
ವಸಂತಕುಮಾರ್ ಕತಗಾಲ
ಕಾರವಾರ: ಕೈ ಹಿಡಿಯದ ವಿದ್ಯೆ, ಇದ್ದ ಆಸ್ತಿಯನ್ನೆಲ್ಲ ಕಳೆದುಕೊಂಡು ಮುಂದೇನು ಎಂಬ ಚಿಂತೆಯಲ್ಲಿದ್ದ ಇವರ ಕೈ ಹಿಡಿದಿದ್ದು ಜೇನು ಕೃಷಿ. ಕೋಟ್ಯಂತರ ರು. ಆದಾಯ ಗಳಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಭೇಷ್ ಎನ್ನಿಸಿಕೊಂಡ ಇವರು ಶಿರಸಿಯ ಮಧುಕೇಶ್ವರ ಹೆಗಡೆ.
ಓದಿದ್ದು ಕೇವಲ 8ನೇ ತರಗತಿ. ಯಾವುದೇ ಉದ್ಯೋಗವಂತೂ ಸಿಗದು. ಬಂಡವಾಳ ಇಲ್ಲ. ಬದುಕಿನಲ್ಲಿ ಏನು ಮಾಡಬೇಕೆಂದು ಯೋಚಿಸಿದಂತಾಗ ಹೊಳೆದಿದ್ದು ಜೇನು ಕೃಷಿ. ಸ್ನೇಹಿತರು, ನೌಕರರ ಬಳಿ 500, 1000 ರು. ಸೇರಿಸಿ ಒಟ್ಟೂ 20 ಸಾವಿರ ರು.ಗಳ ಬಂಡವಾಳದೊಂದಿಗೆ 2006-07 ರಲ್ಲಿ ಪೂರ್ಣಪ್ರಮಾಣದಲ್ಲಿ ಆರಂಭಿಸಿದ ಜೇನು ಕೃಷಿ ಈಗ ಕೋಟ್ಯಂತರ ರು. ಆದಾಯವನ್ನು ತಂದುಕೊಂಡುತ್ತಿದೆ. ಮಧುಕೇಶ್ವರ ಹೆಗಡೆ ಯಶಸ್ವಿ, ಮಾದರಿ ಜೇನುಕೃಷಿಕರಾಗಿದ್ದಾರೆ.
Health tips: ಯಾವಾಗಲೂ ಬಾಯಿ ಹುಣ್ಣಾಗುತ್ತಾ? ಮನೆಯಲ್ಲೇ ಕಂಡು ಕೊಳ್ಳಿ ಪರಿಹಾರ
ಜೇನುತುಪ್ಪ ಹಾಗೂ ಜೇನು ಪರಿಕರಗಳ ಮಾರಾಟದಿಂದ ವಾರ್ಷಿಕವಾಗಿ ಕೋಟಿ ರು.ಗೂ ಹೆಚ್ಚು ಆದಾಯ ಗಳಿಸಿದ್ದೂ ಇದೆ. ಜೇನು ತುಪ್ಪದ ಮಾರಾಟದಿಂದ ವರ್ಷಕ್ಕೆ 30 ಲಕ್ಷ ರು. ಆದಾಯ ಗಳಿಸಿದ್ದೂ ಇದೆ.
ಕೊಳಗಿಬೀಸ್ ಸಮೀಪದ ಕಲ್ಲಳ್ಳಿ ಹಾಗೂ ಇತರೆಡೆ ಇರುವ ಒಟ್ಟೂ 40 ಎಕರೆ ಪ್ರದೇಶದಲ್ಲಿ ಜೇನುಕೃಷಿ ಕೈಗೊಂಡಿದ್ದಾರೆ. 1000ಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳಿಂದ ಇವರು ಜೇನು ಸಂಗ್ರಹಿಸುತ್ತಾರೆ. ಜೇನುತುಪ್ಪ ಮಾರಾಟವಲ್ಲದೆ ಜೇನು ಹುಳುಗಳು, ಗೂಡುಗಳು, ಜೇನು ಪೆಟ್ಟಿಗೆ ಹಾಗೂ ಇತರ ಉತ್ಪನ್ನಗಳನ್ನು ಮಾರುತ್ತಾರೆ. ಜೇನುಕೃಷಿ ಬಗ್ಗೆ ಉಚಿತ ತರಬೇತಿಯನ್ನೂ ನೀಡುತ್ತಾರೆ. ಇವರಿಂದ ತರಬೇತಿ ಪಡೆದ 50ಕ್ಕೂ ಹೆಚ್ಚು ಯುವಕರು ಯಶಸ್ವಿಯಾಗಿ ಜೇನು ಕೃಷಿ ನಡೆಸುತ್ತಿದ್ದಾರೆ.
