
ಪ್ರಯಾಗ್ರಾಜ್ (ಫೆ.12): ಇಸ್ಕಾನ್ ಮತ್ತು ವಿಶ್ವಾದ್ಯಂತ ಹರೇ ಕೃಷ್ಣ ಚಳುವಳಿಯ ಸ್ಥಾಪಕ ಸ್ವಾಮಿ ಶ್ರೀಲ ಪ್ರಭುಪಾದರಿಗೆ ಮಹಾ ಕುಂಭದಲ್ಲಿ ಅಖಿಲ ಭಾರತೀಯ ಅಖಾರ ಪರಿಷತ್ತು ಇದೇ ಮೊದಲ ಬಾರಿಗೆ 'ವಿಶ್ವ ಗುರು' ಎಂಬ ಬಿರುದನ್ನು ನೀಡಿ ಗೌರವಿಸಿತು. ನಿರಂಜನಿ ಅಖಾರ ಆವರಣದಲ್ಲಿ ನಡೆದ ವಿಶ್ವಗುರು ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಈ ಗೌರವ ನೀಡಲಾಯಿತು. ಶ್ರೀಲ ಪ್ರಭುಪಾದರು ಪ್ರಪಂಚದಾದ್ಯಂತ ಲಕ್ಷಾಂತರ ಅನುಯಾಯಿಗಳನ್ನು ಸನಾತನ ಧರ್ಮಕ್ಕೆ ಸಂಪರ್ಕಿಸಿದ್ದಕ್ಕಾಗಿ ಮತ್ತು ಭಾರತ ಮತ್ತು ವಿದೇಶಗಳಲ್ಲಿ ಇಸ್ಕಾನ್ ಕಡೆಗೆ ತೋರಿಸಿರುವ ಭಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಬಿರುದನ್ನು ಅವರಿಗೆ ನೀಡಲಾಯಿತು. ಈವರೆಗೂ ಯಾವುದೇ ಆಧ್ಮಾತ್ಮಿಕ ವ್ಯಕ್ತಿಗೆ ಈ ಮೊದಲು ವಿಶ್ವಗುರು ಪಟ್ಟವನ್ನು ನೀಡಿರಲಿಲ್ಲ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಬಿರುದನ್ನು ಒಬ್ಬ ವ್ಯಕ್ತಿಗೆ ನೀಡಲಾಗಿದೆ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅಥವಾ ಶ್ರೀಲ ಪ್ರಭುಪಾದರು 1977 ರಲ್ಲಿ ತಮ್ಮ 81 ನೇ ವಯಸ್ಸಿನಲ್ಲಿ ನಿಧನರಾದರು. ಶ್ರೀಗಳು ಕೃಷ್ಣ ಸಂಪ್ರದಾಯದ ಕುರಿತು 70 ಕ್ಕೂ ಹೆಚ್ಚು ಸಂಪುಟಗಳನ್ನು ಬರೆದಿದ್ದಾರೆ. ಇಸ್ಕಾನ್ ಇಂದು ವಿಶ್ವವ್ಯಾಪಿ ಸಂಸ್ಥೆಯಾಗಿ ಬೆಳೆಯುವಲ್ಲಿ ಕಾರಣೀಕರ್ತರಾದ ವ್ಯಕ್ತಿಯಾಗಿದ್ದಾರೆ.
ನಿರಂಜನಿ ಪೀಠಾಧೀಶ್ವರ ಸ್ವಾಮಿ ಕೈಲಾಶಾನಂದ ಗಿರಿ ಮಹಾರಾಜ್, ಅಖಿಲ ಭಾರತ ಅಖಾಡ ಪರಿಷತ್ ಅಧ್ಯಕ್ಷ ರವೀಂದ್ರಪುರಿ ಮಹಾರಾಜ್, ಆವಾಹನ ಅಖಾಡ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅವಧೂತ ಅರುಣ್ ಗಿರಿ, ಅಖಾಡಗಳ ಮಹಾಮಂಡಲೇಶ್ವರರು, ಕಾರ್ಯದರ್ಶಿಗಳು, ಶ್ರೀಮಹಾಂತರು ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದರು.
ಶ್ರೀಲ ಪ್ರಭುಪಾದರು ಲಕ್ಷಾಂತರ ಜನರ ಜೀವನವನ್ನು ಬದಲಾಯಿಸಿದವರು ಎಂದ ಅಖಾಡ ಪರಿಷತ್, ಶ್ರೀಲ ಪ್ರಭುಪಾದರಿಗೆ ವಿಶ್ವ ಗುರು ಎಂಬ ಬಿರುದು ದೊರೆತಿದ್ದಕ್ಕೆ ನಾವೆಲ್ಲರೂ ತುಂಬಾ ಸಂತೋಷಪಡುತ್ತಿದ್ದೇವೆ. ಸನಾತನ ಧರ್ಮವನ್ನು ಹರಡುವಲ್ಲಿ ಅವರ ಕೊಡುಗೆ ಅನನ್ಯ. ಅವರ ಬೋಧನೆಯಿಂದ ಲಕ್ಷಾಂತರ ಜನರ ಜೀವನ ಬದಲಾಗಿದೆ ಎಂದಿದೆ.
