
ಮುಂಬೈ: ಹಿಂಡನ್ಬರ್ಗ್ ಕಂಪನಿಯು ಅಕ್ರಮದ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಅದಾನಿ ಕಂಪನಿಯು ಷೇರುಪೇಟೆಯಲ್ಲಿ ಕುಸಿಯುತ್ತಿರುವ ಬಗ್ಗೆ ಸತತ 2ನೇ ದಿನವೂ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ‘ಮಾರುಕಟ್ಟೆ ನಿಯಂತ್ರಕವಾದ ‘ಸೆಬಿ’ ಈ ವಿಷಯಗಳನ್ನು ನೋಡಿಕೊಳ್ಳುತ್ತದೆ. ಸೆಬಿ ಸ್ವಾಯತ್ತ ಸಂಸ್ಥೆಯಾಗಿದ್ದು. ಇಂಥ ವಿಚಾರದ ಬಗ್ಗೆ ಗಮನ ಹರಿಸಲಿದೆ. ಮಾರುಕಟ್ಟೆಯಲ್ಲಿ ಏರುಪೇರಾಗದಂತೆ ನೋಡಿಕೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಸೆಬಿ ಕೂಡ ಸ್ಪಷ್ಟನೆ ನೀಡಿದ್ದು, ‘ಕಳೆದ ವಾರ ಮಾರುಕಟ್ಟೆಯಲ್ಲಿ ಕಂಪನಿಯೊಂದರಲ್ಲಿ ಉಂಟಾದ ತಲ್ಲಣವನ್ನು ಗಮನಿಸಿದ್ದೇವೆ. ಇದರ ಬೆನ್ನಲ್ಲೇ ಇಂಥ ಸ್ಥಿತಿ ನಿಭಾಯಿಸುವ ಕ್ರಮ ಕೈಗೊಳ್ಳಲಾಗಿದೆ’ ಎಂದಿದೆ.
ಇಮೇಜ್ಗೆ ಧಕ್ಕೆ ಇಲ್ಲ - ನಿರ್ಮಲಾ ಸೀತಾರಾಮನ್
ಮುಂಬೈನಲ್ಲಿ (Mumbai) ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ನಿರ್ಮಲಾ ಸೀತಾರಾಮನ್ (Nirmala Sitharaman), ‘ಅದಾನಿ (Adani) ವಿದ್ಯಮಾನದಿಂದ ಭಾರತದ (India) ಇಮೇಜ್ಗೆ (Image) ಧಕ್ಕೆ ಇಲ್ಲ. ಈ ದೇಶದಿಂದ ಎಷ್ಟು ಬಾರಿ ಎಫ್ಪಿಒಗಳನ್ನು (FPO) ಹಿಂತೆಗೆದುಕೊಳ್ಳಲಾಗಿದೆ. ಎಫ್ಪಿಒಗಳು ಬರುತ್ತವೆ, ಹೋಗುತ್ತವೆ. ಇದರಿಂದ ಹಿಂದೆಂದಾದರೂ ಭಾರತದ ಇಮೇಜ್ಗೆ ಧಕ್ಕೆ ಬಂದಿದೆಯೇ? ಮತ್ತೆ ಅವು ಪುನಃ ಬಂದ ಉದಾಹರಣೆಗಳೂ ಇವೆ’ ಎಂದರು.
ಮುಳುಗಿಯೇ ಬಿಡುತ್ತಾ ಅದಾನಿ ಸಾಮ್ರಾಜ್ಯ..? ಅದಾನಿ ಷೇರಿನಲ್ಲಿರೋ ಎಲ್ಐಸಿ ಹಣ ಎಷ್ಟು ಸೇಫ್?
