
ಲಂಡನ್/ಟೋಕಿಯೋ (ನ. 30) ವಿಶ್ವಾದ್ಯಂತ ಭಾರೀ ತಲ್ಲಣ ಮೂಡಿಸಿರುವ ಹೊಸ (Coronavirus) ರೂಪಾಂತರಿ ಒಮಿಕ್ರೋನ್ (Omicron variant) ವೈರಸ್ ಸೋಮವಾರ ಇನ್ನೆರೆಡು ದೇಶಗಳಿಗೆ ಪ್ರವೇಶ ಮಾಡಿರುವುದು ಖಚಿತಪಟ್ಟಿದೆ. ಹೀಗಾಗಿ ಇದುವರೆಗೆ ಒಟ್ಟು 13 ದೇಶಗಳಿಗೆ ಪ್ರವೇಶ ಮಾಡಿದಂತಾಗಿದೆ.
ಪೋರ್ಚುಗಲ್ನಲ್ಲಿ 13 ಮಂದಿಗೆ ಮತ್ತು ಸ್ಕಾಟ್ಲೆಂಡ್ನಲ್ಲಿ(Scotland) 6 ಜನರಲ್ಲಿ ಹೊಸ ವೈರಸ್ ಪತ್ತೆಯಾಗಿರುವುದಾಗಿ ಆ ದೇಶಗಳು ಘೋಷಿಸಿವೆ., ಆಸ್ಪ್ರೇಲಿಯಾದಲ್ಲಿ ಒಬ್ಬರಲ್ಲಿ ಹೊಸ ಪ್ರಭೇದ ಕಂಡುಬಂದಿದೆ. ಪೋರ್ಚುಗಲ್ನ 13 ಮಂದಿ ಪೈಕಿ ಒಬ್ಬರು ಮಾತ್ರವೇ ಇತ್ತೀಚೆಗೆ ದಕ್ಷಿಣ ಆಫ್ರಿಕಾಕ್ಕೆ ಹೋಗಿಬಂದಿದ್ದರು. ಉಳಿದವರು ಯಾವುದೇ ದೇಶಕ್ಕೆ ಭೇಟಿ ನೀಡಿರಲಿಲ್ಲ. ಈ 12 ಮಂದಿಗೆ ಸ್ಥಳೀಯವಾಗಿಯೇ ಸೋಂಕು ಹಬ್ಬಿದೆ. ದಕ್ಷಿಣ ಆಫ್ರಿಕಾ ಹೊರತಾಗಿ ಸ್ಥಳೀಯವಾಗಿ ಈ ಸೋಂಕು ಹಬ್ಬಿದ ಮೊದಲ ಪ್ರಕರಣವಿದು.
ಈ ನಡುವೆ ನಾನಾ ದೇಶಗಳಲ್ಲಿ ಹೊಸ ಪ್ರಭೇದ ವ್ಯಾಪಕವಾಗಿ ಹಬ್ಬುತ್ತಿರುವ ಬೆನ್ನಲ್ಲೇ, ಎಲ್ಲಾ ದೇಶಗಳ ನಾಗರಿಕರ ಪ್ರವೇಶವನ್ನು ಜಪಾನ್ ಸರ್ಕಾರ ರದ್ದುಗೊಳಿಸಿದೆ. ಇನ್ನು ನ್ಯೂಜಿಲೆಂಡ್ ಹೊಸ ಸೋಂಕು ಪತ್ತೆಯಾದ ದಕ್ಷಿಣ ಆಫ್ರಿಕಾದ ಪ್ರಜೆಗಳ ಪ್ರವೇಶವನ್ನು ನಿಷೇಧಿಸಿದೆ. ಅದೇ ರೀತಿ ದಕ್ಷಿಣ ಆಫ್ರಿಕಾ ಹಾಗೂ ಸುತ್ತಮುತ್ತಲಿನ 7 ದೇಶಗಳ ನಾಗರಿಕರ ಪ್ರವೇಶವನ್ನು ಸೋಮವಾರದಿಂದ ಅಮೆರಿಕ ನಿಷೇಧಿಸಿದೆ.
