
ಸಾಮಾನ್ಯವಾಗಿ ಕಾರ್ಪೊರೇಟ್ ಕಂಪನಿಗಳು (Corporate Companies) ಕೆಲಸಕ್ಕೆ ಆಳುಗಳನ್ನು ನೇಮಿಸಿಕೊಳ್ಳುವಾಗ (Recruitment) ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ (Educational Qualification), ಇಂಗ್ಲಿಷ್ ಸಂವಹನ ಕೌಶಲ್ಯ (English Communication) ಮತ್ತು ಅನುಭವವನ್ನು ನೋಡುತ್ತವೆ. ಆದರೆ, ಹೈದರಾಬಾದ್ ಮೂಲದ ಪ್ರಸಿದ್ಧ ಸ್ಟಾರ್ಟ್ಅಪ್ (Startup) 'ಅಡೋನ್ಮೋ' (Adonmo) ಸಹ-ಸಂಸ್ಥಾಪಕ ಹಾಗೂ ಮೈಕ್ರೋಸಾಫ್ಟ್ನ (Microsoft) ಮಾಜಿ ಉದ್ಯೋಗಿ ಶ್ರಾವಂತ್ ಗಜುಲಾ (Sravanth Gajula) ಅವರು ಮಾಡಿದ್ದು ಸಂಪೂರ್ಣ ಭಿನ್ನವಾದ ಕಾರ್ಯ!
ಹತ್ತು ವರ್ಷಗಳ ಹಿಂದೆ ಅವರು ತಮ್ಮ ಕಂಪನಿಯನ್ನು ಪ್ರಾರಂಭಿಸಿದಾಗ, ಮೊದಲ ಉದ್ಯೋಗಿಯಾಗಿ (First Employee) ಒಬ್ಬ ಟ್ಯಾಕ್ಸಿ ಡ್ರೈವರ್ ಅನ್ನು ನೇಮಿಸಿಕೊಂಡಿದ್ದರು. ಇಂದು ಆ ನಿರ್ಧಾರದ ಫಲವಾಗಿ, ಆ ವ್ಯಕ್ತಿ ಕಂಪನಿಯ ಅತ್ಯುನ್ನತ ಹುದ್ದೆಗೆ ಬೆಳೆದು ನಿಂತಿದ್ದಾರೆ! ಶ್ರಾವಂತ್ ಗಜುಲಾ ಅವರು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಲಿಂಕ್ಡ್ಇನ್ನಲ್ಲಿ (LinkedIn) ಹಂಚಿಕೊಂಡಿರುವ ಈ ಸ್ಪೂರ್ತಿದಾಯಕ ಕಥೆ (Inspirational Story) ಈಗ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.
ಹತ್ತು ವರ್ಷಗಳ ಹಿಂದೆ ಶ್ರಾವಂತ್ ಅವರು ನೇಮಿಸಿಕೊಂಡ ವ್ಯಕ್ತಿ ಕೇವಲ 9ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದರು. ಅವರಿಗೆ ಯಾವುದೇ ಕಾರ್ಪೊರೇಟ್ ಅನುಭವವಿರಲಿಲ್ಲ ಮತ್ತು ಇಂಗ್ಲಿಷ್ ಮಾತನಾಡಲು ಬರುತ್ತಿರಲಿಲ್ಲ. ಯಾವುದೇ ಕಂಪನಿಯೂ ಇಂತಹ ವ್ಯಕ್ತಿಯನ್ನು ಕೆಲಸಕ್ಕೆ ತಗೆದುಕೊಳ್ಳಲು ಸಿದ್ಧವಿರಲಿಲ್ಲ. ಆದರೆ, ಶ್ರಾವಂತ್ ಅವರು ಆ ಟ್ಯಾಕ್ಸಿ ಡ್ರೈವರ್ನಲ್ಲಿದ್ದ ಕಲಿಯುವ ಅದಮ್ಯ ಆಸೆ ಮತ್ತು ಪ್ರಾಮಾಣಿಕತೆಯನ್ನು (Honesty & Dedication) ಕಂಡು ಅವರಿಗೆ ಕೆಲಸ ನೀಡಿದ್ದರು.
