Ferry Caught Fire: ಢಾಕಾದಲ್ಲಿ ನದಿಯ ಮಧ್ಯೆ ಹಡಗಿಗೆ ಬೆಂಕಿ... 36 ಜನರ ದುರ್ಮರಣ

By Suvarna NewsFirst Published Dec 24, 2021, 12:56 PM IST
Highlights

ಢಾಕಾದಲ್ಲಿ ಹಡಗಿಗೆ ಬೆಂಕಿ 36 ಜನರ ದುರ್ಮರಣ
ಬಾಂಗ್ಲಾದೇಶದ ಜಲೋಕಾಟಿ ಜಿಲ್ಲೆಯಲ್ಲಿ ದುರಂತ
ನದಿಯ ಮಧ್ಯದಲ್ಲಿ ದೋಣಿ ಹೋಗುತ್ತಿದ್ದಾಗ ಬೆಂಕಿ ಅನಾಹುತ

ಢಾಕಾ: ಬಾಂಗ್ಲಾದೇಶದ ಜಲೋಕಾಟಿ ಜಿಲ್ಲೆಯಲ್ಲಿ ಬಹು ಮಹಡಿ  ಹಡಗೊಂದರಲ್ಲಿ ನದಿಯ ಮಧ್ಯದಲ್ಲಿ ಹೋಗುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದ್ದು, ಈ ದುರಂತದಲ್ಲಿ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ. 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.ಈ ಬೆಂಕಿ ಅನಾಹುತದಲ್ಲಿ ಹೆಚ್ಚಿನ ಜನರು ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದರೆ ಕೆಲವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಹೊತ್ತಿಕೊಂಡಾಗ ಹಡಗಿನಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

ವರದಿಗಳ ಪ್ರಕಾರ, ರಾಜಧಾನಿ ಢಾಕಾದಿಂದ ದಕ್ಷಿಣಕ್ಕೆ ಸುಮಾರು 250 ಕಿಮೀ ದೂರದಲ್ಲಿರುವ ದಕ್ಷಿಣ ಗ್ರಾಮೀಣ ಪಟ್ಟಣವಾದ ಝಲೋಕಾಟಿ(Jhalokati) ಬಳಿ ಇಂದು ಮುಂಜಾನೆ ಈ ದುರಂತ ಸಂಭವಿಸಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಝಲೋಕಾಟಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ (deputy commissioner) ಎಂಡಿ ನಜ್ಮುಲ್ ಆಲಂ (Md Nazmul Alam) ಢಾಕಾದಿಂದ ದಕ್ಷಿಣ ಬಾಂಗ್ಲಾದೇಶದ ಬರ್ಗುನಾ (Barguna) ಜಿಲ್ಲೆಗೆ ಸುಮಾರು 1,000 ಜನರನ್ನು  ಹಡಗಿನಲ್ಲಿ ಹೊತ್ತೊಯ್ಯುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿದರು. 

Bengaluru Crime: ಬಾರ್‌ಗೆ ಬೆಂಕಿ ಹಚ್ಚಲು ಬಂದವರು ಅಮಲಲ್ಲಿ ಕಾಂಡಿಮೆಂಟ್ಸ್‌ ಸುಟ್ಟರು

ಈ ಮಧ್ಯೆ ಸ್ಥಳೀಯ ಪೊಲೀಸ್ ಮುಖ್ಯಸ್ಥ ಮೊಯಿನುಲ್ ಇಸ್ಲಾಂ (Moinul Islam) ಮೂರು ಅಂತಸ್ತಿನ ಓಬಿಜನ್ 10 (Obhijan 10) ಹಡಗಿಗೆ ನದಿಯ ಮಧ್ಯದಲ್ಲಿದ್ದಾಗ ಬೆಂಕಿ ಹೊತ್ತಿಕೊಂಡಿದೆ. ಘಟನಾ ಸ್ಥಳದಿಂದ ನಾವು 36 ಶವಗಳನ್ನು ಹೊರ ತೆಗೆದಿದ್ದೇವೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು. ಹೆಚ್ಚಿನವರು ಬೆಂಕಿಯಿಂದ ಮತ್ತು ಕೆಲವರು ನದಿಗೆ ಹಾರಿ ನಂತರ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.  ಬೆಂಕಿಯು ಹಡಗಿನ ಎಂಜಿನ್ ಕೊಠಡಿಯಲ್ಲಿ ಕಾಣಿಸಿಕೊಂಡು ಬಳಿಕ ದೋಣಿ ಸೀಳಾಯಿತು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು  ಮೊಯಿನುಲ್ ಇಸ್ಲಾಂ ಹೇಳಿದ್ದಾರೆ.

