
ಇಸ್ರೇಲ್ ಅಮೆರಿಕಾ ಜಂಟಿ ದಾಳಿಯಲ್ಲಿ ಹತ್ಯೆಗೀಡಾದ ಇರಾನ್ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಸಾವು ಖಂಡಿಸಿ ಭಾರತದ ವಿವಿಧೆಡೆ ಮುಸ್ಲಿಂ ಸಮುದಾಯದ ಜನ ರಂಜಾನ್ ಉಪವಾಸದ ಮಧ್ಯೆಯೂ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಖಮೇನಿ ಹತ್ಯೆಗೆ ಜಗತ್ತಿನ ಹಲವು ದೇಶಗಳು ಪ್ರತಿಕ್ರಿಯೆ ನೀಡಿವೆ.
ಹಾಗೆಯೇ ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶಗಳಲ್ಲಿ ಒಂದೆನಿಸಿದ ಚೀನಾವು ಕೂಡ ಈ ದಾಳಿಗೆ ಪ್ರತಿಕ್ರಿಯೆ ನೀಡಿದೆ. ಚೀನಾ ಹಾಗೂ ಉತ್ತರ ಕೊರಿಯಾ ಎರಡು ದೇಶಗಳು ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕಾದ ಜಂಟಿ ದಾಳಿಯನ್ನು ಖಂಡಿಸಿದ್ದು, ಇರಾನ್ನ ಸರ್ವೋಚ್ಚ ನಾಯಕನ ಹತ್ಯೆಯು ಇರಾನ್ನ ಸಾರ್ವಭೌಮತ್ವ ಮತ್ತು ಭದ್ರತೆಯ ಗಂಭೀರ ಉಲ್ಲಂಘನೆಯಾಗಿದೆ. ಇದು ವಿಶ್ವಸಂಸ್ಥೆಯ ಉದ್ದೇಶಗಳು ಮತ್ತು ತತ್ವಗಳ ಉಲ್ಲಂಘನೆಯಾಗಿದೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿನ ಮೂಲಭೂತ ಮಾನದಂಡಗಳನ್ನು ತುಳಿದಿದೆ. ಚೀನಾ ಇದನ್ನು ದೃಢವಾಗಿ ವಿರೋಧಿಸುತ್ತದೆ ಮತ್ತು ಬಲವಾಗಿ ಖಂಡಿಸುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಖಮೇನಿ ಸಾವಿಗೆ ಇರಾನ್ ಪ್ರತೀಕಾರದ ಕಿಡಿ: ಇಸ್ರೇಲ್ನ ಬೀಟ್ ಶೆಮೇಶ್ ಮೇಲೆ ದಾಳಿಗೆ 8 ಬಲಿ
ಇರಾನ್ನಲ್ಲಿ ಅಮೆರಿಕಾ ಹಾಗೂ ಇಸ್ರೇಲ್ ಸೇನಾ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸುವಂತೆ, ಉದ್ವಿಗ್ನ ಪರಿಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸದಂತೆ ಮತ್ತು ಮಧ್ಯಪ್ರಾಚ್ಯ ಮತ್ತು ಪ್ರಪಂಚದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಜಂಟಿ ಪ್ರಯತ್ನವನ್ನು ನಡೆಸುವುದಕ್ಕೆ ನಾವು ಒತ್ತಾಯಿಸುತ್ತೇವೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಹಾಗೆಯೇ ಉತ್ತರ ಕೊರಿಯಾವೂ ಕೂಡ ಇರಾನ್ ಮೇಲಿನ ದಾಳಿಯನ್ನು ಖಂಡಿಸಿದ್ದು, ಇದು ರಾಷ್ಟ್ರೀಯ ಸಾರ್ವಭೌಮತ್ವದ ಉಲ್ಲಂಘನೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಈ ದಾಳಿಗೆ ಪ್ರಪಂಚದ ಮತ್ತೊಂದು ಶಕ್ತಿಶಾಲಿ ದೇಶ ಎನಿಸಿರುವ ರಷ್ಯಾವೂ ಕೂಡ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಇರಾನ್ನ ಸರ್ವೋಚ್ಚ ನಾಯಕನ ಹತ್ಯೆಯು ಮಾನವ ನೈತಿಕತೆ ಮತ್ತು ಅಂತರರಾಷ್ಟ್ರೀಯ ಕಾನೂನಿನ ಎಲ್ಲಾ ಮಾನದಂಡಗಳನ್ನು ಉಲ್ಲಂಘಿಸಿದಂತಹ ಒಂದು ಸಿನಿಕ ಕೊಲೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕಾ ಇಸ್ರೇಲ್ ವಿರುದ್ಧ ಪ್ರತೀಕಾರಕ್ಕೆ ತನ್ನ ಪ್ರದೇಶದ ಮೇಲೆ ದಾಳಿ ಮಾಡಿದ ಇರಾನ್ಗೆ ಯುಎಇ ಹೇಳಿದ್ದೇನು?
ಹಾಗೆಯೇ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರು ಅಮೆರಿಕ ಮತ್ತು ಇರಾನ್ ಮಾತುಕತೆಗಳನ್ನು ಪುನರಾರಂಭಿಸುವಂತೆ ಒತ್ತಾಯಿಸಿದ್ದಾರೆ. ಕೆಲ ದೇಶಗಳ ಮೇಲೆ ಇರಾನ್ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇರಾನ್ ವಿವೇಚನಾರಹಿತ ಮಿಲಿಟರಿ ದಾಳಿಗಳಿಂದ ದೂರವಿರಬೇಕು. ಅಂತಿಮವಾಗಿ, ಇರಾನಿನ ಜನರು ತಮ್ಮ ಭವಿಷ್ಯವನ್ನು ನಿರ್ಧರಿಸಲು ಅವಕಾಶ ನೀಡಬೇಕು ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆ ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್, ಕತಾರ್, ಕುವೈತ್ ಮತ್ತು ಜೋರ್ಡಾನ್ ಮೇಲಿನ ಇರಾನ್ ದಾಳಿಯನ್ನು ಸೌದಿ ಅರೇಬಿಯಾ ತೀವ್ರವಾಗಿ ಖಂಡಿಸಿದ್ದು, ಇವು ಸಾರ್ವಭೌಮತ್ವದ ಉಲ್ಲಂಘನೆ ಎಂದು ಕರೆದಿದೆ. ಆ ದೇಶಗಳ ಪರವಾಗಿ ತಾನು ಸಂಪೂರ್ಣವಾಗಿ ನಿಲ್ಲುವುದಾಗಿ ಸೌದಿ ಅರೇಬಿಯಾ ದೃಢಪಡಿಸಿದೆ. ಸಾರ್ವಭೌಮತ್ವದ ನಿರಂತರ ಉಲ್ಲಂಘನೆ ಮತ್ತು ಅಂತರರಾಷ್ಟ್ರೀಯ ತತ್ವಗಳ ಉಲ್ಲಂಘನೆಯ ಭೀಕರ ಪರಿಣಾಮಗಳ ಬಗ್ಗೆ ಸೌದಿ ಅರೇಬಿಯಾ ಎಚ್ಚರಿಸಿದೆ. ಪ್ರಾದೇಶಿಕ ಸ್ಥಿರತೆ ಮತ್ತು ಭದ್ರತೆಯನ್ನು ದುರ್ಬಲಗೊಳಿಸುತ್ತಿರುವ ವರ್ತನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಅದು ಒತ್ತಾಯಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