ಅವರೆಲ್ಲರೂ ಯಾವುದು ಖುಷಿಯ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಖುಷಿಯಲ್ಲೇ ಪಾರ್ಟಿ ಮಾಡುತ್ತಾ ಮನೆಯ ಈಜುಕೊಳಕ್ಕೆ ಇಳಿದಿದ್ದರು. ಆದರೆ ಈ ಖುಷಿ ಕೆಲ ಕ್ಷಣಗಳಲ್ಲೇ ಶೋಕ ನೀಡಬಹುದು ಎಂದು ಅವರು ಭಾವಿಸಿರಲಿಲ್ಲ. ಪಾರ್ಟಿ ನಡೆಯುತ್ತಿದ್ದ ಮನೆಯೊಂದು ಒಮ್ಮಿಂದೊಮ್ಮೆಲೆ ಸ್ಮಶಾನವಾಗಿ ಬದಲಾಗಿದೆ. ಈಜುಕೊಳದ ಕೆಳಗಿದ್ದ 43 ಅಡಿ ಆಳದ ಸಿಂಕ್ಹೋಲ್(ಸುಳಿ) ಒಮ್ಮೆಲೆ ತೆರೆದುಕೊಂಡು, ಈಜುಕೊಳದಲ್ಲಿ ಆಟವಾಡುತ್ತಿದ್ದ ಓರ್ವನನ್ನು ಬಲಿ ಪಡೆದ ನಂತರ ಸಂಭ್ರಮದ ಸ್ಥಳ ಸ್ಮಶಾನವಾಗಿ ಬದಲಾಯಿತು. ಇಸ್ರೇಲ್ನಲ್ಲಿ ಈ ಭಯಾನಕ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟೆಲ್ ಅವಿವ್ನ ಆಗ್ನೇಯ 40 ಕಿಲೋಮೀಟರ್ ದೂರದಲ್ಲಿರುವ ಕಾರ್ಮಿ ಯೋಸೆಫ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ ಎಂದು ಗ್ಲೋಬಲ್ ನ್ಯೂಸ್ ವರದಿ ಮಾಡಿದೆ.
ವಿಡಿಯೋದಲ್ಲಿ ಕಾಣಿಸುವಂತೆ ಈಜುಕೊಳದಲ್ಲಿ ಜನರು ಮೋಜು ಮಾಡುತ್ತಿರುವಾಗಲೇ ಈಜುಕೊಳದ ನೆಲಹಾಸು ಒಮ್ಮೆಲೆ ಕುಸಿಯಲಾರಂಭಿಸಿದೆ. ಸಿಂಕ್ ಹೋಲ್ ಇರುವಲ್ಲಿಯೇ ಒಡಕು ಮೂಡಿ ಸಿಂಕ್ನಲ್ಲಿದ್ದ ನೀರೆಲ್ಲವೂ ಒಮ್ಮೆಗೆ ಆ ತೂತಿನೊಳಗೆ ಸೇರಲಾರಂಭಿಸಿದೆ. ಇಷ್ಟೇ ಆಗಿದ್ದರೆ ದೊಡ್ಡ ಹಾನಿ ಸಂಭವಿಸುತ್ತಿರಲಿಲ್ಲ. ಈಜುಕೊಳದಲ್ಲಿದ್ದ ನೀರು ತೆರೆದ ರಂಧ್ರದೊಳಗೆ ತಾನು ಹರಿಯುವುದರ ಜೊತೆ ಈಜುಕೊಳದಲ್ಲಿದ್ದ ಜನರನ್ನು ತನ್ನತ್ತ ಸೆಳೆಯಲಾರಂಭಿಸಿದೆ. ಈ ವೇಳೆ ಓರ್ವ ನೀರು ಸೆಳೆದ ರಭಸಕ್ಕೆ 43 ಅಡಿ ಆಳದ ಸುಳಿಯೊಳಗೆ ಕೊಚ್ಚಿ ಹೋಗಿದ್ದರೆ ನೀರಿನೊಂದಿಗೆ ಸೆಳೆದು ಹೋಗುತ್ತಿದ್ದ ಮತ್ತೊರ್ವನನ್ನು ಜೊತೆಯಲ್ಲೇ ಇದ್ದವರೊಬ್ಬರು ಎಳೆದು ಹಿಡಿದು ರಕ್ಷಿಸಿದ್ದಾರೆ. ಈ ಘಟನೆ ನಡೆಯುವ ವೇಳೆ ಈಜುಕೊಳದಲ್ಲಿ ಒಟ್ಟು ಐದಾರು ಜನ ಇದ್ದರು ಎಂದು ತಿಳಿದು ಬಂದಿದೆ. ಇಬ್ಬರ ಹೊರತಾಗಿ ಈಜು ಕೊಳದಲ್ಲಿದ್ದ ಉಳಿದವರು ಸುರಕ್ಷಿತವಾಗಿದ್ದರು ಎಂದು ತಿಳಿದು ಬಂದಿದೆ.
