Bank Account; ಕರ್ನಾಟಕ ಬ್ಯಾಂಕ್‌ನಿಂದ 4.15 ಲಕ್ಷ ಖಾತೆ ತೆರೆವ ಅಭಿಯಾನ

By Suvarna NewsFirst Published Nov 16, 2021, 5:14 AM IST
Highlights
  • 100 ದಿನದಲ್ಲಿ ಖಾತೆ ತೆರೆಸುವ ಗುರಿ, 650 ಕೋಟಿ ಸಂಗ್ರಹ ನಿರೀಕ್ಷೆ
  •  ಪ್ರತಿವರ್ಷ 3ರಿಂದ 4 ಲಕ್ಷ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡುತ್ತಿದೆ ಬ್ಯಾಂಕ್
  • ಖಾತೆ ಹೊಂದಿದವರಿಗೆ 10 ರು. ಲಕ್ಷದವರೆಗೆ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯ
     

ಬೆಂಗಳೂರು(ನ.16) ಕರ್ನಾಟಕ ಬ್ಯಾಂಕ್‌ ಉಳಿತಾಯ ಹಾಗೂ ಚಾಲ್ತಿ ಖಾತೆಗಳ (ಕಾಸಾ) ಅಭಿಯಾನ ಆರಂಭಿಸಿದ್ದು, ನೂರು ದಿನಗಳಲ್ಲಿ 4.15 ಲಕ್ಷ ನೂತನ ಖಾತೆಗಳನ್ನು ತೆರೆಯುವ ಮೂಲಕ 650 ಕೋಟಿ ಸಂಗ್ರಹ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್‌.ಮಹಾಬಲೇಶ್ವರ ತಿಳಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 12 ವರ್ಷದಿಂದ ಬ್ಯಾಂಕ್‌ ಈ ಯೋಜನೆಯಡಿಯಲ್ಲಿ ಪ್ರತಿವರ್ಷ 3ರಿಂದ 4 ಲಕ್ಷ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡುತ್ತಿದೆ. ಕಾಸಾ ಯೋಜನೆ ಕೇವಲ ಬ್ಯಾಂಕ್‌ ಖಾತೆ ತೆರೆಯುವುದು ಮಾತ್ರವಲ್ಲ, ಬ್ಯಾಂಕ್‌ ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶ ಕೂಡ ಹೊಂದಿದೆ. ಈ ಅಭಿಯಾನವು 2022 ಫೆ.28ಕ್ಕೆ ಅಭಿಯಾನ ಮುಕ್ತಾಯವಾಗಲಿದೆ ಎಂದರು.

ಉಳಿತಾಯ ಖಾತೆಯನ್ನು ಹೊಂದಿರುವ ತನ್ನ ಗ್ರಾಹಕರಿಗೆ 10 ರು. ಲಕ್ಷದವರೆಗೆ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯವನ್ನು ಕೇವಲ 169.50 ರು.(ಜಿಎಸ್‌ಟಿ ಪ್ರತ್ಯೇಕ) ದರದ ಕಂತಿನಲ್ಲಿ ಒದಗಿಸಲಾಗುತ್ತಿದೆ. ಈ ಅಭಿಯಾನದ ಮೂಲಕ ಬ್ಯಾಂಕ್‌ ತನ್ನ ಉಳಿತಾಯ ಹಾಗೂ ಚಾಲ್ತಿ ಖಾತೆಗಳ ಠೇವಣಿಯನ್ನು ಕನಿಷ್ಠ ಶೇ.33ರ ಘಟ್ಟಕ್ಕೆ ತಲುಪಿಸುವ ಮಹತ್ತರ ಗುರಿ ಹೊಂದಿದೆ ಎಂದು ಹೇಳಿದರು.

