2 ಸಾವಿರ ರೂ. ನೋಟನ್ನು ಬ್ಯಾಂಕ್‌ಗೆ ವಾಪಸ್‌ ಮಾಡಲು ಯಾವ ಅರ್ಜಿ, ದಾಖಲೆ ಸಲ್ಲಿಸ್ಬೇಕು? ಇಲ್ಲಿದೆ ಮಾಹಿತಿ..

By BK AshwinFirst Published May 21, 2023, 2:46 PM IST
Highlights

2,000 ನೋಟುಗಳನ್ನು ಬದಲಾಯಿಸುವಾಗ ಅಥವಾ ಠೇವಣಿ ಇಡುವಾಗ ಯಾವುದೇ ಅರ್ಜಿ ನಮೂನೆ ಅಥವಾ ಸ್ಲಿಪ್ ಅಗತ್ಯವಿದೆಯೇ ಎಂಬ ಊಹಾಪೋಹಗಳಿಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತೆರೆ ಎಳೆದಿದೆ.

ಹೊಸದಿಲ್ಲಿ (ಮೇ 21, 2023): 2 ಸಾವಿರ ರೂ. ನೋಟುಗಳ ಬಳಕೆಯನ್ನು ಹಿಂಪಡೆಯಲಾಗುತ್ತಿದ್ದು, ಮೇ 23 ರಿಂದ ಸೆಪ್ಟೆಂಬರ್ 30 ರವರೆಗೆ ಬ್ಯಾಂಕ್‌ಗೆ ನೀಡಲು ಆರ್‌ಬಿಐ ಸೂಚನೆ ನೀಡಿದೆ. ಇನ್ನು, 2,000 ನೋಟುಗಳನ್ನು ಬದಲಾಯಿಸುವಾಗ ಅಥವಾ ಠೇವಣಿ ಇಡಲು ಅರ್ಜಿ ಸಲ್ಲಿಸಬೇಕು ಹಾಗೂ ಆಧಾರ್‌ ಕಾರ್ಡ್‌ ಮುಂತಾದ ದಾಖಲೆಗಳನ್ನು ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸ್ಪಷ್ಟನೆ ನೀಡಿದೆ.

₹ 2,000 ನೋಟುಗಳನ್ನು ಬದಲಾಯಿಸುವಾಗ ಅಥವಾ ಠೇವಣಿ ಇಡುವಾಗ ಯಾವುದೇ ನಮೂನೆ ಅಥವಾ ಸ್ಲಿಪ್ ಅಗತ್ಯವಿದೆಯೇ ಎಂಬ ಊಹಾಪೋಹಗಳಿಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತೆರೆ ಎಳೆದಿದೆ. ಇದಕ್ಕೆ ಸಂಬಂಧಪಟ್ಟಂತೆ ಇಂದು ತನ್ನ ಎಲ್ಲಾ ಶಾಖೆಗಳಿಗೆ ಎಸ್‌ಬಿಐ ಮಾರ್ಗಸೂಚಿಯನ್ನು ಹೊರಡಿಸಿದೆ. "ಯಾವುದೇ ರಿಕ್ವಿಸಿಷನ್ ಸ್ಲಿಪ್ ಪಡೆಯದೆ" ಬ್ಯಾಂಕ್‌ಗೆ ನೋಟು ಹಿಂತಿರುಗಿಸಬಹುದು ಎಂದು  ಬ್ಯಾಂಕ್‌ ಹೇಳಿದೆ. 

ಇದನ್ನು ಓದಿ: ಗೂಗಲ್‌ ಬಳಕೆದಾರರೇ ಇಲ್ನೋಡಿ: ನಿಮ್ಮ ಈ ಅಕೌಂಟ್‌ಗಳು ಡಿಲೀಟ್‌ ಆಗಬಹುದು ಎಚ್ಚರ!

