
ಇಸ್ಲಾಮಾಬಾದ್(ಏ.06): ಪಾಕಿಸ್ತಾನದಲ್ಲಿ ಇತ್ತೀಚೆಗೆ ಅವಿಶ್ವಾಸ ನಿರ್ಣಯ ತಿರಸ್ಕರಿಸಿ ಪ್ರಧಾನಿ ಇಮ್ರಾನ್ ಖಾನ್ರನ್ನು ಬಚಾವು ಮಾಡಲು ಯತ್ನಿಸಿದ ಸಂಸತ್ತಿನ ಉಪ ಸ್ಪೀಕರ್ ಖಾಸಿಂ ಖಾನ್ ಸೂರಿ ಅವರ ನಿರ್ಣಯವವನ್ನು ಮರುಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಹೀಗಾಗಿ ಶನಿವಾರ ನಡೆದ ಸಂಸತ್ತಿನ ಕಲಾಪದ ದಾಖಲಾತಿಗಳನ್ನು ನೀಡುವಂತೆ ಅದು ಸರ್ಕಾರಕ್ಕೆ ಸೂಚಿಸಿದೆ ಹಾಗೂ ಬುಧವಾರ ಈ ಕುರಿತ ವಿಚಾರಣೆ ನಡೆಸಲು ತೀರ್ಮಾನಿಸಿದೆ.
ಮಂಗಳವಾರದ ಕಲಾಪದಲ್ಲಿ ಮುಖ್ಯ ನ್ಯಾಯಾಧೀಶ ನ್ಯಾ| ಉಮರ್ ಅಟಾ ಬಂಡಿಯಾಲ್ ಅವರ ನೇತೃತ್ವದ ಪಂಚಸದಸ್ಯ ಪೀಠವು, ಇಮ್ರಾನ್ ಖಾನ್ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ತಿರಸ್ಕಾರ ಹಾಗೂ ಸಂಸತ್ ವಿಸರ್ಜನೆ ಮಾಡಿದ ಅಧ್ಯಕ್ಷರ ನಿರ್ಧಾರದ ಬಗ್ಗೆ ಸ್ವಯಂಪ್ರೇರಿತ ವಿಚಾರಣೆ ಮುಂದುವರಿಸಿತು. ಈ ವೇಳೆ, ‘ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿ ಶುಕ್ರವಾರ ನಡೆದ ಕಲಾಪಗಳ ಎಲ್ಲ ದಾಖಲೆಗಳನ್ನು ನೀಡಿ. ಆಂದು ಉಪಸಭಾಧ್ಯಕ್ಷರು, ನಿರ್ಣಯ ತಿರಸ್ಕರಿಸಿ ನೀಡಿದ ರೂಲಿಂಗ್ನ ಸಾಂವಿಧಾನಿಕ ಪರಿಶೀಲನೆ ನಡೆಸಬೇಕಿದೆ. ಅಂದು ಅವರು ಕೈಗೊಂಡ ನಿರ್ಧಾರ ಸಂವಿಧಾನಾತ್ಮಕವಾಗಿದೆಯೇ ಎಂಬುದರ ಪರಾಮರ್ಶೆ ನಡೆಸಬೇಕು. ಈ ಅಂಶದ ಮೇಲೆಯೇ ಪ್ರಕರಣದ ಹಣೆಬರಹ ನಿರ್ಧಾರವಾಗಲಿದೆ’ ಎಂದು ನ್ಯಾ
ಉಮರ್ ಹೇಳಿದರು.
ಈ ನಡುವೆ ವಾದ ಮಂಡಿಸಿದ ವಿಪಕ್ಷ ಪಿಪಿಪಿ ಪರ ವಕೀಲ ರಾಜಾ ರಬ್ಬಾನಿ ಹಾಗೂ ಪಿಎಂಎಲ್-ಎನ್ ವಕೀಲರು, ‘ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕದೇ ತಿರಸ್ಕರಿಸಿರುವ ಸ್ಪೀಕರ್ ನಿರ್ಧಾರವು ಪರಿಚ್ಛೇದ 95ರ ಪ್ರಕಾರ ನಿಯಮಬಾಹಿರ. ಅವಿಶ್ವಾಸ ನಿರ್ಣಯ ಮಂಡನೆ ಆಗಬೇಕು ಎಂದು 161 ಸದಸ್ಯರು ಬೆಂಬಲಿಸಿದ್ದರು. ಆದರೆ ಈ ಬಗ್ಗೆ ಚರ್ಚೆ ಮಾಡದೇ ನಿರ್ಣಯ ತಿರಸ್ಕರಿಸಲಾಗಿದೆ’ ಎಂದು ದೂರಿದರು. ಬಳಿಕ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