
ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ತ್ರಿವೇಣಿ ಸಂಗಮದಲ್ಲಿ ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕುಟುಂಬದ ಬಹುತೇಕ ಎಲ್ಲಾ ಸದಸ್ಯರು ಪುಣ್ಯಸ್ನಾನ ಮಾಡಿದ್ದಾರೆ. ಮುಖೇಶ್ ಅಂಬಾನಿ ಅವರ ತಾಯಿ , ಮಕ್ಕಳು ಮತ್ತು ಮೊಮ್ಮಕ್ಕಳು, ಸೊಸೆಯರು ಪವಿತ್ರ ಸ್ನಾನ ಮಾಡಿದರು.
ಮುಖೇಶ್ ಅಂಬಾನಿ, ಅವರ ತಾಯಿ ಕೋಕಿಲಾಬೆನ್, ಮಕ್ಕಳಾದ ಆಕಾಶ್, ಅನಂತ್, ಸೊಸೆಯಂದಿರಾದ ಶ್ಲೋಕಾ, ರಾಧಿಕಾ, ಮೊಮ್ಮಕ್ಕಳಾದ ಪೃಥ್ವಿ, ವೇದ, ಸಹೋದರಿಯರಾದ ದೀಪ್ತಿ ಸಲ್ಗಾಂವ್ಕರ್ ಮತ್ತು ನೀನಾ ಕೊಠಾರಿ ಮಂಗಳವಾರ ಪವಿತ್ರ ಸ್ನಾನ ಮಾಡಿದರು. ಈ ಮೂಲಕ ಅಂಬಾನಿ ಕುಟುಂಬದ ಇಡೀ ನಾಲ್ಕು ತಲೆಮಾರುಗಳು ಪ್ರಯಾಗ್ರಾಜ್ನಲ್ಲಿ ಒಟ್ಟಾಗಿ ಪವಿತ್ರ ಸ್ನಾನ ಮಾಡಿದಂತಾಗಿದೆ.
ಅಂಬಾನಿಯವರ ಅತ್ತೆ ಪೂನಂಬೆನ್ ದಲಾಲ್ ಮತ್ತುಅವರ ಸಹೋದರಿಯ ಪತಿಯ ಸಹೋದರಿ ಮಮ್ತಾಬೆನ್ ದಲಾಲ್ ಕೂಡ ಇವರೊಂದಿಗೆ ಇದ್ದರು. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಲಕ್ಷಾಂತರ ಭಕ್ತರೊಂದಿಗೆ ಅಂಬಾನಿ ಕುಟುಂಬದ ನಾಲ್ಕು ತಲೆಮಾರುಗಳು ಈ ಆಧ್ಯಾತ್ಮಿಕ ಯಾತ್ರೆಯಲ್ಲಿ ಭಾಗವಹಿಸಿದವು.
ಇದೇ ವೇಳೆ ನಿರಂಜನಿ ಅಖಾಡದ ಸ್ವಾಮಿ ಕೈಲಾಸಾನಂದ್ ಗಿರಿಜಿ ಮಹಾರಾಜ್ ಗಂಗಾ ಪೂಜೆ ನೆರವೇರಿಸಿದರು. ನಂತರ, ಅಂಬಾನಿ ಪರಮಾರ್ಥ್ ನಿಕೇತನ್ ಆಶ್ರಮದ ಸ್ವಾಮಿ ಚಿದಾನಂದ ಸರಸ್ವತಿ ಮಹಾರಾಜರನ್ನು ಅಂಬಾನಿ ಕುಟುಂಬ ಸದಸ್ಯರು ಭೇಟಿಯಾದರು. ಆಶ್ರಮದಲ್ಲಿ ಅಂಬಾನಿ ಕುಟುಂಬದ ಸದಸ್ಯರು ಸಿಹಿತಿಂಡಿಗಳು ಮತ್ತು ಲೈಫ್ ಜಾಕೆಟ್ಗಳನ್ನು ಭಕ್ತರಿಗೆ ವಿತರಿಸಿದರು. ಈ ಕುಂಭಮೇಳ ಸ್ಥಳದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, 'ತೀರ್ಥ ಯಾತ್ರಿ ಸೇವಾ' ಎಂಬ ಸೇವೆಯ ಮೂಲಕ ಮಹಾಕುಂಭ ಯಾತ್ರಿಕರಿಗೆ ಅಲ್ಲಿ ವಿಶೇಷ ಸೇವೆಗಳನ್ನು ಒದಗಿಸುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.