
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯುತ್ತಿರೋ ವೇಳೆಯೇ ಬಾಂಬ್ ಸ್ಫೋಟ ನಡೆದಿದೆ ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಪಾಕಿಸ್ತಾನದ ಮಿಡಿಯಾ ಏಜೆನ್ಸಿ 'ಡಾನ್' ವರದಿ ಪ್ರಕಾರ, ಪಖ್ತುಂಖ್ವಾ ಪ್ರಾಂತ್ಯದಲ್ಲಿ ಬಾಂಬ್ ಸ್ಪೋಟವಾಗಿದೆ. ಪಕ್ಕಾ ಪ್ಲಾನ್ ಮಾಡಿಕೊಂಡೇ ಈ ಸ್ಪೋಟ ನಡೆಸಲಾಗಿದೆ ಎಂದು ಪಾಕಿಸ್ತಾನದ ಪೊಲೀಸರು ಹೇಳಿಕೆ ನೀಡಿದ್ದಾರೆ. ಸದ್ಯ ಬಾಂಬ್ ಸ್ಫೋಟದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಭಯಬೀತ ಜನರು ಮೈದಾನದಿಂದ ಓಡಿ ಬರುತ್ತಿರೋದನ್ನು ಕಾಣಬಹುದಾಗಿದೆ.
ಪಾಕ್ ವರದಿಗಳ ಪ್ರಕಾರ, ಪಖ್ತುಂಖ್ವಾ ಪ್ರಾಂತ್ಯದ ಬಜೌರ್ ಜಿಲ್ಲೆಯ ಖಾರ್ ತಹಸೀಲ್ ಎಂಬ ಪ್ರದೇಶದ ಕ್ರಿಕೆಟ್ ಗ್ರೌಂಡ್ನಲ್ಲಿ ಸ್ಪೋಟ ಸಂಭವಿಸಿದೆ. ಸ್ಪೋಟದ ಬಳಿಕ ಆಟಗಾರರು ಸಹ ಮೈದಾನದಿಂದ ಕಾಲ್ಕಿತ್ತಿದ್ದಾರೆ. ಇನ್ನು ಪಂದ್ಯ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರು ಸಹ ಭಯದಿಂದ ಓಡಿದ್ದಾರೆ.
ಒಂದು ವಾರದ ಹಿಂದೆಯಷ್ಟೇ ಖೈಬರ್ ಪಖ್ತುನ್ಖ್ವಾದ ಪೊಲೀಸ್ ಠಾಣೆಯ ಮೇಲೆ ಕ್ವಾಡ್ಕಾಪ್ಟರ್ ಬಳಸಿ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಓರ್ವ ಪೊಲೀಸ್ ಕಾನ್ಸ್ಟೇಬಲ್ ಮತ್ತು ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಇದೇ ಪ್ರದೇಶದಲ್ಲಿ ಮತ್ತೊಂದು ದಾಳಿ ನಡೆದಿರೋದು ಜನತೆಯಲ್ಲಿ ಭಯ ಹುಟ್ಟಿಸಿದೆ.
ಇದನ್ನೂ ಓದಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಮುಸಾವೀರ್ ಪ್ರಕ್ರಿಯೆ ಮರುಸೃಷ್ಟಿ, ಬಟ್ಟೆ ಬದಲಿಸಿದ ಮಸೀದಿಯ ಮಹಜರ್!
ಪಾಕಿಸ್ತಾನ ಮಿಡಿಯಾ ಏಜೆನ್ಸಿ ಡಾನ್ ಜೊತೆ ಮಾತನಾಡಿರುವ ಬಜೌರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವಕಾಸ್ ರಫೀಕ್, ಇದೊಂದು ಪೂರ್ವಯೋಜಿತ ಘಟನೆಯಾಗಿದೆ. ಪ್ಲಾನಿಂಗ್ ಮಾಡಿಕೊಂಡೇ ಕ್ರಿಕೆಟ್ ಮೈದಾನದಲ್ಲಿ ಸ್ಫೋಟ ನಡೆಸಲಾಗಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಮೃತರಾಗಿದ್ದು, ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಾ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸ್ಥಳೀಯ ಪೊಲೀಸ್ ಅಧಿಕಾರಿಗಳು ಭಯೋತ್ಪಾದಕರು ಠಾಣೆ ಮೇಲೆಯೇ ದಾಳಿ ನಡೆಸಲು ಪ್ರಯತ್ನಿಸಿದ್ದರು. ಆದ್ರೆ ಉಗ್ರರ ಈ ಸಂಚು ವಿಫಲವಾಗಿತ್ತು. ಈ ಹಿನ್ನೆಲೆ ಕ್ರಿಕೆಟ್ ಮೈದಾನದಲ್ಲಿ ವಿಧ್ವಂಸಕ ಕೃತ್ಯ ಎಸೆಗಲಾಗಿದೆ. ಈವರೆಗೆ ಯಾವುದೇ ಸಂಘಟನೆಗಳು ಘಟನೆಯ ಹೊಣೆಯನ್ನು ತೆಗೆದುಕೊಂಡಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ತಂತ್ರಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: 14 ಪಾಕ್ ಉಗ್ರರು, 400 Kg ಆರ್ಡಿಎಕ್ಸ್; ಮುಂಬೈನಲ್ಲಿ 1 ಕೋಟಿ ಜನ ಸಾಯೋದಾಗಿ ಪುಂಗಿದ್ದ ಜ್ಯೋತಿಷಿ ಸ್ಥಿತಿ ನೋಡಿ!
ಇದನ್ನೂ ಓದಿ: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಉಗ್ರರಿಗೆ ವಿದೇಶಿ ಫಂಡಿಂಗ್; ಯಾವ ದೇಶದ ಹಣ ಗೊತ್ತಾ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