ಬೆಂಗಳೂರಲ್ಲಿ ಆಸ್ಪ್ರೇಲಿಯಾ ದೂತಾವಾಸ ಕಚೇರಿ ಇದೇ ತಿಂಗಳಲ್ಲಿಆರಂಭ

By Kannadaprabha NewsFirst Published May 25, 2023, 5:32 AM IST
Highlights

ಭಾರತದ ಐಟಿ ಸಿಟಿ ಬೆಂಗಳೂರಿನಲ್ಲಿ ನೂತನ ದೂತಾವಾಸ ಕಚೇರಿ ಆರಂಭಿಸಲಾಗುವುದು ಎಂದು ಆಸ್ಪ್ರೇಲಿಯಾದ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ (Anthony Albanese) ಘೋಷಣೆ ಮಾಡಿದ್ದಾರೆ.

ಸಿಡ್ನಿ: ಭಾರತದ ಐಟಿ ಸಿಟಿ ಬೆಂಗಳೂರಿನಲ್ಲಿ ನೂತನ ದೂತಾವಾಸ ಕಚೇರಿ ಆರಂಭಿಸಲಾಗುವುದು ಎಂದು ಆಸ್ಪ್ರೇಲಿಯಾದ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ (Anthony Albanese) ಘೋಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಸ್ಬೇನ್‌ನಲ್ಲಿ (Brisbane)ಭಾರತೀಯ ದೂತಾವಾಸ ಆರಂಭಿಸುವ ಘೋಷಣೆ ಮಾಡಿದ ಬೆನ್ನಲ್ಲೇ, ಮಿತ್ರ ದೇಶದಿಂದಲೂ ಅದೇ ರೀತಿಯ ಘೋಷಣೆ ಮಾಡಲಾಗಿದೆ.

ಈ ಕುರಿತು ಗುರುವಾರ ಇಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅಲ್ಬನೀಸ್‌ ‘ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ವಿಸ್ತರಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಇದೇ ತಿಂಗಳು ನೂತನ ದೂತಾವಾಸ ಕಚೇರಿ ಆರಂಭಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ದೆಹಲಿ (Delhi), ಕೋಲ್ಕತಾ, ಮುಂಬೈ (Mumbai), ಚೆನ್ನೈ ಬಳಿಕ 5ನೇ ಕಚೇರಿ ಆರಂಭಗೊಂಡಂತೆ ಆಗಲಿದೆ. ಈ ಕಚೇರಿಯು ದೇಶದ ಉದ್ಯಮಗಳನ್ನು ಭಾರತದಲ್ಲಿ ಹೊಸ ಅಲೆ ಎಬ್ಬಿಸುತ್ತಿರುವ ಡಿಜಿಟಲ್‌ (digital) ಮತ್ತು ನಾವೀನ್ಯತಾ ವಲಯದೊಂದಿಗೆ ಜೋಡಿಸಲು ನೆರವು ನೀಡಲಿದೆ’ ಎಂದು ಹೇಳಿದ್ದಾರೆ.

ಸಿಡ್ನಿಯಲ್ಲಿ ಕಾಂತಾರದ ‘ವರಾಹ ರೂಪಂ’ ಮಿಂಚು; ಪಾಕಿಸ್ತಾನಿಯರೂ ಕೂಡಾ ಮೋದಿ ಪ್ರೀತಿಸ್ತಾರೆ ಎಂದ ಗಾಯಕ

ಭಾರತವು ಇದುವರೆಗೂ ಆಸ್ಪ್ರೇಲಿಯಾದಲ್ಲಿ ಸಿಡ್ನಿ, ಮೆಲ್ಬರ್ನ್‌ ಮತ್ತು ಪರ್ಥ್‌ನಲ್ಲಿ ದೂತಾವಾಸ ಕಚೇರಿ ಹೊಂದಿತ್ತು. ಇದೀಗ ಬ್ರಿಸ್ಬೇನ್‌ನಲ್ಲೂ ಹೊಸ ಕಚೇರಿ ಆರಂಭಕ್ಕೆ ನಿರ್ಧರಿಸಿದೆ.

ಆಸ್ಪ್ರೇಲಿಯಾದಲ್ಲಿ ಹಿಂದೂ ದೇಗುಲ ದಾಳಿಗೆ ಮೋದಿ ಕಳವಳ

ಆಸ್ಪ್ರೇಲಿಯಾದಲ್ಲಿ ಇತ್ತೀಚೆಗೆ ಹಿಂದೂ ದೇಗುಲಗಳ ಮೇಲೆ ನಡೆದ ಸರಣಿ ದಾಳಿಯ ಬಗ್ಗೆ ಪ್ರಧಾನಿ ನರೇಂದ್ರ (PM) ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭಾರತ ಮತ್ತು ಆಸ್ಪ್ರೇಲಿಯಾ ನಡುವಿನ ಸಂಬಂಧವನ್ನು ಹಾಳುಗೆಡವುವ ಇಂಥ ಕೃತ್ಯಗಳು ಮತ್ತು ಚಿಂತನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದು ಎಚ್ಚರಿಸಿದ್ದಾರೆ. ಇದರ ಬೆನ್ನಲ್ಲೇ ಆಸ್ಪ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನಿಸ್‌ ಕೂಡಾ ದಾಳಿಯನ್ನು ಖಂಡಿಸಿದ್ದು, ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.

