Asianet Suvarna News Asianet Suvarna News

ಬಿಡದಿವರೆಗೆ 118 ಕಿ.ಮೀ. ಉದ್ದ ನಮ್ಮ ಮೆಟ್ರೋ ವಿಸ್ತರಣೆ, ಮಾರ್ಚ್‌ 26 ಬಿಡ್‌ ಸಲ್ಲಿಕೆಗೆ ಕೊನೆ ದಿನ

ನಮ್ಮ ಮೆಟ್ರೋ 3ನೇ ಹಂತದ ಯೋಜನೆ ಅನುಮೋದನೆಗೆ ಕೇಂದ್ರದ ಅಂತಿಮ ಮುದ್ರೆ ಬೀಳುವ ಮುನ್ನವೇ ಬೆಂಗಳೂರು ಮೆಟ್ರೋ ರೈಲು ನಿಗಮ ಇನ್ನೊಂದು ಹೆಜ್ಜೆ ಇಟ್ಟಿದ್ದು, ಬಿಡದಿವರೆಗೆ 118 ಕಿ.ಮೀ. ಉದ್ದದ ಮೆಟ್ರೋ ವಿಸ್ತರಣೆಗೆ ಮಾರ್ಚ್‌ 26 ಬಿಡ್‌ ಸಲ್ಲಿಕೆಗೆ ಕೊನೆಯ ದಿನವಾಗಿದೆ.

Bengaluru Namma Metro extension Bids invited for feasibility study gow
Author
First Published Feb 26, 2024, 2:33 PM IST

ಬೆಂಗಳೂರು (ಫೆ.26): ನಮ್ಮ ಮೆಟ್ರೋ 3ನೇ ಹಂತದ ಯೋಜನೆ ಅನುಮೋದನೆಗೆ ಕೇಂದ್ರದ ಅಂತಿಮ ಮುದ್ರೆ ಬೀಳುವ ಮುನ್ನವೇ ಬೆಂಗಳೂರು ಮೆಟ್ರೋ ರೈಲು ನಿಗಮ ಇನ್ನೊಂದು ಹೆಜ್ಜೆ ಇಟ್ಟಿದ್ದು, ಬಿಡದಿವರೆಗೆ 118 ಕಿ.ಮೀ. ಉದ್ದದ ಮೆಟ್ರೋ ವಿಸ್ತರಣೆಯ ಕಾರ್ಯಸಾಧ್ಯತಾ ವರದಿ ಪಡೆಯಲು ಮುಂದಾಗಿದೆ.

ನಗರದ ಹೊರವಲಯಕ್ಕೆ ಮೆಟ್ರೋ ವಿಸ್ತರಿಸುವ ಯೋಜನೆ ಇದಾಗಿದ್ದು, ಈ ಸಂಬಂಧ ಅಧ್ಯಯನ ವರದಿ ಸಿದ್ಧಪಡಿಸಿ ಕೊಡಲು ಬಿಎಂಆರ್‌ಸಿಎಲ್‌ ಟೆಂಡರ್‌ ಆಹ್ವಾನಿಸಿದೆ. ಮಾರ್ಚ್‌ 26 ಬಿಡ್‌ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಬಹುತೇಕ ಜುಲೈನಲ್ಲಿ ಈ ಅಧ್ಯಯನದ ಟೆಂಡರ್ ಆಗಲಿದ್ದು, ಗುತ್ತಿಗೆ ಪಡೆಯುವ ಸಂಸ್ಥೆ ಆರು ತಿಂಗಳಲ್ಲಿ ವರದಿಯನ್ನು ನೀಡಬೇಕಿದೆ.

ಬಟ್ಟೆ ಕ್ಲೀನ್ ಇಲ್ಲ ಅಂತಾ ರೈತನಿಗೆ ಮೆಟ್ರೋ ಒಳಗೆ ಬಿಡದ ಸಿಬ್ಬಂದಿ! ಅನ್ನದಾತನಿಗೆ ಅವಮಾನ ಮಾಡಿತಾ ನಮ್ಮ ಮೆಟ್ರೋ?

ಮೆಟ್ರೋ ರೈಲು ಮಾರ್ಗ ವಿಸ್ತರಣೆ ಸಂಬಂಧ ಎರಡು ಪ್ಯಾಕೇಜ್‌ ವಿಂಗಡಿಸಲಾಗಿದೆ. ಒಂದನೇ ಹಂತದ ಪ್ಯಾಕೇಜ್‌ನಲ್ಲಿ 50 ಕಿ.ಮೀ. ಉದ್ದದ ಮೂರು ಕಾರಿಡಾರ್‌ ಅಂದರೆ, ಮೈಸೂರು ರಸ್ತೆಯ ಚಲ್ಲಘಟ್ಟದಿಂದ ಬಿಡದಿ, ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ಮೆಟ್ರೋ ರೈಲು ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ.

