಹೋಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.