ಕಾಶ್ಮೀರ ಮರೆತು, ಭಾರತದ ಜೊತೆ ಸ್ನೇಹ ಮಾಡಿ: ಪಾಕಿಸ್ತಾನಕ್ಕೆ ಆಪ್ತಮಿತ್ರ ಸೌದಿ , ಯುಎಇ ತಾಕೀತು

By Kannadaprabha NewsFirst Published Jan 30, 2023, 7:07 AM IST
Highlights

ಪದೇ ಪದೇ ಕಾಶ್ಮೀರ ವಿಷಯ ಜಪಿಸುವುದನ್ನು ಬಿಟ್ಟು ಭಾರತದ ಜೊತೆ ಸ್ನೇಹ ಮಾಡುವುದನ್ನು ಕಲಿತುಕೊಳ್ಳಿ ಎಂದು ಪಾಕಿಸ್ತಾನಕ್ಕೆ ಅದರ ಅತ್ಯಂತ ಆಪ್ತ ಮತ್ತು ದೊಡ್ಡಮಟ್ಟದ ಸಾಲ ನೀಡುವ ದೇಶಗಳಾದ ಸೌದಿ ಅರೇಬಿಯಾ ಮತ್ತು ಯುಇಎ ದೇಶಗಳು ತಾಕೀತು ಮಾಡಿವೆ.

ಇಸ್ಲಾಮಾಬಾದ್‌: ಪದೇ ಪದೇ ಕಾಶ್ಮೀರ ವಿಷಯ ಜಪಿಸುವುದನ್ನು ಬಿಟ್ಟು ಭಾರತದ ಜೊತೆ ಸ್ನೇಹ ಮಾಡುವುದನ್ನು ಕಲಿತುಕೊಳ್ಳಿ ಎಂದು ಪಾಕಿಸ್ತಾನಕ್ಕೆ ಅದರ ಅತ್ಯಂತ ಆಪ್ತ ಮತ್ತು ದೊಡ್ಡಮಟ್ಟದ ಸಾಲ ನೀಡುವ ದೇಶಗಳಾದ ಸೌದಿ ಅರೇಬಿಯಾ ಮತ್ತು ಯುಇಎ ದೇಶಗಳು ತಾಕೀತು ಮಾಡಿವೆ. ಜೊತೆಗೆ ಭಾರತ ಸರ್ಕಾರ ತನ್ನ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ವಿಷಯವನ್ನೂ ಪದೇ ಪದೇ ಪ್ರಸ್ತಾಪಿಸಬೇಡಿ. ಈ ಎರಡೂ ವಿಷಯಗಳಲ್ಲಿ ನಿಮಗೆ ನಮ್ಮ ಬೆಂಬಲ ಸಿಗುವುದಿಲ್ಲ ಎಂದು ಎರಡೂ ದೇಶಗಳು ಸ್ಪಷ್ಟಪಡಿಸಿವೆ ಎಂದು ಪಾಕಿಸ್ತಾನದ ‘ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನ, ‘ಇಸ್ಲಾಮಿಕ್‌ ದೇಶಗಳ ಒಕ್ಕೂಟ’ ಸೇರಿದಂತೆ ಲಭ್ಯವಿರುವ ಎಲ್ಲಾ ವೇದಿಕೆಗಳಲ್ಲೂ ಕಾಶ್ಮೀರ (Kashmir) ಮತ್ತು 370ನೇ ವಿಧಿ ರದ್ದು ಮಾಡಿದ ವಿಷಯ ಪ್ರಸ್ತಾಪಿಸುತ್ತಲೇ ಬರುತ್ತಿತ್ತು. ಇದಕ್ಕೆ ಟರ್ಕಿ, ಇಂಡೋನೇಷ್ಯಾ ಸೇರಿದಂತೆ ಕೆಲ ದೇಶಗಳನ್ನು ಹೊರತುಪಡಿಸಿದರೆ ಉಳಿದ ದೇಶಗಳ ಬೆಂಬಲ ಸಿಗುತ್ತಿರಲಿಲ್ಲ.

