
ಕಠ್ಮಂಡು: "ಆಕೆಯ ಕೈ ಹಿಡಿದುಕೊಳ್ಳಲು ಪ್ರಯತ್ನಿಸಿದೆ. ಆದರೆ ನಾನು ನೋಡ ನೋಡುತ್ತಿದ್ದಂತೆ ನಮ್ಮೆಡೆಗೆ ಬಂದ ಮಣ್ಣಿನ ಪ್ರವಾವ ನನ್ನ ಹೆಂಡತಿಯನ್ನು ಒಡಲೊಳಗೆ ಹಾಕಿ ಮುಚ್ಚಿ ಹಾಕಿಕೊಂಡಿತು, ಆಕೆ ಹೋದ್ಲು" ಇದು ನೇಪಾಳ ಭೀಕರ ದುರಂತದಲ್ಲಿ ತನ್ನ ಅರ್ಧಾಂಗಿಯನ್ನು ಕಳೆದುಕೊಂಡು ಕಣ್ಣೀರು ಹಾಕಿದ ವೃದ್ಧನ ಮಾತು. ಇಂತಹ ಎಷ್ಟೋ ಕಣ್ಣೀರ ಕಥೆಗಳು ಈಗ ಒದೊಂದಾಗಿ ಹೊರಬರುತ್ತಿದೆ
ನೇಪಾಳದ ಟಿಬೆಟ್ ಗಡಿಗೆ ಹೊಂದಿಕೊಂಡಂತಿರುವ ರಸುವಾ (Rasuwa) ಜಿಲ್ಲೆಯಲ್ಲಿ ಭೀಕರ ಪ್ರವಾಹ ಹಾಗೂ ಮಣ್ಣು ಕುಸಿತ ಸಂಭವಿಸಿದ್ದು, ಭಾರತೀಯರು 160ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕನ್ನಡಿಗರು ಸೇರಿ ನೂರಾರು ಜನರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ರಕ್ಷಣಾ ಪಡೆಗಳು ಹೆಲಿಕಾಪ್ಟರ್ಗಳ ಮೂಲಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
ರಕ್ಷಣಾ ತಂಡಗಳಿಂದ ವಿಮಾನದ ಮೂಲಕ ರಕ್ಷಿಸಲ್ಪಟ್ಟ 68 ವರ್ಷದ ಕೇಶವ್ ಪ್ರಸಾದ್ ಬರಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದುರಂತದ ಭಯಾನಕತೆಯನ್ನು ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ. ನಮ್ಮ ಕಡೆಗೆ ಮಣ್ಣಿನ ದೊಡ್ಡ ಪ್ರವಾಹವೇ ನುಗ್ಗಿ ಬಂದಿತು. ಕ್ಷಣಾರ್ಧದಲ್ಲಿ ಬೃಹತ್ ಮಣ್ಣಿನ ಗೋಡೆ ಮನೆಯೊಳಗೆ ನುಗ್ಗಿ ನನ್ನ ಹೆಂಡತಿಯನ್ನು ಕೆಳಗೆ ಹೂತುಹಾಕಿತು. ನಾನು ಅವಳ ಕೈ ಹಿಡಿಯಲು ಪ್ರಯತ್ನಿಸಿದೆ, ಆದರೆ ಸಾಧ್ಯವಾಗಲಿಲ್ಲ. ಅವಳು ಮಣ್ಣಿನ ಅಡಿಯಲ್ಲೇ ಉಳಿದುಹೋದಳು ಎಂದು ಅವರು ಕಣ್ಣೀರಿಟ್ಟಿದ್ದಾರೆ.
ಆರಂಭದಲ್ಲಿ ಬುಧವಾರ ಮುಂಜಾನೆ 4.4 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (USGS) ತಿಳಿಸಿತ್ತು. ಆದರೆ ನಂತರ ತನ್ನ ಮೌಲ್ಯಮಾಪನವನ್ನು ಪರಿಷ್ಕರಿಸಿದ ಸಂಸ್ಥೆಯು, ಇದು 5.2 ತೀವ್ರತೆಯ ಹಿಮನದಿ (Glacier) ಕುಸಿತ ಎಂದು ಸ್ಪಷ್ಟಪಡಿಸಿದೆ.
