
ಮುಂಬೈ (ಫೆ.29): ಪ್ರಖ್ಯಾತ ಟೆಕ್ ಕಂಪನಿ ಇಂಟೆಲ್ ಇಂಡಿಯಾದ ಮಾಜಿ ಮುಖ್ಯಸ್ಥ ಅವತಾರ್ ಸೈನಿ ದಾರುಣ ಸಾವು ಕಂಡಿದ್ದಾರೆ. ಬುಧವಾರ ನವೀ ಮುಂಬೈನ ನೆರೂಲ್ ಪ್ರದೇಶದ ಪಾಮ್ ಬೀಚ್ನಲ್ಲಿ ಸಹ ಸೈಕ್ಲಿಸ್ಟ್ಗಳ ಜೊತೆ ಸೈಕ್ಲಿಂಗ್ ಮಾಡುತ್ತಿದ್ದ ವೇಳೆ ವೇಗವಾಗಿ ಬಂದ ಕಾರ್ ಡಿಕ್ಕಿ ಹೊಡೆದು ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವತಾರ್ ಸೈನಿ ಸಾವಿನ ಬಗ್ಗೆ ಗುರುವಾರ ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ. ಬುಧವಾರ ಮುಂಜಾನೆ 5.50ರ ಸುಮಾರಿಗೆ 68 ವರ್ಷದ ಅವತಾರ್ ಸೈನಿ ಸಹ ಸೂಕ್ಲಿಸ್ಟ್ಗಳ ಜೊತೆ ಸೈಕ್ಲಿಂಗ್ ಮಾಡಲು ತೆರಳಿದ್ದಳು ಈ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಪಿಟಿಐ ಪ್ರಕಾರ, ವೇಗವಾಗಿ ಬಂದ ಕ್ಯಾಬ್ ಹಿಂದಿನಿಂದ ಸೈನಿ ಅವರ ಬೈಸಿಕಲ್ಗೆ ಡಿಕ್ಕಿ ಹೊಡೆದಿದೆ ಮತ್ತು ಚಾಲಕ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದ. ಆದರೆ ಬೈಸಿಕಲ್ ಫ್ರೇಮ್ ಕ್ಯಾಬ್ನ ಮುಂಭಾಗದ ಚಕ್ರಗಳ ಅಡಿಯಲ್ಲಿ ಸಿಲುಕಿಕೊಂಡಿತ್ತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಈ ಅಪಘಾತದಲ್ಲಿ ಸೈನಿ ಗಂಭೀರವಾಗಿ ಗಾಯಗೊಂಡಿದ್ದರು, ತಕ್ಷಣವೇ ಸಹ ಸೈಕ್ಲಿಸ್ಟ್ಗಳು ಇವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿಯೇ ಅವರು ಸಾವು ಕಂಡಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಬಗ್ಗೆ ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇಂಟೆಲ್ 386 ಹಾಗೂ 486 ಮೈಕ್ರೋಪ್ರೊಸೆಸರ್ಗಳನ್ನು ರಚಿಸುವಲ್ಲಿ ಚೆಂಬೂರ್ ನಿವಾಸಿಯಾಗಿರುವ ಅವತಾರ್ ಸೈನಿ ಪ್ರಮುಖ ಪಾತ್ರ ವಹಿಸಿದ್ದರು. ಅದಲ್ಲದೆ, ಇಂಟೆಲ್ ಕಂಪನಿ ಪೆಂಟಿಯಮ್ ಪ್ರೊಸೆಸರ್ ರಚನೆಯ ಟೀಮ್ಅನ್ನು ಇವರು ಮುನ್ನಡೆಸಿದ್ದರು. ಪೊಲೀಸರು ಕ್ಯಾಬ್ ಚಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ, ಇದರಲ್ಲಿ 279 (ಅಪವೇಗದ ಚಾಲನೆ), 337 (ಮನುಷ್ಯನ ಪ್ರಾಣಕ್ಕೆ ಅಪಾಯವಾಗುವಂತೆ ದುಡುಕಿನ ಅಥವಾ ನಿರ್ಲಕ್ಷ್ಯದ ಚಾಲನೆ) ಮತ್ತು 304-ಎ (ಯಾರೊಬ್ಬರ ಸಾವಿಗೆ ಕಾರಣ) ತೊಡಗಿಸಿಕೊಂಡಿದೆ. ಆದರೆ ಆರೋಪಿ ಚಾಲಕ ಇನ್ನೂ ತಲೆಮರೆಸಿಕೊಂಡಿದ್ದಾನೆ.
