ಆಫ್ರಿಕಾ ಜನರ ಆರೋಗ್ಯದ ಗುಟ್ಟು ಭಾರತಕ್ಕೆ ಪರಿಚಯಿಸಿದ ಅನಿಲ್: Baobab Tree ವೈಶಿಷ್ಟ್ಯತೆ ಗೊತ್ತಾ?

By Govindaraj SFirst Published Aug 10, 2023, 7:05 PM IST
Highlights

ಅವರು ಸೌತ್ ಆಫ್ರೀಕಾದಲ್ಲಿ ಇಪ್ಪತ್ತು ವರ್ಷ ಫುಡ್ ಟೆಕ್ನೋಲಜಿಸ್ಟ್ ಆಗಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ್ದಾರೆ. ಹಾಗೆ ಮರಳಿ ಬಂದ ನಂತರ ಸುಮ್ಮನಿರದೇ ಸೌಥ್ ಆಫ್ರಿಕಾ ಜನರ ಆರೋಗ್ಯದ ಗುಟ್ಟನ್ನೇ ಭಾರತಕ್ಕೆ ತಂದಿದ್ದಾರೆ. 

ವರದಿ: ಶರಣಯ್ಯ ಹಿರೇಮಠ, ಕಲಬುರಗಿ

ಕಲಬುರಗಿ (ಆ.10): ಅವರು ಸೌತ್ ಆಫ್ರೀಕಾದಲ್ಲಿ ಇಪ್ಪತ್ತು ವರ್ಷ ಫುಡ್ ಟೆಕ್ನೋಲಜಿಸ್ಟ್ ಆಗಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ್ದಾರೆ. ಹಾಗೆ ಮರಳಿ ಬಂದ ನಂತರ ಸುಮ್ಮನಿರದೇ ಸೌಥ್ ಆಫ್ರಿಕಾ ಜನರ ಆರೋಗ್ಯದ ಗುಟ್ಟನ್ನೇ ಭಾರತಕ್ಕೆ ತಂದಿದ್ದಾರೆ. ಹೌದು ! ಸೌತ್ ಆಫ್ರಿಕಾ ಮಾತ್ರವಲ್ಲ ಜಗತ್ತಿನಲ್ಲಿ ಸೂಪರ್ ಫ್ರೂಟ್ ಎನ್ನಿಸಿಕೊಂಡಿರುವ ಬಾವಬಾಬ್ ಫ್ರೂಟನ್ನು ಆಫ್ರಿಕಾದಿಂದ ಭಾರತಕ್ಕೆ ಆಮದು ಮಾಡಿಕೊಂಡು ಇದರಿಂದ ಪೌಡರ್ ತಯಾರಿಸುವ ಕಾರ್ಖಾನೆ ಸ್ಥಾಪಿಸಿ ಸೈ ಎನ್ನಿಸಿಕೊಂಡಿದ್ದಾರೆ. ಆ ಅಪರೂಪದ ಸಾಧಕರ ಪರಿಚಯ ಇಲ್ಲಿದೆ. 

