ಅಕ್ಷಯ ತೃತೀಯಾ : ಚಿನ್ನಕ್ಕೆ ಭರ್ಜರಿ ರಿಯಾಯಿತಿ

By Web DeskFirst Published May 6, 2019, 12:27 PM IST
Highlights

ಎಲ್ಲೆಡೆ ಅಕ್ಷಯ ತೃತೀಯಾದ ಸಂಭ್ರಮ ಮನೆ ಮಾಡುತ್ತಿದ್ದು, ಇದೇ ವೇಳೆ ಹಲವು ಆಭರಣ ಮಳಿಗೆಗಳು ರಿಯಾಯಿತಿ ಘೋಷಿಸಿವೆ. 

ಬೆಂಗಳೂರು:  ಸಂಪತ್ತಿನ ಸಮೃದ್ಧಿ ದಿನವೆಂದು ಪ್ರಖ್ಯಾತವಾಗಿರುವ ‘ಅಕ್ಷಯ ತೃತೀಯ’ಕ್ಕೆ ಸಮೀಪಿಸಿದ್ದು, ಗ್ರಾಹಕರು ತಮ್ಮಿಷ್ಟದ ಆಭರಣಗಳನ್ನು ಖರೀದಿಸಲು ಉತ್ಸುಕರಾಗಿದ್ದಾರೆ. ಮೇ 7ರ ಮಂಗಳವಾರ ಮುಂಜಾನೆ 3 ಗಂಟೆ 5 ನಿಮಿಷಕ್ಕೆ ಪ್ರಾರಂಭವಾಗಿ ಮೇ 8ರ ಬುಧವಾರ ಬೆಳಗ್ಗೆ 3 ಗಂಟೆಯವರೆಗೂ ಶುಭ ಗಳಿಗೆಯಿದ್ದು, ಆಭರಣ ಖರೀದಿಸಬಹುದು.

ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ನಗರದ ವಿವಿಧ ಆಭರಣ ಅಂಗಡಿಗಳು ಸಜ್ಜಾಗಿದ್ದು ಹಲವು ರಿಯಾಯಿತಿ, ಕೊಡುಗೆಗಳನ್ನು ಘೋಷಿಸಿವೆ. ಮೇ 7ರ ಮಂಗಳವಾರ ಮುಂಜಾನೆ 3 ಗಂಟೆ 5 ನಿಮಿಷಕ್ಕೆ ಶುಕ್ಲಪಕ್ಷ ವೈಶಾಖ ಮಾಸ ರೋಹಿಣಿ ನಕ್ಷತ್ರ ಪ್ರವೇಶದಿಂದ ಅಕ್ಷಯ ತದಿಗೆ ಪ್ರಾರಂಭಗೊಳ್ಳಲಿದೆ. ಮರುದಿನ ಅಂದರೆ ಮೇ 8ರ ಮುಂಜಾನೆ 3 ಗಂಟೆ 5 ನಿಮಿಷಕ್ಕೆ ರೋಹಿಣಿ ನಕ್ಷತ್ರ ಪ್ರವೇಶವಾದ ನಂತರ ಮುಕ್ತಾಯಗೊಳ್ಳಲಿದೆ. ಈ ಸಮಯದಲ್ಲಿ ಆಭರಣ ಖರೀದಿ, ಪೂಜೆ ಪುನಸ್ಕಾರ ಸೇರಿದಂತೆ ಯಾವುದೇ ಒಳ್ಳೆಯ ಕೆಲಸ ಮಾಡಿದ್ದಲ್ಲಿ ಉತ್ತಮ ಪ್ರತಿಫಲ ಸಿದ್ಧಿಯಾಗುವುದು ಎಂಬ ನಂಬಿಕೆ ಇದೆ.

ಅಕ್ಷಯ ತದಿಗೆ ದಿನದಂದು ಚಿನ್ನ, ಬೆಳ್ಳಿ, ವಜ್ರಾಭರಣಗಳನ್ನು ಖರೀದಿಸಿದರೆ ಅಥವಾ ಇತರೆ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದರೆ ಸಂಪತ್ತು ಹೆಚ್ಚುತ್ತದೆ. ದಾನ ಮಾಡಿದರೆ ಹೆಚ್ಚಿನ ಪ್ರತಿಫಲ ಉಂಟಾಗುವುದೆಂಬ ಪ್ರತೀತಿಯಿದೆ. ಅಂದು ಶುಭವಾಗುವುದು ಎಂಬ ನಂಬಿಕೆಯಿಂದ ಮಹಿಳೆಯರು, ಹೆಣ್ಣು ಮಕ್ಕಳು ಚಿನ್ನ, ಬೆಳ್ಳಿ ಆಭರಣಗಳ ಖರೀದಿಯಲ್ಲಿ ತೊಡಗುತ್ತಾರೆ.

