ಇರಾನ್‌ ದಾಳಿಗೆ ಇಸ್ರೇಲ್‌ನ ಡಿಮೋನಾ ನಗರ ತತ್ತರ

Kannadaprabha News   | Kannada Prabha
Published : Mar 23, 2026, 04:14 AM IST
Iran

ಸಾರಾಂಶ

ಇರಾನ್‌ನ ನಟಾಂಜ್‌ ಅಣು ಸ್ಥಾವರದ ಮೇಲೆ ಇಸ್ರೇಲ್‌ ದಾಳಿ ಮಾಡಿದ ಬೆನ್ನಲ್ಲೇ ಅದಕ್ಕೆ ಪ್ರತೀಕಾರವಾಗಿ ಇಸ್ರೇಲ್‌ ಅತಿದೊಡ್ಡ ಯುರೇನಿಯಂ ಸಂಸ್ಕರಣಾ ಘಟಕ ಇರುವ ಡಿಮೋನಾ ನಗರದ ಮೇಲೆ ಇರಾನ್‌ ನಡೆಸಿದ ಕ್ಷಿಪಣಿ ದಾಳಿಯಲ್ಲಿ ನೂರಾರು ಮಂದಿಗೆ ಗಾಯಗಳಾಗಿವೆ.

ಟೆಲ್‌ ಅವಿವ್: ಇರಾನ್‌ನ ನಟಾಂಜ್‌ ಅಣು ಸ್ಥಾವರದ ಮೇಲೆ ಇಸ್ರೇಲ್‌ ದಾಳಿ ಮಾಡಿದ ಬೆನ್ನಲ್ಲೇ ಅದಕ್ಕೆ ಪ್ರತೀಕಾರವಾಗಿ ಇಸ್ರೇಲ್‌ ಅತಿದೊಡ್ಡ ಯುರೇನಿಯಂ ಸಂಸ್ಕರಣಾ ಘಟಕ ಇರುವ ಡಿಮೋನಾ ನಗರದ ಮೇಲೆ ಇರಾನ್‌ ನಡೆಸಿದ ಕ್ಷಿಪಣಿ ದಾಳಿಯಲ್ಲಿ ನೂರಾರು ಮಂದಿಗೆ ಗಾಯಗಳಾಗಿವೆ.ದಾಳಿಯಿಂದ ಯುರೇನಿಯಂ ಘಟಕಕ್ಕೆ ಯಾವುದೇ ಹಾನಿ ಆಗಿಲ್ಲ. ಆದರೆ ಬೆಂಕಿಯುಂಡೆ ಉಗುಳುತ್ತಿದ್ದ ಬೃಹತ್‌ ಕ್ಷಿಪಣಿಗಳು ನಟಾಂಜ್‌ ನಗರದ ಶಾಲಾ ಕಟ್ಟಟ, ಅಪಾರ್ಟ್‌ಮೆಂಟ್‌ಗಳ ಮೇಲೆ ಬಿದ್ದಿವೆ. ಇದರ ಪರಿಣಾಮ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅನೇಕ ಕಟ್ಟಡಗಳಿಗೆ ಹಾನಿ ಆಗಿದೆ. ಅಮಾಯಕರ ಮೇಲೆ ಇರಾನ್‌ ನಡೆಸಿದ ದಾಳಿ ಯುದ್ಧ ಕ್ರೌರ್ಯಕ್ಕೆ ಸಮ ಎಂದು ಇಸ್ರೇಲ್‌ ಹೇಳಿದೆ.

ಡಿಮೋನಾ ಅಣು ಕೇಂದ್ರದಲ್ಲೇನಿದೆ?:

ಡಿಮೋನಾ ಅಣು ಕೇಂದ್ರದಲ್ಲಿ ತನ್ನ ಅಣು ಸಂಶೋಧನಾ ಕೇಂದ್ರ ಇದೆ ಎಂದು ಇಸ್ರೇಲ್‌ ಹೇಳಿಕೊಳ್ಳುತ್ತದೆ. ಆದರೆ ಅದು ತನ್ನ ಅಣ್ವಸ್ತ್ರಗಳಿಗೆ ಅಗತ್ಯವಾದ ಪ್ಲುಟೋನಿಯಂ ಸಂಸ್ಕರಣೆಗೆ ಈ ಕೇಂದ್ರವನ್ನು ಬಳಸುತ್ತಿದೆ ಎಂಬ ಆರೋಪವಿದೆ.

