ಧಾರವಾಡದಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌ ಕಾರ್ಖಾನೆ: 500 ಜನರಿಗೆ ಉದ್ಯೋಗ

By Kannadaprabha NewsFirst Published Aug 10, 2023, 3:36 AM IST
Highlights

ಈ ಹಿಂದಿನ ಬಿಜೆಪಿ ಸರ್ಕಾರ ಧಾರವಾಡದ ಮುಮ್ಮಿಗಟ್ಟಿಯಲ್ಲಿ 200 ಎಕರೆ ಪ್ರದೇಶವನ್ನು ಎಫ್‌ಎಂಸಿಜಿ (ಫಾಸ್ವ್‌ ಮೂವಿಂಗ್‌ ಕಂಸ್ಯೂಮರ್‌ ಗೂಡ್ಸ್‌) ಕ್ಲಸ್ಟರ್‌ ಎಂದು ಘೋಷಿಸಿತ್ತು. ಈ ಪ್ರದೇಶದಲ್ಲಿ 26 ಎಕರೆ ಸ್ಥಳಾವಕಾಶ ನೀಡುವಂತೆ ಮುರಳೀಧರನ್‌ ಕಂಪನಿ ರಾಜ್ಯ ಸರ್ಕಾರವನ್ನು ಕೋರಿತ್ತು. ಈ ಉದ್ದಿಮೆ 446 ಕೋಟಿ ಬಂಡವಾಳದ್ದಾಗಿದ್ದು, 500 ಜನರಿಗೆ ಉದ್ಯೋಗಾವಕಾಶ ನೀಡಲಿದೆ.

ಧಾರವಾಡ(ಆ.10): ವಿಶ್ವಖ್ಯಾತ ಲೆಗ್‌ಸ್ಪಿನ್‌ ಮಾಂತ್ರಿಕ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಬಳಿಕ ಉದ್ದಿಮೆ ರಂಗಕ್ಕೆ ಕಾಲಿರಿಸಿದ್ದು, ಅವರು ಧಾರವಾಡದಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದಾಗಿದ್ದಾರೆ.

ಮೆ.ಸಿಲೋನ್‌ ಬ್ರೆವರೀಜ್‌ ಕ್ಯಾನ್‌ ಪ್ರೈವೆಟ್‌ ಲಿಮಿಟೆಡ್‌ ಶ್ರೀಲಂಕಾ ಕಂಪನಿಯಾಗಿದ್ದು, ಮುತ್ತಯ್ಯ ಮುರಳೀಧರನ್‌ ಇದರ ಪ್ರವರ್ತಕರಾಗಿದ್ದಾರೆ. ಇದು ಪಾನೀಯಗಳನ್ನು ತುಂಬುವ ಅಲ್ಯುಮಿನಿಯಂ ಕ್ಯಾನ್‌ ತಯಾರಿಕೆ ಕಂಪನಿಯಾಗಿದ್ದು, ಇವುಗಳಿಗೆ ವಿವಿಧ ದೇಶಗಳಲ್ಲಿ ಅಪಾರ ಬೇಡಿಕೆಯೂ ಇದೆ. ಧಾರವಾಡದ ಎಫ್‌ಎಂಸಿಜಿ ಕ್ಲಸ್ಟರ್‌ನಲ್ಲಿ ಇದರ ಘಟಕ ಸ್ಥಾಪಿಸಲು ಅನುಮತಿ ಹಾಗೂ ಸ್ಥಳಾವ ಕಾಶ ಕೋರಿ ಕರ್ನಾಟಕ ಸರ್ಕಾರಕ್ಕೆ ಕಂಪನಿ ಪ್ರಸ್ತಾವನೆ ಸಲ್ಲಿಸಿತ್ತು.