ಎರಡನೇ ಹಂತದ ಪ್ಯಾಕೇಜ್‌ನಲ್ಲಿ 68 ಕಿ.ಮೀ. ಮಾರ್ಗ ಒಳಗೊಂಡಿದ್ದು, ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ಜಿಗಣಿ, ಆನೇಕಲ್‌, ಅತ್ತಿಬೆಲೆ, ಸರ್ಜಾಪುರ, ವರ್ತೂರು ಮತ್ತು ಕಾಡುಗೋಡಿ ವೃಕ್ಷ ಉದ್ಯಾನದವರೆಗೆ ಮೆಟ್ರೋ ಮಾರ್ಗ ನಿರ್ಮಿಸಲು ಚಿಂತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯ ಸಾಧ್ಯತಾ ವರದಿ ತಯಾರಿಸಲಾಗುತ್ತಿದೆ.

ಹತ್ತನೇ ತರಗತಿ ಆದವರಿಗೆ ದಕ್ಷಿಣ ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ

ಕಾರ್ಯಸಾಧ್ಯತಾ ವರದಿಯಲ್ಲಿ ಮೆಟ್ರೋ ಮಾರ್ಗ ನಿರ್ಮಾಣದ ಅಂದಾಜು ವೆಚ್ಚ, ಸಂಚಾರ ಸರ್ವೆ, ಮೆಟ್ರೋ ಮಾರ್ಗದ ಅಲೈನ್‌ಮೆಂಟ್‌, ಭೂಸ್ವಾಧೀನ, ತೊಡಕುಗಳ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವಂತೆ ತಿಳಿಸಲಾಗಿದೆ. ಇದು ಯೋಜನೆಯ ಮೊದಲ ಹಂತವಾಗಿದ್ದು, ಇದಾದ ಬಳಿಕ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ರೂಪಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಬೆಳಗ್ಗೆ 5ಕ್ಕೆ ಮೆಟ್ರೋ ರೈಲು ಸೇವೆ: ರೈಲು ಹಾಗೂ ಬಸ್‌ಗಳ ಮೂಲಕ ಬೇರೆ ನಗರಗಳಿಂದ ಮುಂಜಾನೆ ಬೆಂಗಳೂರಿಗೆ ಬರುವವರ ಅನುಕೂಲಕ್ಕಾಗಿ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಫೆ. 26ರಿಂದ ಬೆಳಗ್ಗೆ 5 ಗಂಟೆಯಿಂದಲೇ ಮೆಟ್ರೋ ರೈಲು ಸೇವೆ ಆರಂಭಿಸಲಾಗುತ್ತಿದೆ.

ಸದ್ಯ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ನಮ್ಮ ಮೆಟ್ರೋ ರೈಲು ಸೇವೆ ಆರಂಭವಾಗುತ್ತಿದೆ. ಅದು ಎಲ್ಲ ಕೊನೆಯ ನಿಲ್ದಾಣಗಳಿಂದ ಒಮ್ಮೆಲೇ ಮೆಟ್ರೋ ಸೇವೆ ಆರಂಭವಾಗಲಿದೆ. ಆದರೆ, ರೈಲು ಹಾಗೂ ಬಸ್‌ಗಳ ಮೂಲಕ ಬೇರೆ ನಗರಗಳಿಂದ ಮುಂಜಾನೆ ಮೆಜೆಸ್ಟಿಕ್‌ಗೆ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಇನ್ನು ಮುಂದೆ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಬೆಳಗ್ಗೆ 5 ಗಂಟೆಯಿಂದಲೇ ಆರಂಭಿಸಲಾಗುತ್ತಿದೆ. ಈ ಸೇವೆಯು ಭಾನುವಾರ ಹೊರತುಪಡಿಸಿ ಉಳಿದ ಎಲ್ಲ 6 ದಿನಗಳಲ್ಲಿ ಇರಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಅದೇ ರೀತಿ ಪ್ರಯಾಣಿಕರ ಒತ್ತಡ ಹೆಚ್ಚಿರುವ ಕಾರಣದಿಂದಾಗಿ ಫೆ. 26ರಿಂದ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಗರುಡಾಚಾರ್‌ಪಾಳ್ಯ ಮೆಟ್ರೋ ನಿಲ್ದಾಣದವರೆಗೆ ಬೆಳಗ್ಗೆ 8.45ರಿಂದ 10.20ರವರೆಗೆ ಪ್ರತಿ ಮೂರು ನಿಮಿಷಕ್ಕೊಂದು ಮೆಟ್ರೋ ರೈಲು ಸೇವೆ ನೀಡಲಿದೆ. ಈ ಸೇವೆಯು ಶನಿವಾರ, ಭಾನುವಾರ ಮತ್ತು ಸಾಮಾನ್ಯ ರಜೆ ಇರುವ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಂದು ನೀಡಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.

Follow Us:
Download App:
  • android
  • ios