Car Fire Safety Guide: ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುವುದೇಕೆ? ಪಾರಾಗುವುದು ಹೇಗೆ?

ಕೇವಲ 310  ಜನರನ್ನು ಹೊತ್ತೊಯ್ಯಬಲ್ಲ ಹಡಗು ಸಾಮರ್ಥ್ಯ ಮೀರಿ ಜನರನ್ನು ಹೊತ್ತೊಯ್ಯುತ್ತಿತ್ತು, ಅವರಲ್ಲಿ ಅನೇಕರು ದೇಶದ ರಾಜಧಾನಿಯಿಂದ ಮನೆಗೆ ಮರಳುತ್ತಿದ್ದವರಾಗಿದ್ದರು ಎಂದು ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡ  ಕನಿಷ್ಠ100 ಜನರನ್ನು ನಾವು ಚಿಕಿತ್ಸೆಗಾಗಿ ಹತ್ತಿರದ ಬರಿಸಾಲ್‌ (Barisal)ನ ಆಸ್ಪತ್ರೆಗೆ ದಾಖಲಿಸಿದ್ದೇವೆ.  ಸ್ಥಳೀಯ ಜಿಲ್ಲಾ ಆಡಳಿತಾಧಿಕಾರಿ ಜೋಹರ್ ಅಲಿ (Johar Ali) ಮಾತನಾಡಿ, ಬೆಂಕಿ ಕಾಣಿಸಿಕೊಂಡ ಒಂದು ಗಂಟೆಯೊಳಗೆ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಹತ್ತಿರದ  ಆಸ್ಪತ್ರೆಗಳಿಗೆ ರವಾನಿಸಿದ್ದಾರೆ ಎಂದು ತಿಳಿಸಿದರು.

At least 32 people were killed and 100 injured after a ferry carrying 500 caught fire in Bangladesh's district. pic.twitter.com/DBkuNSaAYP

— Afroz Alam🏴‍☠️ (@AfrozJournalist)

 

ಕೆಲ ತಿಂಗಳ ಹಿಂದೆ ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ದೋಣಿಗಳ ಮಧ್ಯೆ ಅಪಘಾತ ಸಂಭವಿಸಿ ಎರಡೂ ದೋಣಿಗಳು ಮುಳುಗಡೆಯಾಗಿದ್ದವು.  ಈ ವೇಳೆ  120ಕ್ಕೂ ಹೆಚ್ಚು ಮಂದಿ ಬೋಟ್‌ನಲ್ಲಿದ್ದರು ಎಂದು ವರದಿಯಾಗಿತ್ತು. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ NDRF, SDRF ತಂಡಗಳು ಬೇರೆ ಸಣ್ಣ ಸಣ್ಣ ದೋಣಿಗಳಲ್ಲಿ ಜನರನ್ನು ರಕ್ಷಿಸಿದ್ದರು. ನಿಮಾತಿ ಘಾಟ್‌ನಿಂದ ಮಜಲಿಗೆ ತೆರಳುತ್ತಿದ್ದ ಬೋಟ್ ಹಾಗೂ  ಮಜಲಿನಿಂದ ನಿಮಾತಿ ಘಾಟ್‌ಗೆ ಮರಳುತ್ತಿದ್ದ ಬೋಟ್‌ಗಳ ಮಧ್ಯೆ ಅಪಘಾತ ಸಂಭವಿಸಿತ್ತು. ಅಪಘಾತದ ನಂತರ ಎರಡೂ ಬೋಟ್‌ಗಳ ಪ್ರಯಾಣಿಕರು ನೀರಿನಲ್ಲಿ ಮುಳುಗಡೆಯಾಗಿದ್ದರು.  ಕೆಲವರು ಈಜಿ ದಡ ಸೇರಿದ್ದರು.

click me!