ಭಾರತದಲ್ಲಿ ಪತ್ತೆ ಆಗಿಲ್ಲ : ಭಾರತದಲ್ಲಿ ಈವರೆಗೆ ಒಮಿಕ್ರೋನ್ ವೈರಸ್ ಪತ್ತೆಯಾಗಿಲ್ಲ. ಆದಾಗ್ಯೂ, ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಅಲ್ಲದೆ ವಿದೇಶಗಳಿಂದ ಪ್ರಜೆಗಳಲ್ಲಿ ಸೋಂಕು ಪತ್ತೆಯಾದಲ್ಲಿ, ಅವರ ಕೋವಿಡ್ ಪರೀಕ್ಷಾ ವರದಿಯನ್ನು ಜಿನೋಮ್ ಸಿಕ್ವೆನ್ಸಿಂಗ್ ಮಾಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ದಿಲ್ಲಿ ಮಾಲಿನ್ಯದ ಬಗ್ಗೆ ಸುಪ್ರೀಂ ಮತ್ತೆ ಕಳವಳ: ದೆಹಲಿ ಮತ್ತು ರಾಷ್ಟ್ರರಾಜಧಾನಿ ವ್ಯಾಪ್ತಿಯಲ್ಲಿ ವಾಯು ಮಾಲಿನ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಮಾಲಿನ್ಯ ನಿಯಂತ್ರಣಕ್ಕೆ ರಾಷ್ಟ್ರ ರಾಜಧಾನಿ ವ್ಯಾಪ್ತಿಯ ರಾಜ್ಯಗಳು ಕೈಗೊಂಡ ಕ್ರಮಗಳ ಮಾಹಿತಿಯನ್ನು ಡಿ.1ರ ಒಳಗಾಗಿ ಸಲ್ಲಿಸಬೇಕು. ಡಿ.2ರಂದು ಈ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದೆ.
ಈ ಕುರಿತು ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ಪೀಠ, ಮಾಲಿನ್ಯ ನಿಯಂತ್ರಣಕ್ಕೆ ವಾಯು ಗುಣಮಟ್ಟನಿರ್ವಹಣೆ ಆಯೋಗ ನೀಡಿದ ನಿರ್ದೇಶನಗಳನ್ನು ದೆಹಲಿ, ಹರಾರಯಣ, ಉತ್ತರ ಪ್ರದೇಶ ಮತ್ತು ಪಂಜಾಬ್ ಸರ್ಕಾರಗಳು ತತ್ಕ್ಷಣದಿಂದಲೇ ಪಾಲಿಸಬೇಕು. ದೆಹಲಿಯಲ್ಲಿ ಸಸಿಗಳು ಮತ್ತು ಮರಗಳನ್ನು ಬೆಳೆಸುವ ಯೋಜನೆಯನ್ನು ದೆಹಲಿ ಸರ್ಕಾರ ರೂಪಿಸಬೇಕು. ಅಲ್ಲದೆ ಈ ವರದಿಯನ್ನು 12 ವಾರಗಳಲ್ಲಿ ಸಲ್ಲಿಸಬೇಕು. ಈಗಾಗಲೇ ದೆಹಲಿಯ ವಾಯು ಗುಣಮಟ್ಟತೀರಾ ಕಳಪೆಯಾಗಿರುವ ಮಧ್ಯೆಯೇ, ಹೊಸ ಕೊರೋನಾ ವೈರಸ್ ಸಮಸ್ಯೆ ತಲೆದೋರಿದೆ ಎಂದು ಕಳವಳ ವ್ಯಕ್ತಪಡಿಸಿತು.
ಕಟ್ಟಡ ಕಾಮಗಾರಿಗಳ ನಿಷೇಧ ಮಾಲಿನ್ಯ ನಿಯಂತ್ರಣ ನಿಟ್ಟಿನಲ್ಲಿ ದೆಹಲಿ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಕಟ್ಟಡ ಕಾಮಗಾರಿಗಳ ನಿಷೇಧವನ್ನು ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿತು. ಆದಾಗ್ಯೂ, ಮಾಲಿನ್ಯವಲ್ಲದ ಪ್ಲಂಬಿಂಗ್, ಆಂತರಿಕ ವಿನ್ಯಾಸ, ಎಲೆಕ್ಟ್ರಿಕಲ್ ಕೆಲಸ ಮತ್ತು ಕಾರ್ಪೆಂಟರ್ ಕಾಮಗಾರಿಗಳಿಗೆ ಮಾತ್ರವೇ ವಿನಾಯ್ತಿ ನೀಡಲಾಗಿದೆ.
ಒಮ್ರಿಕಾನ್ (Omicron) ವೈರಸ್ ಬಗ್ಗೆ ಸರ್ಕಾರ ಕಟ್ಟೆಚ್ಚರ ತೆಗೆದುಕೊಂಡಿದ್ದು ಲಾಕ್ ಡೌನ್(Lockdown) ಪ್ರಸ್ತಾಪ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸ್ಪಷ್ಟಪಡಿಸಿದ್ದಾರೆ. ಸಚಿವ ಸುಧಾಕರ್ ಸಹ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