ಈ ಹಿನ್ನೆಲೆಯಲ್ಲಿ ಕಳೆದ ಇಪ್ಪತ್ತು ದಿನಗಳಿಂದ ನಗರದ ಆಭರಣ ಅಂಗಡಿಗಳು, ರಿಯಲ… ಎಸ್ಟೇಟ್‌ ಉದ್ಯಮಿಗಳು, ನಾನಾ ವಾಹನಗಳ ಕಂಪನಿಗಳು, ಬಟ್ಟೆಅಂಗಡಿಗಳು ಸೇರಿದಂತೆ ಉದ್ಯಮಗಳು ವಿಶೇಷ ಕೊಡುಗೆಗಳನ್ನು ನೀಡಿ ಗ್ರಾಹಕರನ್ನು ಸೆಳೆಯುತ್ತಿವೆ.

ಶೇ.50ಕ್ಕೂ ಹೆಚ್ಚು ಮುಂಗಡ ಬುಕ್ಕಿಂಗ್‌!:

ಅಕ್ಷಯ ತೃತೀಯ ಅಂಗವಾಗಿ ಕಳೆದ 15 ದಿನದ ಮುಂಚಿತವಾಗಿಯೇ ಉಚಿತ ಮುಂಗಡ ಬುಕ್ಕಿಂಗ್‌ ಪ್ರಾರಂಭಿಸಲಾಗಿದೆ. ಈಗಾಗಲೇ ಶೇ.50ಕ್ಕೂ ಹೆಚ್ಚಿನ ಮುಂಗಡ ಬುಕ್ಕಿಂಗ್‌ ಆಗಿದೆ. ಅಕ್ಷಯ ತೃತೀಯ ದಿನದಂದು ನೂಕುನುಗ್ಗಲು ಉಂಟಾಗುವುದರಿಂದ ಗ್ರಾಹಕರು ಮುಂಚಿತವಾಗಿಯೇ ಬುಕ್ಕಿಂಗ್‌ ಮಾಡಲು ಆಭರಣ ಅಂಗಡಿಗಳತ್ತ ಎಡತಾಕುತ್ತಿದ್ದಾರೆ.

ಅಕ್ಷಯ ತೃತೀಯಕ್ಕೆ ರಿಯಾಯಿತಿ:

ಕೆಲ ಮಳಿಗೆಗಳಲ್ಲಿ ಅಕ್ಷಯ ತೃತೀಯಕ್ಕಾಗಿ ವಿಶೇಷ ಕೌಂಟರ್‌ಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಒಡವೆಗಳಿಗೆ ಭಾರಿ ರಿಯಾಯಿತಿ ಹಾಗೂ ಬಹುಮಾನಗಳನ್ನು ನೀಡಲು ಆಭರಣ ಮಳಿಗೆಗಳು ಮುಂದಾಗಿವೆ.

ಹಲಸೂರು, ಜಯನಗರದ ಸುಲ್ತಾನ್‌ ಡೈಮಂಡ್ಸ್‌ ಆ್ಯಂಡ್‌ ಗೋಲ್ಡ್‌ ಅಕ್ಷಯ ತೃತೀಯ ಆಚರಣೆಗಾಗಿ ವಿಶೇಷ ಹಗುರವಾದ (ಲೈಟ್‌ವೇಟ್‌) ವಜ್ರಾಭರಣಗಳು, ಚಿನ್ನಾಭರಣಗಳ ವಿಶೇಷ ವಿನ್ಯಾಸಗಳ ಸಂಗ್ರಹ ಬಿಡುಗಡೆ ಮಾಡಿದೆ. 5 ಗ್ರಾಂ ಚಿನ್ನಾಭರಣಗಳು ಹಾಗೂ 25 ಸಾವಿರ ಮೇಲ್ಪಟ್ಟು ವಜ್ರಾಭರಣಗಳ ಖರೀದಿಗೆ ಉಚಿತ ಗೋಲ್ಡ್‌ ಕಾಯಿನ್‌ ನೀಡುವುದಾಗಿ ಘೋಷಿಸಿದೆ. ಜೋಸ್ಕೋ ಜ್ಯುವೆಲ​ರ್‍ಸ್ 30 ಸಾವಿರ ಮೇಲ್ಪಟ್ಟಚಿನ್ನಾಭರಣ ಖರೀದಿ ಮೇಲೆ ಉಚಿತ ಚಿನ್ನದ ನಾಟ್ಯ, ಶೇ.25ರವರೆಗೆ ಚಿನ್ನದ ಆಭರಣಗಳ ತಯಾರಿಕೆ ವೆಚ್ಚ ಕಡಿತ, ಪ್ರತಿ ಕ್ಯಾರಟ್‌ ವಜ್ರಾಭರಣಗಳ ಖರೀದಿ ಮೇಲೆ 12,500 ಕಡಿತ ಸೇರಿದಂತೆ ವಿವಿಧ ರಿಯಾಯಿತಿ ನೀಡಲಿದೆ.

ಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸ್‌ ಜ್ಯುವೆಲರಿಯಲ್ಲಿ ಚಿನ್ನ, ಬೆಳ್ಳಿ, ವಜ್ರ ಖರೀದಿಸುವವರಿಗೆ ತಿರುಪತಿ ಪದ್ಮಾವತಿ ಸನ್ನಿಧಿಯಲ್ಲಿ ಪೂಜಿಸಲ್ಪಟ್ಟಲಕ್ಷ್ಮೇ ವಿಗ್ರಹ, ಮಡಲಕ್ಕಿಯನ್ನು ಮಹಿಳೆಯರಿಗೆ ನೀಡಲಾಗುತ್ತದೆ. ಚಿನ್ನದ ಆಭರಣ ಮೇಕಿಂಗ್‌ ಚಾಜ್‌ರ್‍ ಮೇಲೆ ಶೇ.25 ರಿಯಾಯಿತಿ, ವೇಸ್ಟೇಜ್‌ ಮತ್ತು ಸ್ಟೋನ್‌ ಚಾರ್ಜಸ್‌ನಲ್ಲೂ ಕಡಿತ ನೀಡಲಾಗಿದೆ. ಒಂದು ಗ್ರಾಂ ಚಿನ್ನದ ನಾಣ್ಯಗಳು, 5 ಗ್ರಾಂ ಬೆಳ್ಳಿ ನಾಣ್ಯಗಳನ್ನು ತಯಾರಿಸಿದ್ದು, ಸಾಮಾನ್ಯ ಜನರೂ ಆಭರಣ ಖರೀದಿಸಲು ಅನುವು ಮಾಡಿಕೊಡಲಾಗಿದೆ. ಮಳಿಗೆಯು ಮಂಗಳವಾರ ಬೆಳಗ್ಗೆ 7ರಿಂದ ರಾತ್ರಿ 11ರವರೆಗೆ ತೆರೆದಿರುತ್ತದೆ. ಈ ಬಾರಿ ವಿಶೇಷ ಆ್ಯಂಟಿಕ್‌ ಆಭರಣಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಕಳೆದ ವರ್ಷಕ್ಕಿಂತ ಶೇ.25ಕ್ಕಿಂತ ಹೆಚ್ಚು ವ್ಯಾಪಾರವಾಗಬಹುದು ಎಂದು ಕರ್ನಾಟಕ ಜ್ಯುವೆಲ್ಲರ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷ ಟಿ.ಎ.ಶರವಣ ತಿಳಿಸಿದ್ದಾರೆ.

ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌, ತಾನಿಷ್‌್ಕ ಸ್ವರ್ಣಂ ಜ್ಯುವೆಲ​ರ್‍ಸ್, ಕಲ್ಯಾಣ್‌ ಜ್ಯುವೆಲ್ಲ​ರ್‍ಸ್, ಧವನಂ ಜ್ಯುವೆಲ​ರ್‍ಸ್, ಭೀಮಾ ಜ್ಯುವೆಲ​ರ್‍ಸ್, ಲಲಿತ ಜ್ಯುವೆಲ್ಲರ್ಸ್‌ ಚಿನ್ನಾಭರಣಗಳು, ವಜ್ರಾಭರಣಗಳು ಮೇಲೆ ರಿಯಾಯಿತಿ ನೀಡಿವೆ. ಕೆಲವು ಜ್ಯುವೆಲರ್ಸ್‌ ಪ್ರತಿ ಮುಂಗಡ ಬುಕ್ಕಿಂಗ್‌ನೊಂದಿಗೆ ರಿಯಾಯಿತಿ ಜತೆಗೆ ಬೆಳ್ಳಿಯ ಉಡುಗೊರೆ, ಪ್ರತಿ ಆಭರಣ ಖರೀದಿಗೆ ಉಚಿತ ನಾಣ್ಯಗಳು, ತಯಾರಿಕಾ ವೆಚ್ಚದಲ್ಲಿ ಕಡಿತ ಸೇರಿದಂತೆ ವಿವಿಧ ಕೊಡುಗೆಗಳನ್ನು ಘೋಷಿಸಿವೆ. ಕೆಲವೊಂದು ಜ್ಯುವೆಲ್ಲರ್ಸ್‌ನಲ್ಲಿ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ಮೇಲೆ ಶೇ.5ರಷ್ಟುಕ್ಯಾಶ್‌ಬ್ಯಾಕ್‌ ಕೂಡಾ ಲಭ್ಯವಿರಲಿದೆ.

