
ಚೆನ್ನೈ (ಸೆ.02) ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಇತ್ತೀಚೆಗೆ ಹಾವು ಕಡಿತ ಪ್ರಕರಣಗಳು ಹೆಚ್ಚಾಗಿದೆ. ಈ ಕುರಿತು ವಿಧಾನಸಭೆಯಲ್ಲಿ ಮಾತ್ರ ಸ್ವಾರಸ್ಯಕರ ಚರ್ಚೆ ನಡೆದಿದೆ. ಮಾಜಿ ಮುಖ್ಯಮಂತ್ರಿ ಹಾವು ಕಡಿತ ಪ್ರಕರಣಗಳ ಕುರಿತು ವಿಚಾರ ಮುಂದಿಟ್ಟು ನಾಗದೋಷ ಎಂದರೆ, ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವರು ಜಲದೋಷ ಎಂದು ಪ್ರತಿಕ್ರಿಯಿಸಿದ್ದಾರೆ. ಹೌದು, ತಮಿಳುನಾಡು ವಿಧಾನಸಭೆಯಲ್ಲಿ ಈ ಚರ್ಚೆ ಭಾರಿ ಸದ್ದು ಮಾಡುತ್ತಿದೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ, ಹಾಲಿ ಶಾಸಕ ಪನೀರ್ ಸೆಲ್ವಂ ತಮಿಳುನಾಡಿನಲ್ಲಿ ಹೆಚ್ಚಾಗಿರುವು ಹಾವು ಕಡಿತ ಪ್ರಕರಣಗಳತ್ತ ಬೆಳಕು ಚೆಲ್ಲಿದರು. ತಮಿಳುನಾಡು ಹಲವು ಭಾಗದಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಾಗಿದೆ. ಇದು ನಾಗದೋಷದ ಸಮಸ್ಯೆಯಾಗಿರಬಹುದು. ಈ ದೋಷ ಪರಿಹಾರಕ್ಕಾಗಿ ರಾಜ್ಯದ ದೇವಸ್ಥಾನಗಳಲ್ಲಿ ಪೂಜೆ ನಡೆಸಿ ಎಂದು ಕುಟುಕಿದ್ದಾರೆ. ಈ ಮೂಲಕ ರಾಜ್ಯದಲ್ಲಿನ ಹಾವು ಕಡಿತ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ಕೊರತೆ, ಹಾವು ಕಡಿತ ಪ್ರಕರಣ ತಗ್ಗಿಸಲು ಕಾರ್ಯಸೂಚಿ ಸೇರಿದಂತೆ ಯಾವುದೇ ಯೋಜನೆಗಳು ತಮಿಳುನಾಡಿನಲ್ಲಿ ಇಲ್ಲ ಅನ್ನೋದನ್ನು ಪರೋಕ್ಷವಾಗಿ ಹೇಳಿ ಕುಟುಕಿದ್ದಾರೆ.
ಆರೋಗ್ಯ ಸಚಿವ ಕೆಜಿ ಅರುಣರಾಜ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸಿಎಂ ವಿಜಯ್ ಸರ್ಕಾರ ಶಾಪದ ಮೇಲೆ ನಂಬಿಕೆ ಇಲ್ಲ. ರಾಜ್ಯ ವೈದ್ಯಕೀಯ ವಿಜ್ಞಾನ ಅನುಸರಿಸುತ್ತಿದೆ. ಇಲ್ಲಿ ಸರ್ಪದೋಷವಿಲ್ಲ, ಪ್ರತಿಕೂಲ ಹವಾಮಾನದಿಂದ ಶೀತ (ಜಲದೋಷ) ಮಾತ್ರ ಇದೆ ಎಂದು ಉತ್ತರಿಸಿದ್ದಾರೆ. ಹಾವುಗಳನ್ನು ಸಮಾಧಾನ ಪಡಿಸಲು ಆರೋಗ್ಯ ಬಜೆಟ್ ಬಳಸಲು ಸಾಧ್ಯವಿಲ್ಲ. ರಾಜ್ಯದ ಆಡಳಿತ ಗ್ರಹಗಳ ಮೇಲೆ ನಿಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ ಸಚಿವರು ಉತ್ತರಿಸುತ್ತಿದ್ದಂತೆ ಎದ್ದು ನಿಂತ ಪನೀರ್ ಸೆಲ್ವಂ, ಸರ್ಕಾರಕ್ಕೆ ಈ ವಿಚಾರದಲ್ಲಿ ನಾವು ಸಹಾಯ ಮಾಡುತ್ತೇವೆ. ಬೇಕಾದ ಪೂಜಾ ತಜ್ಞರ ತಂಡವನ್ನು ಒದಗಿಸುತ್ತೇವೆ ಎಂದಿದ್ದಾರೆ. ಇತ್ತ ಕ್ರೀಡಾ ಸಚಿವ ಆಧವ ಅರ್ಜನ ಮಧ್ಯಪ್ರವೇಶಿದ್ದಾರೆ. ಪೆರಿಯಾರ್ ಸೇರಿದಂತೆ ಹಲವರ ಹೆಸರು ಹೇಳಿ ಚರ್ಚೆಯನ್ನು ಗಂಭೀರವಾಗಿಸಿದ್ದಾರೆ. ಇದರ ನಡುವೆ ಮಧ್ಯಪ್ರವೇಶಿದ ಸ್ವೀಕರ್, ಪನೀರ್ ಸೆಲ್ವಂ ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ. ಕಾರಣ ಜಲದೋಷ ನಿಮಗೂ ಅಂಟಿಕೊಳ್ಳಬಹುದು. ಈ ವಿಚಾರ ಇಲ್ಲಿಗೆ ಬಿಡುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.