ಭಾರತ ಬಳಿ 213 ಅಣುಬಾಂಬ್‌ ತಯಾರಿಸುವಷ್ಟು ಕಚ್ಚಾವಸ್ತು ರೆಡಿ!

ಈ ನಡುವೆ ಕಳೆದ ಕೆಲ ವರ್ಷಗಳಿಂದ ಭಾರತ (India)  ಸರ್ಕಾರ ಸೌದಿ ಅರೇಬಿಯಾ (Saudi Arebia) ಮತ್ತು ಯುಎಇ (UAE) ಜೊತೆಗಿನ ತನ್ನ ಸಂಬಂಧವನ್ನು ಗಮನಾರ್ಹ ರೀತಿಯಲ್ಲಿ ಅಭಿವೃದ್ಧಿಪಡಿಸಿಕೊಂಡಿದೆ. ಮತ್ತೊಂದೆಡೆ ತನ್ನ ಆರ್ಥಿಕತೆಗೆ ತೈಲ ಹೊರತುಪಡಿಸಿ ಉಳಿದ ಮಾರ್ಗಗಳನ್ನು ಹುಡುಕುತ್ತಿರುವ ಎರಡು ದೇಶಗಳಿಗೆ ಭಾರತ ಅತ್ಯಂತ ಅಗತ್ಯ. ಹೀಗಾಗಿ ಎರಡೂ ದೇಶಗಳು ಪಾಕಿಸ್ತಾನಕ್ಕಿಂತ ಹೆಚ್ಚಾಗಿ ಭಾರತದ ಜೊತೆಗೆ ಸ್ನೇಹದ ಹಸ್ತ ಚಾಚಲು ಮುಂದಾಗಿವೆ.

ಹೀಗಾಗಿಯೇ ಮೇಲ್ಕಂಡ ಎರಡೂ ವಿಷಯಗಳಲ್ಲಿ ಪಾಕಿಸ್ತಾನಕ್ಕೆ (Pakistan) ನಮ್ಮ ಬೆಂಬಲ ಇರುವುದಿಲ್ಲ ಎಂದು ಎರಡೂ ದೇಶಗಳು ಸ್ಪಷ್ಟಪಡಿಸಿವೆ. ಜೊತೆಗೆ ಪಾಕಿಸ್ತಾನದ ವಿರೋಧದ ಹೊರತಾಗಿಯೂ ಕಾಶ್ಮೀರದಲ್ಲಿ ದೊಡ್ಡಮಟ್ಟದ ಬಂಡವಾಳ ಹೂಡಿಕೆಗೆ ಉಭಯ ದೇಶಗಳು ಮುಂದಾಗಿವೆ ಎಂದು ವರದಿಗಳು ತಿಳಿಸಿವೆ.

ದಿವಾಳಿಯ ಅಂಚಿನಲ್ಲಿದ್ದರೂ, ಸಂಸದರ ನಿಧಿಯನ್ನು ಏರಿಸಿದ ಪಾಕಿಸ್ತಾನ ಸರ್ಕಾರ!

ಇದೇ ಕಾರಣಕ್ಕಾಗಿಯೇ ಇತ್ತೀಚೆಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌, ಭಾರತದೊಂದಿಗಿನ ಮೂರು ಯುದ್ಧಗಳು ನಮಗೆ ಸಾಕಷ್ಟುಪಾಠ ಕಲಿಸಿದೆ. ಇನ್ನು ಉಭಯ ದೇಶಗಳು ಶಾಂತಿಯತ್ತ ಹೆಜ್ಜೆ ಇಡಬೇಕು ಎಂಬ ಬಹಿರಂಗ ಸಂದೇಶ ರವಾನಿಸಿದ್ದರು ಎಂದು ಮೂಲಗಳು ತಿಳಿಸಿವೆ.

click me!