ರಾಜ್ಯಗಳ ಪರವಾಗಿ 1 ಲಕ್ಷ ಕೋಟಿ ಸಾಲಕ್ಕೆ ಕೇಂದ್ರ ಸಮ್ಮತಿ

By Kannadaprabha NewsFirst Published Oct 16, 2020, 10:36 AM IST
Highlights

 ಕೇಂದ್ರ ಸರ್ಕಾರ, ತಾನೇ ರಾಜ್ಯಗಳ ಪರವಾಗಿ 1.1 ಲಕ್ಷ ಕೋಟಿ ರು. ಸಾಲ ಪಡೆಯುವುದಾಗಿ ಪ್ರಕಟಣೆ ಹೊರಡಿಸಿದೆ.

ನವದೆಹಲಿ (ಅ.16):  ಜಿಎಸ್‌ಟಿ ನಷ್ಟದ ಕೊರತೆ ಸರಿದೂಗಿಸಲು ರಾಜ್ಯಗಳೇ ಸಾಲ ಪಡೆಯಬೇಕು ಎಂಬ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿದಿರುವ ಕೇಂದ್ರ ಸರ್ಕಾರ, ತಾನೇ ರಾಜ್ಯಗಳ ಪರವಾಗಿ 1.1 ಲಕ್ಷ ಕೋಟಿ ರು. ಸಾಲ ಪಡೆಯುವುದಾಗಿ ಪ್ರಕಟಣೆ ಹೊರಡಿಸಿದೆ. ಇದರೊಂದಿಗೆ ರಾಜ್ಯಗಳ ಜೊತೆಗೆ ಹಲವು ತಿಂಗಳನಿಂದ ನಡೆಯುತ್ತಿದ್ದ ಘರ್ಷಣೆ ಕೊನೆಗೊಳ್ಳುವ ಸಾಧ್ಯತೆ ಇದೆ.

ಈ ಕುರಿತು ಗುರುವಾರ ಹೇಳಿಕೆ ಬಿಡುಗಡೆ ಮಾಡಿರುವ ಹಣಕಾಸು ಸಚಿವಾಲಯ, ‘ಜಿಎಸ್‌ಟಿ ಸಂಗ್ರಹದ ಬಾಬ್ತಿನಲ್ಲಿ ರಾಜ್ಯಗಳಿಗಾದ 1.1 ಲಕ್ಷ ಕೋಟಿ ರು. ನಷ್ಟದ ಕೊರತೆ ನೀಗಿಸಲು ರಾಜ್ಯಗಳ ಪರವಾಗಿ ಕೇಂದ್ರ ಸರ್ಕಾರವೇ ಸಾಲ ಪಡೆಯಲಿದೆ. ಈ ಮೊತ್ತವನ್ನು ಜಿಎಸ್‌ಟಿ ಪರಿಹಾರದ ಬದಲಾಗಿ ಸಾಲದ ಹಣ ಎಂಬ ರೀತಿಯಲ್ಲಿ ರಾಜ್ಯಗಳಿಗೆ ಪೂರೈಸಲಾಗುತ್ತದೆ. ಈ ಹಣವನ್ನು ರಾಜ್ಯಗಳ ಬಂಡವಾಳ ಸ್ವೀಕೃತಿ ರೂಪದಲ್ಲಿ ಪರಿಗಣಿಸುವ ಕಾರಣ, ಇದು ಕೇಂದ್ರದ ಸಾಲದ ರೂಪವಾಗಿ ಪರಿಗಣನೆಯಾಗುವುದಿಲ್ಲ. ಕೇಂದ್ರ ಸರ್ಕಾರ ಸಾಲ ಪಡೆಯುವ ವಿಷಯದಲ್ಲಿ ಕೇವಲ ಮಧ್ಯವರ್ತಿಯ ರೂಪದಲ್ಲಿ ಕಾರ್ಯನಿರ್ವಹಿಸಲಿದೆ. ಇದರಿಂದಾಗಿ ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ಪ್ರಮಾಣದ ಬಡ್ಡಿಯಲ್ಲಿ ಸಾಲ ಪಡೆಯುವುದು ತಪ್ಪಲಿದೆ. ಆಡಳಿತಾತ್ಮಕವಾಗಿಯೂ ಇದು ಹೆಚ್ಚು ಸೂಕ್ತ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದೆ.

2021ರಲ್ಲಿ ಚೀನಾ ಆರ್ಥಿಕತೆ ಹಿಂದಿಕ್ಕಲಿದೆ ಭಾರತ!

ಪ್ರಸಕ್ತ ವರ್ಷ ಜಿಎಸ್‌ಟಿ ಸಂಗ್ರಹದಲ್ಲಿ 2.35 ಲಕ್ಷ ಕೋಟಿ ರು. ಕೊರತೆ ಅಂದಾಜಿದೆ. ಆದರೆ ಇದನ್ನು ಭರಿಸಲು ತನ್ನಿಂದ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಕೈಚೆಲ್ಲಿದೆ. ಅದರೆ ಇದಕ್ಕೆ ಎರಡು ಪರಿಹಾರಗಳನ್ನೂ ಅದು ನೀಡಿದೆ. ಅದರನ್ವಯ ರಾಜ್ಯಗಳು ಆರ್‌ಬಿಐನ ವಿಶೇಷ ಯೋಜನೆಯಡಿ 1.10 ಲಕ್ಷ ಕೋಟಿ ರು. ಸಾಲ ಪಡೆದುಕೊಳ್ಳಬಹುದು ಇಲ್ಲವೇ ಮಾರುಕಟ್ಟೆಯಿಂದ ನೇರವಾಗಿ 2.35 ಲಕ್ಷ ಕೋಟಿ ರು. ಸಾಲ ಪಡೆದುಕೊಳ್ಳಬಹುದು. ಎನ್‌ಡಿಎ ಆಡಳಿತದ ರಾಜ್ಯಗಳು ಆರ್‌ಬಿಐ ಸಾಲಕ್ಕೆ ಒಪ್ಪಿವೆ. ಆದರೆ ವಿಪಕ್ಷಗಳ ಆಡಳಿತದ ರಾಜ್ಯಗಳು ಪ್ರಸ್ತಾಪವನ್ನು ತಿರಸ್ಕರಿಸಿವೆ. ಹೀಗಾಗಿ ಜಟಾಪಟಿ ಮುಂದುವರೆದಿದೆ.

click me!