
ಆತ ಕಾಮಿಡಿ ಕಿಲಾಡಿಗಳು ಸೀಸನ್-3 ವಿಜೇತ.. ಕನ್ನಡ ಚಿತ್ರರಂಗದಲ್ಲಿ ನೆಲೆನಿಲ್ಲುವ ಕನಸು ಕಂಡಿದ್ದ ಪ್ರತಿಭಾನ್ವಿತ. ಕಾಂತಾರ ಚಾಪ್ಟರ್-1 ನಲ್ಲಿ ಆತನಿಗಿತ್ತು ಅದ್ಭುತ ಪಾತ್ರ. ಇನ್ನೇನು ಬರಲಿರುವ ದಿನಗಳು ತನ್ನವು ಅಂದುಕೊಂಡಿದ್ದ ಆ ನಟನ ಬದುಕಿನ ಆಟವನ್ನ ವಿಧಿ ಮುಕ್ತಾಯಗೊಳಿಸಿದೆ. ಯುವನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ. ರಾಕೇಶ್ ಅಗಲಿಕೆಗೆ ರಿಷಬ್ ಶೆಟ್ಟಿ ಕೂಡ ಕಣ್ಣೀರು ಹಾಕಿದ್ದಾರೆ.
ರಾಕೇಶ್ ಪೂಜಾರಿ. ಉಡುಪಿ ಮೂಲದ ಈ ಹುಡುಗ ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಪರಿಚಿತನಾದವನು. ಕಾಮಿಡಿ ಕಿಲಾಡಿಗಳು ಸಿಸನ್-2ನಲ್ಲಿ ತನ್ನ ಅದ್ಭುತ ಟೈಮಿಂಗ್ ನಿಂದ ಎಲ್ಲರನ್ನೂ ನಕ್ಕುನಗಿಸ್ತಾ ಇದ್ದ ರಾಕೇಶ್ ಎಲ್ಲರ ಮನಸು ಗೆದ್ದಿದ್ದ.ಉಡುಪಿಯ ಈ ಹೈದನಿಗೆ ಖಂಡಿತ ಒಳ್ಳೆ ಭವಿಷ್ಯ ಇದೆ ಅಂತ ಕಾಮಿಡಿ ಕಿಲಾಡಿಗಳು ತೀರ್ಪು್ಗಾರರು ಪ್ರಶಂಸೆ ಮಾಡಿದ್ರು. ಅಂತೆಯೇ ರಾಕೇಶ್ ಪೂಜಾರಿ ಕಾಮಿಡಿ ಕಿಲಾಡಿಗಳು ಸೀಸನ್-3 ವಿನ್ನರ್ ಆಗಿದ್ದ.
ಹೌದು ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ಕಾಂತಾರ ಚಾಪ್ಟರ್-1 ನಲ್ಲಿ ರಾಕೇಶ್ಗೆ ಒಂದು ಅದ್ಭುತ ಪಾತ್ರ ಸಿಕ್ಕಿತ್ತು. ಇಡೀ ಜಗತ್ತೇ ಕಾಯ್ತಾ ಇರೋ ಈ ಬಹುನಿರೀಕ್ಷೆಯ ಸಿನಿಮಾದಲ್ಲಿ ನಟನೆಯ ಅವಕಾಶ ಸಿಕ್ಕಿದ್ದನ್ನ ನೋಡಿ ರಾಕೇಶ್ ತುಂಬಾನೇ ಖುಷಿ ಪಟ್ಟಿದ್ದ. ಎಲ್ಲರ ಬಳಿಯೂ ಈ ವಿಷ್ಯ ಹೇಳಿ ಸಂತಸ ಪಟ್ಟಿದ್ದ. ಈ ಸಿನಿಮಾ ಬಂದ ಮೇಲೆ ತನ್ನ ಬದುಕು ಬದಲಾಗುತ್ತೆ ಅನ್ನೋ ಆಸೆ ಇಟ್ಟುಕೊಂಡಿದ್ದ.