Asianet Suvarna News Asianet Suvarna News

ಸುರಪುರ ಮಳೆ ಅರ್ಭಟಕ್ಕೆ 47 ಮನೆಗಳು ಕುಸಿತ, ಯಾವುದೇ ಪ್ರಾಣಾಪಾಯ ಇಲ್ಲ

ಜಿಟಿ ಜಿಟಿ ಮಳೆಯಿಂದಾಗಿ ತಾಲೂಕಿನ ವಿವಿಧೆಡೆ 47 ಮನೆಗಳು ಕುಸಿತಗೊಂಡಿದ್ದು, ಯವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆಯಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ.

47 houses collapsed due to Surapura  heavy rains at yadgir rav
Author
First Published Jul 27, 2023, 4:38 AM IST

ಸುರಪುರ (ಜು.27) :  ಜಿಟಿ ಜಿಟಿ ಮಳೆಯಿಂದಾಗಿ ತಾಲೂಕಿನ ವಿವಿಧೆಡೆ 47 ಮನೆಗಳು ಕುಸಿತಗೊಂಡಿದ್ದು, ಯವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆಯಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಕಳೆದ ಒಂದು ವಾರದಿಂದ ಸುರಿದ ನಿರಂತರ ಮಳೆಗೆ ಖಾನಪುರ ಎಸ್‌.ಎಚ್‌.- 16 ಮನೆ, ವಾರಿಸಿದ್ದಾಪುರ-1, ದೇವರಗೋನಾಲ-2, ನಗನೂರ-1, ಭೈರಿಮಡ್ಡಿ-1, ಸೂಗೂರ-1, ಮುಷ್ಠಳ್ಳಿ-1, ಸುರಪುರ ನಗರ-1, ಹುಣಸಿಹೊಳೆ-1, ಯಾಳಗಿ-1, ಕುಂಬಾರಪೇಟ-1, ಹೇಮನೂರ-1, ಅರಕೇರಾ(ಕೆ)-1, ವಾಗಣಗೇರಾ-2, ದೇವಾಪುರ-1, ಪೇಠ ಅಮ್ಮಾಪುರ-1, ಕಚಕನೂರ-1. ಕವಡಿಮಟ್ಟಿ-3 ಸೇರಿದಂತೆ 47 ಮನೆಗಳು ಬಿದ್ದಿವೆ. ರುಕ್ಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 16 ಮನೆಗಳಿಗೆ ಹಾನಿಯಾಗಿದೆ.

ರೆಡ್‌ ಅಲರ್ಟ್ ಇದ್ದರೂ ಕಲಬುರಗಿಯಲ್ಲಿ ಇಡೀ ದಿನ ಮಳೆ ಇಲ್ಲ!

ತಹಸೀಲ್ದಾರ್‌ ಕಚೇರಿ ಸಿಬ್ಬಂದಿ, ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಪರಿಶೀಲಿಸಿ ವರದಿ ಸಲ್ಲಿಸಿದ್ದಾರೆ. ಒಟ್ಟಾರೆ ಸುರಪುರ ತಾಲೂಕಿನಲ್ಲಿ 59 ಮಿ.ಮೀ. ಮಳೆಯಾಗಿದೆ. ಶನಿವಾರ, ಭಾನುವಾರ ಕೊಂಚ ಮಳೆ ಹೊರಪಾಗಿದ್ದು, ಹೈರಾಣಾಗಿದ್ದ ರೈತರು ನಿಟ್ಟುಸಿರುಬಿಟ್ಟಿದ್ದಾರೆ.

ಉತ್ತಮ ಮಳೆಯಾದ್ದರಿಂದ ತೊಗರಿ, ಸಜ್ಜೆ, ಹತ್ತಿ, ನವಣೆ, ಬಿತ್ತಲಾಗಿದೆ. ಎಲ್ಲೆಡೆ ಮಳೆಯಾಗುತ್ತಿರುವುದರಿಂದ ಹಸಿರಿನ ವಾತಾವರಣ ನಿರ್ಮಾಣವಾಗಿದೆ. ರೈತರು ಧೃತಿಗೆಡುವ ಅಗತ್ಯವಿಲ್ಲ. ಮಳೆರಾಯ ಕೈಹಿಡಿಯಲಿದ್ದಾನೆ ಎಂದು ಕೃಷಿ ಅಧಿಕಾರಿ ಸುರೇಶ ಪಾಡಮುಖಿ ತಿಳಿಸಿದ್ದಾರೆ.

ಜುಲೈ ಎರಡನೇ ವಾರದಲ್ಲಿ ಉತ್ತಮ ಮಳೆಯಾದ್ದರಿಂದ ತೊಗರಿ, ಹತ್ತಿ, ಸಜ್ಜೆ, ನವಣೆ ಬಿತ್ತನೆ ಮಾಡಲಾಗಿದೆ. ಹವಾಮಾನ ಇಲಾಖೆಯೂ ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬರುವ ನಿರೀಕ್ಷೆಯಿದೆ ಎಂಬುದಾಗಿ ತಿಳಿಸಿದ್ದಾರೆ. ಅಣೆಕಟ್ಟುಗಳಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಏರುತ್ತಿದೆ. ಮಹಾರಾಷ್ಟ್ರ, ಉತ್ತರ ಕರ್ನಾಟಕ, ಮಲೆನಾಡು ಭಾಗದಲ್ಲಿ ಧಾರಕಾರವಾಗಿ ಮಳೆ ಸುರಿಯುತ್ತಿದೆ. ನಾರಾಯಣಪುರ ಜಲಾಶಯಕ್ಕೆ ನೀರಿನ ಅವಶ್ಯಕತೆಯಿದೆ. ಡ್ಯಾಂ ನೀರು ನಂಬಿರುವ ರೈತರು ಕೆಬಿಜೆನ್ನೆಲ್‌ ಅಧಿಕಾರಿಗಳ ಮಾಹಿತಿ ಪಡೆದುಕೊಂಡು ಭತ್ತ ಬಿತ್ತನೆ ಕೈಗೊಳ್ಳಬೇಕು ಎಂದು ಸಹಾಯಕ ಕೃಷಿ ಅಧಿಕಾರಿ ಗುರುನಾಥ ತಿಳಿಸಿದ್ದಾರೆ.

ಕಲಬುರಗಿ: ನೀರಿನ ಗುಂಡಿಯಲ್ಲಿ ಮುಳುಗಿ ಬಾಲಕರಿಬ್ಬರು ದುರ್ಮರಣ

ತಾಲೂಕಿನಲ್ಲಿ ಮಳೆಯಿಂದಾಗಿ ಮನೆಗಳು ಕುಸಿದಿರುವ ಬಗ್ಗೆ ಮಾಹಿತಿಯಿದೆ. ಕಂದಾಯ ಇಲಾಖೆಯ ಅಧೀಕಾರಿಗಳಿಗೆ ಮನೆ ಹಾನಿ ಕುರಿತು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ವರದಿ ಕೈಸೇರಿದ ತಕ್ಷಣ ಜಿಲ್ಲಾಡಳಿತಕ್ಕೆ ಕಳಿಸಲಾಗುವುದು. ಮನೆ ಕಳೆದುಕೊಂಡವರಿಗೆ ಪರಿಹಾರ ಕೊಡಿಸಲು ಯತ್ನಿಸಲಾಗುತ್ತಿದೆ ಎಂದು ತಹಸೀಲ್ದಾರ್‌ ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ.

Follow Us:
Download App:
  • android
  • ios