
ಇಸ್ಲಾಮಾಬಾದ್: ಭಾರತದೊಂದಿಗಿನ ಸಂಬಂಧ ದಿನೇದಿನೇ ಹಳಸುತ್ತಿರುವ ಹೊತ್ತಿನಲ್ಲೇ ಪಾಕಿಸ್ತಾನ 120 ಕಿ.ಮೀ. ಸಾಗುವ ಮತ್ತೊಂದು ಕ್ಷಿಪಣಿ ಪರೀಕ್ಷೆ ನಡೆಸಿದೆ. ಎರಡೇ ದಿನದಲ್ಲಿ ನಡೆದ 2ನೇ ಕ್ಷಿಪಣಿಯ ಪರೀಕ್ಷೆ ಇದಾಗಿದೆ. ಶನಿವಾರವಷ್ಟೇ 450 ಕಿ.ಮೀ. ಕ್ರಮಿಸಬಲ್ಲ ಮಿಸೈಲ್ ಪರೀಕ್ಷೆ ನಡೆಸಲಾಗಿತ್ತು. ಇದೀಗ ಕ್ಷಿಪಣಿ ಪರೀಕ್ಷೆ ನಡೆಸುವ ಮೂಲಕ ಪಾಕಿಸ್ತಾನ ಮತ್ತೆ ಬಾಲ ಬಿಚ್ಚಿದೆ.
‘120 ಕಿ.ಮೀ. ಕ್ರಮಿಸಬಲ್ಲ ಫತಾಹ್ ಹೆಸರಿನ ಖಂಡಾಂತರ ಕ್ಷಿಪಣಿಯನ್ನು ಪಡೆಗಳ ಕಾರ್ಯಾಚರಣೆ ಸಿದ್ಧತೆ, ಕ್ಷಿಪಣಿಯ ನಿಖರತೆ ಸೇರಿದಂತೆ ಪ್ರಮುಖ ತಾಂತ್ರಿಕ ಅಂಶಗಳನ್ನು ಮೌಲ್ಯೀಕರಿಸಲು ನಡೆಸಲಾಗಿದೆ’ ಎಂದು ಪಾಕ್ ಸೇನೆ ತಿಳಿಸಿದೆ. ಆದರೆ ಪರೀಕ್ಷೆಯಲ್ಲಿ ಎಲ್ಲಿ ನಡೆಸಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಈ ಬಗ್ಗೆ ಮಾತನಾಡಿರುವ ಪ್ರಧಾನಿ ಶೆಹಬಾಜ್ ಷರೀಫ್, ‘ರಾಷ್ಟ್ರದ ಭದ್ರತೆಗಾಗಿ ಸೇನೆ ಸನ್ನದ್ಧವಾಗಿರುವುದನ್ನು ಕಂಡು ತೃಪ್ತಿಯಾಗಿದೆ. ದೇಶದ ಭದ್ರತೆ ಸುರಕ್ಷಿತ ಕೈಗಳಲ್ಲಿದೆ ಎಂಬುದು ಇದರಿಂದ ಸಾಬೀತಾಗುತ್ತದೆ’ ಎಂದರು. ಕಳೆದ ವಾರವಷ್ಟೇ ಪಾಕ್, ‘ಭಾರತದ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ’ ಎಂದು ಹೇಳಿತ್ತು.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಪಹಲ್ಗಾಂ ದಾಳಿಗೆ ಪ್ರತಿಯಾಗಿ ಉಗ್ರರನ್ನು ಬೇಟೆಯಾಡಲು ಭಾರತೀಯ ಸೇನೆಗೆ ಪರಮಾಧಿಕಾರ ನೀಡಿರುವ ಹೊತ್ತಿನಲ್ಲೇ ಹಾಗೂ ನೌಕಾಪಡೆ ಅರಬ್ಬೀ ಸಮುದ್ರದಲ್ಲಿ ತನ್ನ ಶಕ್ತ ಪ್ರದರ್ಶಿಸುತ್ತಿರುವ ನಡುವೆಯೇ ಪಾಕಿಸ್ತಾನ ‘ಎಕ್ಸರ್ಸೈಸ್ ಇಂದಸ್’ ಹೆಸರಿನಲ್ಲಿ ಒಂದರಹಿಂದೊಂದು ಕ್ಷಿಪಣಿ ಪರೀಕ್ಷೆ ನಡೆಸುತ್ತಿರುವುದು ಗಮನಾರ್ಹ.
ಯಾವುದೇ ಕ್ಷಣದಲ್ಲಿ ಭಾರತದ ದಾಳಿ: ಭಾರತ ಯಾವುದೇ ಕ್ಷಣದಲ್ಲಿ ಪಾಕ್ ಆಕ್ರಮಿತ ಕಾಶ್ಮಿರದ ನಮೇಲೆ ದಾಳಿ ಮಾಡಬಹುದು ಎಂಬ ಮಾಹಿತಿ ನಮಗೆ ಇದೆ. ಆದರೆ ಭಾರತದ ಯಾವುದೇ ನಡೆಗೆ ನಾವು ತಕ್ಕ ಉತ್ತರ ನೀಡಲಿದ್ದೇವೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.
