ಒಟ್ಟೊಟ್ಟಿಗೆ ಎದುರಾದ ಎರಡೆರಡು ಅಪಘಾತಗಳಿಂದ ಎಸ್ಕೇಪ್ ಆದ ಯುವಕ... ವಿಡಿಯೋ ವೈರಲ್‌

Jan 10, 2022, 9:44 PM IST

ಮಂಗಳೂರು(ಜ.10):  ಸ್ಕೂಟರ್ ಸವಾರನೋರ್ವ ಒಂದೇ ದಿನ ಎರೆಡರಡು ಅಪಘಾತಗಳಿಂದ ಪಾರಾದ ಘಟನೆ ಕರಾವಳಿ ನಗರಿ ಮಂಗಳೂರಿನಲ್ಲಿ ನಡೆದಿದ್ದು, ಘಟನೆಯ ದೃಶ್ಯಾವಳಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಚಾಲಕನ ಚಾಕಚಕ್ಯತೆ, ಚುರುಕುತನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕೊಣಾಜೆ (Konaje) ಪೊಲೀಸ್ ಠಾಣಾ ವ್ಯಾಪ್ತಿಯ ಎಲಿಯಾರುಪದವು ಎಂಬಲ್ಲಿ ಈ ಘಟನೆ ನಡೆದಿದೆ. ಅತಿವೇಗದಿಂದ ಬಂದ ಸ್ಕೂಟರ್ ಸವಾರನೋರ್ವ ತಿರುಗುತ್ತಿದ್ದ ಬಸ್ಸು ಸ್ಕೂಟರ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಧಾವಂತದಲ್ಲಿ ರಸ್ತೆ ಬದಿಯ ಅಂಗಡಿ ಮತ್ತು ಮರವೊಂದರ ನಡುವೆ ವೇಗದಲ್ಲಿ ಸ್ಕೂಟರ್​​​ ಚಲಾಯಿಸಿದ್ದಾನೆ.

ಈ ಸ್ಕೂಟರ್​ ಸವಾರ ಮೊದಲು ಬಸ್​​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಂಡು, ನಂತರ ಚಾಕಚಕ್ಯತೆಯಿಂದ ಪಕ್ಕದ ಇಂಡೋ ಫಿಶರಿಷ್ ಸಂಸ್ಥೆಯ ಗೇಟಿಗೆ ಬಡಿದು ಮರದ ನಡುವೆ ಚಲಿಸಿ ಪಾರಾಗಿದ್ದಾನೆ. ಸಂಸ್ಥೆಯ ಮೂರು ಸಿಸಿಟಿವಿ ಕ್ಯಾಮರಾದ ವಿಡಿಯೋಗಳಲ್ಲಿ ಈ ದೃಶ್ಯಗಳು ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.  

ಈ ಎಲ್ಲಾ ವಿಡಿಯೋಗಳಲ್ಲಿಯೂ ಆತ ಅತೀ ವೇಗದಲ್ಲಿ ಚಲಿಸುತ್ತಿರುವುದು ಕಂಡು ಬಂದಿದೆ. ಒಟ್ಟಿನಲ್ಲಿ ಈತನ ಆಯಸ್ಸು ಅದೃಷ್ಟ ಎರಡು ಚೆನ್ನಾಗಿದ್ದು, ಈತ ಎರೆಡೆರಡು ಅಪಾಯಗಳು ಎದುರೆದುರೆ ಎದುರಾದರೂ ಯಾವುದೇ ತೊಂದರೆ ಇಲ್ಲದೇ ಪಾರಾಗಿದ್ದಾನೆ.