ಆಫ್ರಿಕಾದ Baobab tree ವೈಶಿಷ್ಟ್ಯತೆ ಗೊತ್ತಾ?: ಇದು ಸೌತ್ ಆಫ್ರಿಕಾದಲ್ಲಿ ಮಾತ್ರ ಯಥೆಚ್ಛವಾಗಿ ಸಿಗುವ ಅಪರೂಪದ ಮರ. ನಮ್ಮ ಆಲದ ಮರಕ್ಕಿಂತಲೂ ದೊಡ್ಡದಾಗಿರುವ ಇದರ ಹೆಸರು ಬಾವಬಾಬ್ ಟ್ರೀ (Baobab tree). ಈ ಮರ ಬೆಳೆದು ಹಣ್ಣು ಕೊಡಲು ತೆಗೆದುಕೊಳ್ಳುವ ಅವಧಿ ಬರೋಬ್ಬರಿ 25 ವರ್ಷ. ಹೌದು ! ಸಸಿ ನೆಟ್ಟ 25 ವರ್ಷಗಳ ನಂತರ ಇದು ಫಲ ಕೊಡುತ್ತದೆ ಮತ್ತು ಸಾವಿರಾರು ವರ್ಷ ಹಣ್ಣು ಕೊಡುತ್ತಲೇ ಇರುತ್ತದೆ. ಜಗತ್ತಿನಲ್ಲಿಯೇ ಸೂಪರ್ ಫ್ರೂಟ್ ಎನ್ನಿಸಿಕೊಂಡಿರುವ ಹಣ್ಣನ್ನು ಈ ಬಾವಬಾಬ್ ಟ್ರೀ ನೀಡುತ್ತದೆ. ಸೌತ್ ಆಫ್ರೀಕಾದಲ್ಲಿ ಯಥೇಚ್ಛವಾಗಿ ಸಿಗುವ ಈ ಹಣ್ಣು ಅಲ್ಲಿನ ಜನರ ಜೀವನಾಡಿಯಾಗಿದೆ. ಪ್ರತಿಯೊಂದು ಆಹಾರದಲ್ಲೂ ಅವರು ಬಾವಬಾಬ್ ಫ್ರೂಟ್ ಬಳಕೆ ಮಾಡುತ್ತಾರೆ. 

ನನ್ನ ಮಗಳನ್ನು ನಿನಗೆ ಕೊಡಲ್ಲ ಎಂದ ತಂದೆ: 3 ಎಕರೆ ಅಡಿಕೆ ಗಿಡವನ್ನೆ ನಾಶ ಮಾಡಿದ ಹುಡುಗ!

ಇದುವೇ ಅವರ ದೈಹಿಕ ಆರೋಗ್ಯದ ಮುಖ್ಯ ಗುಟ್ಟಾಗಿದೆ. ಸಾಕಷ್ಟು ಔಷಧಿಯ ಗುಣಗಳನ್ನು ಹೊಂದಿರುವ ಈ ಹಣ್ಣಿನ ಪೌಡರ್ ಮತ್ತು ತೈಲ ಇದೀಗ ಭಾರತದಲ್ಲೇ ಸಿಗುತ್ತಿದೆ. ಅಷ್ಟೇ ಅಲ್ಲ, ಇಲ್ಲಿ ತಯಾರಾಗಿ ದೇಶ ವಿದೇಶಕ್ಕೂ ಇಲ್ಲಿಂದ ರಫ್ತಾಗುತ್ತಿದೆ. ಇಂತಹ ಘಟಕವೊಂದನ್ನು ಸೌತ್ ಆಫ್ರೀಕಾದಲ್ಲಿ 20 ವರ್ಷ ಇದ್ದು ಮರಳಿ ಭಾರತಕ್ಕೆ ಬಂದ ವ್ಯಕ್ತಿಯೊಬ್ಬರು ಇದೀಗ ಕಲಬುರಗಿಯಲ್ಲಿ ಆರಂಭಿಸಿದ್ದಾರೆ. ಕಲಬುರಗಿ ನಗರದ ಹೊರವಲಯದ ನಂದೂರ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬಾವಬಾಬ್ ಫ್ರೂಟ್ ಹಾಗೂ ಇತರೇ ಔಷದೀಯ ಸಸ್ಯಗಳ ಪೌಡರ್ ತಯಾರಿಕ ಘಟಕ ತಲೆ ಎತ್ತಿದೆ. ಸೌತ್ ಆಫ್ರೀಕಾದಲ್ಲಿ ಫುಡ್ ಟೆಕ್ನಿಸ್ಟ್ ಆಗಿ 20ವರ್ಷಗಳ ಸುದೀರ್ಘ ಸೇವೆಯ ನಂತರ ತಾಯ್ನಾಡಿಗೆ ಮರಳಿರುವ ಅನೀಲ್ ಕುಮಾರ ಕಾಡಾದಿ ಎನ್ನುವವರು ಈ ಸಾಹಸಕ್ಕೆ ಕೈ ಹಾಕಿ ಸೈ ಎನ್ನಿಸಿಕೊಂಡವರು. 