ಆ.15ರ ಮೋದಿ ಕೆಂಪು ಕೋಟೆ ಭಾಷಣದ ವೇಳೆ ಅಮೆರಿಕ ಸಂಸದರು ಭಾಗಿ
ತೋಟದಲ್ಲಿವೆ ಔಷಧೀಯ ಸಸ್ಯಗಳು:
ತೋಟದಲ್ಲಿ ಇವರು ಅಡಕೆ, ಏಲಕ್ಕಿ, ಶುಂಠಿ, ಕೋಕಂ, ಕಾಳುಮೆಣಸು, ಬಾಳೆ, ನೆಲ್ಲಿ, ಬ್ರಾಹ್ಮಿ ಹೀಗೆ 280ಕ್ಕೂ ಹೆಚ್ಚು ಔಷಧೀಯ ಸಸ್ಯಗಳಿವೆ. ಇವುಗಳಿಂದ ಲೆಮನ್ ಸ್ಕ್ವಾಶ್, ಗಾರ್ಲಿಕ್ ಹನಿ, ಕಲ್ಲಳ್ಳಿ ಜೇನು, ಜಿಂಜಿರ್ ಹನಿ, ಬಿ ಪೋಲನ್ ಮತ್ತಿತರ ಉತ್ಪನ್ನಗಳನ್ನು ತಯಾರಿಸುತ್ತಾರೆ. ಸೆಲೆಬ್ರಿಟಿಗಳು ಬಳಸುವ ರಾಯಲ್ ಜೆಲ್ಲಿ ಜೇನು ಕೂಡ ಸಿದ್ಧಪಡಿಸುತ್ತಾರೆ. ಔಷಧೀಯ ಗುಣವುಳ್ಳ ಜೇನುತುಪ್ಪದಿಂದ ನೈಸರ್ಗಿಕವಾದ ಹನಿ ಜ್ಯಾಂ ತಯಾರಿಸಿದ್ದು, ಇದು ಇಂಗ್ಲೆಂಡ್ ಮಾರುಕಟ್ಟೆಯನ್ನೂ ಪ್ರವೇಶಿಸಿದೆ.
ಒಬ್ಬರೇ ಉದ್ಯಮ ಆರಂಭಿಸಿದ ಇವರು ಈಗ 114ರಷ್ಟು ಜನರಿಗೆ ಉದ್ಯೋಗ ನೀಡಿದ್ದಾರೆ. ಜೇನುತುಪ್ಪಕ್ಕೆ ಮನೆಯೇ ಪ್ರಮುಖ ಮಾರಾಟ ಕೇಂದ್ರ. ಪರಿಶುದ್ಧವಾದ ಜೇನು ತುಪ್ಪ ಇರುವುದರಿಂದ ಮನೆಗೇ ಗ್ರಾಹಕರು ಆಗಮಿಸಿ ಖರೀದಿಸುತ್ತಾರೆ. ಇದಲ್ಲದೆ ಆನ್ ಲೈನ್ ವೆಬ್ಸೈಟ್ (madhukeshwarhegde.com)ಮೂಲಕವೂ ಮಾರಾಟವಾಗುತ್ತದೆ. ಜೊತೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೂ ಮಾರುಕಟ್ಟೆ ವಿಸ್ತರಿಸಿದೆ. ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ನಲ್ಲಿ ಇವರನ್ನು ಪ್ರಶಂಸಿಸಿದ ತರುವಾಯ ಆನ್ಲೈನ್ನಲ್ಲಿ ಜೇನುತುಪ್ಪಕ್ಕೆ ಬೇಡಿಕೆ ಹೆಚ್ಚಿದೆ.
ಸವಿ ಮಧು ಇಂಡಸ್ಟ್ರೀಸ್ ಹಾಗೂ ಮಧುಮಿತ್ರ ಹಾರ್ಟಿಕಲ್ಚರ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಆರಂಭಿಸಿದ್ದಾರೆ. ಇದರಲ್ಲಿ 500ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇಂತಹ ಕೃಷಿಕರಿಂದ ಜೇನುತುಪ್ಪ ಸಂಗ್ರಹಿಸಿ, ಮಾರುತ್ತಾರೆ. ಜೇನುಕೃಷಿಯ ಬಗ್ಗೆ ಹಲವು ಉಪನ್ಯಾಸ ನೀಡಿದ್ದಾರೆ. ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ, ಕೃಷಿ ಸಾಧಕ ಪ್ರಶಸ್ತಿ, ಕರ್ನಾಟಕ ರತ್ನ ಮತ್ತಿತರ ಪ್ರಶಸ್ತಿಗಳು ಲಭಿಸಿವೆ.
ಜೇನು ಸಂತತಿ ಇಲ್ಲದಿದ್ದರೆ ಮನುಕುಲವೇ ಇರಲಾರದು ಎಂಬ ಅಲ್ಪರ್ಟ್ ಐನ್ ಸ್ಟೀನ್ ಹೇಳಿಕೆ ತಮಗೆ ಜೇನು ಕೃಷಿಗೆ ಪ್ರೇರಣೆಯಾಯಿತು. ಜೇನು ಕೃಷಿಯಿಂದ ಜೀವನ ನಿರ್ವಹಣೆ, ಇತರರಿಗೆ ಉದ್ಯೋಗ ನೀಡಿಕೆಯಲ್ಲದೆ, ಪರಿಸರ ಉಳಿವಿಗೂ ಮಹತ್ವದ ಕೊಡುಗೆ ನೀಡಿದಂತಾಗಿದೆ ಎಂದು ಮಧುಕೇಶ್ವರ ಹೆಗಡೆ ಅಭಿಪ್ರಾಯಪಡುತ್ತಾರೆ.
ವಿಳಾಸಃ ಮಧುಕೇಶ್ವರ ಹೆಗಡೆ, ತಾರಗೋಡ, ಶಿರಸಿ
9480746335
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.