ದಾವೋಸ್‌ನಲ್ಲಿ ಭಾರತದ ಆರ್ಥಿಕ ಶಕ್ತಿ ತೋರಿಸುವೆ: ಸಿಎಂ ಬೊಮ್ಮಾಯಿ

By Girish GoudarFirst Published May 20, 2022, 8:50 AM IST
Highlights

*   ಹೂಡಿಕೆಗೆ ಭಾರತ ಪ್ರಶಸ್ತ ಸ್ಥಳ ಎಂದು ಬಿಂಬಿಸುವೆ
*   ಗೋಯಲ್‌ ಜತೆ ಪೂರ್ವಭಾವಿ ಸಭೆಯಲ್ಲಿ ಹೇಳಿಕೆ
*  ಹೂಡಿಕೆಗೆ ಯೋಗ್ಯವಾದ ದೇಶದ ಪರಿಸರ ಮತ್ತು ವಾತಾವರಣ ಪರಿಚಯಿಸಬೇಕಿದೆ 
 

ಬೆಂಗಳೂರು(ಮೇ.20):  ಭಾರತ ವಿಶ್ವದ ಬಹುದೊಡ್ಡ ಆರ್ಥಿಕ ಶಕ್ತಿಯಾಗಿದ್ದು, ಇದನ್ನು ವಿಶ್ವಕ್ಕೆ ಬಿಂಬಿಸುವ ಕೆಲಸವನ್ನು ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ದಾವೋಸ್‌ ವಿಶ್ವ ಆರ್ಥಿಕ ಶೃಂಗ ಸಭೆಗೆ ಸಂಬಂಧಿಸಿದಂತೆ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪೂರ್ವಭಾವಿ ವರ್ಚುಯಲ್‌ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಏಪ್ರಿಲ್‌ನಲ್ಲಿ 88 ಲಕ್ಷ ಜನರಿಗೆ ದೇಶದಲ್ಲಿ ಹೊಸ ಉದ್ಯೋಗ!

ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಭಾರತದಲ್ಲಿ ಹೂಡಿಕೆಯನ್ನು ಆಕರ್ಷಿಸುವುದಲ್ಲದೆ, ಹೂಡಿಕೆಗೆ ಯೋಗ್ಯವಾದ ದೇಶದ ಪರಿಸರ ಮತ್ತು ವಾತಾವರಣವನ್ನು ಪರಿಚಯಿಸಬೇಕಿದೆ. ದೇಶ ಹಾಗೂ ರಾಜ್ಯದ ಆರ್ಥಿಕ, ಕೈಗಾರಿಕಾ ನೀತಿಗಳು, ನಮ್ಮ ಶಕ್ತಿ. ಪರಿಸರ ಹಾಗೂ ಆರ್ಥಿಕತೆ ಜೊತೆಯಾಗಿಯೇ ಹೋಗುತ್ತವೆ. ಆದ್ದರಿಂದ ಈ ಎಲ್ಲ ಅಂಶಗಳನ್ನು ದಾವೋಸ್‌ನಲ್ಲಿ ಎತ್ತಿಹಿಡಿಯಲಾಗುವುದು ಎಂದು ಹೇಳಿದರು.

ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ, ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌, ಕೈಗಾರಿಕೆ ಇಲಾಖೆ ಆಯುಕ್ತರಾದ ಗುಂಜನ್‌ ಕೃಷ್ಣ ಹಾಜರಿದ್ದರು.

ಭಾರತದ ಆರ್ಥಿಕ ಪ್ರಗತಿ 6.4: ವಿಶ್ವದಲ್ಲೇ ಭಾರತ ನಂ.1

ವಿಶ್ವಸಂಸ್ಥೆ: ಉಕ್ರೇನ್‌-ರಷ್ಯಾ ನಡುವಿನ ಯುದ್ಧ ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರಿದರೂ ಭಾರತ ವಿಶ್ವದಲ್ಲೇ ಅತಿ ವೇಗದ ಆರ್ಥಿಕ ಪ್ರಗತಿ ಕಾಣಲಿರುವ ದೇಶವಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. 2022ನೇ ಸಾಲಿನಲ್ಲಿ ಭಾರತ ಶೇ.6.4ರ ದರದಲ್ಲಿ ಪ್ರಗತಿ ಕಾಣಲಿದೆ ಎಂದು ಅದು ತಿಳಿಸಿದೆ.