ದಾಳಿಗೊಳಗಾದ ಡಿಮೋನಾ ನಗರಕ್ಕೆ ‘ಮಿನಿ ಭಾರತ’ ಖ್ಯಾತಿ

ನವದೆಹಲಿ: ಶನಿವಾರ ಇರಾನ್‌ನ ದಾಳಿಗೊಳಗಾದ ಇಸ್ರೇಲ್‌ನ ಡಿಮೋನಾ ನಗರ ಭಾರತೀಯ ಜನಸಂಖ್ಯೆಯನ್ನೇ ಹೆಚ್ಚು ಹೊಂದಿದ್ದು, ‘ಪುಟ್ಟ ಭಾರತ’ ಎಂದು ಕರೆಯಲ್ಪಡುತ್ತಿತ್ತು ಎಂಬ ಅಚ್ಚರಿಯ ಮಾಹಿತಿ ತಿಳಿದುಬಂದಿದೆ.ಡಿಮೋನಾ ಇಸ್ರೇಲ್‌ನ ಪರಮಾಣು ಶಸ್ತ್ರಾಗಾರದಿಂದ ಕೇವಲ 20 ಕಿ.ಮೀ. ವ್ಯಾಪ್ತಿಯಲ್ಲಿದೆ.

ಇಲ್ಲಿ ಸುಮಾರು 7,500 ಮಂದಿ ಭಾರತೀಯ ಯಹೂದಿಗಳಿದ್ದಾರೆ. ಇದು ನಗರದ ಒಟ್ಟು ಜನಸಂಖ್ಯೆಯ ಶೇ.30ರಷ್ಟು. ಇವರು 1950 ಮತ್ತು 60ರ ದಶಕದಲ್ಲಿ ಭಾರತದಿಂದ ಬಂದು ನೆಲೆ ನಿಂತವರು. ಬಹುತೇಕರು ಮಹಾರಾಷ್ಟ್ರದ ಬೆನೆ ಇಸ್ರೇಲಿಗಳಾಗಿದ್ದರೆ, ಕೆಲವು ಸಂಖ್ಯೆಯಲ್ಲಿ ಕೇರಳದ ಕೊಚ್ಚಿ ಯಹೂದಿಗಳು, ಕೋಲ್ಕತಾದ ಬಾಘ್ದಾದಿ ಯಹೂದಿಗಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಿಜೋರಾಂ ಹಾಗೂ ಮಣಿಪುರದಿಂದಲೂ ಕೆಲವರು ವಲಸೆ ಹೋಗಿದ್ದಾರೆ. ಹೆಚ್ಚಿನವರು ವಜ್ರ ವ್ಯಾಪಾರಿಗಳಾಗಿದ್ದು, ಐಟಿ ಉದ್ಯೋಗ ಹಾಗೂ ವೃದ್ಧರ ಆರೈಕೆದಾರರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಭಾರತ ಪ್ರವೇಶಿಸಿದ ಅನುಭವ:

ಡಿಮೋನಾ ನಗರದ ಒಳಹೊಕ್ಕರೆ ಭಾರತವನ್ನು ಪ್ರವೇಶಿಸಿದ ಅನುಭವವಾಗುತ್ತದೆ. ಇಲ್ಲಿ ನಿರರ್ಗಳವಾಗಿ ಮರಾಠಿ ಹಾಗೂ ಅಲ್ಪಸ್ವಲ್ಪ ಹಿಂದಿ ಮಾತನಾಡುವ ಜನರಿದ್ದಾರೆ. ಕ್ರಿಕೆಟ್‌ ಅಭಿಮಾನಿಗಳು ಮನೆಮನೆಯಲ್ಲೂ ಕಾಣಸಿಗುತ್ತಾರೆ. ಭಾರತೀಯ ಚಲನಚಿತ್ರೋತ್ಸವ ಹಾಗೂ ಸಂಗೀತೋತ್ಸವಗಳನ್ನು ಆಯೋಜನೆ ಮಾಡುತ್ತಾರೆ. ಅಂಗಡಿಗಳಲ್ಲಿ ಭಾರತೀಯ ತಿನಿಸುಗಳಾದ ಸೋನ್‌ಪಾಪ್ಡಿ, ಗುಲಾಬ್‌ ಜಾಮೂನು, ಪಾಪ್ರಿ ಚಾಟ್‌ ಹಾಗೂ ಭೇಲ್‌ ಪುರಿ ಮಾರಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯುದ್ಧದಲ್ಲಿ ನಮ್ಮನ್ನು ಬೆಂಬಲಿಸಿ : ವಿಶ್ವಕ್ಕೆ ನೆತನ್ಯಾಹು ಮನವಿ
ಅಮೆರಿಕ ದಾಳಿ ಮಾಡಿದ್ರೆ ಮುಂಬೈ, ದಿಲ್ಲಿಗೆ ಬಾಂಬ್‌ : ಪಾಕ್‌ ಮಾಜಿ ದೂತ