ಭೂಮಿಕಾ ಮನೆಯಲ್ಲಿ ಪಂಚಾಂಗ ಶ್ರವಣ! ಈ ಜ್ಯೋತಿಷಿಯೂ ದುಡ್ಡು ತಿಂದ್ರೆ? ಅಭಿಮಾನಿಗಳಿಗೆ ಸಂಕಟ
ಅತ್ತೆಯ ಕುತಂತ್ರ ಬಯಲು ಮಾಡಲು ಮನೆಯಲ್ಲಿ ಪಂಚಾಂಗ ಶ್ರವಣ ಇಟ್ಟುಕೊಂಡಿದ್ದಾಳೆ ಭೂಮಿಕಾ. ಆದರೆ...? ಇದು ಫಲಿಸುವುದೆ? ಈ ಜ್ಯೋತಿಷಿಯೂ ದುಡ್ಡು ತಿಂದರೆ?
ಜ್ಯೋತಿಷಿ, ಜ್ಯೋತಿಷಕ್ಕಿರುವ ಗೌರವ, ಮರ್ಯಾದೆಗಳನ್ನು ಇದಾಗಲೇ ಹಲವು ಧಾರಾವಾಹಿಗಳು, ಸಿನಿಮಾಗಳು ತೆಗೆದುಬಿಟ್ಟಿವೆ. ಗುರುಗಳು ಎನಿಸಿಕೊಂಡವರಿಗೆ ದುಡ್ಡು ಕೊಟ್ಟು ಸುಳ್ಳು ಹೇಳಿಸುವುದು ಮಾಮೂಲಾಗಿದೆ. ಸೀರಿಯಲ್ನಲ್ಲಿ ಒಂದಿಷ್ಟು ಟ್ವಿಸ್ಟ್ ಇರಲಿ ಎನ್ನುವ ಕಾರಣಕ್ಕೆ ಹಾಗೂ ಜನರು ಬಾಯಿಬಿಟ್ಟು ನೋಡಲಿ ಎನ್ನುವ ಕಾರಣಕ್ಕೆ ಇಂಥ ಗಿಮಿಕ್ಗಳನ್ನು ಸೀರಿಯಲ್ಗಳಲ್ಲಿ ತುಂಬಿಸುವುದು ಮಾಮೂಲಾಗಿದ್ದರೂ ಇದರಿಂದ ಜ್ಯೋತಿಷಿಗಳು, ಗುರುಗಳು ಎನಿಸಿಕೊಂಡವರಿಗೆ ಕಿಮ್ಮತ್ತೇ ಇಲ್ಲವಾಗುತ್ತಿದೆ ಎಂಬ ಗಂಭೀರ ಆರೋಪಗಳೂ ಕೇಳಿಬರುತ್ತಿವೆ. ಈಗ ಒಂದೊಳ್ಳೆ ಚೆಂದದ ಧಾರಾವಾಹಿ ಎನಿಸಿಕೊಂಡಿರೋ ಅಮೃತಧಾರೆಯಲ್ಲಿಯೂ ಜ್ಯೋತಿಷಿ ಬಾಯಲ್ಲಿ ಸುಳ್ಳು ಹೇಳಿಸಿ ಭೂಮಿಕಾಳ ಅತ್ತೆ ಶಕುಂತಲಾ ದೇವಿ ಸದ್ಯ ಗೆದ್ದಾಗಿದೆ ಮುಂದೆ?
