Threat to Gautam Gambhir : ಜೀವ ಬೆದರಿಕೆ ಹಾಕಿದ್ದು ಪಾಕ್‌ ಕಾಲೇಜು ಯುವಕ

By Kannadaprabha NewsFirst Published Nov 26, 2021, 6:56 AM IST
Highlights
  • ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್‌ ಗಂಭೀರ್‌ಗೆ ಇ-ಮೇಲ್‌ ಮೂಲಕ ಜೀವ ಬೆದರಿಕೆ
  • ಜೀವ ಬೆದರಿಕೆ ಒಡ್ಡಿದ್ದು ಪಾಕಿಸ್ತಾನದ ಕರಾಚಿ ಮೂಲಕ ಶಾಹೀದ್‌ ಹಮೀದ್‌ 

ನವದೆಹಲಿ (ನ.26): ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್‌ ಗಂಭೀರ್‌ಗೆ ಇ-ಮೇಲ್‌ ಮೂಲಕ ಜೀವ ಬೆದರಿಕೆ ಒಡ್ಡಿದ್ದು ಪಾಕಿಸ್ತಾನದ ಕರಾಚಿ ಮೂಲಕ ಶಾಹೀದ್‌ ಹಮೀದ್‌ ಎಂಬಾತ. 25 ವರ್ಷದ ಈತ ಕರಾಚಿಯ ಸಿಂಧ್‌ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಬೆದರಿಕೆಯ ಉದ್ದೇಶ ಏನೆಂದು ತಿಳಿದುಬಂದಿಲ್ಲ ಎಂದು ದೆಹಲಿ ಪೊಲೀಸ್‌ ಮೂಲಗಳು ತಿಳಿಸಿವೆ. ಮಂಗಳವಾರ ಗಂಭೀರ್‌ ಇ-ಮೇಲ್‌ ಖಾತೆಗೆ ‘ನಾವು ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ಕೊಲೆ ಮಾಡುತ್ತೇವೆ’ ಎಂಬ ಸಂದೇಶ ಬಂದಿತ್ತು. ಐಸಿಸ್‌ನಿಂದ ಜೀವ ಬೆದರಿಕೆ ಬಂದಿದೆ ಎಂದು ಗಂಭೀರ್‌ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಆದರೆ ಅದು ವಿದ್ಯಾರ್ಥಿಯೋರ್ವನಿಂದ ಬಂದಿದ್ದೆಂದು ತಿಳಿದು ಬಂದಿದೆ. 

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ (Former Team India Cricketer) ಹಾಗೂ ಬಿಜೆಪಿ ಸಂಸದ (BJP MP) ಗೌತಮ್‌ ಗಂಭೀರ್‌ಗೆ ಕಾಶ್ಮೀರ್ ಐಸಿಸ್ ಉಗ್ರರಿಂದ ಜೀವ ಬೆದರಿಕೆ ಬಂದಿದೆ ಎಂದೇ ನಂಬಲಾಗಿತ್ತು. ಇದರ ಬೆನ್ನಲ್ಲೇ ಪೂರ್ವ ದೆಹಲಿಯ ಸಂಸದ ಗೌತಮ್ ಗಂಭೀರ್ (Gautam Gambhir), ದೆಹಲಿ ಪೊಲೀಸರಲ್ಲಿ ದೂರ ದಾಖಲಿಸಿದ್ದರು. ಗಂಭೀರ್‌ಗೆ ಜೀವ ಬೆದರಿಕೆ (Death Threat) ಬಂದಿರುವ ರಾಜಕೀಯ ವಲಯದಲ್ಲಿ ಸಂಚಲನಕ್ಕೀಡು ಮಾಡಿಕೊಟ್ಟಿತ್ತು. ಗೌತಮ್ ಗಂಭೀರ್ ಅವರ ಅಧಿಕೃತ ಇ-ಮೇಲ್‌ಗೆ ಜೀವ ಬೆದರಿಕೆ ಬಂದಿತ್ತು.

