ಬೆಂಗಳೂರಿನ ಶಾಪಿಂಗ್‌ ಮಾರ್ಟ್‌ನಲ್ಲಿ ಅಗ್ನಿ ಅನಾಹುತ: ಧಗಧಗಿಸಿದ ಕೋಟ್ಯಾಂತರ ಮೌಲ್ಯದ ಪೀಠೋಪಕರಣ

By Anusha KbFirst Published Sep 7, 2022, 1:31 PM IST
Highlights

ನಿನ್ನೆ ತಡರಾತ್ರಿ ಬೆಂಗಳೂರಿನಲ್ಲಿ ಸಂಭವಿಸಿದ ಅಗ್ನಿ ಅನಾಹುತವೊಂದರಲ್ಲಿ ಬರೋಬ್ಬರಿ ನಾಲ್ಕು ಕೋಟಿ ರೂ ನಷ್ಟ ಸಂಭವಿಸಿದೆ.

ಬೆಂಗಳೂರು: ನಿನ್ನೆ ತಡರಾತ್ರಿ ಬೆಂಗಳೂರಿನಲ್ಲಿ ಸಂಭವಿಸಿದ ಅಗ್ನಿ ಅನಾಹುತವೊಂದರಲ್ಲಿ ಬರೋಬ್ಬರಿ ನಾಲ್ಕು ಕೋಟಿ ರೂ ನಷ್ಟ ಸಂಭವಿಸಿದೆ. ನಂಜಪ್ಪ ಸರ್ಕಲ್ (Nanjappa circle) ಬಳಿಯ ಶಾಂತಾರಾಮ್ ಕಾಂಪ್ಲೆಕ್ಸ್ ನಲ್ಲಿದ್ದ (Shantaram complex) ಫ್ಯಾಮಿಲಿ ಶಾಪಿಂಗ್ ಮಾರ್ಟ್‌ನಲ್ಲಿ ಈ ಭಾರೀ ಅಗ್ನಿ ಅವಘಡ ಸಂಭವಿಸಿದೆ. ರಾತ್ರಿ‌ 1:30ರ ಸುಮಾರಿಗೆ ಕಾಂಪ್ಲೆಕ್ಸ್ ನ ಒಂದು ತುದಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಅದು ಇತರೆಡೆ ವ್ಯಾಪಿಸಿ ಎಲ್ಲವನ್ನೂ ಆಹುತಿ ಪಡೆದಿದೆ. 

ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳೀಯರು ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಆದರೆ ಕೇವಲ ಒಂದು ಅಗ್ನಿಶಾಮಕ ವಾಹನ ಸ್ಥಳಕ್ಕೆ ಬಂದಿತ್ತು. ನಂತರ ಬೆಂಕಿ ನಿಂಯಂತ್ರಣಕ್ಕೆ ಬಾರದೇ ಹೋದಾಗ ಹೆಚ್ಚಿನ ಅಗ್ನಿಶಾಮಕ ವಾಹನ ಕರೆಸಿಕೊಳ್ಳಲಾಗಿತ್ತು. ಉಳಿದ ಅಗ್ನಿಶಾಮಕ ವಾಹನ ಸ್ಥಳಕ್ಕೆ ತಲುಪುವಷ್ಟರಲ್ಲಿ ಇಡೀ ಕಾಂಪ್ಲೆಕ್ಸ್ ಬೆಂಕಿಗಾಹುತಿಯಾಗಿತ್ತು. ಪರಿಣಾಮ  ಶಾಪಿಂಗ್ ಮಾರ್ಟಿನಲ್ಲಿದ್ದ 4 ಲಕ್ಷ ನಗದು, 3 ಕೋಟಿಯಷ್ಟು ವಸ್ತುಗಳು 1 ಕೋಟಿ ಮೌಲ್ಯದ ಪೀಠೋಪಕರಣಗಳು (Furnitures)  ಸಂಪೂರ್ಣ ಸುಟ್ಟು ಭಸ್ಮವಾಗಿವೆ. 

ಅನ್ವರ್ (Anwar) ಎಂಬುವವರಿಗೆ ಸೇರಿದ ಶಾಪಿಂಗ್ ಮಾರ್ಟ್ (Shopping Mart) ಇದಾಗಿದ್ದು, ಈ ಅಗ್ನಿ ದುರಂತದಿಂದ ಭಾರಿ ನಷ್ಟವಾಗಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಹತ್ತಾರು ನೌಕರರ ಬದುಕು ಬೀದಿಗೆ ಬಿದ್ದಿದೆ. 

ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ

ಭಟ್ಕಳದ ಶಿರಾಲಿ ಗ್ರಾಪಂ ವ್ಯಾಪ್ತಿಯ ತಟ್ಟಿಹಕ್ಕಲಿನಲ್ಲಿ ಅಡುಗೆ ಮಾಡುತ್ತಿರುವ ಸಂದರ್ಭದಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ತಗುಲಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಕೆಲ ದಿನಗಳ ಹಿಂದೆ ನಡೆದಿದೆ. ತಟ್ಟಿಹಕ್ಲಿನ ವೆಂಕಟೇಶ ಶ್ಯಾನಭಾಗ ಎನ್ನುವವರ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ತಗುಲಿದೆ. ಸುದ್ದಿ ತಿಳಿದ ತಕ್ಷಣ ಆಗಮಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಅನಾಹುತದಿಂದ ಅಡುಗೆ ಮನೆಯಲ್ಲಿದ್ದ ಕೆಲವು ವಸ್ತುಗಳಿಗೆ ಹಾನಿಯಾಗಿತ್ತು. 

ಹುಬ್ಬಳ್ಳಿಯ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ: ಮೃತರ ಸಂಖ್ಯೆ ಮೂರಕ್ಕೇರಿಕೆ

ದೆಹಲಿಯಲ್ಲಿ ಮಹಾ ಅಗ್ನಿ ದುರಂತ

ರಾಜಧಾನಿ ನವದೆಹಲಿಯ ಮೂರು ಮಹಡಿಯ ವಾಣಿಜ್ಯ ಕಟ್ಟಡವೊಂದರಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದ ಅಗ್ನಿ ಅನಾಹುತ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಈ ಭೀಕರ ಅಗ್ನಿ ಅವಘಡದಲ್ಲಿ 27 ಜನರು ಸಜೀವವಾಗಿ ದಹನವಾಗಿದ್ದರು. ಘಟನೆಯಲ್ಲಿ 70 ಜನರನ್ನು ರಕ್ಷಿಸಲಾಗಿತ್ತು. 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮುಂಡ್ಕಾ ಮೆಟ್ರೋ ನಿಲ್ದಾಣದ ಸಮೀಪದಲ್ಲೇ ಇರುವ ಕಟ್ಟಡಕ್ಕೆ ಬೆಂಕಿ ಬಿದ್ದ ಬಗ್ಗೆ ಸಂಜೆ 4.30ರ ವೇಳೆಗೆ ಅಗ್ನಿಶಾಮಕ ಕಚೇರಿಗೆ ಕರೆ ಬಂದಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ್ದ 30ಕ್ಕೂ ಹೆಚ್ಚು ಅಗ್ನಿಶಾಮಕ ತಂಡದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾದರು. ಆದರೆ ಬೆಂಕಿ ತಹಬದಿಗೆ ಬಂದು, ಸಿಬ್ಬಂದಿ ಕೆಲವು ಕೋಣೆಯೊಳಗೆ ಪ್ರವೇಶಿಸಿದ ವೇಳೆ 27 ಜನರ ಶವ ಸಿಕ್ಕಿತ್ತು.

ವಿಜಯಪುರ: ಕೂಡಗಿ ಎನ್‌ಟಿಪಿಸಿ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಅಗ್ನಿ ಅವಘಡ

ದುರ್ಘಟನೆ ಬಗ್ಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮೊದಲಾದ ಗಣ್ಯರು ಕಂಬನಿ ಮಿಡಿದಿದ್ದರು. ಜೊತೆಗೆ ಘಟನೆಯಲ್ಲಿ ಮಡಿದವರ ಕುಟುಂಬಕ್ಕೆ ತಲಾ 2 ಲಕ್ಷ ರು. ಮತ್ತು ಗಾಯಾಳುಗಳ ಕುಟುಂಬಕ್ಕೆ ಪ್ರಧಾನಿ ಮೋದಿ ತಲಾ 50000 ರು. ಪರಿಹಾರ ಘೋಷಿಸಿದ್ದರು.
 

click me!