ಜೈಶಂಕರ್ ಬದಲಿಗೆ ಮೋದಿ ಬಂದಿದ್ರೆ ಚೆನ್ನಾಗಿತ್ತು: ಷರೀಫ್‌

By Kannadaprabha NewsFirst Published Oct 18, 2024, 10:05 AM IST
Highlights

ಪಾಕಿಸ್ತಾನದಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾಗವಹಿಸಿದ ಬೆನ್ನಲ್ಲೇ ಪಾಕ್ ಭಾರತದತ್ತ ಸ್ನೇಹ ಹಸ್ತ ಚಾಚಲು ಮುಂದಾಗಿದೆ.

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾಗವಹಿಸಿದ ಬೆನ್ನಲ್ಲೇ ಪಾಕ್ ಭಾರತದತ್ತ ಸ್ನೇಹ ಹಸ್ತ ಚಾಚಲು ಮುಂದಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್, 'ಎರಡೂ ದೇಶಗಳು ಹಳೆಯದನ್ನು ಮರೆತು, ಶಕ್ತಿ, ಹವಾಮಾನ ಬದಲಾವಣೆಯಂತಹ ಭವಿಷ್ಯದ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಗಮನ ಹರಿಸಬೇಕು. ಈಗಾಗಲೇ 75 ವರ್ಷ ಕಳೆದುಹೋಗಿದ್ದು, ಇನ್ನೂ 75 ವರ್ಷಗಳನ್ನು ವ್ಯರ್ಥವಾಗಿ ಕಳೆಯುವುದು ಬೇಡ' ಎಂದು ನಯವಾದ ಮಾತುಗಳನ್ನಾಡಿದ್ದಾರೆ. 

ಜೊತೆಗೆ, ಶೃಂಗಕ್ಕೆ ಪ್ರಧಾನಿ ಮೋದಿಯವರು ಆಗಮಿಸಿದ್ದರೆ ಇನ್ನೂ ಒಳ್ಳೆಯದಿತ್ತು. ನೆರೆ ದೇಶ ಗಳನ್ನು ಬದಲಿಸಲಾಗದ ಆದ್ದರಿಂದ ನೆರೆಹೊರೆಯವರೊಂದಿಗೆ ಒಳ್ಳೆ ರೀತಿಯಿಂದಿರಬೇಕು ಎಂದಿದ್ದಾರೆ. ಆ.15 ಮತ್ತು 16ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಮೋದಿ ಪರವಾಗಿ ಜೈಶಂಕರ್ ಭಾಗವಹಿಸಿದ್ದು, ಉಗ್ರವಾದವನ್ನು ಬೆಂಬಲಿಸುವ ಪಾಕಿಸ್ತಾನಕ್ಕೆ ಅದರ ನೆಲದಲ್ಲೇ ಪರೋಕ್ಷವಾಗಿ ತಿವಿದಿದ್ದರು.

Latest Videos

ಮೋದಿ ಹಾಗೂ ಶರೀಫ್ ನಡುವೆ ಆತ್ಮೀಯ ಸಂಬಂಧವಿದ್ದು, 2015ರಲ್ಲಿ ಆಫ್ಘಾ ನಿಸ್ತಾನಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಭಾರತಕ್ಕೆ ಮರಳುವ ವೇಳೆ ಮಾರ್ಗಮಧ್ಯದಲ್ಲಿ ಪಾಕ್‌ಗೆ ಧಿಡೀರ್ ಭೇಟಿ ನೀಡಿ ಶರೀಫ್‌ರ ಮೊಮ್ಮಗಳ ವಿವಾಹದಲ್ಲಿ ಭಾಗಿಯಾದರು.

ಪಾಕಿಸ್ತಾನದಲ್ಲಿ ನಿಂತೇ ಪಾಕ್, ಚೀನಾಕ್ಕೆ ಸಚಿವ ಜೈಶಂಕರ್ ತಪರಾಕಿ!

click me!