
ನವದೆಹಲಿ(ಫೆ.23) ನಿಮಯ ಉಲ್ಲಂಘನೆ ಆರೋಪ ಹೊತ್ತಿರುವ ಪೇಟಿಎಂ ಪೇಮೆಂಟ್ ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿದೆ. ಇದರಿಂದ ಮಾರ್ಚ್ 15ರ ಬಳಿಕ ಪೇಟಿಎಂ ಪೇಮೆಂಟ್ ಬ್ಯಾಂಕ್ನ ಕೆಲ ಸೇವೆಗಳು ಬಂದ್ ಆಗಲಿದೆ. ಇದೀಗ ಪಾವತಿಗಾಗಿ ಪೇಟಿಎಂ ಯುಪಿಐ ಬಳಕೆ ಮಾಡುತ್ತಿರುವ ಗ್ರಾಹಕರಲ್ಲೂ ಆತಂಕ ಮನೆ ಮಾಡಿದೆ. ಮಾರ್ಚ್ 15ರ ಬಳಿಕ ಪೇಟಿಎಂ ಯುಪಿಐ ಕಾರ್ಯನಿರ್ವಹಿಸುತ್ತಾ ಅನ್ನೋ ಪ್ರಶ್ನೆಗಳು ಹಲವರನ್ನು ಕಾಡುತ್ತಿದೆ. ಇದೀಗ ಆರ್ಬಿಐ ಎನ್ಪಿಸಿಐಗೆ ಮಾಡಿರುವ ಮನವಿಯಲ್ಲಿ ಮಾರ್ಚ್ 15ರ ಬಳಿಕವೂ ಪೇಟಿಎಂ ಯುಪಿಐ ಮುಂದುವರಿಯುವ ಸೂಚನೆಗಳು ಸಿಕ್ಕಿವೆ.
ಮಾ.15ರ ನಂತರ ಗ್ರಾಹಕರ ಖಾತೆಗಳು ಹಾಗೂ ವ್ಯಾಲೆಟ್ಗಳಿಗೆ ಹಣ ಸ್ವೀಕರಿಸದಂತೆ ಪೇಟಿಎಂ ಬ್ಯಾಂಕ್ಗೆ ನಿರ್ಬಂಧ ಹೇರಿರುವ ರಿಸರ್ವ್ ಬ್ಯಾಂಕ್, ಪೇಟಿಎಂ ಆ್ಯಪ್ನ ಮೂಲಕ ಯುಪಿಐ ಸೇವೆ ಮುಂದುವರಿಕೆಯಾಗುವಂತೆ ನೋಡಿಕೊಳ್ಳಲು ನೆರವಾಗುವಂತೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೆಷನ್ (ಎನ್ಪಿಸಿಐ)ಗೆ ಸೂಚಿಸಿದೆ. ಯುಪಿಐ ಗ್ರಾಹಕರು ತಡೆರಹಿತ ಸೇವೆಯನ್ನು ಪಡೆಯುವ ಸಲುವಾಗಿ ‘ಥರ್ಡ್ ಪಾರ್ಟಿ ಅಪ್ಲಿಕೇಷನ್ ಪ್ರೊವೈಡರ್’ ಆಗುವ ಬೇಡಿಕೆಯನ್ನು ಪರಿಶೀಲಿಸುವಂತೆ ರಿಸರ್ವ್ ಬ್ಯಾಂಕ್ ನಿರ್ದೇಶಿಸಿದೆ. ಈ ಸಂಬಂಧ ಪೇಟಿಎಂನ ಮಾತೃಸಂಸ್ಥೆಯಾದ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್ನಿಂದಲೇ ಕೋರಿಕೆ ಬಂದಿತ್ತು ಎಂದಿದೆ.