‘ಸರ್ಕಾರವು ನಿಯಂತ್ರಕರಿಗೆ ತಮ್ಮ ಕೆಲಸವನ್ನು ಮಾಡಲು ಅವಕಾಶ ನೀಡುತ್ತದೆ. ನೀವು ನಿನ್ನೆ ರಿಸರ್ವ್ ಬ್ಯಾಂಕ್ ಪ್ರತಿಕ್ರಿಯೆಯನ್ನು ನಿನ್ನೆ ಕೇಳಿದ್ದಿರಿ. ಅದಕ್ಕೂ ಮೊದಲು, ಬ್ಯಾಂಕ್ಗಳು ಮತ್ತು ಎಲ್ಐಸಿ ಅದಾನಿಯಲ್ಲಿ ತಾವೆಷ್ಟು ಪಾಲು ಹೊಂದಿದ್ದೇವೆ ಎಂದು ಸ್ಪಷ್ಟಪಡಿಸಿವೆ. ಆದ್ದರಿಂದ, ನಿಯಂತ್ರಕರು ತಮ್ಮ ಕೆಲಸವನ್ನು ಮಾಡುತ್ತಾರೆ. ಮಾರುಕಟ್ಟೆಗಳನ್ನು ಸದೃಢ ಸ್ಥಿತಿಯಲ್ಲಿ ನಿಯಂತ್ರಿಸಲು ಸೂಕ್ತವಾದ ಕ್ರಮ ಕೈಗೊಳ್ಳುತ್ತಾರೆ’ ಎಂದರು
ಗಮನಿಸುತ್ತಿದ್ದೇವೆ - ಸೆಬಿ
ಅದಾನಿ ಷೇರುಗಳ ಕುಸಿತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೆಬಿ, ‘ಕಳೆದ ವಾರದಲ್ಲಿ ವ್ಯಾಪಾರ ಸಮೂಹವೊಂದರ ಷೇರುಗಳಲ್ಲಿ ಅಸಾಮಾನ್ಯ ಏರಿಳಿತವಾಗೊದೆ ಇದನ್ನು ಗಮನಿಸಿದ್ದೇವೆ. ಮಾರುಕಟ್ಟೆಯ ಸಮಗ್ರತೆಯನ್ನು ಖಾತರಿ ಪಡಿಸಿಕೊಳ್ಳಲು ಮತ್ತು ಮಾರುಕಟ್ಟೆಗಳು ಅಡೆತಡೆಯಿಲ್ಲದ, ಪಾರದರ್ಶಕ ಮತ್ತು ದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸಲು ಸೂಕ್ತವಾದ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದಿದೆ. ಆದರೆ ಸೆಬಿ ಎಲ್ಲೂ ಅದಾನಿ ಸಮೂಹವನ್ನು ನೇರವಾಗಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿಲ್ಲ.
ಇದನ್ನೂ ಓದಿ: ಒಂದೇ ವಾರದಲ್ಲಿ ಅದಾನಿ ಆಸ್ತಿ 10 ಲಕ್ಷ ಕೋಟಿ ಕುಸಿತ!
ಹಿಂಡೆನ್ಬರ್ಗ್ ವರದಿಯು ಅದಾನಿ ಗ್ರೂಪ್ನ ಏಳು ಪಟ್ಟಿಮಾಡಿದ ಕಂಪನಿಗಳ ಷೇರು ಕುಸಿತಕ್ಕೆ ಕಾರಣವಾಗಿದೆ. ಒಂದೇ ವಾರದಲ್ಲಿ ಅದಾನಿ ಕಂಪನಿಯ ಷೇರು ಮೌಲ್ಯ ಸುಮಾರು 10 ಲಕ್ಷ ಕೋಟಿ ರೂ.ಗಳಷ್ಟು ಕರಗಿದೆ. ಜಗತ್ತಿನ ನಂ.2 ಧನಿಕ ಎನ್ನಿಸಿಕೊಂಡಿದ್ದ ಅದಾನಿ ಕೂಡ ಜಗತ್ತಿನ 20 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಆದರೆ, ಸರ್ಕಾರವು ಪ್ರತಿಪಕ್ಷಗಳಿಂದ ಈ ವಿಷಯದಲ್ಲಿ ದಾಳಿಗೆ ಒಳಗಾಗಿದೆ.
ಇದನ್ನೂ ಓದಿ: ಅದಾನಿ ಎಫ್ಪಿಒ ರದ್ದು: ಹೂಡಿಕೆದಾರರಿಗೆ ಶೀಘ್ರದಲ್ಲೇ ಹಣ ವಾಪಸ್..!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.