ಕರ್ಣಾಟಕ ಬ್ಯಾಂಕ್‌: ತ್ರೈಮಾಸಿಕದಲ್ಲಿ 125.61 ಕೋಟಿ ನಿವ್ವಳ ಲಾಭ

ತಂತ್ರಜ್ಞಾನದ ಆವಿಷ್ಕಾರಗಳಿಂದಾಗಿ ಬ್ಯಾಂಕಿಂಗ್‌ ಈಗ ಬಲು ಸರಳವಾಗಿದೆ. ಈ ಬಾರಿ ನಾವು ಕೆಬಿಎಲ್‌ ಕರೆಂಟ್‌ ಅಕೌಂಟ್‌-ಪ್ರೀಮಿಯಂ ಎನ್ನುವ ಹೊಸ ಚಾಲ್ತಿ ಖಾತೆಯನ್ನು ಪರಿಚಯಿಸುತ್ತಿದ್ದು ಪ್ರತಿ ತಿಂಗಳು ಸರಾಸರಿ 25 ಸಾವಿರ ರು.ಗಳನ್ನು ಚಾಲ್ತಿ ಖಾತೆಯಲ್ಲಿರಿಸುವ ಮೂಲಕ ಪ್ರೀಮಿಯಂ ಸೌಲಭ್ಯ ಬಳಸಿಕೊಳ್ಳಬಹುದು ಎಂದರು.

ಕರ್ನಾಟಕ ಬ್ಯಾಂಕ್‌ ನೂತನ ಅಧ್ಯಕ್ಷ ಪಂಜ
ನಗರದ ಬುಲ್ ಟೆಂಪಲ್ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಪ್ರದೀಪ್‌ ಕುಮಾರ್‌ ಪಂಜ ಅಧಿಕಾರ ವಹಿಸಿಕೊಂಡರು.

ನಂತರ ಮಾತನಾಡಿದ ಅವರು, ಬ್ಯಾಂಕ್‌ ಡಿಜಿಟಲೀಕರಣದ ಮೂಲಕ ಜನರಿಗೆ ಬ್ಯಾಂಕ್‌ ಸೌಲಭ್ಯವನ್ನು ಸುಲಭವಾಗಿ ಸಿಗುವಂತೆ ಮಾಡುವುದು ನನ್ನ ಮೊದಲ ಆಧ್ಯತೆ. ಬ್ಯಾಂಕ್‌ಅನ್ನು ಇನ್ನಷ್ಟುಗ್ರಾಹಕ ಸ್ನೇಹಿಯಾಗಿ ಮಾಡುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು, ಇದಕ್ಕೆ ಬ್ಯಾಂಕ್‌ನ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳ ಸಹಕಾರ ಅತ್ಯಗತ್ಯ ಎಂದು ಹೇಳಿದರು.

ಡಿಜಿಟಲ್‌ ಬ್ಯಾಂಕ್‌ನತ್ತ ಕರ್ಣಾಟಕ ಬ್ಯಾಂಕ್‌ ಹೆಜ್ಜೆ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪಂಜ ಗ್ರಾಮದ ಪ್ರದೀಪ್‌ ಕುಮಾರ್‌ ಪಂಜ ಅವರು ಕರ್ಣಾಟಕ ಬ್ಯಾಂಕ್‌ನ ಸ್ವತಂತ್ರ ನಿರ್ದೇಶಕರಾಗಿದ್ದರು. ಅವರನ್ನು 2021 ನ.14ರಿಂದ ಅನ್ವಯವಾಗುವಂತೆ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಭಾರತೀಯ ರಿಸವ್‌ರ್‍ ಬ್ಯಾಂಕ್‌ ಅನುಮೋದಿಸಿದೆ. ಬ್ಯಾಂಕಿನ ಪ್ರಸಕ್ತ ಅಧ್ಯಕ್ಷರಾದ ಜಯರಾಮ ಭಟ್‌ ಅವರ ಅಧಿಕಾರವಾಧಿ ನ.13ಕ್ಕೆ ಅಂತ್ಯಕ್ಕೆ ಮುಕ್ತಾಯವಾಗಿದೆ.

ಕರ್ಣಾಟಕ ಬ್ಯಾಂಕ್‌ ಅಧ್ಯಕ್ಷ ಪಿ.ಜಯರಾಮ ಭಟ್‌ ಬೀಳ್ಕೊಡುಗೆ
ಕರ್ಣಾಟಕ ಬ್ಯಾಂಕಿನಲ್ಲಿ 49 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದ ಪಿ.ಜಯರಾಮ ಭಟ್‌ ಅವರಿಗೆ ಬ್ಯಾಂಕಿನಿಂದ ಶನಿವಾರ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು.

