ರಟ್ಟಿಹಳ್ಳಿ ಹಿಂದೂ ಸಂಘಟನೆ ಬೈಕ್ ರ್ಯಾಲಿ ವೇಳೆ ಕಲ್ಲು ತೂರಾಟ: ಮಸೀದಿ, ಮನೆ, ಮಕ್ಕಳು- ಮಹಿಳೆಯರಿಗೆ ಕಲ್ಲೇಟು

Mar 14, 2023, 6:37 PM IST

ಹಾವೇರಿ (ಮಾ.14): ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಹಿಂದೂ ಸಂಘಟನೆಗಳಿಂದ ನಡೆದ ಬೈಕ್‌ ರ್ಯಾಲಿಯ ವೇಳೆ ಕೆಲವು ಮುಸ್ಲಿಂ ಮನೆಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ರಟ್ಟಿಹಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ. 

ಕಳೆದ 5 ದಿನಗಳ ಹಿಂದೆ ರಟ್ಟಿಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಕಂಚಿನ ಮೂರ್ತಿ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮೆರವಣಿಗೆ ಮಾಡಲು ಮುಂದಾದಾಗ, ಕೆಲವು ಮುಸ್ಲಿಂ ಯುವಕರು ಕಲ್ಲು ತೂರಾಟ ಮಾಡಲು ಮುಂದಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಇಂದು ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಹಾಗೂ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಬೈಕ್‌ ರ್ಯಾಲಿಯೊಂದಿಗೆ ಮೆರವಣಿಗೆ ಮಾಡುವ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಲ್ಲು ತೂರಾಟ ನಡೆದ ವೇಳೆ ಮನೆಯಲ್ಲಿದ್ದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪೆಟ್ಟಾಗಿದೆ. ಮನೆಯ ಮುಂದೆ ನಿಲ್ಲಿಸಲಾಗಿದ್ದ ಕಾರು,ಆಟೋ ಮತ್ತು ಇತರೆ ವಾಹನಗಳು ಕೂಡ ಹಾನಿಗೊಳಗಾಗಿವೆ. ಈ ಕುರಿತು ಮಾತನಾಡಿರುವ ಸಂತ್ರಸ್ತ ಮುಸ್ಲಿಂ ಕುಟುಂಬದ ಸದಸ್ಯರು ಮೆರವಣಿಗೆ ವೇಳೆ ಪೊಲೀಸರು ನಮಗೆ ರಕ್ಷಣೆ ಕೊಡಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.