ಬುಧವಾರ ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ವ್ಯವಹಾರಗಳ ಇಲಾಖೆ ‘ವಿಶ್ವ ಆರ್ಥಿಕ ಪರಿಸ್ಥಿತಿ ಹಾಗೂ ಮುನ್ನೋಟ’ ಎಂಬ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ 2022ರಲ್ಲಿ ವಿಶ್ವವು ಕೇವಲ ಶೇ.3.1ರ ದರದಲ್ಲಿ ಆರ್ಥಿಕ ಪ್ರಗತಿ ಕಾಣಲಿದೆ ಎಂದು ತಿಳಿಸಿದೆ. ಇದಕ್ಕೂ ಮುನ್ನ ಜನವರಿಯಲ್ಲಿ ವಿಶ್ವವು ಶೇ.4ರ ದರದಲ್ಲಿ ಆರ್ಥಿಕ ಪ್ರಗತಿ ಕಾಣಲಿದೆ ಎಂದು ವರದಿ ಅಂದಾಜಿಸಲಾಗಿತ್ತು.

Price Hike: ಸೋಪು, ಶ್ಯಾಂಪುನಿಂದ ಹಿಡಿದು ಟಿವಿ, ಎಸಿ ತನಕ ಎಲ್ಲವೂ ದುಬಾರಿ; ಇದಕ್ಕೇನು ಕಾರಣ? ಇಲ್ಲಿದೆ ಮಾಹಿತಿ

ಭಾರತವು ಈ ಮುನ್ನ ಶೇ.8.8ರ ಬೆಳವಣಿಗೆ ದರ ಕಾಣಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ಪ್ರಗತಿ ದರದ ಅಂದಾಜು ಶೇ.6.4ಕ್ಕೆ ಇಳಿದರೂ ಇಷ್ಟುವೇಗದ ಜಿಡಿಪಿ ಬೆಳವಣಿಗೆ ದರ ದಾಖಲಿಸುವ ಏಕೈಕ ದೇಶವಾಗಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ. ಈ ನಡುವೆ 2023ನೇ ಸಾಲಿನಲ್ಲಿ ಭಾರತ ಶೇ.6ರ ದರದಲ್ಲಿ ಪ್ರಗತಿ ಸಾಧಿಸಲಿದೆ ಎಂದು ಅದು ಅಂದಾಜಿಸಿದೆ.

ಭಾರತದ ಬಗ್ಗೆ ಪ್ರಶಂಸೆ:

ಈ ಬಗ್ಗೆ ಮಾತನಾಡಿದ ವಿಶ್ವಸಂಸ್ಥೆ ಆರ್ಥಿಕ ಹಾಗೂ ಸಾಮಾಜಿಕ ವ್ಯವಹಾರಗಳ ಇಲಾಖೆ ಮುಖ್ಯಸ್ಥ ಹಮೀದ್‌ ರಷೀದ್‌, ‘ಪೂರ್ವ ಏಷ್ಯಾ ಹಾಗೂ ದಕ್ಷಿಣ ಏಷ್ಯಾ ಹೊರತುಪಡಿಸಿ ಮಿಕ್ಕೆಲ್ಲ ವಿಶ್ವವು ಹಣದುಬ್ಬರದಿಂದ ದುಷ್ಪರಿಣಾಮ ಎದುರಿಸುತ್ತಿವೆ. ಆದರೆ ಭಾರತದ ಮೇಲೆ ಹಣದುಬ್ಬರದ ಪ್ರಭಾವ ಕಡಿಮೆ ಇದ್ದು, ಇದ್ದುದಲ್ಲೇ ಉತ್ತಮ ಸ್ಥಾನದಲ್ಲಿದೆ. ಇನ್ನೂ 1-2 ವರ್ಷ ಭಾರತದ ಆರ್ಥಿಕತೆ ಬಲಿಷ್ಠವಾಗಿಯೇ ಮುಂದುವರಿಯಲಿದೆ. ಆದಾಗ್ಯೂ ವಿದೇಶಿ ಪರಿಣಾಮಗಳಿಂದ ಅಪಾಯ ಇದ್ದೇ ಇದೆ’ ಎಂದರು.
 

click me!