ಕರ್ಣಾಟಕ ಬ್ಯಾಂಕಿಗೆ ಸೇರಿದ ಅನೇಕ ಸ್ತರಗಳಲ್ಲಿ ಸೇವೆ ಸಲ್ಲಿಸಿ, ಅದರ ಮೆನೇಜಿಂಗ್‌ ಡೈರೆಕ್ಟರ್‌ ಹಾಗೂ ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ತದನಂತರ ಚೇರ್ಮನ್‌ ಆಗಿ ಇಷ್ಟೊಂದು ಸುದೀರ್ಘ ಕಾಲ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ನನ್ನ ಭಾಗ್ಯ ಎಂದೇ ಪರಿಭಾವಿಸುವೆ. ಈವರೆಗಿನ ನನ್ನ ಬದುಕಿನ ಮುಕ್ಕಾಲು ಭಾಗವನ್ನು ನಾನು ಬ್ಯಾಂಕಿಗೆ ಸಮರ್ಪಿಸಿಕೊಂಡಿದ್ದೇನೆ. ನಿವೃತ್ತನಾಗುತ್ತಿರುವ ಈ ಸಂದರ್ಭದಲ್ಲಿ ನನ್ನ ಹೃದಯ ತುಂಬಿ ಭಾವುಕನಾಗಿದ್ದೇನೆ. ಬ್ಯಾಂಕನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಮೆನೇಜಿಂಗ್‌ ಡೈರೆಕ್ಟರ್‌ ಹಾಗೂ ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ಮಹಾಬಲೇಶ್ವರ ಎಂ.ಎಸ್‌. ಅವರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶತಮಾನದತ್ತ ದಾಪುಗಾಲು ಹಾಕುತ್ತಿರುವ ನಮ್ಮ ಬ್ಯಾಂಕ್‌ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಾ ಇನ್ನೂ ಅನೇಕ ಹೊಸ ಮೈಲುಗಲ್ಲು ಸ್ಥಾಪಿಸಲಿದೆ ಎಂದರು.

ಬ್ಯಾಂಕಿನ ಮೆನೇಜಿಂಗ್‌ ಡೈರೆಕ್ಟರ್‌ ಹಾಗೂ ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ಮಹಾಬಲೇಶ್ವರ ಎಂ.ಎಸ್‌. ಮಾತನಾಡಿ, ಬ್ಯಾಂಕಿನ ಅಭಿವೃದ್ಧಿಯ ಹರಿಕಾರರಾದ ಹಾಗೂ ನನ್ನ ಮಾರ್ಗದರ್ಶಕರಾದ ಪಿ.ಜಯರಾಮ ಭಟ್‌ ಅವರನ್ನು ಬೀಳ್ಕೊಡಲು ಮನಸ್ಸು ಭಾರವಾಗಿದೆ. ಇವರು ಒಬ್ಬ ಉತ್ಕೃಷ್ಟಬ್ಯಾಂಕರ್‌ ಆಗಿದ್ದು, ಸಹೋದ್ಯೋಗಿಗಳ, ಆಡಳಿತ ಮಂಡಳಿಯ ಮತ್ತು ಗ್ರಾಹಕರ ಮನಗೆದ್ದು, ಅಪಾರ ಜನಮನ್ನಣೆ ಪಡೆದು ತನ್ಮೂಲಕ ಬ್ಯಾಂಕಿನ ಏಳಿಗೆಗೆ ಕಾರಣರಾಗಿದ್ದಾರೆ. ನಿಜಾರ್ಥದಲ್ಲಿ ಒಬ್ಬ ಗುರು ಹಾಗೂ ನಾಯಕನಾಗಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಅವರು ಹಾಕಿಕೊಟ್ಟಪಥದಲ್ಲಿ ನಾವು ಮುನ್ನಡೆಯುತ್ತ ಬ್ಯಾಂಕನ್ನು ಇನ್ನಷ್ಟುಅಭಿವೃದ್ಧಿಯತ್ತ ಕೊಂಡೊಯ್ಯುವ ಸದಾಶಯ ನಮಗಿದೆ. ಇನ್ನು ಮುಂದೆಯೂ ಅವರ ಅನವರತ ಮಾರ್ಗದರ್ಶನಕ್ಕಾಗಿ ನಾನು ವಿನಂತಿಸುವೆ. ಬ್ಯಾಂಕಿನ ಹೊಸ ಚೇರ್ಮನ್‌ ಆಗಿ ನಿಯುಕ್ತಿಗೊಂಡಿರುವ ಪ್ರದೀಪ್‌ ಕುಮಾರ್‌ ಅವರನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದರು.

click me!