
ವಾಷಿಂಗ್ಟನ್: ಜು.4ಕ್ಕೆ ಅಮೆರಿಕ ದೇಶ ರಚನೆಯಾಗಿ 250ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆ ಅಲ್ಲಿನ ಸರ್ಕಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾವಚಿತ್ರವುಳ್ಳ ಚಿನ್ನದ ನಾಣ್ಯವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.ಅಮೆರಿಕದ ಕಾನೂನು ಪ್ರಕಾರ ಅಧ್ಯಕ್ಷರು ಬದುಕಿರುವಾಗಲೇ ನಾಣ್ಯದಲ್ಲಿ ಅವರ ಫೋಟೋ ಬಳಸುವಂತಿಲ್ಲ. ಆದರೆ ಇದು ಸ್ಮರಣಾರ್ಥ ನಾಣ್ಯವಾಗಿರುವ ಕಾರಣ, ಚಲಾವಣೆಯಲ್ಲಿರುವ ಕರೆನ್ಸಿಗಿಂತ ಭಿನ್ನ. ಹೀಗಾಗಿ ಟ್ರಂಪ್ ಫೋಟೋ ಬಳಕೆಯಾಗಿದೆ.
24 ಕ್ಯಾರೆಟ್ ಚಿನ್ನದ ನಾಣ್ಯದಲ್ಲಿ ಟ್ರಂಪ್ ಮುಷ್ಟಿ ಹಿಡಿದು ರೆಸಲ್ಯೂಟ್ ಮೇಜಿನ ಮೇಲೆ ಒರಗಿರುವುದನ್ನು ನೋಡಬಹುದು. ಅಮೆರಿಕದಲ್ಲಿ ಹಾಲಿ ಅಧ್ಯಕ್ಷರ ಫೋಟೋ ನಾಣ್ಯದ ಮೇಲೆ ಕಾಣಿಸಿಕೊಂಡಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು ಅಮೆರಿಕದ 30ನೇ ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ ಅವರ ಚಿತ್ರವು ಅಮೆರಿಕಕ್ಕೆ ಸ್ವಾತಂತ್ರ್ಯ ದೊರೆತ 150ನೇ ವರ್ಷಾಚರಣೆಗಾಗಿ 1926ರಲ್ಲಿ ಬಿಡುಗಡೆಗೊಳಿಸಲಾಗಿತ್ತು.
ವಾಷಿಂಗ್ಟನ್: ಅಮೆರಿಕದ ಕಾನೂನು ಜಾರಿ ಸಂಸ್ಥೆಯಾದ ಎಫ್ಬಿಐನ ಮುಖ್ಯಸ್ಥರಾಗಿದ್ದ ರಾಬರ್ಟ್ ಮುಲ್ಲರ್ III(81) ಮೃತರಾಗಿದ್ದಾರೆ. ಆದರೆ ಸಾವಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಭ್ರಮಿಸಿದ್ದು, ‘ಮುಲ್ಲರ್ ಸಾವಿನಿಂದ ಖುಷಿಯಾಗಿದೆ. ಆತ ಇನ್ನುಮುಂದೆ ಅಮಾಯಕರನ್ನು ನೋಯಿಸಲಾಗದು’ ಎಂದಿದ್ದಾರೆ.ಮುಲ್ಲರ್ ಅವರು 2016ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಟ್ರಂಪ್ ತಿರುಚಲು ಯತ್ನಿಸಿದ್ದ ಪ್ರಕರಣದಲ್ಲಿ, ತನಿಖಾ ತಂಡದ ವಿಶೇಷ ಸಲಹೆಗಾರರಾಗಿದ್ದರು. ಈ ದ್ವೇಷದಿಂದಲೇ ಟ್ರಂಪ್ ಅವರು, ಮುಲ್ಲರ್ ಸಾವಿಗೆ ಸಂತಾಪದ ಬದಲು ಸಂತಸ ವ್ಯಕ್ತಪಡಿಸಿದ್ದಾರೆ.
