ಮೊಬೈಲ್ ಆಪ್ 500 ಕೋಟಿ ಹೂಡಿಕೆ ಹಗರಣ: ಭಾರತಿ ಸಿಂಗ್ ಸೇರಿ ಐವರಿಗೆ ಸಮನ್ಸ್

Published : Oct 03, 2024, 09:04 PM IST
ಮೊಬೈಲ್ ಆಪ್ 500 ಕೋಟಿ ಹೂಡಿಕೆ ಹಗರಣ: ಭಾರತಿ ಸಿಂಗ್ ಸೇರಿ ಐವರಿಗೆ ಸಮನ್ಸ್

ಸಾರಾಂಶ

500 ಕೋಟಿ ರೂಪಾಯಿ ಮೊಬೈಲ್ ಆಪ್ ಹೂಡಿಕೆ ಹಗರಣದಲ್ಲಿ ಭಾರತಿ ಸಿಂಗ್ ಮತ್ತು ಎಲ್ವೀಸ್ ಯಾದವ್ ಸೇರಿದಂತೆ ಐವರಿಗೆ ದೆಹಲಿ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

ಮೊಬೈಲ್ ಆಪ್ ಸಂಬಂಧಿತ ಸ್ಕ್ಯಾಮ್‌ನಲ್ಲಿ ನಡೆದ 500 ಕೋಟಿ ಹೂಡಿಕೆ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಖ್ಯಾತ ಮಹಿಳಾ  ಕಾಮಿಡಿಯನ್ ಭಾರತಿ ಸಿಂಗ್ ಹಾಗೂ ಹಿಂದಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದ ಎಲ್ವೀಸ್ ಯಾದವ್ ಸೇರಿದಂತೆ ಒಟ್ಟು ಐವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಕಳುಹಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ಹಿಬಾಕ್ಸ್(HIBOX) ಎಂಬ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಹೂಡಿಕೆ ಮಾಡುವಂತೆ  ಅನೇಕ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಹಾಗೂ ಯೂಟ್ಯೂಬರ್‌ಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಹಿಬಾಕ್ಸ್‌ ಬಗ್ಗೆ ಪ್ರಚಾರ ಮಾಡಿ ಜನರನ್ನು ಈ ಆಪ್‌ನಲ್ಲಿ ಹಣ ಹೂಡುವುದಕ್ಕೆ ಪ್ರೇರಣೆ ಮಾಡಿದ್ದಾರೆ ಎಂದು 500ಕ್ಕೂ ಹೆಚ್ಚು ದೂರುಗಳು ಪೊಲೀಸರಿಗೆ ಬಂದಿವೆ ಎಂದು ಅಧಿಕಾರಿ ಹೇಳಿದ್ದಾರೆ.  ಈ ಹಿಬಾಕ್ಸ್ ಮೊಬೈಲ್ ಆಪ್ ಹಗರಣದ ಪ್ರಮುಖ ಆರೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಚೆನ್ನೈ ಮೂಲದ  30 ವರ್ಷದ ಶಿವರಾಮ್ ಬಂಧಿತ ಆರೋಪಿ. 

ಇತ್ತ ಪೊಲೀಸರಿಗೆ ಬಂದ ದೂರಿನ ಪ್ರಕಾರ, ಯೂಟ್ಯೂಬರ್‌ಗಳು ಹಾಗೂ ಸೋಶೀಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಾದ ಸೌರವ್ ಜೊಶಿ, ಅಭಿಷೇಕ್ ಮಲ್ಹನ್‌, ಪುರವ್ ಜಾ, ಎಲ್ವೀಸ್ ಯಾದವ್, ಭಾರತಿ ಸಿಂಗ್, ಹರ್ಷ ಲಿಂಬಾಚಿಯಾ, ಲಕ್ಷ್ಯಾ ಚೌಧರಿ, ಆದರ್ಶ್‌ ಸಿಂಗ್‌, ಅಮಿತ್, ಹಾಗೂ ದಿಲ್ರಾಜ್ ಸಿಂಗ್‌ ರಾವತ್‌ ಅವರು ಈ ಹಿಬಾಕ್ಸ್‌ ಅಪ್ಲಿಕೇಷನ್ ಬಗ್ಗೆ ಪ್ರಚಾರ ಮಾಡಿ ಜನರಿಗೆ ಆ ಆಪ್‌ನಲ್ಲಿ ಹಣ ಹೂಡುವಂತೆ ಪ್ರೇರೆಪಿಸಿದ್ದಾರೆ. ಈ ಹಿಬಾಕ್ಸ್ ಒಂದು ಮೊಬೈಲ್ ಅಪ್ಲಿಕೇಷನ್ ಆಗಿದ್ದು, ಇದು ಯೋಜನೆ ರೂಪಿಸಿ ಮಾಡಿದ ಹಗರಣದ ಭಾಗವಾಗಿದೆ ಎಂದು ಐಎಫ್‌ಎಸ್‌ಒದ ವಿಶೇಷ ಘಟಕದ ಉಪ ಪೊಲೀಸ್ ಆಯುಕ್ತ ಹೇಮಂತ್ ತಿವಾರಿ ಹೇಳಿದ್ದಾರೆ. 