ಪತ್ನಿಯ ಸಾವಿನ ಬಳಿಕ ಏಕಾಂಗಿಯಾಗಿ ಬದುಕಿದ್ದ ಅವತಾರ್: ಸೈನಿ ಅವರ ಪತ್ನಿ ಸುಮಾರು 3 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅಂದಿನಿಂದ ಅವರು ಏಕಾಂಗಿಯಾಗಿ ವಾಸಿಸುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗ ಮತ್ತು ಮಗಳು, ಇಬ್ಬರೂ ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. ವರದಿಗಳ ಪ್ರಕಾರ, ಸೈನಿ ತನ್ನ ಮಗ ಮತ್ತು ಮಗಳನ್ನು ಭೇಟಿಯಾಗಲು ಮುಂದಿನ ತಿಂಗಳು ಅಮೆರಿಕಕ್ಕೆ ಹೋಗಬೇಕಿತ್ತು.
28 ವರ್ಷಗಳ ಹಿಂದೆ ಇದೆ ದಿನ ನಡೆದಿತ್ತು ಅಚ್ಚರಿ, AI ಕಂಪ್ಯೂಟರ್ ಜೊತೆ ಚೆಸ್ ಚಾಂಪಿಯನ್ ಕಾದಾಟ!
ಅವತಾರ್ ಸೈನಿ ಅವರು 1982 ರಿಂದ 2004 ರವರೆಗೆ ಇಂಟೆಲ್ನಲ್ಲಿ ಉಪಾಧ್ಯಕ್ಷ ಹುದ್ದೆಯನ್ನು ಹೊಂದಿದ್ದರು. ಈ ಅವಧಿಯಲ್ಲಿ, ಅವರು ಅನೇಕ ಪ್ರಸಿದ್ಧ ಪ್ರೊಸೆಸರ್ಗಳನ್ನು ವಿನ್ಯಾಸಗೊಳಿಸುವಲ್ಲಿ ಪಾತ್ರವಹಿಸಿದರು. ಇಂಟೆಲ್ನ ದೇಶದ ಮುಖ್ಯಸ್ಥರಲ್ಲದೆ, ಅವರು ಇಂಟೆಲ್ ಸೌತ್ ಏಷ್ಯಾದ ನಿರ್ದೇಶಕರೂ ಆಗಿದ್ದರು. ಇಂಟೆಲ್ ಇಂಡಿಯಾ ಅಧ್ಯಕ್ಷ ಗೋಕುಲ್ ವಿ. ಸುಬ್ರಮಣ್ಯಂ ಅವತಾರ್ ಸೈನಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸೈನಿ ಅವರನ್ನು ಅದ್ಭುತ ಆವಿಷ್ಕಾರಕ ಎಂದು ಕರೆದ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಅವತಾರ್ ಸೈನಿ ಅವರನ್ನು ಅಮೂಲ್ಯವಾದ ಮಾರ್ಗದರ್ಶಕರಾಗಿ ಇಂಟೆಲ್ ಯಾವಾಗಲೂ ನೆನಪಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
ಭಾರತದ ಅತ್ಯಂತ ಸುಂದರ ಐಎಎಸ್/ಐಪಿಎಸ್ ಅಧಿಕಾರಿಗಳು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.