
ಸಾಮಾನ್ಯವಾಗಿ ವೆಸ್ಟರ್ನ್/ಇಂಡಿಯನ್ ಟಾಯ್ಲೆಟ್ನಲ್ಲಿ ಕೂರುವಾಗ ಇದರೊಳಗಿಂದ ಹಾವು ಬಂದರೆ ಹೇಗಿರಬಹುದು ಎಂಬ ಭಯದ ಯೋಚನೆ ಅನೇಕರನ್ನು ಕಾಡುತ್ತದೆ. ಆದರೆ ಅನೇಕರ ಈ ಭಯವೊಂದು ಈಗ ಥೈಲ್ಯಾಂಡ್ನಲ್ಲಿ ವ್ಯಕ್ತಿಯೊಬ್ಬರ ಬದುಕಿನಲ್ಲಿ ನಿಜವಾಗಿದ್ದು, ಭಯ ಹುಟ್ಟಿಸುತ್ತಿದೆ. ಟಾಯ್ಲೆಟ್ಗೆ ಹೋಗಿ ಕುಳಿತಿದ್ದ ಯುವಕನಿಗೆ ಅದರೊಳಗಿದ್ದ ಹಾವೊಂದು ಕಚ್ಚಿದೆ. ಇದರಿಂದ ಟಾಯ್ಲೆಟ್ ಪೂರ್ತಿ ರಕ್ತದ ಹೊಳೆಯೇ ಹರಿದಿತ್ತು ಎಂದು ವರದಿಯಾಗಿದೆ. ಅದೃಷ್ಟವಶಾತ್ ಆ ಹಾವು ವಿಷಕಾರಿ ಆಗಿರಲಿಲ್ಲ, ಹೀಗಾಗಿ ಆತನ ಜೀವ ಉಳಿದಿದೆ ಎಂದು ವರದಿಯಾಗಿದೆ.
ವೃಷಣಕ್ಕೆ ಕಚ್ಚಿದ ಹೆಬ್ಬಾವು:
ಮಂಗಳವಾರ ಟಾಯ್ಲೆಟ್ ಸೀಟಿನಲ್ಲಿ ಕುಳಿತ ನಂತರ ಥಾಯ್ಲೆಂಡ್ನ ಥಾನತ್ ಥಾಂಗ್ಟೆವಾನನ್ ಎಂಬ ವ್ಯಕ್ತಿಗೆ ವೃಷಣದಲ್ಲಿ ಸಹಿಸಲಾಗದ ನೋವು ಕಾಣಿಸಿಕೊಂಡಿದೆ. ಒಮ್ಮೆಗೆ ಎದ್ದು ನೋಡಿದಾಗ ಟಾಯ್ಲೆಟ್ ಕಮೋಡ್ನಲ್ಲಿ ಭಾರಿ ಗಾತ್ರದ ಹೆಬ್ಬಾವು ಇರುವುದು ಕಾಣಿಸಿಕೊಂಡಿದೆ. ಆದರೆ ಈತ ಕೂರುವ ಮೊದಲು ಟಾಯ್ಲೆಟ್ ಒಳಗೆ ನೋಡಿಲ್ಲವೋ ಅಥವಾ ನೈಸರ್ಗಿಕ ಕರೆಯ ತರಾತುರಿಯಿಂದಾಗಿ ಓಡಿ ಬಂದು ನೋಡದೆಯೇ ಕುಳಿತನೋ ಗೊತ್ತಿಲ್ಲ. ಆದರೆ ಹಾವು ಕಚ್ಚಿದ ಪರಿಣಾಮ ಆತನ ಶೌಚಾಲಯ ಪೂರ್ತಿ ರಕ್ತದಿಂದ ಆವೃತವಾಗಿತ್ತು ಎಂದು ವರದಿಯಾಗಿದೆ.
ಥಾನತ್ ಥಾಂಗ್ಟೆವಾನನ್ ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, 12 ಅಡಿ ಉದ್ದ ಹೆಬ್ಬಾವು ತನ್ನ ಗುಪ್ತಾಂಗಕ್ಕೆ ಅಂಟಿಕೊಂಡಿತ್ತು ಎಂದು ಆತ ಹೇಳಿದ್ದಾನೆ. ನನಗೆ ಏನೋ ಕಚ್ಚುತ್ತಿರುವಂತೆ ಭಾಸವಾಯಿತು. ಅದು ತುಂಬಾ ನೋವಿನಿಂದ ಕೂಡಿತ್ತು ಆದ್ದರಿಂದ ಏನಿರಬಹುದು ಎಂದು ನೋಡಲು ನಾನು ಶೌಚಾಲಯದ ಕಮೋಡ್ಗೆ ನನ್ನ ಕೈಗಳನ್ನು ಹಾಕಿದಾಗ ನಾನು ಹಿಡಿದಿರುವುದು ಹಾವು ಎಂದು ತಿಳಿದು ಆಘಾತವಾಯ್ತು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಟಾಯ್ಲೆಟ್ ಬ್ರಶ್ನಿಂದ ಹೊಡೆದು ಹಾವಿನಿಂದ ಬಿಡಿಸಿಕೊಂಡ ಯುವಕ:
ಹಾವು ನನ್ನ ಆ ಭಾಗಕ್ಕೆ ದೃಢವಾಗಿ ಅಂಟಿಕೊಂಡಿತು ಮತ್ತು ತನ್ನ ಹಿಡಿತವನ್ನು ಬಿಗಿಗೊಳಿಸಿತ್ತು. ನಂತರ ಟಾಯ್ಲೆಟ್ ಬ್ರಶ್ ತೆಗೆದು ಅದರ ತಲೆಗೆ ಹೊಡೆದಾಗ ಅದು ತನ್ನ ಹಿಡಿತವನ್ನು ಸಡಿಲಗೊಳಿಸಿತ್ತು ಎಂದು ಟ್ಯಾಂಗ್ಟೆವಾನನ್ ಹೇಳಿದ್ದಾರೆ. ಹಾವಿನ ಕಡಿತ ಭಯಾನಕ ನೋವಿನಿಂದ ಕೂಡಿತ್ತು. ನಜಿವಾಗಿಯೂ ಅದೊಂದು ತೀವ್ರವಾದ ಸಹಿಸಲಾಗದ ನೋವು, ಅಲ್ಲಿ ಎಲ್ಲೆಡೆ ರಕ್ತ ಚೆಲ್ಲಿತ್ತು. ಅದರಲ್ಲೂ ಟಾಯ್ಲೆಟ್ನಲ್ಲಿ ಹೆಬ್ಬಾವನ್ನು ನೋಡಿದಾಗ ನನ್ನ ಭಯ ಇನ್ನಷ್ಟು ಹೆಚ್ಚಾಯ್ತು ಎಂದು ಟ್ಯಾಂಗ್ಟೆವಾನನ್ ಹೇಳಿದ್ದಾರೆ ಎಂದು ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಟ್ಯಾಂಗ್ಟೆವಾನನ್ ಥೈಲ್ಯಾಂಡ್ನ ಸಮುತ್ ಪ್ರಕಾನ್ ಪ್ರಾಂತ್ಯದ ನಿವಾಸಿಯಾಗಿದ್ದು, ಹಾವಿನ ಹಿಡಿತದಿಂದ ಬಿಡಿಸಿಕೊಂಡ ಆತ ನಂತರ ಟಾಯ್ಲೆಟ್ ತೊಳೆಯುವ ಬ್ರಷ್ನಿಂದ ಹಾವನ್ನು ಹೊಡೆದು ಸಾಯಿಸುವಲ್ಲಿ ಯಶಸ್ವಿಯಾಗಿದ್ದಾನೆ. ನಂತರ ಅದನ್ನು ವಿಲೇವಾರಿ ಮಾಡಲು ಸಿಬ್ಬಂದಿಗೆ ಕರೆ ಮಾಡಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಅವರ ಫೇಸ್ಬುಕ್ ಪೋಸ್ಟ್ನಲ್ಲಿ ಶೌಚಾಲಯದ ಸೀಟು ಮತ್ತು ಸ್ನಾನಗೃಹದ ನೆಲ ರಕ್ತದಿಂದ ಕೂಡಿರುವುದನ್ನು ತೋರಿಸಲಾಗಿದೆ.
ದಾಳಿಯ ನಂತರ ತಾನು ತನ್ನ ಪಕ್ಕದ ಮನೆಯ ನೆರೆಹೊರೆಯವರಿಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದ್ದಾಗಿ ಥಾಯ್ ವ್ಯಕ್ತಿ ಹೇಳಿದ್ದಾರೆ. ಅದೃಷ್ಟವಶಾತ್, ಹೆಬ್ಬಾವು ವಿಷಪೂರಿತ ಹಾವು ಅಲ್ಲ ಮತ್ತು ಅದಕ್ಕೆ ಹೊಲಿಗೆಗಳ ಅಗತ್ಯವಿರಲಿಲ್ಲ. ಒಂದು ವೇಳೆ ವಿಷಕಾರಿಯಾಗಿದ್ದಾರೆ ಜೀವವೇ ಹೊರಟು ಹೋಗುತ್ತಿತ್ತು ಎಂದು ಆತ ಹೇಳಿದ್ದಾರೆ. ನಂತರ ಆಸ್ಪತ್ರೆಯಲ್ಲಿ ಟೆಟನಸ್ ಚುಚ್ಚುಮದ್ದನ್ನು ಪಡೆದ ನಂತರ ತನ್ನನ್ನು ವೈದ್ಯರು ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು ಅದು ವಿಷಪೂರಿತ ಹಾವು ಅಲ್ಲದಿರುವುದು ನನ್ನ ಅದೃಷ್ಟ ಒಂದು ನಾಗರಹಾವು ಆಗಿದ್ದರೆ ಜೀವವೇ ಹೋಗುತ್ತಿತ್ತು. ಎಂದು ಟ್ಯಾಂಗ್ಟೆವಾನನ್ ಹೇಳಿದ್ದಾಗೆ ಯುಕೆ ಮಿರರ್ ವರದಿ ಮಾಡಿದೆ.
ಇದನ್ನೂ ಓದಿ: ಹಿಟಾಚಿಯಲ್ಲಿ ಶ್ವಾನದ ಜಾಲಿ ರೈಡ್: ಸುತ್ತು ತಿರುಗಿಸಲು ಮಕ್ಕಳಂತೆ ಹಠ ಮಾಡುವ ಶ್ವಾನ
ಇದನ್ನೂ ಓದಿ: ಅಮಿತ್ ಶಾ 'ಸೋದರಳಿಯ'ನಿಗೆ 'ಮಾವನ ಮನೆ' ಗತಿ! ಕೋಟಿ ಕೋಟಿ ವಂಚಿಸಿದ ನಕಲಿ 'ಅಜಯ್ ಶಾ' !
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