India's Aid to Afghan : ಅಫ್ಘಾನ್‌ಗೆ ಭಾರತದ ನೆರವಿಗೆ ಪಾಕ್‌ ಅಡ್ಡಿ

By Suvarna NewsFirst Published Dec 3, 2021, 11:35 AM IST
Highlights

ಪಾಕಿಸ್ತಾನ ತಾನು ಉದ್ಧಾರ ಆಗಲ್ಲ. ಇತರರನ್ನು ಉದ್ಧಾರವಾಗುವುದಕ್ಕೆ ಬಿಡುವುದು ಇಲ್ಲ. ಗಡಿಯಲ್ಲಿ ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುವ ಪಾಕ್‌ ಈಗ ಅಫ್ಘಾನ್‌ಗೆ ನೆರವು ನೀಡಲು ಮುಂದಾದ ಭಾರತದ ನಿರ್ಧಾರಕ್ಕೆ ಅಡ್ಡಗಾಲಿಟ್ಟಿದೆ.

ನವದೆಹಲಿ(ಡಿ.3):  ಆಹಾರ ಕೊರತೆ ಅನುಭವಿಸುತ್ತಿರುವ ಅಫ್ಘಾನಿಸ್ತಾನಕ್ಕೆ 50 ಸಾವಿರ ಮೆಟ್ರಿಕ್‌ ಟನ್‌ನಷ್ಟು ಗೋಧಿ ನೀಡಲು ಭಾರತ ಮುಂದಾಗಿತ್ತು. ಆದರೆ ಈ ಯೋಜನೆಗೆ ಈಗ ಪಾಕ್‌ ಅಡ್ಡಗಾಲಾಗಿದೆ. ಭಾರತ ಪಾಕ್‌ ನಡುವಿನ ವಾಘಾ ಗಡಿ(Wagah border) ದಾಟಿ ಪಾಕಿಸ್ತಾನದ ರಸ್ತೆಗಳ ಮೂಲಕ ಸಾಗಿ ಅಫ್ಘಾನಿಸ್ತಾನಕ್ಕೆ ತೆರಳುವ ಯೋಜನೆ ಇದಾಗಿತ್ತು. ಆದರೆ ಭಾರತದ ಟ್ರಕ್‌ಗಳು ತನ್ನ ನೆಲದಲ್ಲಿ ಸಂಚರಿಸುವುದಕ್ಕೆ ಪಾಕಿಸ್ಥಾನ ಅನುಮತಿ ನಿರಾಕರಿಸಿದೆ. ಭಾರತದಿಂದ ಅಪ್ಘಾನಿಸ್ತಾನಕ್ಕೆ ಗೋಧಿಯ ಸಾಗಣೆಗೆ ಹಾಗೂ ಜೀವ ಉಳಿಸುವ ಔಷಧಿಗಳ ರವಾನೆಗೆ ಮಾನವೀಯ ನೆಲೆಯಲ್ಲಿ ಅವಕಾಶ ಒದಗಿಸುವುದಾಗಿ  ಕಳೆದ ವಾರ ಪಾಕಿಸ್ತಾನ ಹೇಳಿತ್ತು. ಆದರೆ  ಈಗ ಮತ್ತೆ ತನ್ನ ನಿರ್ಧಾರ ಬದಲಿದಂತಿದೆ.

