
ಸೌತ್ ಕೊರಿಯಾ(ಜ.02) ದಕ್ಷಿಣ ಕೊರಿಯಾದಲ್ಲಿ ನಡೆದ ಜೆಜು ವಿಮಾನ ಅಪಘಾತದಲ್ಲಿ 179 ಮಂದಿ ಮೃತಪಟ್ಟಿದ್ದಾರೆ. ಅದೃಷ್ಠವಶಾತ್ ಇಬ್ಬರು ಬದುಕುಳಿದಿದ್ದಾರೆ. ಆಪ್ತರ ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಾಗಿದ್ದಾರೆ. ಒಂದೊಂದು ಕುಟುಂಬ ಕಣ್ಣೀರ ಕತೆ ಮನಸ್ಸು ಭಾರವಾಗಿಸುತ್ತಿದೆ. ಈ ದುರಂತದಲ್ಲಿ ಸೌತ್ ಕೊರಿಯಾದ ಯೆನ್ಗ್ವಾಂಗ್ನ ಕುಟುಂಬವೊಂದು ನಿರ್ನಾಮವಾಗಿದೆ. ಕುಟುಂಬದ ಎಲ್ಲಾ ಸದಸ್ಯರು 2024ರ ವರ್ಷದ ಪ್ರವಾಸ ಕೈಗೊಂಡಿದ್ದರು. 9 ಮಂದಿ ಕುಟುಂಬ ಸದಸ್ಯರ ಪ್ರವಾಸದಿಂದ ಮರಳಿ ಬರಲಿಲ್ಲ. ವಿಮಾನ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಇದರ ಪರಿಣಾಮ ಇವರ ಮನೆಯಲ್ಲಿದ್ದ ನಾಯಿ ಕಳೆದ ಕೆಲ ದಿನಗಳಿಂದ ಅನ್ನ, ನೀರಿಲ್ಲದೆ ಅನಾಥವಾಗಿದೆ. ಸ್ಥಳೀಯರು ನೀಡಿದ ಮಾಹಿತಿಯಿಂದ ದಕ್ಷಿಣ ಕೊರಿಯಾದ ಪ್ರಾಣಿ ಸಂಘಟನೆ ಈ ನಾಯಿಯನ್ನು ರಕ್ಷಣೆ ಮಾಡಿದೆ.
ಅಜ್ಜ, ಅಜ್ಜಿ, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ 9 ಮಂದಿ ಥಾಯ್ಲೆಂಡ್ನ ಬ್ಯಾಂಗ್ಕಾಕ್ಗೆ ಪ್ರವಾಸ ಕೈಗೊಂಡಿದ್ದರು. ವರ್ಷದಲ್ಲಿ ಒಂದು ಪ್ರವಾಸ ಹೋಗುತ್ತಿದ್ದ ಈ ಕುಟುಂಬ 2023ರಲ್ಲಿ ಪ್ರವಾಸ ಮಾಡಲು ಸಾಧ್ಯವಾಗಿರಲಿಲ್ಲ. 2024ರ ಡಿಸೆಂಬರ್ ತಿಂಗಳಲ್ಲಿ ಬ್ಯಾಂಗ್ಕಾಕ್ ಪ್ರವಾಸ ಮಾಡಿ ಬೀಚ್ಗಳಲ್ಲಿ ಈ ಕುಟುಂಬ ಎಂಜಾಯ್ ಮಾಡಿತ್ತು. ಪ್ರವಾಸ ಮುಗಿಸಿ ಬ್ಯಾಂಗ್ಕಾಕ್ನಿಂದ ಸೌತ್ ಕೊರಿಯಾಗೆ ಜೇಜು ವಿಮಾನದ ಮೂಲಕ ಮರಳಿತ್ತು. ಆದರೆ ಈ ವಿಮಾನ ದುರಂತಕ್ಕೀಡಾಗಿತ್ತು.
ನನ್ನ ಕೊನೆ ಮಾತು ಹೇಳಲೇ? ವಿಮಾನ ದುರಂತಕ್ಕೂ ಮುನ್ನ ಪ್ರಯಾಣಿಕನ ಮನಕಲುಕಿದ ಸಂದೇಶ!