ಗೌತಮ್‌ ಗಂಭೀರ್‌ಗೆ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರಲ್ಲಿ (Delhi Police) ದೂರು ದಾಖಲಿಸಿದ್ದರು. ಇದರ ಜತೆಗೆ ತಮಗೆ ಹೆಚ್ಚುವರಿ ಭದ್ರತೆ ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು.. ಮಂಗಳವಾರ ಸಂಜೆ ಗೌತಮ್ ಗಂಭೀರ್ ಅಧಿಕೃತ  ಇ-ಮೇಲ್ (Email) ಖಾತೆಯ ಮೂಲಕ ಐಸಿಸ್ ಕಾಶ್ಮೀರ್ (ISIS Kashmir) ಹೆಸರಿನಲ್ಲಿ ಉಗ್ರರು ಜೀವ ಬೆದರಿಕೆ ಹಾಕಿದ್ದಾರೆ. ಈ ಸಂಸದ ಹಾಗೂ ಅವರ ಕುಟುಂಬದ ಮೇಲೆ ಜೀವಬೆದರಿಕೆ ಹಾಕಲಾಗಿತ್ತು ಹೀಗಾಗಿ ಈ ಸಂಬಂಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಸೆಂಟ್ರಲ್ ಡಿಸ್ಟ್ರಿಕ್ಟ್ ಡಿಸಿಪಿಗೆ ಗೌತಮ್ ಗಂಭೀರ್ ಅವರ ಆಪ್ತ ಸಹಾಯಕ ಗೌರವ್ ಅರೋರಾ ಮನವಿ ಮಾಡಿಕೊಂಡಿದ್ದರು.

ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಐಸಿಸ್ ಕಾಶ್ಮೀರ್ ಉಗ್ರರಿಂದ ಜೀವ ಬೆದರಿಕೆ ಹಾಕಲಾಗಿದೆ ಎಂದು ಗೌತಮ್ ಗಂಭೀರ್ ಡೆಲ್ಲಿ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣದ ತನಿಖೆ ಆರಂಭವಾಗಿದೆ. ಗೌತಮ್ ಗಂಭೀರ್ ನಿವಾಸದ ಬಳಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಡಿಸಿಪಿ ಶ್ವೇತಾ ಚೌಹ್ಹಾಣ್ ತಿಳಿಸಿದ್ದಾರೆ. ಗೌತಮ್ ಗಂಭೀರ್ ಪರವಾಗಿ ಅವರ ಆಪ್ತ ಸಹಾಯಕ ಗೌರವ್ ಅರೋರಾ ನೀಡಿದ ದೂರಿನ ಅನ್ವಯ ಪ್ರಕರಣದ ಕುರಿತಂತೆ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ. 40 ವರ್ಷದ ಗೌತಮ್ ಗಂಭೀರ್ ಹಲವು ಸಂದರ್ಭಗಳಲ್ಲಿ ಉಗ್ರವಾದದ ಕುರಿತಂತೆ ಗಟ್ಟಿ ಧ್ವನಿಯಲ್ಲಿ ಖಂಡಿಸಿದ್ದರು.

ಟೀಂ ಇಂಡಿಯಾ (Team India) ಎಡಗೈ ಬ್ಯಾಟರ್‌ ಗೌತಮ್ ಗಂಭೀರ್, ಭಾರತ ಹಾಗೂ ಪಾಕ್‌ (Indo-Pak Border) ಗಡಿಯಲ್ಲಿ ನಡೆಯುತ್ತಿರುವ ಪಾಕ್ ಪ್ರೇರಿತ ಭಯೋತ್ಪಾದನೆಯ ಕುರಿತಂತೆ ಪದೇ ಪದೇ ಧ್ವನಿಯೆತ್ತುತ್ತಲೇ ಬಂದಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಗೌತಮ್ ಗಂಭೀರ್, ಗಡಿಯಲ್ಲಿ ಪಾಕ್ ಪ್ರೇರಿತ ಭಯೋತ್ಫಾದನೆ (cross-border terrorism) ನಿಲ್ಲುವವರೆಗೂ ಪಾಕಿಸ್ತಾನದ ಜತೆ ಯಾವುದೇ ವ್ಯಾಪಾರ ವಹಿವಾಟುಗಳನ್ನು ಇಟ್ಟುಕೊಳ್ಳಬಾರದು ಎಂದು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಭಾರತ ಸೈನಿಕರ ಜೀವಕ್ಕಿಂತ ಮಹತ್ವವಾದ್ದದ್ದೂ ಬೇರೇನು ಇಲ್ಲ ಎಂದು ಹೇಳಿದ್ದರು.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ 2011ರ ಏಕದಿನ ವಿಶ್ವಕಪ್‌ ಹಾಗೂ 2007ರ ಟಿ20 ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗಂಭೀರ್ 2007ರ ಟಿ20 ಟಿ20 ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ದ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಇನ್ನು ಮುಂಬೈನ ವಾಂಖೆಡೆ ಮೈದಾನದಲ್ಲಿ 2011ರ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ದ 97 ರನ್‌ ಸಿಡಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

click me!