ಶ್ರೀ ಪಂಚಾಯತಿ ನಿರಂಜನಿ ಅಖಾರದ ಮಹಾಮಂಡಲೇಶ್ವರ ಕೈಲಾಸಾನಂದ ಗಿರಿ ಮಹಾರಾಜರು ಮಾತನಾಡಿ, ಇಂದು ಸಂಗಮದ ದಡದಲ್ಲಿ ನಡೆಯುತ್ತಿರುವ ಬೃಹತ್, ಭವ್ಯ, ಸ್ವಚ್ಛ ಮತ್ತು ದೈವಿಕ ಮಹಾ ಕುಂಭದ ಪವಿತ್ರ ಉತ್ಸವದಲ್ಲಿ ಆ ಮಹಾನ್ ವ್ಯಕ್ತಿಯ ಸಮ್ಮುಖದಲ್ಲಿ ಕುಳಿತುಕೊಳ್ಳುವ ಅವಕಾಶ ನಮಗೆ ಸಿಕ್ಕಿತು. ಈ ಬಿರುದನ್ನು 1968 ರ ಕೆಲವು ದಿನಗಳ ನಂತರ ಪಡೆಯಬೇಕಿತ್ತು, ಆದರೆ ಇಂದು ಈ ತ್ರಿವೇಣಿ ದಡದಲ್ಲಿ, ಈ ಶುಭ ಕಾರ್ಯವನ್ನು ಮಾಡಿದ ಕೀರ್ತಿ ನಾವೆಲ್ಲರೂ ಪಡೆಯಬೇಕಾಗಿತ್ತು ಎಂದರು.
ಶ್ರೀಲ ಪ್ರಭುಪಾದರ ವಿಶ್ವಗುರು ಎಂಬ ಬಿರುದು ಸೂರ್ಯನಿಗೆ ದೀಪ ತೋರಿಸಿದಂತೆ ಎಂದು ಹೇಳಿದ ಅಖಾರ ಪರಿಷತ್ ಅಧ್ಯಕ್ಷ ರವೀಂದ್ರ ಪುರಿ ಮಹಾರಾಜ್, ಶ್ರೀಲ ಪ್ರಭುಪಾದ ಮಹಾರಾಜರು ಶ್ರೀಮದ್ ಭಗವದ್ಗೀತೆ ಮತ್ತು ಶ್ರೀಮದ್ ಭಾಗವತದ ಕುರಿತು ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ ಎಂದರು.
ಹಿಂದೂಗಳ ಮೇಲಿನ ದಾಳಿ ವಿರುದ್ಧ ಪ್ರತಿಭಟಿಸಿದ ಆರೋಪ, ಬಾಂಗ್ಲಾ ಇಸ್ಕಾನ್ ಸ್ವಾಮೀಜಿ ಅರೆಸ್ಟ್!
'ಜನರು ನನ್ನನ್ನು ಅವಧೂತ ಎಂದು ಕರೆಯುತ್ತಾರೆ, ಆದರೆ ನಾನು ಸ್ವಾಮಿ ಶ್ರೀಲ ಪ್ರಭುಪಾದ ಮಹಾರಾಜ್ ಅವರನ್ನು ಅದ್ಭುತ ಎಂದು ಕರೆಯುತ್ತೇನೆ. ಸ್ವಾಮಿ ಪ್ರಭುಪಾದರ ಅನುಯಾಯಿಗಳು ತಲಾ ಎರಡು ಸಸಿಗಳನ್ನು ನೆಡುವ ಪ್ರತಿಜ್ಞೆ ಮಾಡಬೇಕು, ಆಗ ಮಾತ್ರ ಅವರಿಗೆ ರಾಧಾ ರಾಣಿ ಸಿಗುತ್ತದೆ' ಎಂದು ಆವಾಹನ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅರುಣ್ ಗಿರಿ ಮಹಾರಾಜ್ ಹೇಳಿದ್ದಾರೆ.
ಅತ್ಯುತ್ತಮ ವೇತನದ ಐಟಿ ಉದ್ಯೋಗ ತೊರೆದು ದೇಶದ ಪ್ರಸಿದ್ಧ ಆಧ್ಯಾತ್ಮಿಕ ಚಿಂತಕನಾದ ಇಂಜಿನಿಯರ್!
ಶ್ರೀಲ ಪ್ರಭುಪಾದ ಸ್ವಾಮಿಗಳ ಪರಿಚಯ: ಶ್ರೀಲ ಪ್ರಭುಪಾದರು ಬ್ರಹ್ಮ-ಮಧ್ವ-ಗೌಡೀಯ ವೈಷ್ಣವ ಸಂಪ್ರದಾಯದ 32 ನೇ ಆಚಾರ್ಯರು, ಅವರು 70 ನೇ ವಯಸ್ಸಿನಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ಮತ್ತು ವೃಂದಾವನದ 6 ಗೋಸ್ವಾಮಿಗಳ ಬೋಧನೆಗಳನ್ನು ಮತ್ತು ಹರಿನಾಮ ಸಂಕೀರ್ತನೆಯ ಮಹಿಮೆಯನ್ನು ಪ್ರಪಂಚದಾದ್ಯಂತ ಯಶಸ್ವಿಯಾಗಿ ಹರಡಿದರು. ಸನಾತನ ಧರ್ಮದ ತತ್ವಶಾಸ್ತ್ರ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಮೂಲಕ ಸಾವಿರಾರು ಜನರು ತಮ್ಮ ಜೀವನವನ್ನು ಪರಿವರ್ತಿಸಿಕೊಂಡರು. ಶ್ರೀಮದ್ ಭಗವದ್ಗೀತೆ ಮತ್ತು ಶ್ರೀಮದ್ ಭಾಗವತದ ಕುರಿತಾದ ಅವರ ಬರಹಗಳನ್ನು 80 ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ವಿತರಿಸಲಾಗಿದೆ. ಇಂದಿಗೂ ಅವರು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಸನಾತನ ಧರ್ಮವನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತಿದ್ದಾರೆ.