ಅಫ್ಘಾನ್‌ಗೆ ನೆರವು ನೀಡುವ ಸಲುವಾಗಿ ಭಾರತ ನೀಡಿದ ಸಲಹೆ ಒಪ್ಪಿಕೊಳ್ಳುವಂತದಲ್ಲ ಎಂದು  ಪಾಕಿಸ್ತಾನದಲ್ಲಿ ರಾಜತಾಂತ್ರಿಕ ವಲಯವು ನಿರ್ಧರಿಸಿವೆ ಎಂದು  ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ವಾಘಾ ಗಡಿಯಿಂದ ಆಚೆಗೆ ಭಾರತದ ಟ್ರಕ್‌ಗಳು ಪ್ರವೇಶಿಸುವಂತಿಲ್ಲ, ವಾಘಾ ವರೆಗೆ ಭಾರತದ ಟ್ರಕ್‌ಗಳು ಗೋಧಿ ಸಾಗಿಸಿದರೆ ಅಲ್ಲಿಂದ ಅಫ್ಘಾನಿಸ್ತಾನಕ್ಕೆ ಪಾಕ್‌ನ ಟ್ರಕ್‌ಗಳು ಗೋಧಿಯನ್ನು ಸಾಗಣೆ ಮಾಡಲಿ ಎಂಬುದು ಪಾಕ್‌ನ ಚಿಂತನೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಆದರೆ ಭಾರತ, ಅಫ್ಘಾನಿಸ್ತಾನಕ್ಕೆ ಗೋಧಿ  ಸಾಗಣೆಗೆ ತನ್ನದೇ ಆದ ಟ್ರಕ್‌ಗಳನ್ನು ಬಳಸಲಾಗುವುದು ಎಂದು ಹೇಳಿದೆ. ಹಾಗದ್ದಲ್ಲಿ ಮಾತ್ರ ಈ ಸಹಾಯವು ಉದ್ದೇಶಿತ ಫಲಾನುಭವಿಗಳನ್ನು ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಬಹುದು ಎಂಬುದು ಭಾರತದ ನಿರ್ಧಾರವಾಗಿದೆ. 

viral video: ರೊಟ್ಟಿ ಮಾಡುತ್ತಿರುವ ಪಾಕ್‌ ಬಾಲಕಿಯ ವಿಡಿಯೋ ವೈರಲ್‌

ಭಾರತದ ಈ ಸಹಾಯವು ಬೇರೆಡೆ ಸೇರದೆ ಉದ್ದೇಶಿತ ಫಲಾನುಭವಿಗಳನ್ನು ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಲು ಭಾರತ ಉತ್ಸುಕವಾಗಿದ್ದು, ವಿಶ್ವಾಸಾರ್ಹ ಅಂತಾರಾಷ್ಟ್ರೀಯ ಏಜೆನ್ಸಿ(International Agency) ಮೂಲಕ ಪರಿಹಾರ ಸಾಮಗ್ರಿಗಳನ್ನು ವಿತರಿಸಲು ಬಯಸುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ ಭಾರತದಿಂದ ಅಫ್ಘಾನಿಸ್ತಾನಕ್ಕೆ ಹೋಗುವ ಔಷಧಿ ಹಾಗೂ ಆಹಾರ ಸಾಮಗ್ರಿ ಹೊತ್ತೊಯ್ಯುವ ಈ ಟ್ರಕ್‌ಗಳು ವಿಶ್ವಸಂಸ್ಥೆಯ(United Nations) ವಿಶ್ವ ಆಹಾರ ಕಾರ್ಯಕ್ರಮ(World Food Program) ಹೆಸರಿನ ಬ್ಯಾನರ್‌ನಡಿ ಹೋಗಲಿ ಎಂದು ಪಾಕ್‌ ಹೇಳಿದೆ. ಪಾಕಿಸ್ತಾನವೂ ಭಾರತದ ಈ ಪ್ರಸ್ತಾಪವನ್ನು ಒಂದು ಷರತ್ತು ಎಂದು ಭಾವಿಸುವುದಿಲ್ಲ. ಬದಲಿಗೆ ಮಾನವೀಯ ನೆರವನ್ನು ಸುಲಭಗೊಳಿಸುವ ವಿಧಾನ ಎಂದು ಪಾಕ್‌ ಭಾವಿಸುತ್ತದೆ ಎಂದು ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ. 