ಅಸ್ಟ್ರೇಲಿಯಾದಲ್ಲಿ ಮೋದಿ ಮೇನಿಯಾ: ಜಗತ್ತಿನಾದ್ಯಂತ ಭಾರತದ ಟ್ಯಾಲೆಂಟ್‌ ಫ್ಯಾಕ್ಟರಿ ಇದೆ ಎಂದ ಪ್ರಧಾನಿ

ತಮ್ಮ 3 ದಿನಗಳ ಆಸ್ಪ್ರೇಲಿಯಾ ಪ್ರವಾಸದ ಕಡೆಯ ದಿನ ಅಲ್ಬನೀಸ್‌ ಜೊತೆ ಮಾತುಕತೆ ನಡೆಸಿದ ಬಳಿಕ ಜಂಟಿ ಹೇಳಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ‘ಅಲ್ಬನೀಸ್‌ ಮತ್ತು ನಾನು ಈ ಹಿಂದೆಯೂ ಆಸ್ಪ್ರೇಲಿಯಾದಲ್ಲಿನ ದೇಗುಲಗಳ (hindu temple) ಮೇಲಿನ ದಾಳಿ ಮತ್ತು ಪ್ರತ್ಯೇಕವಾದಿ ಶಕ್ತಿಗಳ ಬಗ್ಗೆ ಚರ್ಚೆ ನಡೆಸಿದ್ದೆವು. ಈ ವಿಷಯವನ್ನು ನಾವು ಇಂದೂ ಚರ್ಚಿಸಿದೆವು. ಆಸ್ಪ್ರೇಲಿಯಾ ಮತ್ತು ಭಾರತದ ನಡುವಣ ಸ್ನೇಹಪೂರ್ವಕ ಮತ್ತು ಉತ್ತಮ ಸಂಬಂಧವನ್ನು ಹಾಳುಮಾಡುವ ಯಾವುದೇ ಕೃತ್ಯ ಮತ್ತು ಚಿಂತನೆಗಳನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಇಂಥ ಶಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಮತ್ತು ಮುಂದಿನ ದಿನಗಳಲ್ಲಿ ಇಂಥ ಘಟನೆ ನಡೆಯದಂತೆ ನೋಡಿಕೊಳ್ಳುವ ಭರವಸೆಯನ್ನು ಆ್ಯಂಟನಿ ನೀಡಿದ್ದಾರೆ ಎಂದು ಹೇಳಿದರು.

ಬಳಿಕ ಅಲ್ಬನೀಸ್‌ ಮಾತನಾಡಿ ಆಸ್ಪ್ರೇಲಿಯಾ ಬಹುಸಂಸ್ಕೃತಿಯ ದೇಶ ಮತ್ತು ಅದು ಎಲ್ಲಾ ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತದೆ. ಹೀಗಾಗಿ ಇಂಥ ದಾಳಿಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ಕ್ರಮ ಜರುಗಿಸಲಾಗುತ್ತಿದೆ’ ಎಂದು ಹೇಳಿದರು. ಈ ನಡುವೆ, ವ್ಯಾಪಾರ, ಶಿಕ್ಷಣ, ರಕ್ಷಣೆ ಹಾಗೂ ಇತರ ಕ್ಷೇತ್ರಗಳಲ್ಲಿ ಸಂಬಂಧ ಬಲಪಡಿಸಲು ಉಭಯ ನಾಯಕರು ಒಮ್ಮತಕ್ಕೆ ಬಂದರು. ಕಳೆದ ಕೆಲ ತಿಂಗಳಲ್ಲಿ ಆಸ್ಪ್ರೇಲಿಯಾದ ವಿವಿಧ ನಗರಗಳಲ್ಲಿ ಸ್ವಾಮಿ ನಾರಾಯಣ (swami narayana), ಇಸ್ಕಾನ್‌ (Iskan), ವಿಷ್ಣು ದೇಗುಲದ ಮೇಲೆ ಸಿಖ್‌ ಪ್ರತ್ಯೇಕತಾವಾದಿಗಳು ದಾಳಿ ನಡೆಸಿದ್ದರು. ಜೊತೆಗೆ ಗೋಡೆಗಳ ಮೇಲೆ ಭಾರತ ವಿರೋಧಿ, ಮೋದಿ ವಿರೋಧಿ ಹೇಳಿಕೆ ಬರೆದಿದ್ದರು.

click me!