3 ಕೋಟಿ ರೂ. ವೆಚ್ಚದಲ್ಲಿ ತಲೆ ಎತ್ತಿದೆ ಘಟಕ: ಕಲಬುರಗಿಯ ನಂದೂರ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಅನೀಲ್ ಕುಮಾರ ಕಾಡಾದಿ ಅವರು ಈ ಯುನಿಟ್ ಸ್ಥಾಪಿಸಿದ್ದಾರೆ. ಇಲ್ಲಿ ಸೌತ್ ಆಫ್ರೀಕಾದ ಬಾವಬಾಬ್ ಫ್ರೂಟ್ ಮಾತ್ರವಲ್ಲ , ಪಕ್ಕಾ ದೇಶಿಯ ಸಸ್ಯಗಳಾದ ನುಗ್ಗೆಯ ಸೊಪ್ಪಿನ ಪೌಡರ್ (Moringa leaf powder) , ಕೆಂಪು ಪುಂಡಿಯ ಪೌಡರ್ (Rosella powder), ಪಪಾಯಿ ಎಲೆಯ ಪೌಡರ್ (papaya leaf powder), ಕರಿಬೇವು ಸೊಪ್ಪಿನ ಪೌಡರ್ ತಯಾರಿಕೆಯೂ ಇಲ್ಲಿದೆ.  

ಅತ್ಯಂತ ಹೌಜನಿಕ್ ಯುನಿಟ್: ಅನಿಲ್ ಕುಮಾರ್ ಕಾಡಾದಿ ಅವರು ತಯಾರಿಸುವ ಬೇರೆ ಬೇರೆ ಸೊಪ್ಪಿನ ಪೌಡರ ಮತ್ತು ಎಣ್ಣೆ ತಯಾರಿಕೆಯ ವಿಧಾನ ಅತ್ಯಂತ ಹೌಜನಿಕ್ ಆಗಿದೆ. ಶುಚಿತ್ವಕ್ಕೆ ಇವರ ಮೊದಲ ಆದ್ಯತೆ. ಎಲ್ಲವೂ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ತಯಾರಿಸಲಾಗುತ್ತಿದೆ. ಇವರು ರೈತರಿಂದ ನುಗ್ಗೆ ಸೊಪ್ಪು, ಕೆಂಪು ಪುಂಡಿಯ ಹೂವು, ಕರಿಬೇವಿನ ಸೊಪ್ಪು, ಪಪ್ಪಾಯಿ ಎಲೆಗಳನ್ನು ಖರೀದಿಸಿ ಅದನ್ನು ಅತ್ಯಂತ ವ್ಯವಸ್ಥಿತವಾಗಿ ಸಂಸ್ಕರಿಸಿ , ಪುಡಿ ತಯಾರಿಸಿ ಪ್ಯಾಕಿಂಗ್ ಮಾಡಿ ತಮ್ಮದೇ ಬ್ರ್ಯಾಂಡ್ ನ ಅಡಿ ಮಾರಾಟ ಮಾಡುತ್ತಾರೆ. ಪೌಡರ್ ಮಾತ್ರವಲ್ಲದೇ ನುಗ್ಗೆ ಸೊಪ್ಪಿನ ಮತ್ತು ಪಪಾಯಿ ಎಲೆಗಳಿಂದ ಟ್ಯಾಬಲೆಟ್ಸ್ ಸಹ ತಯಾರಿಸುತ್ತಿದ್ದಾರೆ. ಅಲ್ಲದೇ ಆಫ್ರೀಕಾದ baobob fruit ನಿಂದ ಪೌಡರ್ ಮಾತ್ರವಲ್ಲದೇ ಎಣ್ಣೆ ಸಹ ತಯಾರಿಸಲಾಗುತ್ತಿದೆ. ಈ ಎಣ್ಣೆ ಆಹಾರದ ರೂಪದಲ್ಲಿ ಸೇವನೆಗೆ ಮತ್ತು ಚರ್ಮಕ್ಕೆ ಲೇಪನ ಮಾಡಿಕೊಳ್ಳಲು ಸೂಕ್ತವಾಗಿದೆ. ಇದು ಚರ್ಮದ ಕಾಂತಿ ಹೆಚ್ಚಿಸುವುದಲ್ಲದೇ ಚರ್ಮದ ಕಲೆ, ಚರ್ಮದ ಕಾಯಿಲೆಗಳಿಗೂ ರಾಮಬಾಣವಾಗಿದೆ. 