ಕುಟುಬಂದ 9 ಸದಸ್ಯರು ಈ ವಿಮಾನ ಅಪಘಾತದಲ್ಲಿ ಮಡಿದಿದ್ದಾರೆ. ಈ ಪೈಕಿ 79 ವರ್ಷದ ಹಿರಿಯರೂ ಹಾಗೂ ಕುಟುಂಬದ ಅತೀ ಕಿರಿಯ 6 ವರ್ಷದ ಹೆಣ್ಣು ಮಗಳು ಸೇರಿದ್ದಾಳೆ. 79 ವರ್ಷದ ಅಜ್ಜನ ನಾಯಿ ಸಾಕಿದ್ದರು. ಇದಕ್ಕೆ ಪಡ್ಡಿಂಗ್ ಎಂದು ಹೆಸರಿಟ್ಟಿದ್ದರು. ಈ ಕುಟುಂಬದ ದೂರದ ಸಂಬಂಧಿ ಅಂತ್ಯಸಂಸ್ಕಾರದ ವೇಳೆ ಹಾಜರಾಗಿದ್ದರು. ಈ ವೇಳೆ ಮಡಿದ ಕುಟುಂಬ ಸದಸ್ಯರ ಮಾಹಿತಿ ಪಡೆಯಲಾಗಿತ್ತು. ಈ ವೇಳೆ ಮನೆಯಲ್ಲಿ ನಾಯಿ ಇತ್ತು ಅನ್ನೋ ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ಆಧರಿಸಿ ಸೌತ್ ಕೊರಿಯಾ ಪ್ರಾಣಿ ಸಂಘಟನೆ ಮಡಿದ ಕುಟುಂಬದ ವಿಳಾಸಕ್ಕೆ ತಲುಪಿದೆ. ಮಾಲೀಕ, ಕುಟುಂಬ ಸದಸ್ಯರಿಲ್ಲದ ಪಡ್ಡಿಂಗ್ ನಾಯಿ ಅನಾಥವಾಗಿತ್ತು. ಆಹಾರ ನೀರು ಸರಿಯಾಗಿ ಸಿಗದೆ ಬಳಸಿತ್ತು. ಸ್ಥಳೀಯರು ಆಹಾರ ನೀರು ನೀಡಿದರೂ ನಾಯಿ ಮಾಲೀಕರಿಲ್ಲದೆ ಸರಿಯಾಗಿ ಸೇವಿಸಿಲ್ಲ. ಅನಾಥವಾದ ನಾಯಿಯನ್ನು ಸಂಘಟನೆ ರಕ್ಷಿಸಿದೆ.
ಈ ನೋವಿನ ಅಧ್ಯಾಯವನ್ನು ಪ್ರಾಣಿ ಸಂಘಟನೆ ಸದಸ್ಯರು ಬಿಚ್ಚಿಟ್ಟಿದ್ದಾರೆ. ಮಾಹಿತಿ ತಿಳಿದು ನಾವು 9 ಮಂದಿ ಮಡಿದ ಕುಟುಂಬ ಸದಸ್ಯರ ಗ್ರಾಮಕ್ಕೆ ತೆರಳಿದ್ದೆವು. ಅಜ್ಜ ಅಜ್ಜಿ ಇದ್ದ ಮನೆ, ಅದರ ಪಕ್ಕದಲ್ಲಿ ಮಕ್ಕಳು ಮೊಮ್ಮಕ್ಕಳ ಮನೆ ಇತ್ತು. ನಾವು ನಾಯಿ ಸಾಕಿದ ಅಜ್ಜನ ಮನೆಗೆ ತೆರಳುತ್ತಿದ್ದಂತೆ ಹಾಲ್ನಲ್ಲಿದ್ದ ನಾಯಿ ಓಡೋಡಿ ಬಂದಿತ್ತು. ಆದರೆ ಹತ್ತಿರ ಬರುತ್ತಿದ್ದಂತೆ ಇದು ಮಾಲೀಕನಲ್ಲ ಅನ್ನೋದು ಗೊತ್ತಾಗಿದೆ. ಹೀಗಾಗಿ ಬೊಗಳಲು ಆರಂಭಿಸಿದೆ. ನಾಯಿಗೆ ಆಹಾರ ನೀಡಿದೆವು. ನೀರು ನೀಡಲಾಯಿತು. ಆದರೆ ಕೆಲ ಹೊತ್ತು ನಾವು ನೀಡಿದ ಆಹಾರ, ನೀರು ಮುಟ್ಟಿಲ್ಲ. ಹೀಗೆ ಸರಿಯಾಗಿ ಆಹಾರ ಸೇವಿಸದೆ ನಾಯಿ ಬಳಲಿತ್ತು.ನಿಧಾನಕ್ಕೆ ನಾಯಿ ಜೊತೆ ಆತ್ಮೀಯವಾಗಿ ನಡೆದುಕೊಂಡೆವು. ಬಳಿಕ ಆಹಾರ ತಿನ್ನಿಸಿದೆವು. ನಾಯಿಯನ್ನು ಮನೆಯಿಂದ ರಕ್ಷಿಸಿ ಕರೆ ತಂದಿದ್ದೇವೆ ಎಂದು ಸಂಘಟನೆ ಸಿಬ್ಬಂದಿಗಳು ಹೇಳಿದ್ದಾರೆ. ನಾಯಿಯನ್ನು ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತದೆ. ಮಡಿದ ಕುಟುಂಬದ ಸದಸ್ಯರು ನಾಯಿ ಆರೈಕೆ ಮಾಡಲು ಮುಂದೆ ಬಂದರೆ ನೀಡಲಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕೊರಿಯಾ ವಿಮಾನ ಪತನಕ್ಕೆ ಕಾರಣವಾಯ್ತಾ ಬೆಲ್ಲಿ ಲ್ಯಾಂಡಿಂಗ್? ಏನಿದು ತುರ್ತು ಭೂಸ್ಪರ್ಶ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