ಗೌತಮ್ ಮತ್ತು ಭೂಮಿಕಾ ಹತ್ತಿರವಾಗುತ್ತಿರುವ ವಿಷಯ ತಿಳಿಯುತ್ತಲೇ ಶಕುಂತಲಾ ದೇವಿ ಜ್ಯೋತಿಷಿಯನ್ನು ಕರೆತಂದು ಆತನ ಬಾಯಲ್ಲಿ ಸುಳ್ಳು ಹೇಳಿಸಿದ್ದಾಳೆ. ಜ್ಯೋತಿಷಿಯೊಬ್ಬ ಮನೆಗೆ ಬಂದು ಗೌತಮ್ ಮತ್ತು ಭೂಮಿಕಾ ಪತಿ-ಪತ್ನಿಯಂತೆ ದೈಹಿಕ ಸಂಪರ್ಕ ಹೊಂದಿದರೆ ಭೂಮಿಕಾ ಜೀವಕ್ಕೆ ಅಪಾಯವಿದೆ ಎಂದಿದ್ದಾನೆ. ಇದನ್ನು ಕೇಳಿ ಗೌತಮ್ಗೆ ಶಾಕ್ ಆಗಿದೆ. ಶಕುಂತಲಾ ದೇವಿ ಕೂಡ ಶಾಕ್ ಆದಂತೆ ನಟಿಸಿದ್ದಾಳೆ. ಗೌತಮ್ ಅಂತೂ ಚಿಕ್ಕಮ್ಮನ ಮೇಲೆ ಅಭಿಮಾನ, ಪ್ರೀತಿಯನ್ನೇ ಇಟ್ಟವ. ಯಾವುದೇ ಕಾರಣಕ್ಕೂ ಆಕೆಯ ವಿರುದ್ಧ ಅನುಮಾನ ಬರಲು ಸಾಧ್ಯವೇ ಇಲ್ಲ. ಈ ವಿಷಯವನ್ನು ಗೌತಮ್ ಗೆಳೆಯ ಆನಂದ್ಗೆ ಹೇಳಿದ್ದಾನೆ ಬಿಟ್ಟರೆ ಪತ್ನಿಗೆ ಹೇಳಲಿಲ್ಲ. ಆತನಿಗೆ ಈಗ ಭೂಮಿಕಾ ಬೇಕು. ಯಾವುದೇ ಕಾರಣಕ್ಕೂ ಭೂಮಿಕಾಳನ್ನು ಕಳೆದುಕೊಳ್ಳಲು ಇಷ್ಟವಿಲ್ಲ.
ಶ್ರೀರಸ್ತು ಶುಭಮಸ್ತು ಸೀರಿಯಲ್ಗೆ ಭರ್ಜರಿ ಟ್ವಿಸ್ಟ್: ಹಬ್ಬದ ದಿನವೇ ತುಳಸಿಗೆ ಅಮ್ಮನ ಪಟ್ಟ!
ಪತ್ನಿ ಭೂಮಿಕಾಳಿಗಾಗಿ ಗೌತಮ್, ಉರುಳು ಸೇವೆ ಮಾಡಿದ್ದಾನೆ, ನೆಲದ ಮೇಲೆ ಊಟ ಮಾಡಿದ್ದಾನೆ. ಭೂಮಿಕಾ ಇದೆಲ್ಲಾ ಏನು ಎಂದು ಕೇಳಿದಾಗ, ಮನೆಯವರಿಗಾಗಿ ಎಂದು ಗೌತಮ್ ಹೇಳಿದ್ದಾನೆ. ಪತಿಯ ಈ ಸ್ಥಿತಿ ಕಂಡು ಭೂಮಿಕಾ ಕಣ್ಣೀರಾಗಿದ್ದಾಳೆ. ಆದರೆ ಅವಳಿಗೆ ವಿಷಯವೇ ಗೊತ್ತಿಲ್ಲ. ಆದರೆ ಅಸಲಿ ವಿಷಯವೇ ಬೇರೆಯಾಗಿತ್ತು. ಇದೀಗ, ಭೂಮಿಕಾ ಅತ್ತೆ ಶಕುಂತಲಾದೇವಿಯ ಕುತಂತ್ರ ಭೂಮಿಗೆ ತಿಳಿದೆ. ಶಕುಂತಲಾ ದೇವಿ ಮಗಳ ಬಳಿ ತಾನು ಮಾಡಿದ ಕುತಂತ್ರದ ವಿಷಯ ಹೇಳಿದ್ದನ್ನು ಮಲ್ಲಿ ಕೇಳಿಸಿಕೊಂಡಿದ್ದಳು. ಅದನ್ನೀಗ ಅವಳು ಭೂಮಿಕಾಗೆ ಹೇಳಿದ್ದಾಳೆ. ತನ್ನ ಅಮ್ಮನಿಗೆ ಹುಷಾರು ಇಲ್ಲ ಎಂದುಕೊಂಡು ಗೌತಮ್ ಕಷ್ಟಪಡುತ್ತಿದ್ದಾನೆ ಎಂದು ಭೂಮಿಕಾ ಅಂದುಕೊಂಡಿದ್ದಳು. ಆದರೆ ಅಸಲಿಗೆ ಗೌತಮ್ ಭೂಮಿಕಾ ಸಲುವಾಗಿ ಹೀಗೆ ಮಾಡುತ್ತಿದ್ದ, ಅದೂ ಜ್ಯೋತಿಷಿಯ ಸುಳ್ಳು ಮಾತನ್ನು ಕೇಳಿಕೊಂಡು. ಇದೀಗ ಸತ್ಯ ಗೊತ್ತಾಗುತ್ತಿದ್ದಂತೆಯೇ ಭೂಮಿಕಾ ಸಿಟ್ಟು ನೆತ್ತಿಗೇರಿದೆ.
ತಮ್ಮ ಜಾತಕದಲ್ಲಿ ಯಾವುದೇ ದೋಷವಿಲ್ಲ ಎಂದು ಸಾಬೀತು ಮಾಡಲು ಮನೆಯ ಗುರುಗಳನ್ನು ಕರೆಸಿ ಪಂಚಾಂಗ ಶ್ರವಣ ಮಾಡಿಸೋ ಪ್ಲ್ಯಾನ್ ಮಾಡಿದ್ದಾಳೆ ಭೂಮಿಕಾ. ಏಕೆಂದರೆ ಏಕಾಏಕಿ ಶಕುಂತಲಾ ದೇವಿಯ ಕುತಂತ್ರವನ್ನು ಬಯಲು ಮಾಡುವುದು ಸುಲಭವಲ್ಲ. ಹೀಗೆ ಮಾಡಿದರೆ, ಗೌತಮ್ ಪತ್ನಿಯ ಮೇಲೇ ಸಿಟ್ಟು ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಇದೇ ಕಾರಣಕ್ಕೆ ಈ ಪ್ಲ್ಯಾನ್ ಮಾಡಿದ್ದಾಳೆ. ಇದರಿಂದ ಶಕುಂತಲಾ ದೇವಿಯ ಕುತಂತ್ರ ಬಯಲಾಗುವುದು ದಿಟ ಎಂದು ಹಲವರು ಹೇಳುತ್ತಿದ್ದರೆ, ಈ ಗುರೂಜಿನೂ ದುಡ್ಡು ತಿಂದು ತಿರುಗಿ ಬಿದ್ದರೆ ಏನು ಮಾಡುವುದು ಎನ್ನುವ ಚಿಂತೆ ಮತ್ತೊಂದಿಷ್ಟು ಮಂದಿಗೆ. ಒಟ್ಟಿನಲ್ಲಿ ಏನಾಗುತ್ತದೆಯೋ ಕಾದು ನೋಡಬೇಕಿದೆ.
ಪುಟ್ಟಕ್ಕನ ಮಕ್ಕಳು ರಾಜಿಗಿಂದು ಹುಟ್ಟುಹಬ್ಬದ ಸಂಭ್ರಮ: ನಟಿ ಕುರಿತು ಕುತೂಹಲದ ವಿಷ್ಯ ಇಲ್ಲಿವೆ...