
ಸಿಂಗಾಪುರ (ಮಾ.24): ಪಾಕಿಸ್ತಾನವು ಬಹುತೇಕ ಉದ್ಯಮ ಮಟ್ಟದಲ್ಲಿ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ. ಇನ್ನು ಮುಂದೆ ಉಗ್ರವಾದವನ್ನು ಸಹಿಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಎಚ್ಚರಿಕೆ ನೀಡಿದ್ದಾರೆ. ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಭಾರತ ಏಕೆ ಮುಖ್ಯ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ದೇಶವು ಸ್ಥಿರವಾದ ನೆರೆಹೊರೆ ಬಯಸುತ್ತದೆ.
ಪಾಕಿಸ್ತಾನವು ಉದ್ಯಮ ಮಟ್ಟದಲ್ಲಿ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವುದು ಸರಿಯಲ್ಲ. ಇದರಿಂದ ಕೈಗಾರಿಕಾ ಬೆಳವಣಿಗೆಗೆ ದೊಡ್ಡ ಆಘಾತ ಉಂಟಾಗಬಹುದು. ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವವರೊಂದಿಗೆ ವ್ಯವಹಾರ ಮಾಡುವುದು ಸಮಂಜಸವಲ್ಲ. ಭಾರತವು ಯಾವುದೇ ತೊಂದರೆಯನ್ನು ಸಹಿಸುವುದಿಲ್ಲ ಎಂದು ಹೇಳಿದರು.
ಬೆದರಿಸುವವರು ಹಣ, ಕೋವಿಡ್ ಲಸಿಕೆ ನೀಡೋಲ್ಲ: ಭಾರತ ತನ್ನ ಪಕ್ಕದ ರಾಷ್ಟ್ರಗಳಿಗೆ ಬೆದರಿಕೆ ಒಡ್ಡುವ ದೊಡ್ಡ ದೇಶ ಎಂಬ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಹೇಳಿಕೆಗೆ ತಿರುಗೇಟು ನೀಡಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, ‘ಬೆದರಿಕೆ ಹಾಕುವವರು ಸಂಕಷ್ಟದಲ್ಲಿರುವ ನೆರೆ ಹೊರೆಯ ದೇಶಗಳಿಗೆ 37000 ಕೋಟಿ ರು. ನೆರವು ನೀಡುತ್ತಿರಲಿಲ್ಲ, ಕೋವಿಡ್ ಲಸಿಕೆ ಕೊಡಲ್ಲ’ ಎಂದಿದ್ದಾರೆ. ಕಾರ್ಯಕ್ರಮವೊಂದರ ವೇಳೆ ಹಿಂದೂ ಮಹಾಸಾಗರ ಪ್ರದೇಶದಲ್ಲಿನ ನೆರೆಯ ರಾಷ್ಟ್ರಗಳಿಗೆ ಭಾರತ ಬೆದರಿಕೆ ಒಡ್ಡುತ್ತಿದೆ ಎಂಬ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು ಅವರ ಆರೋಪದ ಕುರಿತ ಪ್ರಶ್ನೆಗೆ ಜೈಶಂಕರ್ ಪ್ರತಿಕ್ರಿಯಿಸಿದರು.
ಡೀಪ್ಫೇಕ್ ತಂತ್ರಜ್ಞಾನ ಬಳಸಿ ಇಟಲಿ ಪ್ರಧಾನಿ ಮೆಲೋನಿ ಸೆಕ್ಸ್ ವಿಡಿಯೋ: ಪ್ರಕರಣ ದಾಖಲು
‘ನೆರೆಯ ದೇಶಗಳ ಸಂಕಷ್ಟದ ಸಮಯದಲ್ಲಿ ಸಕಾಲಿಕ ನೆರವು ನೀಡುವಲ್ಲಿ ಭಾರತ ಸಕ್ರಿಯ ಪಾತ್ರ ವಹಿಸಿದೆ. ಭಾರತ ಬೆದರಿಕೆ ಹಾಕುವ ದೇಶವಾಗಿದ್ದರೆ ನೆರೆಯ ರಾಷ್ಟ್ರಗಳ ಸಂಕಷ್ಟದ ಸಮಯದಲ್ಲಿ 4.5 ಬಿಲಿಯನ್ ಡಾಲರ್ ಆರ್ಥಿಕ ನೆರವು ನೀಡುತ್ತಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಇತರ ದೇಶಗಳಿಗೆ ಭಾರತ ಲಸಿಕೆ ಪೂರೈಸಿದೆ. ಇತರ ದೇಶಗಳ ಯುದ್ಧಕಾಲದ ಬಿಕ್ಕಟ್ಟಿನಲ್ಲಿ ಅವುಗಳ ಆಹಾರ, ಇಂಧನ ಮೊದಲಾದವುಗಳ ಬೇಡಿಕೆ ಪೂರೈಸಿದೆ’ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಹೇಳಿಕೆಗೆ ತಿರುಗೇಟು ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