
ಧಾಡಿಂಗ್ (ನೇಪಾಳ): ಇಂದು ನಸುಕಿನ ಜಾವ ಬಸ್ಸೊಂದು ನದಿಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ ನೇಪಾಳದ ಧಾಡಿಂಗ್ನಲ್ಲಿ ಪ್ರಯಾಣಿಕರ ಬಸ್ಸೊಂದು ತ್ರಿಶೂಲಿ ನದಿಗೆ ಉರುಳಿಬಿದ್ದ ಪರಿಣಾಮ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈಅಪಘಾತದಲ್ಲಿ 24 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ, ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಬೆಳಗಿನ ಜಾವ 1.30 ರ ಸುಮಾರಿಗೆ ಬಸ್ ಪೃಥ್ವಿ ಹೆದ್ದಾರಿಯಿಂದ ಹೊರಟು ಭೈನ್ಸಿಗೌಡಾದ ಬೆನಿಘಾಟ್ ರೋರಾಂಗ್ ಗ್ರಾಮೀಣ ಪುರಸಭೆ -5 ಬಳಿ ಅಪಘಾತಕ್ಕೀಡಾಗಿ ನದಿಗೆ ಬಿದ್ದಿದೆ. ಅಪಘಾತ ಸ್ಥಳದ ದೃಶ್ಯಗಳು ಆನ್ಲೈನ್ನಲ್ಲಿ ಕಾಣಿಸಿಕೊಂಡಿದ್ದು, ನದಿಗೆ ಬಿದ್ದ ನಂತರ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿರುವುದು ವೀಡಿಯೋದಲ್ಲಿ ಕಾಣಿಸುತ್ತಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಇಲ್ಲಿಯವರೆಗೆ 17 ಜನರ ಶವಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಸಶಸ್ತ್ರ ಪೊಲೀಸ್ ಪಡೆ (ಎಪಿಎಫ್) ವಕ್ತಾರ ಬಿಷ್ಣು ಪ್ರಸಾದ್ ಭಟ್ಟ ಈ ಸುದ್ದಿಯನ್ನು ದೃಢಪಡಿಸಿದ್ದು, ಬದುಕುಳಿದಿರುವವರಿಗಾಗಿ ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಹೇಳಿದರು. ಗಾಯಗೊಂಡ 24 ಪ್ರಯಾಣಿಕರನ್ನು ಸ್ಥಳದಿಂದ ರಕ್ಷಿಸಿ ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ಅವರು ಹೇಳಿದರು. ಮೃತರು ಮತ್ತು ಗಾಯಾಳುಗಳ ಗುರುತುಗಳು ಇನ್ನೂ ದೃಢಪಟ್ಟಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ಡ್ರಗ್ ದೊರೆ ಹತ್ಯೆ: ಮೆಕ್ಸಿಕೋದಲ್ಲಿ ಹೊತ್ತಿದ ಸೇಡಿನ ಜ್ವಾಲೆ
ಬಸ್ ಅಪಘಾತಕ್ಕೆ ನಿಖರವಾದ ಕಾರಣವನ್ನು ಅಧಿಕಾರಿಗಳು ಇಲ್ಲಿಯವರೆಗೆ ನಿರ್ಧರಿಸಿಲ್ಲ. ನೇಪಾಳದ ಮೂರು ಭದ್ರತಾ ಸಂಸ್ಥೆಗಳ ಸಮನ್ವಯದೊಂದಿಗೆ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ನದಿಯಲ್ಲಿ ಶೋಧ ಕಾರ್ಯ ಮುಂದುವರೆದಿದ್ದು, ಆದಂಘಾಟ್ನಲ್ಲಿರುವ ಎಪಿಎಫ್ ನೇಪಾಳ ವಿಪತ್ತು ನಿರ್ವಹಣಾ ಘಟಕದ ಡೈವರ್ಗಳನ್ನು ಒಳಗೊಂಡ ವಿಶೇಷ ತಂಡ ಈ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.
ಇದನ್ನೂ ಓದಿ: ಬೆಂಗಾಳಿ ರಾಜಕಾರಣದ ಚಾಣಕ್ಯ, ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ಹೃದಯಾಘಾತಕ್ಕೆ ಬಲಿ
ಈ ರಕ್ಷಣಾ ಕಾರ್ಯಾಚರಣೆ ನೇತೃತ್ವವನ್ನು ವಿಪತ್ತು ನಿರ್ವಹಣಾ ತರಬೇತಿ ಶಾಲೆಯ ಎಪಿಎಫ್ನ ಉಪ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಗಿರಿ ವಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳವೂ ರಕ್ಷಣಾ ಕಾರ್ಯಾಚರಣೆಗೆ ಸವಾಲಿನ ಭೂಪ್ರದೇಶವಾಗಿದ್ದು, ಮತ್ತು ನದಿಯ ಹರಿವು ಕಾರ್ಯಾಚರಣೆಯನ್ನು ಕಷ್ಟಕರವಾಗಿಸುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