ಬಾರ್‌ಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಕುಡುಕರು! ಬೇಕೇ ಬೇಕು.. ಬಾರ್‌ ಬೇಕು ಎಂದು ಆಗ್ರಹ

Sep 20, 2023, 6:45 PM IST

ಕೊಪ್ಪಳ (ಸೆ.20): ಕೊಪ್ಪಳ ಜಿಲ್ಲೆಯ ಕುದುರಿಮೋತಿ ಎಂಬ ಗ್ರಾಮದಲ್ಲಿ ಸರ್ಕಾರದಿಂದ ಕೂಡಲೇ ಒಂದು ಬಾರ್‌ ಆರಂಭಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ.

ಹೌದು, ನಮ್ಮೂರಿಗೆ ಬಾರ್‌ ಬೇಡವೇಬೇಡ ಎಂದು ಮಹಿಳೆಯರು ಹಾಗೂ ಗ್ರಾಮಸ್ಥರು ಹೋರಾಟ, ಪ್ರತಿಭಟನೆ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ, ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕುದುರಿಮೋತಿ ಗ್ರಾಮಸ್ಥರು ನಮ್ಮೂರಿಗೆ ಒಂದು ಪ್ರತ್ಯೇಕ ಬಾರ್‌ ಬೇಕೇ ಬೇಕು ಎಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ. ಪ್ರಸ್ತುತ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಲಿಕ್ಕರ್ಸ್ ಎನ್ನುವ ಮದ್ಯದ ಅಂಗಡಿಗೆ, ಅನಧಿಕೃತವಾಗಿ ಎಣ್ಣೆ ಮಾರಾಟ ಮಾಡುವವರು ವಿರೋಧ ಮಾಡುತ್ತಿದ್ದಾರೆ. ಆದರೆ, ಅವರು ಅನಧಿಕೃತವಾಗಿ ತಂದು ದುಬಾರಿ ಬೆಲೆಗೆ ಮಾರಾಟ ಮಾಡುವುದರಿಂದ ಹಣ ವ್ಯರ್ಥವಾಗುತ್ತಿದೆ. ಆದ್ದರಿಂದ ಸರ್ಕಾರದಿಂದಲೇ ಪರವಾನಗಿ ಇರುವ ಬಾರ್‌ ಅನ್ನು ನಮ್ಮ ಊಡಿನಲ್ಲಿ ಆರಂಭಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.