ಮಂಡ್ಯ: ಹಸಿರು ಮನೆಯೊಳಗೊಂದು ಆಲೆಮನೆ, ಉತ್ಕೃಷ್ಟ ಗುಣಮಟ್ಟದ ಸಾವಯವ ಬೆಲ್ಲ ಉತ್ಪಾದನೆ

ಈ ಹಿಂದಿನ ಬಿಜೆಪಿ ಸರ್ಕಾರ ಧಾರವಾಡದ ಮುಮ್ಮಿಗಟ್ಟಿಯಲ್ಲಿ 200 ಎಕರೆ ಪ್ರದೇಶವನ್ನು ಎಫ್‌ಎಂಸಿಜಿ (ಫಾಸ್ವ್‌ ಮೂವಿಂಗ್‌ ಕಂಸ್ಯೂಮರ್‌ ಗೂಡ್ಸ್‌) ಕ್ಲಸ್ಟರ್‌ ಎಂದು ಘೋಷಿಸಿತ್ತು. ಈ ಪ್ರದೇಶದಲ್ಲಿ 26 ಎಕರೆ ಸ್ಥಳಾವಕಾಶ ನೀಡುವಂತೆ ಮುರಳೀಧರನ್‌ ಕಂಪನಿ ರಾಜ್ಯ ಸರ್ಕಾರವನ್ನು ಕೋರಿತ್ತು. ಈ ಉದ್ದಿಮೆ 446 ಕೋಟಿ ಬಂಡವಾಳದ್ದಾಗಿದ್ದು, 500 ಜನರಿಗೆ ಉದ್ಯೋಗಾವಕಾಶ ನೀಡಲಿದೆ.

ಮುತ್ತಯ್ಯ ಮುರಳೀಧನ್‌ ಈಗಾಗಲೇ ಎರಡು ಬಾರಿ ಧಾರವಾಡಕ್ಕೆ ಬಂದು ಉದ್ದಿಮೆ ಸ್ಥಾಪನೆಯ ಸ್ಥಳ ಪರಿಶೀಲನೆ ಮಾಡಿ ಹೋಗಿದ್ದಾರೆ. ಈ ಸಂಸ್ಥೆ ಮೂರು ಹಂತಗಳಲ್ಲಿ ತನ್ನ ಉದ್ದಿಮೆಯನ್ನು ವಿಸ್ತರಿಸಲಿದ್ದು, ಆರಂಭದ ಹಂತದಲ್ಲಿ 200 ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಬಿ.ಟಿ. ಪಾಟೀಲ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಬೀದರ್: ದೇಶಾದ್ಯಂತ ತಲುಪಿದ ಬೀದರ್‌ನ ಸಿರಿಧಾನ್ಯ, ಕಡಿಮೆ ಬಂಡವಾಳ ಕೋಟ್ಯಂತರ ರೂ. ಲಾಭ..!

ರಾಜ್ಯ ಸರ್ಕಾರದ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ರಾಜ್ಯ ಮಟ್ಟದ ಭೂ ಆಡಿಟ್‌ ಸಮಿತಿ 2023ರ ಮಾರ್ಚ್‌ 4ರಂದು ನಡೆದ ಸಭೆಯಲ್ಲಿ ಕಂಪನಿಯ ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಮಾ.7ರಂದು ರಾಜ್ಯಮಟ್ಟದ ಸಿಂಗಲ್‌ ವಿಂಡೋ ಕ್ಲಿಯರನ್ಸ್‌ ಸಮಿತಿ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು.

ಈ ಅನುಮೋದನೆಯಂತೆ ಕೆಐಎಡಿಬಿ ಮೆ.ಸಿಲೋನ್‌ ಬೆವರೇಜ್‌ ಕ್ಯಾನ್‌ ಪ್ರೈವೆಟ್‌ ಲಿಮಿಟೆಡ್‌ ಕಂಪನಿಗೆ 16.70 ಎಕರೆ ಭೂಮಿಯನ್ನು ಮುಮ್ಮಿಗಟ್ಟಿಯ ಕೈಗಾರಿಕಾ ಪ್ರದೇಶದ ಪ್ಲಾಟ್‌ ನಂ.157ರಲ್ಲಿ, 2.64 ಎಕರೆ ಭೂಮಿಯನ್ನು ಪ್ಲಾಟ್‌ ನಂ. 156ರಲ್ಲಿ ಹಾಗೂ 6.15 ಎಕರೆ ಪ್ರದೇಶವನ್ನು ಪ್ಲಾಟ್‌ ನಂ. 158ರಲ್ಲಿ ಮಂಜೂರು ಮಾಡಿದೆ ಎಂದು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶಿವಪುತ್ರಪ್ಪ ಹೊಸಮನಿ ಮಾಹಿತಿ ನೀಡಿದರು.

click me!