ಕೈರೋ: ಮಧ್ಯಪ್ರಾಚ್ಯ ಬಿಕ್ಕಟ್ಟು ಮುಂದುವರೆದಿರುವ ನಡುವೆಯೇ ಕತಾರ್ನಲ್ಲಿ ದೇಶದ ಸೇನೆಗೆ ಸೇರಿದ ಕತಾರಿ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಪತನಗೊಂಡಿದೆ. ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಓರ್ವ ಕಣ್ಮರೆಯಾಗಿದ್ದಾರೆ.ಶನಿವಾರ ರಾತ್ರಿ ಕತಾರ್ ಸಶಸ್ತ್ರ ಪಡೆಗಳಿಗೆ ಸೇರಿದ ಮಿಲಿಟರಿ ಹೆಲಿಕಾಪ್ಟರ್ ನಿಯಮಿತ ಗಸ್ತು ತಿರುಗುತ್ತಿದ್ದ ವೇಳೆ ದುರಂತ ನಡೆದಿದೆ ಎನ್ನಲಾಗಿದೆ. 6 ಮಂದಿ ಸಾವಿನ ಬಗ್ಗೆ ಆಂತರಿಕ ಸಚಿವಾಲಯ ದೃಢಪಡಿಸಿದೆ. ಆದರೆ ಅವರು ನಾಗರಿಕರೋ ಅಥವಾ ಮಿಲಿಟರಿಯೋ ಎಂಬುದರ ಬಗ್ಗೆ ಅದು ಹೇಳಿಲ್ಲ. ನಾಪತ್ತೆಯಾಗಿರುವವರ ಪತ್ತೆಗೆ ಶೋಧ ಮುಂದುವರೆದಿದೆ. ಇನ್ನು ರಕ್ಷಣಾ ಇಲಾಖೆ ಘಟನೆಗೆ ತಾಂತ್ರಿಕ ದೋಷ ಕಾರಣ ಎಂದಿದೆ.
ಯೂರಿಯಾ ಉತ್ಪಾದನೆ ಶೇ.50ರಷ್ಟು ಕಡಿತ
ನವದೆಹಲಿ : ‘ಮಧ್ಯಪ್ರಾಚ್ಯ ಸಂಘರ್ಷದಿಂದ ಗ್ಯಾಸ್ ಪೂರೈಕೆಯಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಯೂರಿಯಾ ಉತ್ಪಾದನೆ ಮೇಲೆ ಹೊಡೆತ ಬಿದ್ದಿದೆ. ಗೊಬ್ಬರ ಕಂಪನಿಗಳು ತಮ್ಮ ಸಾಮರ್ಥ್ಯದ ಅರ್ಧದಷ್ಟು ಮಾತ್ರ ಯೂರಿಯಾ ಉತ್ಪಾದನೆ ಮಾಡುತ್ತಿವೆ’ ಎಂದು ಮೂಲಗಳು ತಿಳಿಸಿವೆ.ಭಾರತದ ಅತಿದೊಡ್ಡ ಎಲ್ಎನ್ಜಿ ಸ್ವೀಕರಣಾ ಟರ್ಮಿನಲ್ ಅನ್ನು ನಿರ್ವಹಿಸುತ್ತಿರುವ ಪೆಟ್ರೋನೆಟ್ ಎಲ್ಎನ್ಜಿ ಕಂಪನಿಯು ಬೇಡಿಕೆಯಷ್ಟು ಗ್ಯಾಸ್ ಪೂರೈಸಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ಇದರ ಒಟ್ಟಾರೆ ಪರಿಣಾಮ ಗೇಲ್, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮೂಲಕ ದೇಶಾದ್ಯಂತ ಗೊಬ್ಬರ ಘಟಕಗಳಿಗೆ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಯೂರಿಯಾ ತಯಾರಿಕೆಯಲ್ಲಿ ಎಲ್ಎನ್ಜಿ ಪ್ರಮುಖ ಕಚ್ಚಾ ವಸ್ತು ಆಗಿರುವ ಹಿನ್ನೆಲೆಯಲ್ಲಿ ಗ್ಯಾಸ್ ಇಲ್ಲದೆ ಗೊಬ್ಬರ ಉತ್ಪಾದನಾ ಕಂಪನಿಗಳು ಯೂರಿಯಾ ಉತ್ಪಾದನೆ ಮಾಡಲಾಗದ ಸ್ಥಿತಿಗೆ ಬಂದಿವೆ.
ಈಗಾಗಲೇ ಗೊಬ್ಬರ ಕಂಪನಿಗಳಿಗೆ ಗ್ಯಾಸ್ ಪೂರೈಕೆ ಶೇ.60ರಿಂದ 65ರಷ್ಟು ಕಡಿತಗೊಂಡಿದೆ. ಇದರ ಪರಿಣಾಮ ಯೂರಿಯಾ ಉತ್ಪಾದನೆ ಶೇ.50ರಷ್ಟು ಕುಸಿತ ಕಂಡಿದೆ. ಭಾರತವು ವಿಶ್ವದಲ್ಲೇ ಅತಿದೊಡ್ಡ ಯೂರಿಯಾ ಬಳಸುವ ದೇಶವಾಗಿದ್ದು, ಇದೀಗ ಉತ್ಪಾದನೆ ಕಡಿತದಿಂದ ಕೃಷಿ ಮೇಲೂ ಪರಿಣಾಮ ಬೀರುವ ಸಂಭವವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