ಈ ಅಪ್ಲಿಕೇಷನ್ ಮೂಲಕ ಆರೋಪಿಯೂ, ಹೂಡಿಕೆದಾರರಿಗೆ ಹೂಡಿಕ ಮಾಡಿದ ಮೊತ್ತಕ್ಕೆ  ದಿನಕ್ಕೆ ಒಂದರಿಂದ ಶೇಕಡಾ 5ರಷ್ಟು ಆದಾಯ  ನೀಡುವ ಭರವಸೆ ನೀಡಿದ್ದ, ಇದು ಒಂದು ತಿಂಗಳಲ್ಲಿ ಹೂಡಿಕೆಯ ಶೇಕಡಾ 30ರಿಂದ 90ರಷ್ಟು ಪ್ರತಿಶತದ ಆದಾಯವಾಗುತ್ತದೆ. ಈ ಆಪನ್ನು ಫೆಬ್ರವರಿ 2024ರಲ್ಲಿ ಲಾಂಚ್ ಮಾಡಲಾಗಿತ್ತು. 30 ಸಾವಿರಕ್ಕೂ ಹೆಚ್ಚು ಜನೀ ಆಪ್‌ನಲ್ಲಿ ಹೂಡಿಕೆ ಮಾಡಿದ್ದರು.

ಪ್ರಾರಂಭದ ಕೆಲ ತಿಂಗಳಲ್ಲಿ ಹೂಡಿಕೆದಾರರಿಗೆ ಭಾರಿ ಮೊತ್ತದ ಆದಾಯ ಸಿಕ್ಕಿದೆ. ಆದರೆ ಜುಲೈ ನಂತರ ತಾಂತ್ರಿಕ ತೊಂದರೆ, ಕಾನೂನು ತೊಡಕು, ಜಿಎಸ್‌ಟಿ ತೊಡಕು ಎಂದು ಒಂದೊಂದೇ ಕಾರಣ ಹೇಳಿ ಯಾವುದೇ ಹೂಡಿಕೆದಾರರಿಗೆ ಆದಾಯ ನೀಡಿಲ್ಲ.  ಅಲ್ಲದೇ ನೋಯ್ಡಾದಲ್ಲಿದ್ದ ಈ ಸಂಸ್ಥೆಯ ಕಚೇರಿಯನ್ನು ಕೂಡ ಖಾಲಿ ಮಾಡಿಕೊಂಡು ಹೋಗಲಾಗಿದೆ. 

ಇದಾದ ನಂತರ ಕಾರ್ಯಾಚರಣೆಗೆ ಇಳಿದ ಪೊಲೀಸರು  ಪ್ರಮುಖ ಆರೋಪಿ ಶಿವರಾಮ್‌ನನ್ನು ಬಂಧಿಸಿದ್ದು, ಆತನ ಒಟ್ಟು ನಾಲ್ಕು ಖಾತೆಗಳಲ್ಲಿದ್ದ ಒಟ್ಟು 18 ಕೋಟಿ ಹಣವನ್ನು ಜಪ್ತಿ ಮಾಡಲಾಗಿದೆ.  ಇದಾದ ನಂತರ 29 ಸಂತ್ರಸ್ತರಿಂದ ಹಿಬಾಕ್ಸ್ ಅಪ್ಲಿಕೇಷನ್ ವಿರುದ್ಧ ಇಂಟಲಿಜೆನ್ಸಿ ಫ್ಯುಶನ್ & ಸ್ಟ್ರೆಟೆಜಿಕ್ ಆಪರೇಷನ್ ಘಟಕಕ್ಕೆ ದೂರು ಬಂದಿದೆ. ತಮಗೆ ಭಾರಿ ಮೊತ್ತದ ರಿಟರ್ನ್ ಬರುತ್ತದೆ ಎಂದು ಭರವಸೆ ನೀಡಲಾಗಿತ್ತು ಎಂದು ಸಂತ್ರಸ್ತರು ಆರೋಪಿಸಿದ್ದಾರೆ. 

ಆಗಸ್ಟ್ 20ರಂದು ಈ ಆಪ್ ಬಗ್ಗೆ ವಿಶೇಷ ಪೊಲೀಸ್ ಘಟಕವೂ ಭಾರತೀಯ ನ್ಯಾಯ ಸಂಹಿತೆಯ ಹಲವು ಕಾಯ್ದೆಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಹಲವು ಪ್ರಕರಣ ದಾಖಲಿಸಲಾಗಿದೆ. ಆದರ ವಿಚಾರಣೆ ವೇಳೆ ಈಶಾನ್ಯ ಜಿಲ್ಲೆಗಳಲ್ಲೂ ಕೂಡ ಸೈಬರ್ ಇಲಾಖೆಗೆ ಹಲವು ದೂರುಗಳು ಬಂದಿರುವುದು ತಿಳಿದು ಬಂತು ಹೀಗೆ ಒಟ್ಟು 500ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಸಿಗರೇಟ್ ಬೆಲೆ ರಾಕೆಟ್ ವೇಗದಲ್ಲಿ ಗಗನಕ್ಕೆ! ಅಬ್ಬಬ್ಬಾ.. ಒಂದು ಸಿಗರೇಟ್ ಪ್ಯಾಕೆಟ್ ರೇಟ್ ಇಷ್ಟೊಂದಾ?
Free Treatment Hospitals: ಆಸ್ಪತ್ರೆಗೆ ದಾಖಲಾಗೋ ಮುನ್ನ ಇದನ್ನು ಚೆಕ್ ಮಾಡಿದ್ರೆ ಉಳಿಯುತ್ತೆ ಹಾಸ್ಪಿಟಲ್ ಬಿಲ್