ಪಾಕಿಸ್ತಾನದಿಂದ ಹೊಸ ಮಾಧ್ಯಮ ನಾಟಕ
ನಿಷೇಧಿತ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್, ಲಖ್ವಿಯಂಥ ಕುಖ್ಯಾತ ಉಗ್ರರಿಗೆ ಸುರಕ್ಷಿತ ನೆಲೆ ಒದಗಿಸಿಕೊಟ್ಟಿರುವ ಉಗ್ರಪೋಷಕ ಪಾಕಿಸ್ತಾನ ಇದೀಗ ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ಹೊಸ ನಾಟಕ ಶುರುಮಾಡಿದೆ.
ಪಾಕಿಸ್ತಾನದ ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್ ಅವರು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಗಡಿಗೆ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಪತ್ರಕರ್ತರನ್ನು ಪ್ರವಾಸ ಕರೆದೊಯ್ದು, ಭಾರತ ಆರೋಪಿಸಿದಂತೆ ಪಿಒಕೆಯ ಗಡಿಯಲ್ಲೇನೂ ಉಗ್ರರ ಅಡಗುತಾಣಗಳಿಲ್ಲ ಎಂದು ಬಿಂಬಿಸಲು ಯತ್ನಿಸಿದೆ.
ಸಿಎನ್ಎನ್ ಇಂಟರ್ನ್ಯಾಷನಲ್ನ ಡಿಪ್ಲೊಮ್ಯಾಟಿಕ್ ಎಡಿಟರ್ ನಿಕ್ ರಾಬರ್ಟ್ಸನ್ ಸೇರಿ ಹಲವು ಪತ್ರಕರ್ತರು ಪ್ರವಾಸದ ಭಾಗವಾಗಿದ್ದರು. ಅವರು ಭಾರತೀಯ ಸೇನೆಯ ನಕಲಿ ಎನ್ಕೌಂಟರ್ನಲ್ಲಿ ಬಲಿಯಾಗಿದ್ದಾರೆಂದು ಪಾಕ್ ಆರೋಪಿಸಿರುವ ಮುಹಮ್ಮದ್ ಫಾರೂಕ್ ಮತ್ತು ಮುಹಮ್ಮದ್ ದೀನ್ ಮನೆಗೆ ಭೇಟಿ ನೀಡಿದರು ಎಂದು ವರದಿಗಳು ಹೇಳಿವೆ.
ಪಿರ್ ಛಿನ್ಸಾಯ್ ಸಮೀಪದ ಬೇಲಾ ನೂರ್ ಶಾದಲ್ಲಿ ಉಗ್ರರ ಅಡಗುತಾಣ ಇದೆ ಎಂದು ಪಾಕಿಸ್ತಾನ ಆರೋಪಿಸುತ್ತಿದೆ. ಪಹಲ್ಗಾಂ ದಾಳಿಯನ್ನು ಈ ಉಗ್ರ ಅಡಗುತಾಣದ ಮೂಲಕವೇ ನಡೆಸಲಾಗಿದೆ ಎಂದು ಭಾರತ ಆರೋಪಿಸುತ್ತಿದೆ. ಈ ಪ್ರದೇಶ ಎಲ್ಒಸಿಯಿಂದ 26 ಕಿ.ಮೀ.ದೂರದಲ್ಲಿದೆ. ಇಲ್ಲಿಗೆ ಪತ್ರಕರ್ತರನ್ನು ಕರೆತಂದ ಉದ್ದೇಶ ಭಾರತದ ಸುಳ್ಳು ಪ್ರಚಾರವನ್ನು ಬಯಲು ಮಾಡುವುದೇ ಆಗಿದೆ ಎಂದು ತರಾರ್ ಹೇಳಿಕೊಂಡಿದ್ದಾರೆ. ಭಾರತದ ದಾಳಿ ಭೀತಿಯಿಂದ ಈಗಾಗಲೇ ಪಾಕಿಸ್ತಾನ ಗಡಿಯಾಚೆಗಿನ ಉಗ್ರರ ಅಡಗುತಾಣಗಳನ್ನು ಬೇರೆಡೆ ಸ್ಥಳಾಂತರಿಸಿದೆ ಎಂದು ಭಾರತ ಕೆಲ ದಿನಗಳ ಹಿಂದಷ್ಟೇ ಹೇಳಿತ್ತು.
ಇದನ್ನೂ ಓದಿ: ಭಾರತದ ಮೇಲೆ ಮತ್ತೆ ಸೈಬರ್ ದಾಳಿ ಮುಂದುವರಿಸಿದ ಪಾಕ್; ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ವೆಬ್ಪೇಜ್ ಹ್ಯಾಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