Buy u ದಿಂದ ದೇಶ ವಿದೇಶದಲ್ಲಿ ಮಾರಾಟ: ಇವರು ಮಾರಾಟಕ್ಕೆ ಬಳಕೆ ಮಾಡಿಕೊಂಡಿದ್ದು ಆನ್ ಲೈನ್ ಮಾರ್ಕೆಟ್ ಸಿಸ್ಟಮ್. ಹೌದು buyu ಎನ್ನುವ ಸಂಸ್ಥೆ ಹುಟ್ಟು ಹಾಕಿ ಅದರ ಬ್ರ್ಯಾಂಡ್ ನಲ್ಲಿ ದೇಶ ವಿದೇಶಗಳಿಗೆ ಇವರು ಈ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಮೇಜಾನ್ ಸೇರಿದಂತೆ ಆನ್ ಲೈನ್ ಮಾರಾಟದ ಮಳಿಗೆಗಳೆಲ್ಲದರಲ್ಲೂ ಇವರ ಉತ್ಪನ್ನಗಳು ಮಾರಾಟಕ್ಕೆ ಲಭ್ಯ ಇವೆ. ಅಲ್ಲದೇ ಸ್ವಂತ ವೆಬ್ ಸೈಟ್ ರೂಪಿಸಿಕೊಂಡು ತಮ್ಮ ಉತ್ಪನ್ನಗಳನ್ನು ಆನ್ ಲೈನ್ ಮೂಲಕ ಭರ್ಜರಿ ಮಾರಾಟ ಮಾಡುತ್ತಿದ್ದಾರೆ. 

ಮಾಸಿಕ ಒಂದುವರೆ ಲಕ್ಷ ವ್ಯವಹಾರ: ತಯಾರಿಕೆಯೇನೋ ಸುಲಭವಾಯಿತು. ಆದ್ರೆ ಮಾರಾಟವೇ ಇವರಿಗೆ ದೊಡ್ಡ ತಲೆನೋವಾಹಿತ್ತು. ಕೇವಲ ಒಂದೇ ವರ್ಷದಲ್ಲಿ ಗ್ರಾಹಕರನ್ನು ತಲುಪುವಲ್ಲಿ ಅನೀಲಕುಮಾರ ಕಾಡಾದಿ ಯಶಸ್ಸು ಕಾಣುತ್ತಿದ್ದಾರೆ. ಇವರ ಉತ್ಪನ್ನಗಳು ಹೊರದೇಶಗಳಲ್ಲಿಯೂ ಮಾರಾಟ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ. ದೇಶದ ಮೂಲೆ ಮೂಲೆಗಳಿಗೆ ಸಪ್ಲೈ ಆಗುತ್ತಿದೆ. ಹಾಗಾಗಿ ದಿನದಿಂದ ದಿನಕ್ಕೆ ವ್ಯವಹಾರದಲ್ಲಿ ಚೇತರಿಕೆ ಕಂಡು ಬರುತ್ತಿದ್ದು ಸದ್ಯ ತಿಂಗಳಲ್ಲಿ ಒಂದುವರೆ ಲಕ್ಷ ರೂಯಿಂದ ಎರಡು ಲಕ್ಷ ರೂ. ವರೆಗೆ ವ್ಯವಹಾರ ನಡೆಸುತ್ತಿದ್ದಾರೆ. 