ಲೆಂಡೆ ಖೋಲಾ ನದಿಯು 14 ತಿಂಗಳಲ್ಲಿ ಎರಡನೇ ಬಾರಿಗೆ ಪ್ರವಾಹಕ್ಕೆ ಒಳಗಾಗಿದೆ. ನೇಪಾಳ ಕಡೆಯ ಹಿಮನದಿಯ ಕುಸಿತದಿಂದಾಗಿ ನದಿಯ ಹರಿವು ಸಂಪೂರ್ಣವಾಗಿ ಮುಚ್ಚಿಹೋಗಿ, ನಂತರ ಹಠಾತ್ ಪ್ರವಾಹವು ಕೆಳಮುಖವಾಗಿ ಧುಮುಕಿದೆ ಎಂದು ವಿಪತ್ತು ಅಪಾಯ ಕಡಿತ ತಜ್ಞೆ ಸಸ್ವತ ಸನ್ಯಾಲ್ ತಿಳಿಸಿದ್ದಾರೆ. ಈ ಹಠಾತ್ ಪ್ರವಾಹವು ರಸುವಾ ಜಿಲ್ಲೆಯ ಹಲವಾರು ಹಳ್ಳಿಗಳನ್ನು ನಿರ್ನಾಮ ಮಾಡಿದೆ. ರಸ್ತೆಗಳು ಮತ್ತು ಮೂಲಸೌಕರ್ಯಗಳು ಹೇಳಹೆಸರಿಲ್ಲದಂತೆ ಮಾಡಿದೆ.
ಈ ದುರಂತದ ಕುರಿತು ಪ್ರತಿಕ್ರಿಯಿಸಿರುವ ನೇಪಾಳದ ಪ್ರಧಾನಿ ಬಲೇಂದ್ರ ಶಾ, ನೀವು ಅನುಭವಿಸಿದ ನೋವು ಮತ್ತು ನಷ್ಟ ಸಣ್ಣದಲ್ಲ. ಆದರೆ ಈ ಕಷ್ಟದ ಸಮಯದಲ್ಲಿ ನೀವು ಒಬ್ಬಂಟಿಯಾಗಿಲ್ಲ. ಸರ್ಕಾರವು ತನ್ನ ಎಲ್ಲಾ ಸಾಧನ-ಸಂಪನ್ಮೂಲಗಳೊಂದಿಗೆ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ.
ನೇಪಾಳ ಪ್ರವಾಸೋದ್ಯಮ ಮಂಡಳಿಯ ಮಾಹಿತಿಯಂತೆ, ಈ ಹಠಾತ್ ಪ್ರವಾಹದ ನಡುವೆ 133ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಮತ್ತು 37 ಅನಿವಾಸಿ ಭಾರತೀಯರನ್ನು (NRIs) ಸಂಪರ್ಕಿಸಲು ಸಾಧ್ಯವಾಗಿಲ್ಲ. ಮತ್ತೊಂದೆಡೆ, ನೇಪಾಳದ ಗಡಿಗೆ ಹೊಂದಿಕೊಂಡಿರುವ ಬಿಹಾರ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಿಹಾರದಲ್ಲಿ ಒಟ್ಟು ಒಂಬತ್ತು ಎನ್ಡಿಆರ್ಎಫ್ (NDRF) ತಂಡಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ನೇಪಾಳ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಭಾರತದತ್ತ ಬರುವ ನೀರಿನ ಹರಿವನ್ನು ಟ್ರ್ಯಾಕ್ ಮಾಡುತ್ತಿದ್ದೇವೆ ಎಂದು ಎನ್ಡಿಆರ್ಎಫ್ ಐಜಿ ನರೇಂದ್ರ ಸಿಂಗ್ ಬುಂದೇಲಾ ತಿಳಿಸಿದ್ದಾರೆ.
ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ಪ್ರಜೆಗಳಿಗೆ ನೆರವಾಗಲು ಖಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತುರ್ತು ಸಂಪರ್ಕ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ
+977 985 131 6807
+977 970 910 7500
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