
ಢಾಕಾ (ಡಿ.27): ಬಾಂಗ್ಲಾದೇಶ ಪ್ರಸ್ತುತ ಹಲವು ರೀತಿಯಲ್ಲಿ ತೊಂದರೆಗಳನ್ನು ಎದುರಿಸುತ್ತಿದೆ. ವಿದ್ಯಾರ್ಥಿ ನಾಯಕ ಷರೀಫ್ ಉಸ್ಲಾಮ್ ಹಾದಿ ಹತ್ಯೆಯ ನಂತರ, ಬಾಂಗ್ಲಾದೇಶದಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತು. ರಾಜಕೀಯ ಅಶಾಂತಿ ಕಂಡುಬಂದಿದೆ. ಈಗ ಮತ್ತೊಂದು ಗಂಭೀರ ಬಿಕ್ಕಟ್ಟು ಉದ್ಭವಿಸಿದೆ. ಇತ್ತೀಚಿನ ವರದಿಯ ಪ್ರಕಾರ, ಮುಂದಿನ ವರ್ಷದ ಆರಂಭದಲ್ಲಿ ಕನಿಷ್ಠ ಒಂದು ತಿಂಗಳ ಕಾಲ ಬಾಂಗ್ಲಾದೇಶದಲ್ಲಿ ಕಾಂಡೋಮ್ಗಳ ಪೂರೈಕೆಯಲ್ಲಿ ಅಡಚಣೆ ಉಂಟಾಗಬಹುದು. ಬಾಂಗ್ಲಾದೇಶದಲ್ಲಿ ಜನನ ಪ್ರಮಾಣ ಹೆಚ್ಚುತ್ತಿರುವ ಸೂಚನೆಗಳಿರುವ ಸಮಯದಲ್ಲಿ ಈ ಪರಿಸ್ಥಿತಿ ಬಂದಿದೆ. ಸ್ಥಳೀಯ ಪತ್ರಿಕೆ ದಿ ಡೈಲಿ ಸ್ಟಾರ್ ವರದಿಯ ಪ್ರಕಾರ, ಹಣ ಮತ್ತು ಸಿಬ್ಬಂದಿ ಕೊರತೆಯಿಂದಾಗಿ, ಬಾಂಗ್ಲಾದೇಶವು ಪ್ರಸ್ತುತ 38 ದಿನಗಳ ಕಾಂಡೋಮ್ಗಳನ್ನು ಮಾತ್ರ ಸ್ಟಾಕ್ನಲ್ಲಿ ಹೊಂದಿದೆ. 38 ದಿನಗಳ ಈ ಸ್ಟಾಕ್ ಖಾಲಿಯಾದ ಬಳಿಕ ಕನಿಷ್ಠ ಒಂದು ತಿಂಗಳಾದರೂ ಕಾಂಡೋಮ್ಗಳು ಲಭ್ಯವಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾದೇಶವು 50 ವರ್ಷಗಳಲ್ಲಿ ಮೊದಲ ಬಾರಿಗೆ ಒಟ್ಟು ಫಲವತ್ತತೆ ದರದಲ್ಲಿ (TFR) ಹೆಚ್ಚಳ ದಾಖಲಿಸಿರುವ ಸಮಯದಲ್ಲಿ ಕಾಂಡೋಮ್ ಬಿಕ್ಕಟ್ಟು ಬಂದಿದೆ. ಮಲ್ಟಿಪಲ್ ಇಂಡಿಕೇಟರ್ ಕ್ಲಸ್ಟರ್ ಸಮೀಕ್ಷೆ 2025 ರ ಪ್ರಕಾರ, ದೇಶದ TFR 2.4 ಕ್ಕೆ ಏರಿದೆ, ಕಳೆದ ವರ್ಷ 2.3 ರಷ್ಟಿತ್ತು. ಇತ್ತೀಚಿನ ವರ್ಷಗಳಲ್ಲಿ, ಅನೇಕ ದಂಪತಿಗಳು ಕುಟುಂಬ ಯೋಜನೆಯಿಂದ ದೂರ ಸರಿಯುತ್ತಿದ್ದಾರೆ. ಎರಡಕ್ಕಿಂತ ಹೆಚ್ಚು ಜನಿಸುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಗರ್ಭನಿರೋಧಕಗಳ ಕೊರತೆಯಿಂದಾಗಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು.