ಕೆಲಸಕ್ಕೆ ಸೇರಿಸಿಕೊಂಡ ನಂತರ ಕಂಪನಿಯೇ ಅವರಿಗೆ ಸ್ಪೋಕನ್ ಇಂಗ್ಲಿಷ್ (Spoken English) ತರಬೇತಿ ಕೊಡಿಸಿತು. ಮೆಲ್ಲನೆ ಕಂಪನಿಯ ಪ್ರಮುಖ ಕಾರ್ಯಾಚರಣೆಗಳ ಜವಾಬ್ದಾರಿಯನ್ನು ಅವರ ಹೆಗಲಿಗೆ ನೀಡಲಾಯಿತು. ಶ್ರಾವಂತ್ ಅವರು ತಮ್ಮ ಉದ್ಯೋಗಿಯ ಮೇಲೆ ಇಟ್ಟಿದ್ದ ಸಂಪೂರ್ಣ ನಂಬಿಕೆಗೆ ತಕ್ಕಂತೆ, ಆ ವ್ಯಕ್ತಿಯೂ ಹಗಲಿರುಳು ಶ್ರಮಿಸಿ ಕಂಪನಿಯ ಬೆಳವಣಿಗೆಗೆ ಶ್ರಮಿಸಿದರು.
ಶ್ರಾವಂತ್ ಅವರ ನಂಬಿಕೆ ಮತ್ತು ಉದ್ಯೋಗಿಯ ಕಠಿಣ ಪರಿಶ್ರಮದ ಫಲವಾಗಿ, ಹತ್ತು ವರ್ಷಗಳ ನಂತರ ಇಂದು ಅವರು 'ಅಡೋನ್ಮೋ' ಕಂಪನಿಯ ಭಾರತದಾದ್ಯಂತದ ವಿಭಾಗದ 'ಪ್ರೊಕ್ಯೂರ್ಮೆಂಟ್ ಹೆಡ್' (Head of Procurement - India) ಆಗಿ ಬಡ್ತಿ (Promotion) ಪಡೆದಿದ್ದಾರೆ! ಇಂದು ಅವರು ದೇಶಾದ್ಯಂತ ಕಂಪನಿಯ ಸರಬರಾಜು ಮತ್ತು ನಿರ್ವಹಣೆಯ ದೊಡ್ಡ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದಾರೆ.
‘ಬೇರೆಯವರು ತಿರಸ್ಕರಿಸಿದವರನ್ನು ಕೆಲಸಕ್ಕೆ ನೇಮಿಸಿಕೊಂಡು, ಅವರ ಮೇಲಿನ ನಂಬಿಕೆಯಿಂದ ಕೌಶಲ್ಯಗಳನ್ನು ಬೆಳೆಸುವುದೇ ನಿಜವಾದ ಕಂಪನಿ ಸಂಸ್ಕೃತಿ (Company Culture). ಉದ್ಯೋಗಿಗಳ ಮೇಲೆ ನಂಬಿಕೆ ಇಟ್ಟರೆ, ಅವರು ನಮ್ಮ ನಿರೀಕ್ಷೆಗೂ ಮೀರಿ ಬೆಳೆಯುತ್ತಾರೆ,’ ಎಂದು ಶ್ರಾವಂತ್ ಬರೆದುಕೊಂಡಿದ್ದಾರೆ.
ಈ ಪೋಸ್ಟ್ಗೆ ಸಾವಿರಾರು ಜನರು ಕಾಮೆಂಟ್ ಮಾಡಿದ್ದು, ‘ಕೌಶಲ್ಯಗಳನ್ನು ತರಬೇತಿ ಮೂಲಕ ಕಲಿಸಬಹುದು, ಆದರೆ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಕಲಿಸಲು ಸಾಧ್ಯವಿಲ್ಲ. ನಿಜವಾದ ನಾಯಕತ್ವ (Leadership) ಎಂದರೆ ಕಂಪನಿಯನ್ನು ಮಾತ್ರವಲ್ಲ, ಜನರ ಬದುಕನ್ನೂ ಬೆಳೆಸುವುದು’ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.