ಮಾ.15ರ ಬಳಿಕವೂ ಕಾರ್ಯನಿರ್ವಹಿಸಲಿದೆ ಪೇಟಿಎಂ ಕ್ಯುಆರ್ ಕೋಡ್, ಸೌಂಡ್ ಬಾಕ್ಸ್ : ಸಿಇಒ ವಿಜಯ್ ಶಂಕರ್ ಶರ್ಮಾ ಸ್ಪಷ್ಟನೆ
ಆರ್ಬಿಐ ನಿರ್ದೇಶನದಿಂದ ಪೇಟಿಎಂ ಯುಪಿಐ ಬಳಕೆ ಮಾಡುತ್ತಿದ್ದ ಬಳಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ. ಪೇಟಿಎಂ ಯುಪಿಐ ಹಿಂದಿನಂತೆ ಕಾರ್ಯನಿರ್ವಹಿಸುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಸುಗಮ ಡಿಜಿಟಲ್ ಪಾವತಿಗೆ ಅನುಮತಿಸಲು ಆರ್ಬಿಐ ಮುಂದಾಗಿದೆ. ಪ್ರಮುಖವಾಗಿ ಇದು ಥರ್ಟ್ ಪಾರ್ಟಿ ಆ್ಯಪ್ಲಿಕೇಶನ್ ಪ್ರೊವೈಡರ್ ಆಗಿರುವ ಕಾರಣ ಪೇಟಿಎಂ ಯುಪಿಐ ಕಾರ್ಯನಿರ್ವಹಿಸಲಿದೆ.
ಪೇಟಿಎಂ ಯುಪಿಐ ಕಾರ್ಯನಿರ್ವಹಿಸಿದರೆ, ಪೇಟಿಎಂ ಫಾಸ್ಟ್ಯಾಗ್, ವ್ಯಾಲೆಟ್, ಹೊಸ ಖಾತೆ ಆರಂಭ, ಹೊಸ ಠೇವಣಿಗಳ ಮೇಲೆ ನಿರ್ಬಂಧ ಇರಲಿದೆ. ಮಾರ್ಚ್ 15ರ ಬಳಿಕ ಈ ಸೇವೆಗಳು ಲಭ್ಯವಿರುವುದಿಲ್ಲ. ಹಾಲಿ ಇರುವ ಠೇವಣಿದಾರರು ಹಣ ವಾಪಸು ಪಡೆಯಲು ಯಾಔಉದೇ ನಿರ್ಭಂಧ ಇರುವುದಿಲ್ಲ. ಪೇಟಿಎಂ ಬ್ಯಾಂಕ್ ಕೆವೈಸಿ ನಿಯಮ ಪಾಲಿಸಿಲ್ಲ ಹಾಗೂ ಅಕ್ರಮ ಹಣ ವರ್ಗ ಮಾಡಿದೆ ಎಂದು ಆರೋಪಿಸಿ ಆರ್ಬಿಐ ನಿರ್ಬಂಧ ಹೇರಿದೆ.
ಪೇಟಿಎಂಗೆ ಆರ್ ಬಿಐ ನಿರ್ಬಂಧ, ಈ ಮೂರು ಕಂಪನಿಗಳಿಗೆ ಭಾರೀ ಲಾಭ!
ಈಗಾಗಲೇ ಪೇಟಿಎಂ ಫಾಸ್ಟ್ಯಾಗ್ನ್ನು ಇಂಡಿಯನ್ ಹೈವೇಸ್ ಮ್ಯಾನೇಜ್ಮೆಂಟ್ ಕಂಪನಿ ಲಿ. (ಐಎಚ್ಎಂಸಿಎಲ್) ಅಧಿಕೃತ ಬ್ಯಾಂಕ್ ಪಟ್ಟಿಯಿಂದ ತೆಗೆದು ಹಾಕಿದೆ. ಮಾರ್ಚ್ 15ರ ಬಳಿಕ ಪೇಟಿಎಂ ಫಾಸ್ಟ್ಯಾಗ್ ನಿಷ್ಕ್ರೀಯಗೊಳ್ಳಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.