ಈಜುಕೊಳ ಹೆಲಿಪ್ಯಾಡ್ ಇರೋ ವಿಶ್ವದ ಅತ್ಯಂತ ಉದ್ದದ ಕಾರು
ಸಿಂಕ್ಹೋಲ್ಗಳು ಅಥವಾ ಸುಳಿ ಎಂದು ಕರೆಯಲ್ಪಡುವ ಇದು ವಿವಿಧ ರೀತಿಯಲ್ಲಿ ಉದ್ಭವಿಸಬಹುದು. ಭೂ ಮೇಲ್ಮೈ ಅಡಿಯಲ್ಲಿರುವ ನೆಲವು ಅಂತರ್ಜಲದಲ್ಲಿ ಕರಗಿದಾಗ ಮತ್ತು ಕೊಚ್ಚಿಕೊಂಡು ಹೋದಾಗ ಅವು ಸಾಮಾನ್ಯವಾಗಿ ಸಂಭವಿಸುತ್ತವೆ. ಅಮೆರಿಕಾ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ ತೆರೆದ ಗುಹೆಯೊಂದು ಮೇಲೈಯಲ್ಲಿ ಭೂಮಿಯ ತೆಳುವಾದ ಪದರದಿಂದ ಮುಚ್ಚಲ್ಪಟ್ಟಿರುತ್ತದೆ. ನದಿ ಹೊಳೆಗಳಲ್ಲಿ ನೀರಿರುವ ಜಾಗದಲ್ಲಿ ಸುಣ್ಣದ ಕಲ್ಲು, ಕಾರ್ಬೊನೇಟ್ ಬಂಡೆ ಅಥವಾ ಉಪ್ಪು ಮುಂತಾದ ಲವಣಾಂಶಗಳಿಂದ ಕೂಡಿದ ಬಂಡೆಗಳಿರುವ ಸ್ಥಳಗಳಲ್ಲಿ ಈ ಸುಳಿಗಳು ಸಾಮಾನ್ಯವಾಗಿರುತ್ತವೆ. ನೀರಿಗಾಗಿ ಬೋರ್ ತೆಗೆಯುವುದು ಸೇರಿದಂತೆ ಹಲವು ಮಾನವ ನಿರ್ಮಿತ ಚಟುವಟಿಕೆಗಳಿಂದ, ನೈಸರ್ಗಿಕ ನೆಲದ ರಚನೆ ಮತ್ತು ನೀರಿನ ಒಳಚರಂಡಿ ಮಾದರಿಗಳನ್ನು ಬದಲಿಸುವ ಮಾನವ ಕ್ರಿಯೆಯಿಂದಲೂ ಈ ಸುಳಿಗಳು ನಿರ್ಮಾಣವಾಗುತ್ತವೆ.
ಈಜುಕೊಳಕ್ಕೆ ಧುಮುಕಿದ ಡಿಫರೆಂಟ್ ಯತ್ನಾಳ್.. ಉದ್ಘಾಟನೆ ಅಂದ್ರೆ ಇದು!
ಸಾಮಾನ್ಯವಾಗಿ ನಾವು ನದಿ ಕೆರೆಗಳಲ್ಲಿ ಸುಳಿಗಳಿರುವುದನ್ನು ಕೇಳಿದ್ದೇವೆ ನೋಡಿದ್ದೇವೆ. ನೀರಿನ ಒತ್ತಡ ಅಲ್ಲಿ ಅತೀವವಾಗಿರುತ್ತದೆ. ಅಲ್ಲದೇ ಈಜಲು ಕರೆ ನದಿಗಳಿಗೆ ತೆರಳಿದ ಮಕ್ಕಳು ದೊಡ್ಡವರು ಸುಳಿಗೆ ಸಿಲುಕಿ ಬಾರದ ಲೋಕ ಸೇರಿದ ಘಟನೆಗಳನ್ನು ಕೇಳಿದ್ದೇವೆ. ಆದರೆ ಈಜುಕೊಳದಲ್ಲೂ ಹೀಗೆ ಧುತ್ತನೇ ಎದುರಾದ ಸುಳಿಯೊಂದು ಮನುಷ್ಯರ ಬಲಿ ಪಡೆದಿದ್ದು ವಿಚಿತ್ರವೇ ಸರಿ. ಒಟ್ಟಿನಲ್ಲಿ ಸಾವು ಯಾವಾಗ ಹೇಗೆ ಸಂಭವಿಸುತ್ತದೆ ಎಂಬುದನ್ನು ಹೇಳಲಾಗದು ಅಲ್ಲವೇ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