ಒಟ್ಟು ₹ 20,000 ಮೌಲ್ಯದ ₹ 2,000 ನೋಟುಗಳನ್ನು ಒಂದೇ ಬಾರಿಗೆ ಠೇವಣಿ ಮಾಡಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದು ಎಂದು ಮಾರ್ಗಸೂಚಿ ಪುನರುಚ್ಚರಿಸಿದೆ. ನಿಷೇಧಿತ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಆಧಾರ್ ಕಾರ್ಡ್‌ನಂತಹ ಗುರುತಿನ ದಾಖಲೆಗಳನ್ನು ಸಲ್ಲಿಸುವುದರೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾದ ಮಾಹಿತಿ ಹರಿದಾಡುತ್ತಿರುವ ನಡುವೆ ಈ ಸ್ಪಷ್ಟೀಕರಣ ಬಂದಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ₹ 2,000 ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಹೇಳಿದ್ದು, ಮತ್ತು ಜನರು ಸೆಪ್ಟೆಂಬರ್ 30 ರೊಳಗೆ ಅವುಗಳನ್ನು ಬದಲಾಯಿಸಬಹುದು ಅಥವಾ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಬಹುದು ಎಂದು ಮಾಹಿತಿ ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) 19 ಪ್ರಾದೇಶಿಕ ಕಚೇರಿಗಳು ಮತ್ತು ಇತರ ಬ್ಯಾಂಕ್‌ಗಳು ₹ 2,000 ತೆಗೆದುಕೊಳ್ಳುವುದನ್ನು ಪ್ರಾರಂಭಿಸುತ್ತವೆ. ಮೇ 23 ರಿಂದ 2 ಸಾವಿರ ರೂ. ನೋಟುಗಳನ್ನು ಕೊಟ್ಟು ಕಡಿಮೆ ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಆದರೂ, ಈ ನೋಟುಗಳು ಕಾನೂನುಬದ್ಧವಾಗಿ ಉಳಿಯುತ್ತವೆ ಎಂದು ಆರ್‌ಬಿಐ ತಿಳಿಸಿದೆ.

ಇದನ್ನೂ ಓದಿ: ಮೇ 24ರಿಂದ ಗೋ ಫಸ್ಟ್‌ ವಿಮಾನ ಸಂಚಾರ ಮತ್ತೆ ಆರಂಭ ಸಾಧ್ಯತೆ

ತನ್ನ "ಕ್ಲೀನ್ ನೋಟ್ ಪಾಲಿಸಿ" ಅಡಿಯಲ್ಲಿ ಇದನ್ನು ಮಾಡಲಾಗುತ್ತಿದೆ ಎಂದು ಸೆಂಟ್ರಲ್ ಬ್ಯಾಂಕ್ ಪ್ರಕಟಣೆಯಲ್ಲಿ ಹೇಳಿದೆ. ಅಗತ್ಯವಿದ್ದರೆ ಆರ್‌ಬಿಐ ಸೆಪ್ಟೆಂಬರ್ 30 ರಿಂದ ಗಡುವನ್ನು ವಿಸ್ತರಿಸಬಹುದು, ಆದರೆ ಪ್ರಸ್ತುತ ಗಡುವಿನ ನಂತರ ಯಾರಾದರೂ ₹ 2,000 ನೋಟು ಹೊಂದಿದ್ದರೆ ಅದು ಮಾನ್ಯ ಟೆಂಡರ್ ಆಗಿ ಉಳಿಯುತ್ತದೆ ಎಂದು ಮೂಲಗಳು ತಿಳಿಸಿವೆ.

ಇನ್ನು, ಶೀಘ್ರದಲ್ಲೇ ಸ್ಥಗಿತಗೊಳ್ಳಲಿರುವ ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳಲು ವ್ಯಕ್ತಿಯು ಬ್ಯಾಂಕಿನ ಗ್ರಾಹಕರಾಗಿರುವುದು ಅನಿವಾರ್ಯವಲ್ಲ. ಖಾತೆದಾರರಲ್ಲದವರು ₹ 2,000 ಬ್ಯಾಂಕ್‌ ನೋಟುಗಳನ್ನು ಯಾವುದೇ ಬ್ಯಾಂಕ್ ಶಾಖೆಯಲ್ಲಿ ಒಮ್ಮೆಗೆ ₹ 20,000 ಮಿತಿಯವರೆಗೆ ಬದಲಾಯಿಸಬಹುದು.ಈ ವಿನಿಮಯ ಸೌಲಭ್ಯವನ್ನು ಪಡೆಯಲು ಜನರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಇದಲ್ಲದೆ, ₹ 2,000 ಬ್ಯಾಂಕ್‌ನೋಟುಗಳನ್ನು ಬದಲಾಯಿಸಲು ಅಥವಾ ಠೇವಣಿ ಮಾಡಲು ಬಯಸುವ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಅನಾನುಕೂಲತೆಯನ್ನು ಕಡಿಮೆ ಮಾಡಲು ವ್ಯವಸ್ಥೆ ಮಾಡಲು ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: ಇದೆಂತ ಕಾಲ ಬಂತಪ್ಪಾ? ಜನ ಸಾಮಾನ್ಯರು ಬಳಸೋ ಹಗ್ಗದ ಮಂಚಕ್ಕೂ ಇಷ್ಟೊಂದು ಬೆಲೆ!

click me!