
ನವದೆಹಲಿ (ಮಾ.15): ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ನಂತರ, ಇದನ್ನು ಜಾರಿಗೆ ತರಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ನಡುವೆ ಪ್ರತಿಪಕ್ಷಗಳು ಸಿಎಎ ವಿರುದ್ಧ ಪ್ರತಿಭಟನೆಯ ಕಹಳೆಯನ್ನು ಮೊಳಗಿಸುತ್ತಿವೆ. ಆದರೆ ಈ ಮಧ್ಯೆ ಪಾಕಿಸ್ತಾನ ಹಾಗೂ ಅಮೆರಿಕ ಕೂಡ ಸಿಎಎ ಬಗ್ಗೆ ಹೇಳಿಕೆ ನೀಡಿದೆ. ಪಾಕಿಸ್ತಾನವು ಸಿಎಎಯನ್ನು ತಾರತಮ್ಯ ಎಂದು ಕರೆದಿದ್ದು, ಈ ಕಾನೂನು ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸಲು ಹೊರಟಿದೆ ಎಂದು ಹೇಳಿದೆ. ಭಾರತೀಯ ಮುಸ್ಲಿಮರು ಈ ಕಾನೂನಿಗೆ ಭಯಪಡುವ ಅಗತ್ಯವಿಲ್ಲ ಎಂದು ಪಾಕಿಸ್ತಾನ ಹೇಳಿಕೆ ನೀಡಿದೆ ಏಕೆಂದರೆ ಸಿಎಎ ಅವರ ಪೌರತ್ವದ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದೆ. ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಕಾರಣ ಸಿಎಎ ಮತ್ತು ಅದರ ನಿಯಮಗಳು ತಾರತಮ್ಯದಿಂದ ಕೂಡಿವೆ ಎಂಬುದು ಸ್ಪಷ್ಟವಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್ ಹೇಳಿದ್ದಾರೆ.
ಮುಸ್ಲಿಂ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರು ಶೋಷಣೆಗೆ ಒಳಗಾಗುತ್ತಿದ್ದಾರೆ ಮತ್ತು ಭಾರತವು ಅಲ್ಪಸಂಖ್ಯಾತರಿಗೆ ಸುರಕ್ಷಿತ ಸ್ವರ್ಗವಾಗಿದೆ ಎಂಬ ತಪ್ಪು ಕಲ್ಪನೆಯನ್ನು ಈ ನಿಯಮಗಳು ಆಧರಿಸಿವೆ ಎಂದು ಹೇಳಿದ್ದಾರೆ. 16 ಡಿಸೆಂಬರ್ 2019 ರಂದು ಪಾಕಿಸ್ತಾನದ ಸಂಸತ್ತಿನಲ್ಲಿ CAA ಅನ್ನು ಟೀಕಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದಿದ್ದಾರೆ. ಇದರಲ್ಲಿ CAA ಸಮಾನತೆಯ ಅಂತರರಾಷ್ಟ್ರೀಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಲಾಗಿದೆ. ಭಾರತದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುವುದಿಲ್ಲ ಮತ್ತು ಸರ್ಕಾರವು ಈ ದಿಕ್ಕಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ನಂಬುತ್ತೇವೆ ಎಂದು ಅವರು ಹೇಳಿದರು.
ಸಿಎಎ ಬಗ್ಗೆ ಅಮೆರಿಕ ಹೇಳಿದ್ದೇನು?: ಭಾರತದಲ್ಲಿ ಸಿಎಎ ಅಧಿಸೂಚನೆಯನ್ನು ಬಿಡುಗಡೆ ಮಾಡಿದ ನಂತರ, ಅಮೆರಿಕ ಕೂಡ ಅದಕ್ಕೆ ಪ್ರತಿಕ್ರಿಯಿಸಿದೆ. ಸಿಎಎ ಅಧಿಸೂಚನೆಯ ಬಗ್ಗೆ ಗಮನ ನೀಡಿದ್ದು, ಅದರ ಮೇಲೆ ಕಣ್ಣಿಟ್ಟಿದ್ದೇವೆ ಎಂದು ಅಮೆರಿಕ ಹೇಳಿದೆ. ಮಾರ್ಚ್ 11 ರಂದು ಭಾರತವು ಪೌರತ್ವ ತಿದ್ದುಪಡಿ ಮಸೂದೆಯ ಅಧಿಸೂಚನೆಯನ್ನು ಹೊರಡಿಸಿದ್ದು, ಅದರ ಬಗ್ಗೆ ನಮಗೆ ಕಾಳಜಿ ಇದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ. ಈ ಕಾನೂನನ್ನು ಹೇಗೆ ಅನುಷ್ಠಾನಗೊಳಿಸಲಾಗುತ್ತದೆ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಧಾರ್ಮಿಕ ಸ್ವಾತಂತ್ರ್ಯದ ಗೌರವ ಮತ್ತು ಕಾನೂನಿನ ಅಡಿಯಲ್ಲಿ ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಪರಿಗಣಿಸುವುದು ಮೂಲಭೂತ ಪ್ರಜಾಪ್ರಭುತ್ವದ ತತ್ವಗಳಾಗಿವೆ ಎಂದಿದ್ದಾರೆ.
ಭಾರತದಲ್ಲಿ ಸಿಎಎಅನ್ನು ಜಾರಿಗೊಳಿಸಿದ್ದಕ್ಕೆ ಅಮರಿಕದಲ್ಲಿ ಹಿಂದುಗಳು ಭರ್ಜರಿಯಾಗಿ ಸ್ವಾಗತಿಸಿದ್ದರು. ಇದರ ಬೆನ್ನಲ್ಲಿಯೇ ಬಿಡೆನ್ ಸರ್ಕಾರದ ಈ ಹೇಳಿಕೆ ಬಂದಿದೆ. 2014ರ ಡಿಸೆಂಬರ್ 31 ರ ಮೊದಲು ಭಾರತಕ್ಕೆ ಆಗಮಿಸಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವವನ್ನು ನೀಡಲು ಕೇಂದ್ರವು ಸೋಮವಾರ, ಮಾರ್ಚ್ 11 ರಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿತು.
ಸಿಎಎ ಜಾರಿ: ನಟ ದಳಪತಿ ವಿಜಯ್ ತೀವ್ರ ವಿರೋಧ- ತಿರುಗೇಟು ಕೊಟ್ಟ ನಟಿ ಕಂಗನಾ ರಣಾವತ್
ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆ, ಸಿಎಎ ತಮ್ಮ ಪೌರತ್ವದ ಸ್ಥಿತಿಯ ಮೇಲೆ ಪರಿಣಾಮ ಬೀರುವುದಿಲ್ಲವಾದ್ದರಿಂದ ಭಾರತೀಯ ಮುಸ್ಲಿಮರು ಚಿಂತಿಸಬೇಕಾಗಿಲ್ಲ ಎಂದು ಸರ್ಕಾರವು ಪತ್ರಿಕಾ ಹೇಳಿಕೆಯನ್ನು ನೀಡಿದೆ.
ಸಿಎಎ ಕಾಯ್ದೆ ಅಧಿಕೃತವಾಗಿ ಜಾರಿ: ಏನಿದು ಪೌರತ್ವ ತಿದ್ದುಪಡಿ ಕಾಯ್ದೆ? ವಿರೋಧ ಯಾಕೆ ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