ಪಾಕಿಸ್ತಾನದ ಮೂಲಕ ಅಫ್ಘಾನಿಸ್ತಾನ ಮತ್ತು ಭಾರತದ ನಡುವೆ ಯಾವುದೇ ದ್ವಿಮುಖ ವ್ಯಾಪಾರವಿಲ್ಲದ ಕಾರಣ, ಗೋಧಿ ಸಾಗಣೆಗೆ ತನ್ನ ಟ್ರಕ್‌ಗಳನ್ನು ಬಳಸಲಾಗದು ಎಂದು ಭಾರತಕ್ಕೂ ತಿಳಿದಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ. ಪಾಕಿಸ್ತಾನದ ಮೂಲಕ ಅಫ್ಘಾನಿಸ್ತಾನ ಮತ್ತು ಭಾರತದ ನಡುವೆ ನೇರ ವ್ಯಾಪಾರವಿಲ್ಲದ ಕಾರಣ ಅಫ್ಘಾನ್ ಟ್ರಕ್‌ಗಳಲ್ಲಿ ಸಾಗಿಸುವ ಆಯ್ಕೆಯು ಸಾಧ್ಯವಿಲ್ಲ ಎಂದು ಅವರು ಹೇಳಿದರು.  ಈ ವಿಚಾರಕ್ಕೆ ಸಂಬಂಧಿಸಿದಂತೆ ಚೆಂಡು ಭಾರತದ ಅಂಗಳದಲ್ಲಿದೆ. ನಮ್ಮ ಕಡೆಯಿಂದ ಯಾವುದೇ ವಿಳಂಬವಿಲ್ಲ" ಎಂದು ಅವರು ಹೇಳಿದ್ದಾರೆ. 

Man Arrested For Spying: ಪಾಕಿಸ್ತಾನ ಪರ ಬೇಹುಗಾರಿಕೆ : ಓರ್ವ ಸೆರೆ!

ಅಫ್ಘಾನ್‌ನಲ್ಲಿ ತಾಲಿಬಾನಿಗಳ ಅಟ್ಟಹಾಸದಿಂದಾಗಿ ಆರ್ಥಿಕ ವ್ಯವಸ್ಥೆ ಕುಸಿದು ಹೋಗಿದ್ದು, ಅರಾಜಕತೆ ನಿರ್ಮಾಣವಾಗಿದೆ. ತಾಲಿಬಾನ್‌ ಸಂಘಟನೆಯನ್ನು ಬುಡ ಸಮೇತ ಕಿತ್ತು ಹಾಕುವುದಾಗಿ ಹೇಳಿದ ಅಮೆರಿಕಾ ಎರಡು ದಶಕಗಳ ಕಾಲ ಅಮೆರಿಕಾದಲ್ಲಿ ಮಿಲಿಟರಿ ನೆಲೆಯನ್ನು ಸ್ಥಾಪಿಸಿ ತಾಲಿಬಾನ್‌ ವಿರುದ್ಧ ಯುದ್ಧ ಸಾರಿದ್ದರು. ಆದರೆ ಇತ್ತೀಚೆಗೆ ತನ್ನ ಸೇನೆಯನ್ನು ಅಮೆರಿಕಾ ಹಿಂಪಡೆದಿದ್ದು, ತಾಲಿಬಾನಿಗರು ಇಡೀ ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಸರಕಾರವನ್ನು ಕಿತ್ತೆಸೆದು ಇಸ್ಲಾಮಿಕ್‌ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಆರ್ಥಿಕತೆಯೂ ನೆಲಕಚ್ಚಿದ್ದು ವಿವಿಧ ರಾಷ್ಟ್ರಗಳ ಧನ ಸಹಾಯದಿಂದ ನಡೆಯುತ್ತಿದ್ದ ಅಫ್ಘಾನಿಸ್ತಾನದ ಮುಂದಿನ ದಿನಗಳು ಇನ್ನೂ ಘೋರವಾಗಿವೆ. ಅಲ್ಲಿನ ಜನರು ನಿತ್ಯದ ಕೂಳಿಗೂ ಪರದಾಡುವಂತಾಗಿದ್ದು, ಸಹಾಯಕ್ಕಾಗಿ ವಿಶ್ವದ ಬೇರೆ ದೇಶಗಳತ್ತ ಕೈ ಚಾಚುವಂತಾಗಿದೆ. 
 

click me!