
ಇಸ್ಲಾಮಾಬಾದ್: ಸೌದಿ ಅರೇಬಿಯಾದೊಂದಿಗೆ ಆಗಿರುವ ರಕ್ಷಣಾ ಒಪ್ಪಂದದ ಅಡಿಯಲ್ಲಿ ತನ್ನ ದೇಶದ ಪರಮಾಣು ಸಾಮರ್ಥ್ಯಗಳು ಸೌದಿಗೂ ಲಭ್ಯವಾಗಲಿದೆ ಎಂದು ಪಾಕಿಸ್ತಾನ ಘೋಷಿಸಿದೆ.
ಈ ಮೂಲಕ, ಅಣ್ವಸ್ತ್ರ ಹೊಂದಿರುವ ಏಕೈಕ ಇಸ್ಲಾಮಿಕ್ ದೇಶ ತಾನೊಬ್ಬನೇ ಎಂದು ಪರೋಕ್ಷವಾಗಿ ಕೊಚ್ಚಿಕೊಂಡಿದೆ.ಈ ಕುರಿತು ಮಾಧ್ಯಮದವರಲ್ಲಿ ಮಾತನಾಡಿದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್, ‘ಪಾಕಿಸ್ತಾನವು ಅಣ್ವಸ್ತ್ರವನ್ನು ಬಹಳ ಹಿಂದೆಯೇ ಸಿದ್ಧಿಸಿಕೊಂಡಿತ್ತು. ಜತೆಗೆ ಆಗಿನಿಂದಲೇ ಸೇನೆಗೂ ಅದರ ತರಬೇತಿ ಕೊಡಲಾಗುತ್ತಿದೆ. ಈಗ ಆಗಿರುವ ಒಪ್ಪಂದದ ಅಡಿ ಇವುಗಳು(ಅಣ್ವಸ್ತ್ರ) ಸೌದಿಗೂ ದೊರೆಯಲಿವೆ’ ಎಂದು ಹೇಳಿದ್ದಾರೆ.ಜತೆಗೆ, ‘ಪಾಕ್ ಅಥವಾ ಸೌದಿ ಮೇಲೆ ಯಾವ ಕಡೆಯಿಂದ ದಾಳಿ ನಡೆದರೂ ಇಬ್ಬರೂ ಒಟ್ಟಿಗೆ ಅದನ್ನು ತಡೆದು ಪ್ರತಿದಾಳಿ ಮಾಡುತ್ತೇವೆ’ ಎಂದು ಹೇಳಿದರು. ಈ ಮೂಲಕ, ಸೌದಿಯ ಮೇಲೆ ಯಾರಾದರೂ ದಾಳಿ ಮಾಡಿದರೆ, ಅವರ ರಕ್ಷಣೆಗೆ ತಾವು ಅಣ್ವಸ್ತ್ರ ಒದಗಿಸುವುದಾಗಿ ಹೇಳಿದ್ದಾರೆ.
ಭಾರತ ಯುದ್ಧ ಸಾರಿದರೆ ಸೌದಿ ನಮ್ಮ ಪರ ನಿಲ್ಲತ್ತೆ : ಪಾಕ್ ರಕ್ಷಣಾ ಸಚಿವ
ನವದೆಹಲಿ: ಸೌದಿ ಅರೇಬಿಯಾದ ಜತೆಗೆ ರಕ್ಷಣಾ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಪಾಕ್ ನಾಯಕರ ಭಂಡ ಧೈರ್ಯ ಹೆಚ್ಚಿದ್ದು, ‘ಒಂದು ವೇಳೆ ಭಾರತ ನೆರೆಯ ರಾಷ್ಟ್ರಗಳ ಮೇಲೆ ಯುದ್ಧ ಘೋಷಿಸಿದರೆ ಸೌದಿ ನಮ್ಮ ಬೆನ್ನಿಗೆ ನಿಲ್ಲಲಿದೆ’ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ‘ಈ ಒಪ್ಪಂದವನ್ನು ಯಾವುದೇ ಆಕ್ರಮಣಕ್ಕೆ ಬಳಸಿಕೊಳ್ಳುವ ಉದ್ದೇಶ ನಮಗಿರಲಿಲ್ಲ. ಆದರೆ ಬೆದರಿಕೆ ಹಾಕಿದರೆ ನಿಸ್ಸಂಶಯವಾಗಿ ಇದು ಕಾರ್ಯರೂಪಕ್ಕೆ ಬರುತ್ತದೆ. ಸೌದಿ ಜತೆಗಿನ ಒಪ್ಪಂದ ಆಕ್ರಮಣಕಾರಿ ಎನ್ನುವುದಕ್ಕಿಂತ ರಕ್ಷಣಾತ್ಮಕವಾಗಿದೆ. ಭಾರತವು ಯುದ್ಧ ಘೋಷಿಸಿದರೆ ಸೌದಿ ಪಾಕಿಸ್ತಾನದ ಪರ ನಿಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದಿದ್ದಾರೆ.
ಸೌದಿ-ಪಾಕ್ ರಕ್ಷಣಾ ಒಪ್ಪಂದದ ತೆರೆಮರೆಯ ರಹಸ್ಯವೇನು?
ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವಿನ ಹೊಸ ರಕ್ಷಣಾ ಒಪ್ಪಂದವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ಈ ಒಪ್ಪಂದ ಇಸ್ರೇಲ್ಗೆ ಎಚ್ಚರಿಕೆ ಎಂದು ವಿಶ್ಲೇಷಿಸಲಾಗುತ್ತಿದೆಯಾದರೂ, ಇದೇ ವೇಳೆ ಭಾರತದಲ್ಲಿ ಸೌದಿ ಅರೇಬಿಯಾ ಬೃಹತ್ ಹೂಡಿಕೆ ಘೋಷಿಸಿರುವುದು ಹೊಸ ಸವಾಲುಗಳನ್ನು ಒಡ್ಡಿದೆ.
ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ಒಪ್ಪಂದ
ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ಇತ್ತೀಚೆಗೆ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿರುವುದು ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಒಪ್ಪಂದದ ಪ್ರಕಾರ ಎರಡು ದೇಶಗಳಲ್ಲಿ ಯಾವುದಾದರೂ ಒಂದರ ಮೇಲೆ ದಾಳಿ ನಡೆದರೆ, ಅದನ್ನು ಎರಡೂ ದೇಶಗಳ ಮೇಲಿನ ದಾಳಿಯಂತೆ ಪರಿಗಣಿಸಲಾಗುತ್ತದೆ ಎಂಬ ಅಂಶವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದನ್ನು ಇಸ್ಲಾಮಾಬಾದ್ ತನ್ನ ಪ್ರಮುಖ ರಾಜತಾಂತ್ರಿಕ ಜಯವೆಂದು ಪ್ರಚಾರ ಮಾಡುತ್ತಿದ್ದರೂ, ತಜ್ಞರು ಇದರ ನೈಜ ಪರಿಣಾಮಗಳನ್ನು ವಿಭಿನ್ನವಾಗಿ ಅರ್ಥೈಸುತ್ತಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೌದಿ ಅರೆಬೀಯಾದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