ಹಾಲ್‌ಮಾರ್ಕ್ ಆಭರಣ ಖರೀದಿಸಿ

ಯಾವುದೇ ಆಭರಣಗಳನ್ನು ಖರೀದಿಸುವಾಗ ಕೆಲವು ಮಾಹಿತಿ ಹೊಂದಿರಬೇಕು. ಕೆಲವು ಜ್ಯುವೆಲರಿಗಳು 10 ದಿನಗಳೊಳಗೆ ಚಿನ್ನ ಹಿಂತಿರುಗಿಸಿದರೆ ಗ್ರಾಹಕರಿಗೆ ಪೂರ್ತಿ ಹಣ ಕೊಡುತ್ತವೆ. ಕೆಲವು ಕಡೆಗಳಲ್ಲಿ ಅಂಥ ಅನುಕೂಲ ಇರುವುದಿಲ್ಲ. ಚಿನ್ನದ ಶುದ್ಧತೆ ಪ್ರಮಾಣೀಕರಿಸಲು ಇರುವ ಬಿಐಎಸ್‌ ಹಾಲ್‌ಮಾರ್ಕ್ ಗುರುತಿನ ಆಭರಣ ಖರೀದಿಸಿ. ಖರೀದಿ ಬಿಲ್‌ಗಳನ್ನು ತಪ್ಪದೇ ಪಡೆಯಬೇಕು. ಜತೆಗೆ ಮಾರಾಟಗಾರರಲ್ಲಿ ಆಭರಣದ ಬೈ-ಬ್ಯಾಕ್‌ ನೀತಿಗಳ ಬಗ್ಗೆ ವಿಚಾರಿಸಿ ತಿಳಿದುಕೊಳ್ಳುವುದು ಉತ್ತಮ.

ಪೇಟಿಎಂನಲ್ಲಿ ಗೋಲ್ಡ್‌ ಖರೀದಿ

ಆನ್‌ಲೈನ್‌ ಕಂಪನಿಗಳು ಬಡವರಿಗೂ 1 ರೂಪಾಯಿಗೆ ಬಂಗಾರ ಖರೀದಿಗೆ ಅವಕಾಶ ಕಲ್ಪಿಸಿ ಜನರನ್ನು ಆಕರ್ಷಿಸುತ್ತಿವೆ. ಇ-ವಾಲೆಟ್‌ ಸಂಸ್ಥೆ ಪೇಟಿಎಂ ಗೋಲ್ಡ್‌ 1 ರು.ಗೆ ಬಂಗಾರ ಖರೀದಿ ಸೇವೆ ಶುರುಮಾಡಿದೆ. 1 ರೂಪಾಯಿಯಿಂದ 1.5 ಲಕ್ಷದವರೆಗೆ ಬಂಗಾರ ಖರೀದಿಗೆ ಅವಕಾಶವಿದೆ. ಪೇಟಿಎಂ ಮೂಲಕ 24 ಕ್ಯಾರೆಟ್‌ 999.9 ಶುದ್ಧ ಬಂಗಾರ ಸಿಗಲಿದೆ. ಖರೀದಿಸಿದ ಬಂಗಾರ ಸುರಕ್ಷಿತ ಲಾಕರ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಪೇಟಿಎಂ ಮೂಲಕ ನೀವು ಬಂಗಾರ ಮಾರಾಟ ಮಾಡಬಹುದು. ನಿಮಗೆ ಬೇಕಾದಾಗ ಬಂಗಾರವನ್ನು ಡಿಲೆವರಿ ಪಡೆಯಬಹುದು. 1, 2, 5, 10, 20 ಗ್ರಾಂ ಬಂಗಾರ ನಾಣ್ಯದ ರೂಪದಲ್ಲಿ ಸಿಗಲಿದೆ. ಪೇಟಿಎಂನಂತೆ ಬುಲಿಯನ್‌ ಇಂಡಿಯಾ ಮೂಲಕವೂ .300ಕ್ಕೆ ಚಿನ್ನ ಖರೀದಿ ಮಾಡಬಹುದಾಗಿದೆ.

