- ಭೂ ಕುಸಿತ, ಗುಡ್ಡ ಕುಸಿತದಲ್ಲಿ ನೆಲಕ್ಕುರುಳಿದ್ದವು ಭಾರೀ ಪ್ರಮಾಣದ ಬೆಲೆ ಬಾಳುವ ಮರಗಳು
- ಅರಣ್ಯ ಇಲಾಖೆಯೂ ಸಂಗ್ರಹಿಸಿಲ್ಲ, ಬಿದ್ದ ಸ್ಥಳಗಳಲ್ಲೂ ಇಲ್ಲ ನೆಲಕಚ್ಚಿದ್ದ ಮರಗಳು!
- ಮರಗಳ್ಳರು ಇವುಗಳನ್ನು ನುಂಗಿ ಹಾಕಿದ್ದಾರೆ ಅನ್ನೋ ಆರೋಪ ಮಾಡಿದ್ದಾರೆ ಜನರು
ಉತ್ತರ ಕನ್ನಡ (ಡಿ. 10): ಕಳೆದ ಜುಲೈ ತಿಂಗಳಿನಿಂದ ಅಕ್ಟೋಬರ್ವರೆಗೆ ಕಾಣಿಸಿಕೊಂಡ ಮಹಾಮಳೆಗೆ (Heavy Rainfall) ಜನಜೀವನವೇ ಅಸ್ತವ್ಯಸ್ತಗೊಂಡಿತ್ತು. ಈ ನಡುವೆ ಮಲೆನಾಡು (Malenadu) ಹಾಗೂ ಕರಾವಳಿ ಭಾಗದ ಕೆಲವೆಡೆ ಗುಡ್ಡ ಕುಸಿತ, ಭೂ ಕುಸಿತವಾಗಿ ಭಾರೀ ಪ್ರಮಾಣದಲ್ಲಿ ಬೃಹತ್ ಮರಗಳು (Trees) ನೆಲಕಚ್ಚಿದ್ದವು. ನೆಲಕ್ಕಿರುಳಿದ್ದ ಈ ಮರಗಳು ಸರಕಾರಕ್ಕೆ ಉತ್ತಮ ಆದಾಯವಾಗುವ ಮುನ್ನವೇ ಕಾಣೆಯಾಗಿದ್ದು, ಅರಣ್ಯಾಧಿಕಾರಿಗಳ (Forest Department) ಹಾಗೂ ಜನಪ್ರತಿನಿಧಿಗಳ ಕೃಪಾಕಟಾಕ್ಷದಿಂದ ಮರಗಳ್ಳರು ಇವುಗಳನ್ನು ನುಂಗಿ ಹಾಕಿದ್ದಾರೆ ಅನ್ನೋ ಆರೋಪ ವ್ಯಕ್ತವಾಗಿವೆ.
ಅರಣ್ಯ ಇಲಾಖೆ ಸಿಬ್ಬಂದಿ ಇವುಗಳನ್ನು ಸಂಗ್ರಹಿಸಿ ಡಿಪೋಗೆ ನೀಡಿ ಹಣವನ್ನು ಸರಕಾರಕ್ಕೆ ನೀಡಿದಿದ್ದಲ್ಲಿ ಸರಕಾರಕ್ಕೂ ಒಂದು ಆದಾಯವಾಗುತ್ತಿತ್ತು. ಆದರೆ,ಅರಣ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕೇಳಿದರೆ ನಾವು ಯಾವ ಮರಗಳನ್ನೂ ಸಂಗ್ರಹಿಸಿಯೇ ಇಲ್ಲ ಅಂತಾರೆ. ಹಾಗಿದ್ದರೆ, ಈ ಮರಗಳು ಎಲ್ಲಿಗೆ ಹೋಯ್ತು ಅನ್ನೋದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕೃಪಾ ಕಟಾಕ್ಷದಿಂದ ಮರಗಳ್ಳರು ಇವುಗಳನ್ನು ನುಂಗಿ ಹಾಕಿದ್ದಾರೆ ಅನ್ನೋ ಆರೋಪ ಎದುರಾಗಿದ್ದು, ಈ ಬಗ್ಗೆ ಆರ್ಟಿಐ ಮೂಲಕ ಮಾಹಿತಿ ಸಂಗ್ರಹ ಮಾಡಲು ಹೋರಾಟಗಾರರು ಅಣಿಯಾಗಿದ್ದಾರೆ.