ಕುಟುಂಬ ಯೋಜನಾ ನಿರ್ದೇಶನಾಲಯ (DGFP) ದೇಶದಲ್ಲಿ ಕುಟುಂಬ ಯೋಜನಾ ಕಾರ್ಯಕ್ರಮದಡಿಯಲ್ಲಿ ಜನರಿಗೆ ಉಚಿತ ಗರ್ಭನಿರೋಧಕಗಳನ್ನು ಒದಗಿಸುತ್ತದೆ. ಇದರಲ್ಲಿ ಕಾಂಡೋಮ್ಗಳು, ಗರ್ಭನಿರೋಧಕ ಮಾತ್ರೆಗಳು, IUDಗಳು, ಇಂಜೆಕ್ಷನ್ಗಳು ಮತ್ತು ಇಂಪ್ಲಾಂಟ್ಗಳು ಸೇರಿವೆ. ಆದರೆ ಈಗ ಈ ವ್ಯವಸ್ಥೆಯು ಗಂಭೀರ ಬಿಕ್ಕಟ್ಟಿನಲ್ಲಿದೆ.
ರಾಷ್ಟ್ರೀಯ ಗರ್ಭನಿರೋಧಕ ಸಾರಾಂಶ ವರದಿಯ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ಕಾಂಡೋಮ್ಗಳ ಪೂರೈಕೆ ಶೇಕಡಾ 57 ರಷ್ಟು ಕಡಿಮೆಯಾಗಿದೆ. ಕಾಂಡೋಮ್ಗಳು ಮಾತ್ರವಲ್ಲದೆ, ಇತರ ಗರ್ಭನಿರೋಧಕಗಳ ಲಭ್ಯತೆಯೂ ಕಡಿಮೆಯಾಗುತ್ತಿದೆ. ಅಂಕಿಅಂಶಗಳ ಪ್ರಕಾರ, ಗರ್ಭನಿರೋಧಕ ಮಾತ್ರೆಗಳ ಪೂರೈಕೆ ಶೇಕಡಾ 63 ರಷ್ಟು ಕಡಿಮೆಯಾಗಿದೆ. IUDಗಳ ಲಭ್ಯತೆ ಶೇಕಡಾ 64 ರಷ್ಟು ಕಡಿಮೆಯಾಗಿದೆ. ಇಂಜೆಕ್ಷನ್ಗಳು ಶೇಕಡಾ 41 ರಷ್ಟು ಕಡಿಮೆಯಾಗಿದೆ. ಇಂಪ್ಲಾಂಟ್ಗಳ ಪೂರೈಕೆ ಶೇಕಡಾ 37 ರಷ್ಟು ಕಡಿಮೆಯಾಗಿದೆ.
"ಖರೀದಿಗೆ ಸಂಬಂಧಿಸಿದ ಕಾನೂನು ವಿವಾದ ಬಗೆಹರಿದರೆ, ಕೆಲವು ಗರ್ಭನಿರೋಧಕಗಳ ಪೂರೈಕೆ ಶೀಘ್ರದಲ್ಲೇ ಪ್ರಾರಂಭವಾಗಬಹುದು" ಎಂದು ಡಿಜಿಎಫ್ಪಿಯ ಲಾಜಿಸ್ಟಿಕ್ಸ್ ಮತ್ತು ಸರಬರಾಜು ಘಟಕದ ನಿರ್ದೇಶಕ ಅಬ್ದುರ್ ರಝಾಕ್ ಹೇಳಿದರು.ಇಲ್ಲದೇ ಇದ್ದಲ್ಲಿ ಕಾಂಡೋಮ್ಗಳ ಕೊರತೆ ಉಂಟಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು. ಕನಿಷ್ಠ ಒಂದು ತಿಂಗಳಾದರೂ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಕ್ಷೇತ್ರ ಮಟ್ಟದ ಸಿಬ್ಬಂದಿ ಕೊರತೆಯಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಕಾನೂನು ಸಮಸ್ಯೆಗಳಿಂದಾಗಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ಸಿಬ್ಬಂದಿ ಗರ್ಭನಿರೋಧಕಗಳನ್ನು ವಿತರಿಸಲು ಮನೆ ಮನೆಗೆ ಹೋಗುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