
ನವದೆಹಲಿ: ಭಾರತೀಯ ಸೇನಾ ಪಡೆಗಳು ನಡೆಸಿದ ಪ್ರಚಂಡ 'ಆಪರೇಷನ್ ಸಿಂಧೂರ್' (Operation Sindoor) ಕ್ಷಿಪಣಿ ದಾಳಿಯಲ್ಲಿ ನೆಲಸಮವಾಗಿದ್ದ ಕುಖ್ಯಾತ ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಬಹಾವಲ್ಪುರ ಪ್ರಧಾನ ಕಚೇರಿ ಇದೀಗ ಸಂಪೂರ್ಣವಾಗಿ ಮರುನಿರ್ಮಾಣಗೊಂಡಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಈ 'ಮರ್ಕಜ್ ಸುಭಾನ್ ಅಲ್ಲಾ' (Markaz Subhan Allah) ಉಗ್ರ ನೆಲೆಯನ್ನು ಅತ್ಯಾಧುನಿಕವಾಗಿ ನವೀಕರಿಸಲಾಗಿದ್ದು, ಇದಕ್ಕೆ ಪಾಕಿಸ್ತಾನ ಸರ್ಕಾರವೇ ಕೋಟ್ಯಂತರ ರೂಪಾಯಿ ಹಣಕಾಸು ನೆರವು ನೀಡಿದೆ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.
ಭಾರತದ ದಾಳಿ ನಡೆದು 15 ತಿಂಗಳ ಬಳಿಕ ಈ ನೆಲೆಯು ಪುನಶ್ಚೇತನಗೊಂಡಿರುವುದನ್ನು ವಿಶೇಷ ಉಪಗ್ರಹ ಚಿತ್ರಗಳು ಹಾಗೂ ದೃಶ್ಯಾವಳಿಗಳು ಖಚಿತಪಡಿಸಿವೆ. ಭಾರತೀಯ ಪಡೆಗಳು ಹೊಡೆದುರುಳಿಸಿದ್ದ ಬೃಹತ್ ಗುಮ್ಮಟಗಳನ್ನು (Domes) ಪುನಃ ನಿರ್ಮಿಸಲಾಗಿದೆ. ಕೇಂದ್ರ ಸಭಾಂಗಣದಲ್ಲಿದ್ದ (Central Hall) ಬಾಂಬ್ ದಾಳಿಯ ಕಂದಕಗಳನ್ನು ಮುಚ್ಚಿ, ಹೊಸ ಮಾರ್ಬಲ್, ಪ್ಲಾಸ್ಟರ್ ಮತ್ತು ಪೇಂಟ್ ಮೂಲಕ ಭಾರತದ ದಾಳಿಯ ಯಾವುದೇ ಕಲೆಗಳು ಕಾಣದಂತೆ ಮರೆಮಾಚಲಾಗಿದೆ. ಮದ್ರಸಾ ಅಲ್-ಸಾಬೀರ್ ಹಾಗೂ ಉಗ್ರ ಕಮಾಂಡರ್ಗಳು ನೆಲೆಸಿದ್ದ ವಸತಿ ಸಂಕೀರ್ಣಗಳನ್ನು ಹೊಸದಾಗಿ ಕಟ್ಟಿ ನಿಲ್ಲಿಸಲಾಗಿದೆ.
ಗುಪ್ತಚರ ಇಲಾಖೆಯ ಮಾಹಿತಿಯ ಪ್ರಕಾರ, ನಿಷೇಧಿತ ಜೈಶ್ ಸಂಘಟನೆಯ ಈ ಅಡ್ಡಯನ್ನು ಮರುನಿರ್ಮಾಣ ಮಾಡಲು ಪಾಕಿಸ್ತಾನ ಸರ್ಕಾರವೇ ನಗದು ರೂಪದಲ್ಲಿ ಕಂತುಗಳಲ್ಲಿ ಬರೋಬ್ಬರಿ 25 ಕೋಟಿ ಪಾಕಿಸ್ತಾನಿ ರೂಪಾಯಿ (PKR 25 Crore) ನೀಡಿದೆ. ಇದರಲ್ಲಿ ಕೇವಲ ಕೇಂದ್ರ ಸಭಾಂಗಣದ ನವೀಕರಣಕ್ಕಾಗಿಯೇ ಸುಮಾರು 11 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.
ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಜನರನ್ನು ಬಲಿಪಡೆದ ಉಗ್ರ ದಾಳಿಗೆ ಪ್ರತಿಯಾಗಿ, ಭಾರತೀಯ ಸಶಸ್ತ್ರ ಪಡೆಗಳು 2025ರ ಮೇ 7ರಂದು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ (PoK) ಪ್ರಮುಖ ಉಗ್ರ ನೆಲೆಗಳ ಮೇಲೆ 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಸರ್ಜಿಕಲ್ ಏರ್ಸ್ಟ್ರೈಕ್ ನಡೆಸಿದ್ದವು. ಈ ನಿರ್ಣಾಯಕ ದಾಳಿಯಲ್ಲಿ ಜೈಶ್ ಸಂಸ್ಥಾಪಕ ಮಸೂದ್ ಅಜರ್ನ 10 ಮಂದಿ ಆಪ್ತ ಸಂಬಂಧಿಕರು ಸೇರಿದಂತೆ 13 ಮಂದಿ ಉಗ್ರರು ಹತರಾಗಿದ್ದರು.
ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 100 ಕಿ.ಮೀ ದೂರದಲ್ಲಿರುವ 18 ಎಕರೆ ವಿಸ್ತೀರ್ಣದ ಈ ‘ಉಸ್ಮಾನ್-ಒ-ಅಲಿ’ (ಮರ್ಕಜ್ ಸುಭಾನ್ ಅಲ್ಲಾ) ಕ್ಯಾಂಪಸ್ ಭಾರತದ ಮೇಲಿನ ಹಲವು ರಕ್ತಸಿಕ್ತ ದಾಳಿಗಳಿಗೆ ಸಂಚು ರೂಪಿಸಿದ ಸ್ಥಳವಾಗಿದೆ:
ವಿಶೇಷವೆಂದರೆ, ಈ ಭಯೋತ್ಪಾದಕ ಕ್ಯಾಂಪಸ್ ಲಾಹೋರ್ನಿಂದ 400 ಕಿ.ಮೀ ದೂರದಲ್ಲಿದ್ದು, ಪಾಕಿಸ್ತಾನ ಸೇನೆಯ ‘31 ಕಾರ್ಪ್ಸ್’ (Pakistan Army 31 Corps) ಕಂಟೋನ್ಮೆಂಟ್ನ ಪಕ್ಕದಲ್ಲೇ ಇದೆ. ಜೈಶ್ ಸಂಘಟನೆಯನ್ನು ಪಾಕಿಸ್ತಾನ 2002ರಲ್ಲೇ ಕಾಗದದ ಮೇಲೆ ನಿಷೇಧಿಸಿದ್ದರೂ, ಮಸೂದ್ ಅಜರ್ ಹಾಗೂ ಆತನ ಉಗ್ರ ಜಾಲ ಪಾಕ್ ಸೇನೆ ಮತ್ತು ಸರ್ಕಾರದ ಸಂಪೂರ್ಣ ರಕ್ಷಣೆಯಲ್ಲಿಯೇ ರಾಜಾರೋಷವಾಗಿ ಕಾರ್ಯಾಚರಿಸುತ್ತಿರುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