ಜನರ ಆರೋಗ್ಯ ಸುಧಾರಣೆಯ ಧ್ಯೇಯ: ನಾನು ದೊಡ್ಡ ಉದ್ಯಮಿಯಾಗಬೇಕು. ಹಣ ಗಳಿಸಬೇಕು ಎನ್ನುವುದಕ್ಕಿಂತ ನಾನು ನನ್ನ ಜನರಿಗೆ ಏನಾದರೂ ಕೊಡಬೇಕು ಎನ್ನುವ ಕಾರಣಕ್ಕೆ ಈ ಉತ್ಪನ್ನಗಳನ್ನ ತಯಾರಿಕೆ ಮತ್ತು ಮಾರಾಟ ಶುರು ಮಾಡಿದ್ದೇನೆ ಎನ್ನುತ್ತಾರೆ ಅನೀಲ್ ಕುಮಾರ ಕಾಡಾದಿ.  ನುಗ್ಗೆಯ ಸೊಪ್ಪು, ಕೆಂಪು ಪುಂಡಿ ಹೂವು, ಪಪಾಯಿ ಎಲೆ, ಕರಿಬೇವಿನ ಎಲೆಗಳಿಂದ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಿ ತಯಾರಿಸಲಾದ ಪೌಡರ್ ನಿತ್ಯ ಬಳಕೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಎಲ್ಲರಿಗೂ ಇದರ ಪ್ರಯೋಜನ ಗೊತ್ತಿರುವುದೇ ಆದರೆ ನಿತ್ಯ ಬಳಕೆ ಮಾಡುವುದಿಲ್ಲ. ಅಂತವರಿಗಾಗಿ ಈ ಪೌಡರ್ ರೆಡಿ ಮಾಡಿದ್ದೆವೆ. ಆರೋಗ್ಯದ ಗುಟ್ಟು ಈ ಪೌಡರ್ ಗಳಲ್ಲಿದೆ ಎನ್ನುತ್ತಾರೆ ಅನೀಲ್ ಕುಮಾರ ಕಾಡಾದಿ. 

ಹುಲಿಗಳ ಜೊತೆಗೆ ಆನೆಗಳ ಸಂಖ್ಯೆಯಲ್ಲೂ ರಾಜ್ಯದಲ್ಲೇ ಬಂಡೀಪುರ ನಂಬರ್ 1

ಒಟ್ಟಾರೆ ಅನೀಲ್ ಕುಮಾರ ಕಾಡಾದಿ ಅವರು ವಿದೇಶದಲ್ಲಿದ್ದು ವಿದೇಶಿ ಆರೋಗ್ಯದ ಗುಟ್ಟನ್ನು ಭಾರತೀಯರಿಗೆ ತಲುಪಿಸುತ್ತಿದ್ದಾರೆ. ಜೊತೆ ಜೊತೆಗೆ ಭಾರತೀಯ ಸಸ್ಯಗಳಲ್ಲಿನ ಆರೋಗ್ಯದ ಸತ್ವಗಳನ್ನು ವಿದೇಶಕ್ಕೆ ತಲುಪಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೇ ಇವರಿಗೆ ಫಸಲು ಕೊಡುವ ರೈತರಿಗೆ, ಇವರ ಬಳಿ ಕೆಲಸ ಮಾಡುವ ಹತ್ತಾರು ಜನ ಜನ ಕಾರ್ಮಿಕರಿಗೆ ಅನ್ನದಾತರಾಗಿದ್ದಾರೆ. ಇವರ ಉದ್ಯಮ ಇನ್ನಷ್ಟು ಬೆಳೆಯಲಿ ಎಂದು ಹಾರೈಸೋಣ.

click me!