ರಾಜಕೀಯ ನಾಯಕರ ಭಾವಚಿತ್ರದ ಆಭರಣಕ್ಕೆ ಬೇಡಿಕೆ

ಪಾರಂಪರಿಕ ಆಭರಣಗಳು, ಟೆಂಪಲ್‌ ಜ್ಯುವೆಲ​ರ್‍ಸ್, ಆ್ಯಂಟಿಕ್‌ ಸೇರಿದಂತೆ ವಿವಿಧ ನೂತನ ವಿನ್ಯಾಸದ ಆಭರಣಗಳಿಗೆ ಬೇಡಿಕೆ ಹೆಚ್ಚಿದೆ. ವಿಶೇಷವಾಗಿ ರಾಜಕೀಯ ಪಕ್ಷದ ಚಿಹ್ನೆ ಹಾಗೂ ನಾಯಕರ ಭಾವಚಿತ್ರವಿರುವ ಆಭರಣಕ್ಕೆ ಈ ಬಾರಿ ಬೇಡಿಕೆ ಬಂದಿದೆ. ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಅಭಿಮಾನಿಗಳು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿ.ಎಸ್‌.ಯಡಿಯೂರಪ್ಪ, ಎಚ್‌ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಸೋನಿಯಾಗಾಂಧಿ, ಇಂದಿರಾಗಾಂಧಿ, ಸಿದ್ದರಾಮಯ್ಯನವರ ಭಾವಚಿತ್ರವುಳ್ಳ ಆಭರಣಗಳನ್ನು ಮಾಡಿಕೊಡುವಂತೆ ಈಗಾಗಲೇ ಕೆಲವು ಆಭರಣ ಅಂಗಡಿಗಳಿಗೆ ಮುಂಗಡವಾಗಿ ಬುಕ್ಕಿಂಗ್‌ ಸಹ ಮಾಡಿದ್ದಾರೆ.

ಅಕ್ಷಯ ತದಿಗೆ ಈ ಬಾರಿ ಮಂಗಳವಾರ ಬಂದಿದೆ. ಈ ವಿಶೇಷ ದಿನದಂದು ಚಿನ್ನಾಭರಣ ಖರೀದಿಸಲು ಗ್ರಾಹಕರೂ ಉತ್ಸುಕರಾಗಿದ್ದಾರೆ. ಈಗಾಗಲೇ 500ಕ್ಕೂ ಹೆಚ್ಚು ಜನರು ಮುಂಗಡ ಬುಕ್ಕಿಂಗ್‌ ಮಾಡಿದ್ದಾರೆ. ರಾಜ್ಯದ ಆಭರಣ ಮಳಿಗೆಗಳಲ್ಲಿ ಶೇ.50ರಷ್ಟುಬುಕ್ಕಿಂಗ್‌ ಆಗಿದೆ. ಈ ವರ್ಷ ವಹಿವಾಟು ದುಪ್ಪಟ್ಟಾಗುವ ನಿರೀಕ್ಷೆ ಇದೆ.

-ಟಿ.ಎ.ಶರವಣ, ಅಧ್ಯಕ್ಷರು, ಕರ್ನಾಟಕ ಜ್ಯುವೆಲ್ಲರ್ಸ್‌ ಅಸೋಸಿಯೇಷನ್‌.

ಕೆಲ ದಿನಗಳ ಹಿಂದಷ್ಟೇ ಲೋಕಸಭಾ ಚುನಾವಣೆ ಸಮರ ಅಂತ್ಯವಾಗಿದ್ದು ಜನರ ಕೈಯಲ್ಲಿ ಹಣ ಚಲಾವಣೆಯಾಗುತ್ತಿದೆ. ಈ ವರ್ಷ ಮುಂಗಡ ಬುಕ್ಕಿಂಗ್‌ನಲ್ಲೂ ಶೇ.10ರಷ್ಟುಹೆಚ್ಚಾಗಿದೆ. ಚಿನ್ನ-ಬೆಳ್ಳಿ ಆಭರಣಗಳ ವಹಿವಾಟು ಶೇ.20-30ರಷ್ಟುಹೆಚ್ಚಾಗಬಹುದು. ಹಾಲ್‌ಮಾರ್ಕ್ ಗುರುತಿನ ಬಂಗಾರ ಮಾರಾಟಕ್ಕೆ ಮಾನ್ಯತೆ ನೀಡಲಾಗಿದೆ.

-ಡಾ.ಬಿ.ರಾಮಾಚಾರಿ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ.

click me!